ETV Bharat / state

ಅಬಕಾರಿ ಸಿಎಲ್ 7 ಪರವಾನಗಿ ಅಕ್ರಮ: ಆಡಳಿತ-ಪ್ರತಿಪಕ್ಷಗಳ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ

author img

By ETV Bharat Karnataka Team

Published : Dec 5, 2023, 5:35 PM IST

ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅಬಕಾರಿ ಸಚಿವ ಆರ್. ಬಿ ತಿಮ್ಮಾಪುರ್
ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅಬಕಾರಿ ಸಚಿವ ಆರ್. ಬಿ ತಿಮ್ಮಾಪುರ್

ಅಬಕಾರಿ ಸಿಎಲ್ 7 ಪರವಾನಗಿ ಅಕ್ರಮದ ಬಗ್ಗೆ ವಿದಾನಸಭೆಯಲ್ಲಿ ಇಂದು ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರು ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪ ನಡೆಸಿದದರು.

ಆಡಳಿತ-ಪ್ರತಿಪಕ್ಷಗಳ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ

ಬೆಳಗಾವಿ/ ಬೆಂಗಳೂರು : ರಾಜ್ಯದ ಹಲವು ಕಡೆ ಅಬಕಾರಿ ಇಲಾಖೆಯಲ್ಲಿನ ಸಿಎಲ್ -7 ಪರವಾನಗಿಯಲ್ಲಿ ಅಕ್ರಮ ನಡೆದಿದ್ದು, ಇದರ ಬಗ್ಗೆ ತನಿಖೆಯಾಗಬೇಕೆಂಬ ವಿಚಾರ ವಿಧಾನಸಭೆಯಲ್ಲಿ ಇಂದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ವಾಗ್ವಾದ ನಡೆಯಿತು.

ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರು, ಸಿಎಲ್ 7 ಪರವಾನಗಿಯಲ್ಲಿ ಅಕ್ರಮ ನಡೆದಿದೆ. ನಿಯಮಗಳನ್ನು ಗಾಳಿಗೆ ತೂರಿ ಪರವಾನಗಿ ನೀಡಲಾಗಿದೆ ಎಂದು ಸದನದಲ್ಲಿ ಪ್ರಸ್ತಾಪಿಸಿದರು. ಕೋಲಾರ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯ ರಂಗಪ್ಪ ಎಂಬ ಅಧಿಕಾರಿ ನಿಯಮಗಳನ್ನು ಗಾಳಿಗೆ ತೂರಿ ಸಿಎಲ್ 7 ಎಲ್ಲ ಬಾರ್​ಗಳಿಗೂ ಪಾಲುದಾರರಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸಿಎಲ್ 7 ಪರವಾನಗಿ ಅಕ್ರಮದ ಬಗ್ಗೆ ತನಿಖೆ ನಡೆಸಬೇಕೆಂದು ಶಾಸಕರು ಒತ್ತಾಯಿಸಿದರು.

ಇದೇ ವೇಳೆ ಆಡಳಿತ ಪಕ್ಷದ ಸದಸ್ಯರಾದ ಶಿವಲಿಂಗೇಗೌಡ, ಬೇಳೂರು ಗೋಪಾಲಕೃಷ್ಣ, ನಂಜೇಗೌಡ, ನರೇಂದ್ರಸ್ವಾಮಿ ಮತ್ತಿತರರು ದನಿಗೂಡಿಸಿ ಸಿಎಲ್ 7 ಪರವಾನಗಿಯನ್ನು ಬೇಕಾಬಿಟ್ಟಿ ಕೊಡಲಾಗಿದೆ. ಇದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆಗಿರುವ ಅಕ್ರಮವಾಗಿದ್ದು, ತನಿಖೆಗೆ ಪಟ್ಟುಹಿಡಿದರು. ಈ ಸಂದರ್ಭದಲ್ಲಿ ಎದ್ದುನಿಂತ ಮಾಜಿ ಸಚಿವ ಗೋಪಾಲಯ್ಯ ಅವರು, ನಿಮಗೆ ಧೈರ್ಯ, ತಾಕತ್ತು ಇದ್ದರೆ ಸಿಎಲ್ 7 ಪರವಾನಗಿ ಅಕ್ರಮದ ಬಗ್ಗೆ ತನಿಖೆ ನಡೆಸಿ, ಪರವಾನಗಿ ರದ್ದು ಮಾಡಿ ಎಂದು ಆಗ್ರಹಿಸಿದರು. ಇದರಿಂದ ಸಿಟ್ಟಿಗೆದ್ದ ಆಡಳಿತ ಪಕ್ಷದ ಸದಸ್ಯರು, ಬಿಜೆಪಿ ಶಾಸಕರ ಮೇಲೆ ಮುಗಿಬಿದ್ದರು.

