ETV Bharat / state

ರೈತ ಉತ್ಪಾದಕ ಸಂಘಗಳಿಗೆ ಸರ್ಕಾರದಿಂದ ₹2 ಕೋಟಿ ಅನುದಾನ: ಸಚಿವ ಎಂ.ಸಿ.ಸುಧಾಕರ್

author img

By ETV Bharat Karnataka Team

Published : Dec 15, 2023, 10:08 PM IST

Minister M C Sudhakar spoke in the assembly.
ಸಚಿವ ಎಂ ಸಿ ಸುಧಾಕರ್ ವಿಧಾನಸಭೆಯಲ್ಲಿ ಮಾತನಾಡಿದರು.

ಬೆಳೆಗಳನ್ನು ಸಂಸ್ಕರಿಸಿ ನೇರ ಗ್ರಾಹಕರಿಗೆ ತಲುಪಿಸಲು ರೈತ ಉತ್ಪಾದಕ ಸಂಸ್ಥೆಗಳಿಗೆ ಬೆಳೆ ಸಂಸ್ಕರಣೆ, ಶೇಖರಣಾ ಘಟಕ ನಿರ್ಮಾಣ, ಯಂತ್ರೋಪಕರಣ ಸೇರಿ ಇತರೆ ಸೌಕರ್ಯಗಳಿಗೆ ಆರ್ಥಿಕ ಸಹಾಯ ಒದಗಿಸಲಾಗುವುದು ಎಂದು ಸದನಕ್ಕೆ ಸಚಿವ ಎಂ.ಸಿ.ಸುಧಾಕರ್ ಸ್ಪಷ್ಟಪಡಿಸಿದರು.

ಬೆಂಗಳೂರು/ಬೆಳಗಾವಿ: ಸಮಗ್ರ ತೋಟಗಾರಿಕೆ ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆಗಳಿಗೆ ಆರಂಭಿಕ ಪ್ರೊತ್ಸಾಹ ನೀಡಲು 2022-23ನೇ ಸಾಲಿನಲ್ಲಿ 2.73 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಹಾಗೂ 2023-24ನೇ ಸಾಲಿನಲ್ಲಿ 2 ಕೋಟಿ ರೂ ಅನುದಾನವನ್ನು ಮೀಸಲು ಇರಿಸಲಾಗಿದೆ ಎಂದು ಉತನ್ನ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ವಿಧಾನಸಭೆಯಲ್ಲಿ ತಿಳಿಸಿದರು.

ಇಂದು ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಶಾಸಕ ಟಿ.ಸುನೀಲ್ ಕುಮಾರ್ ಅವರ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪರವಾಗಿ ಉತ್ತರಿಸಿದ ಸಚಿವರು, ರೈತರ ಬೆಳೆಗಳನ್ನು ಸಂಸ್ಕರಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸಲು ರೈತ ಉತ್ಪಾದಕ ಸಂಸ್ಥೆಗಳು ಸಹಕಾರಿಯಾಗಿವೆ. ರೈತರು ಉತ್ಪಾದಕ ಸಂಸ್ಥೆಗಳನ್ನು ರಚಿಸಿಕೊಳ್ಳಲು ಆರಂಭದಲ್ಲಿ ಸರ್ಕಾರದಿಂದ, ಸಂಗ್ರಹಣೆ, ಸಂಸ್ಕರಣೆ ಮತ್ತು ಶೇಖರಣೆ ಘಟಕ ನಿರ್ಮಾಣ, ಯಂತ್ರೋಪಕರಣ ಹಾಗೂ ಇತರೆ ಮೂಲ ಸೌಕರ್ಯಗಳಿಗೆ ಆರ್ಥಿಕ ಸಹಾಯಕ ಒದಗಿಸಲಾಗುವುದು. ರಾಜ್ಯದಲ್ಲಿ 1262 ರೈತ ಉತ್ಪಾದಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಶಾಸಕ ಸುನೀಲ್ ಕುಮಾರ್ ಮಾತನಾಡಿ, ರೈತ ಉಪಯೋಗಿ ಯೋಜನೆ ಅನುಷ್ಠಾನಗಳು ವಿಳಂಬವಾಗುತ್ತಿವೆ. ಇದರ ಬಗ್ಗೆ ಸರ್ಕಾರ ಗಮನ ಹರಿಸಬೇಕು. ರಾಜ್ಯದಲ್ಲಿರುವ 1262 ರೈತ ಉತ್ಪಾದಕ ಸಂಸ್ಥೆಗಳಿಗೆ ಸರ್ಕಾರ ಮೀಸಲು ಇರಿಸಿದ ಅನುದಾನ ಸಾಲುವುದಿಲ್ಲ. ಸರ್ಕಾರ ಅನುದಾನವನ್ನು ಹೆಚ್ಚಿಸುವಂತೆ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ರೈತ ಉತ್ಪಾದಕ ಸಂಸ್ಥೆಗಳಿಗೆ ಸರ್ಕಾರದಿಂದ ವ್ಯಾಪಾರ ಹಾಗೂ ರಪ್ತು ಪರವಾನಿಗೆಯನ್ನು ನೀಡುವಂತೆ ಕೋರಿದರು.