ಆರೋಪ - ಪ್ರತ್ಯಾರೋಪಗಳು ನಡೆದು ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಆಗ ಎರಡೂ ಕಡೆಯವರನ್ನು ಸ್ಪೀಕರ್ ಯು ಟಿ ಖಾದರ್ ಸಮಾಧಾನಪಡಿಸಿದರು. ನಂತರ ಇದಕ್ಕೆ ಉತ್ತರ ನೀಡಿದ ಅಬಕಾರಿ ಸಚಿವ ಆರ್. ಬಿ ತಿಮ್ಮಾಪುರ ಅವರು, ಸಿಎಲ್ 7 ಪರವಾನಗಿ ಸಂದರ್ಭದಲ್ಲಿ ಕಟ್ಟಡ ವಿನ್ಯಾಸ ಮತ್ತು ವಾಹನದ ನಿಲುಗಡೆ ವಿಸ್ತೀರ್ಣದ ಬಗ್ಗೆ ನಿಯಮಗಳಿಲ್ಲ. ಈ ನಿಯಮಗಳನ್ನು ರೂಪಿಸಿ ಸಿಎಲ್ 7 ಪರವಾನಗಿ, ಸನ್ನದ್ದುಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಚಕಮಕಿ, ಗದ್ದಲದ ವಾತಾವರಣ: ಇನ್ನು ಕೋಲಾರದ ಅಬಕಾರಿ ಇಲಾಖೆ ಅಧಿಕಾರಿ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಮಾಹಿತಿ ತರಿಸಿಕೊಂಡು ತಪ್ಪಿತಸ್ಥರೆಂದು ಕಂಡುಬಂದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಚಿವರ ಮಾತಿಗೆ ಒಪ್ಪದ ಆಡಳಿತ ಪಕ್ಷದ ಸದಸ್ಯರು ಈ ಕುರಿತು ತನಿಖೆಯಾಗಲೇಬೇಕು, ತನಿಖೆ ಮಾಡಿ ಎಂದು ಒತ್ತಾಯಿಸಿದರು. ಆಗ ಮತ್ತೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲದ ವಾತಾವರಣ ಉಂಟಾಯಿತು.

ಈ ಗದ್ದಲದ ಮಧ್ಯೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು, ಸಿಎಲ್ 7 ಪರವಾನಗಿಯಲ್ಲಿ ಅಕ್ರಮಗಳಾಗಿರುವ ಬಗ್ಗೆ ಸದಸ್ಯರು ಪ್ರಸ್ತಾಪಿಸಿದ್ದಾರೆ. ಇದು ಯಾವ ಸರ್ಕಾರದಲ್ಲಾದರೂ ಆಗಿರಲಿ, ತನಿಖೆ ನಡೆಸಿ, ಅಕ್ರಮವಾಗಿದ್ದರೆ ಆ ಪರವಾನಗಿಯನ್ನು ರದ್ದು ಮಾಡಿ ಎಂದು ಆಗ್ರಹಿಸಿದರು.