ಬಯಲು ಸೀಮೆ ಅಡಿಕೆ ಬೆಳೆಗೆ ಪ್ರೋತ್ಸಾಹ ನೀಡಲು ಒತ್ತಾಯ: ಮಲೆನಾಡಿನ ಪ್ರದೇಶದಲ್ಲಿ ಅಡಿಕೆ ಬೆಳೆಗೆ ನೀಡುತ್ತಿರುವ ಪ್ರೋತ್ಸಾಹ ಹಾಗೂ ವಿಮೆ ಸೌಲಭ್ಯಗಳನ್ನು ಬಯಲು ಸೀಮೆ ಅಡಿಕೆ ಬೆಳೆಗಾರರಿಗೂ ನೀಡಬೇಕು ಎಂದು ಶಾಸಕ ಪ್ರಕಾಶ್ ಕೋಳಿವಾಡ ಒತ್ತಾಯಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುವ ವೇಳೆ ಮಾತನಾಡಿದ ಶಾಸಕರು, ರಾಣೆಬೆನ್ನೂರು ತಾಲೂಕಿನಲ್ಲಿ ಸುಮಾರು 7000 ಎಕೆರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಬೆಳೆಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಡ್ರಿಪ್ ಅಳವಡಿಕೆ ಸೇರಿದಂತೆ ಬೆಳೆ ವಿಮೆ ಸೌಲಭ್ಯಗಳು ಇಲ್ಲ. ಇದರಿಂದ ಕ್ಷೇತದ್ರ ಅಡಿಕೆ ಬೆಳಗಾರರಿಗೆ ಅನ್ಯಾಯವಾಗುತ್ತಿದೆ.

ಬಯಲು ಸೀಮೆಯ ಚೆನ್ನಗಿರಿ ಹಾಗೂ ಶಿಗ್ಗಾಂವಿ ತಾಲೂಕುಗಳ ರೈತರಿಗೆ ಈ ಯೋಜನೆಗಳ ಸರ್ಕಾರ ವಿಸ್ತರಿಸಿದೆ. ಅಡಿಕೆ ಬೆಳೆಯುವ ರೈತರು ಇದರ ಲಾಭ ಪಡೆಯುತ್ತಿದ್ದಾರೆ. ಹಾವೇರಿ, ರಾಣೇಬೆನ್ನೂರು ಸೇರಿದಂತೆ ಪ್ರಮುಖವಾಗಿ ಅಡಿಕೆ ಬೆಳೆಯುವ ರಾಜ್ಯದ ಎಲ್ಲಾ ತಾಲೂಕುಗಳಿಗೂ ಯೋಜನೆಯನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಕೋರಿದರು.

ಶಾಸಕ ಪ್ರಕಾಶ್ ಕೋಳಿವಾಡ ಅವರ ಪ್ರಶ್ನೆಗೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿಯವರು ಸಹ ಧ್ವನಿ ಗೂಡಿಸಿದರು. ತೋಟಗಾರಿಕೆ ಇಲಾಖೆ ಸಚಿವರಿಗೆ ಪರವಾಗಿ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು, ಸಾಂಪ್ರದಾಯಕವಾಗಿ ಅಡಿಕೆ ಬೆಳೆಯುವ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಸರ್ಕಾರ ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮೈದಾನ ಪ್ರದೇಶಗಳಲ್ಲಿ ನೀರಿನ ಕೊರತೆ ಇರುವುದರಿಂದ ಅಡಿಕೆ ಬೆಳೆಯುವುದು ಸೂಕ್ತವಲ್ಲ.

ಈ ಹಿನ್ನೆಲೆಯಲ್ಲಿ ಬಯಲು ಸೀಮೆ ಭಾಗದಲ್ಲಿ ತೋಟಗಾರಿಕೆ ಇಲಾಖೆ ಅಡಿಕೆ ಬದಲಿಗೆ ಪರ್ಯಾಯ ಬೆಳೆಗೆ ಪ್ರೋತ್ಸಾಹ ನೀಡುತ್ತಿದೆ. ಇದರ ಹೊರತಾಗಿಯೂ ಬಯಲು ಸೀಮೆಯಲ್ಲಿ ರೈತರು ಸ್ವ ಇಚ್ಛೇಯಿಂದ ಅಡಕೆ ಬೆಳೆಯುತ್ತಿದ್ದಾರೆ. ಶಾಸಕರ ಮನವಿಯನ್ನು ತೋಟಗಾರಿಕೆ ಇಲಾಖೆ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದರು.
ಇದನ್ನೂಓದಿ: ಮಧ್ಯಮಾವಧಿ, ದೀರ್ಘಾವಧಿ ಸಾಲದ ಅಸಲು ಕಟ್ಟಿದರೆ ಸಂಪೂರ್ಣ ಬಡ್ಡಿ ಮನ್ನಾ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.