ಮದ್ಯದಂಗಡಿಯಲ್ಲಿ ಮೀಸಲಾತಿ ಜಾರಿಗೆ ತರುವುದಾಗಿ ಹೇಳಿದ್ದೀರಿ. ಹಾಗೆಂದು ಹೊಸ ಅಂಗಡಿ ತೆರೆಯಬೇಡಿ. ಈಗಲೇ ಕುಡುಕರ ಸಂಖ್ಯೆ ಜಾಸ್ತಿಯಾಗಿದೆ. ರೇಷನ್ ಅಂಗಡಿ, ಬೀಡಿ-ಸಿಗರೇಟ್ ಅಂಗಡಿಗಳಲೆಲ್ಲಾ ಮದ್ಯ ಮಾರಾಟ ನಡೆಯುತ್ತಿದೆ. ಹೀಗಿರುವ ಅಂಗಡಿಗಳಲ್ಲಿಯೇ ಮೀಸಲಾತಿ ತನ್ನಿ ಎಂದು ಸಲಹೆ ನೀಡಿದರು.

ನಂತರ ಮಾತನಾಡಿದ ಸಚಿವ ತಿಮ್ಮಾಪುರ, ನಾನು ಈಗಾಗಲೇ ಕಟ್ಟಡದ ವಿನ್ಯಾಸ ಇಲ್ಲದಿರುವುದನ್ನು ಒಪ್ಪಿಕೊಂಡಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಕಟ್ಟಡ ವಿನ್ಯಾಸಗಳನ್ನು ಜಾರಿ ಮಾಡಿ ಎಲ್ಲವನ್ನು ಸರಿಪಡಿಸುತ್ತೇವೆ. ಇಲಾಖೆಯಿಂದ ತನಿಖೆ ನಡೆಸಿ ಅಕ್ರಮ ನಡೆದಿದ್ದರೆ ಕ್ರಮ ಕೈಗೊಳ್ಳುವುದಾಗಿ ಸದನಕ್ಕೆ ತಿಳಿಸಿದರು.

ಇದು ಒಂದು ಸಾವಿರ ಕೋಟಿ ರೂ. ಗಳ ಹಗರಣ. ಹಿಂದಿನ ಸರ್ಕಾರದಲ್ಲಿ ಆಗಿದೆ ಎಂದು ಕಾಂಗ್ರೆಸ್‌ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು. ಇದಕ್ಕೆ ಹಲವು ಕಾಂಗ್ರೆಸ್ ಸದಸ್ಯರು ದನಿಗೂಡಿಸಿದರು. ಆಗ ಪ್ರತಿಪಕ್ಷ ಸದಸ್ಯರು ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ತಿರುಗೇಟು ನೀಡಿದರು.

ಇದರಿಂದ ಸದನದಲ್ಲಿ ಮತ್ತೆ ಗದ್ದಲದ ವಾತಾವರಣ ನಿರ್ಮಾಣವಾಗಿದ್ದನ್ನು ಗಮನಿಸಿದ ಸ್ಪೀಕರ್ ಯು ಟಿ ಖಾದರ್, ಈ ವಿಷಯ ಗಂಭೀರವಾಗಿದೆ. ಹಲವು ಸದಸ್ಯರು ಈ ವಿಷಯದ ಬಗ್ಗೆ ಮಾತನಾಡಲು ಬಯಸಿದ್ದಾರೆ. ಹಾಗಾಗಿ ಈ ಬಗ್ಗೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿ ಈ ಗದ್ದಲಕ್ಕೆ ತೆರೆ ಎಳೆದರು.

ಅಬಕಾರಿ ಕಾಯಿದೆಗೆ ತಿದ್ದುಪಡಿ : ಮದ್ಯ ಮಾರಾಟ ಅಂಗಡಿಗಳ ಪರವಾನಗಿ ಸಂದರ್ಭದಲ್ಲಿ ಮೀಸಲಾತಿಯನ್ನು ನೀಡುವ ಬಗ್ಗೆ ಸರ್ಕಾರ ಗಂಭೀರ ಪರಿಶೀಲನೆ ನಡೆಸಿದೆ. ಇದಕ್ಕಾಗಿ ಅಬಕಾರಿ ಕಾಯಿದೆಗೆ ತಿದ್ದುಪಡಿ ತರುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಅಬಕಾರಿ ಸಚಿವರು ಹೇಳಿದರು.

ಇದಕ್ಕೂ ಮುನ್ನ ಮಾತಿನ ಮಧ್ಯದಲ್ಲಿ ಕಾಂಗ್ರೆಸ್ ಶಾಸಕ ಎಂ. ಪಿ ನರೇಂದ್ರ ಸ್ವಾಮಿ ಅವರು, ಮದ್ಯದಂಗಡಿ ಪರವಾನಗಿ ಸಂದರ್ಭದಲ್ಲಿ ಮೀಸಲಾತಿ ಪಾಲನೆಯಾಗುತ್ತಿಲ್ಲ. ಮೀಸಲಾತಿಯನ್ನು ಜಾರಿ ಮಾಡಿ ಎಂದು ಒತ್ತಾಯಿಸಿದರು. ನಂತರ ಮಾತನಾಡಿದ ಸಚಿವರು, ಮೀಸಲಾತಿ ವಿಚಾರ ಸರ್ಕಾರದ ಗಮನದಲ್ಲಿದೆ. ಸಿಎಲ್ 2 ಪರವಾನಗಿಗೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ಆಗಬೇಕಿದೆ. ಸದ್ಯ ರಾಜ್ಯದಲ್ಲಿ ಸಿ. ಎಲ್ -2 ಅಡಿ 3975 ಮದ್ಯದಂಗಡಿಗಳಿದ್ದು, 62 ಪರಿಶಿಷ್ಟ ಜಾತಿ ಮತ್ತು 68 ಪರಿಶಿಷ್ಟ ಪಂಗಡದವರಿಗೆ ಪರವಾನಗಿ ನೀಡಲಾಗಿದೆ. ಹಾಗೆಯೇ ಸಿಎಲ್ 9 ರಲ್ಲಿ 3025 ಅಂಗಡಿಗಳಿದ್ದು, ಪರಿಶಿಷ್ಟ ಜಾತಿಯವರಿಗೆ 46, ಪರಿಶಿಷ್ಟ ಪಂಗಡದವರಿಗೆ 34 ಪರವಾನಗಿ ನೀಡಲಾಗಿದೆ.

ಸಿಎಲ್ -7 ನಲ್ಲಿ 2446 ಪರವಾನಗಿ ನೀಡಲಾಗಿದ್ದು, ಇದರಲ್ಲಿ ಪರಿಶಿಷ್ಟ ಪಂಗಡದವರಿಗೆ 96, ಪರಿಶಿಷ್ಟ ಜಾತಿಯವರಿಗೆ 68 ನೀಡಲಾಗಿದೆ. ಮೀಸಲಾತಿ ಜಾರಿ ಮಾಡುವ ಅಗತ್ಯತೆ ಇದೆ. ಕಾನೂನು ತಿದ್ದುಪಡಿ ತರುವ ಚಿಂತನೆಯೂ ಇದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಆಗ ಬಿಜೆಪಿ ಶಾಸಕ ಟಿ ಸುನೀಲ್‌ಕುಮಾರ್ ಅವರು, ಮದ್ಯದಂಗಡಿ ಪರವಾನಗಿಯಲ್ಲಿ ಮೀಸಲಾತಿ ಜಾರಿಗೆ ನಮ್ಮ ವಿರೋಧವಿಲ್ಲ. ಆದರೆ ಮೀಸಲಾತಿ ಜಾರಿ ಹೆಸರಲ್ಲಿ ಹೊಸದಾಗಿ ಅಂಗಡಿ ತೆರೆಯುತ್ತೀರಾ? ಎಂಬ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ : ನನಗೆ ಪ್ರತಿಪಕ್ಷಗಳಿಂದ ತೊಂದರೆ ಆಗಿಲ್ಲ, ಸ್ನೇಹಿತರೇ ಬೆನ್ನಿಗೆ ಚೂರಿ ಹಾಕಿದಾಗ ನೋವಾಗಿದೆ: ಬಿ.ಕೆ.ಹರಿಪ್ರಸಾದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.