ETV Bharat / state

ಬಜರಂಗದಳಕ್ಕೆ ಅವಮಾನಿಸುವ ಪಕ್ಷಕ್ಕೆ ಸೇರಿರುವ ಸವದಿಯನ್ನು ಸೋಲಿಸಿ: ಅಮಿತ್ ಶಾ ಕರೆ

author img

By

Published : May 6, 2023, 4:07 PM IST

ರಾಜ್ಯದಲ್ಲಿ ಬಿಜೆಪಿ ನಾಯಕರ ಚುನಾವಣಾ ಪ್ರಚಾರ ಅಬ್ಬರ ಮುಂದುವರಿದಿದೆ. ಇಂದು ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.

Amit Shah
ರತ್ನಾ ಮಾಮನಿ ಪರವಾಗಿ ಕೇಂದ್ರ ಸಚಿವ ಅಮಿತ್ ಶಾ ಅಬ್ಬರದ ಪ್ರಚಾರ ನಡೆಸಿದರು.

ಬೆಳಗಾವಿ: ''ರಾಜ್ಯದ ಚುನಾವಣೆ ಬೇರೆ, ಅಥಣಿ ಚುನಾವಣೆಯೇ ಬೇರೆಯಾಗಿದ್ದು, ಡಬಲ್ ಇಂಜಿನ್ ಸರ್ಕಾರದ ಸಲುವಾಗಿ ಬಿಜೆಪಿಗೆ ಮತ ಹಾಕಿ ಹಾಗೂ ಅಥಣಿಯಲ್ಲಿ ಪಕ್ಷಕ್ಕೆ ದ್ರೋಹ ಮಾಡಿದ ಲಕ್ಷ್ಮಣ ಸವದಿ ಅವರನ್ನು ಸೋಲಿಸಲು ಮತ ಹಾಕಿ'' ಎಂದು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತದಾರರಿಗೆ ಕರೆ ನೀಡಿದರು.

ಅಥಣಿ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಹಾಗೂ ಶ್ರೀಮಂತ ಪಾಟೀಲ್ ಪರವಾಗಿ ಪ್ರಚಾರ ಸಮಾರಂಭದಲ್ಲಿ ಮಾತನಾಡಿದರು. ''ಲಕ್ಷ್ಮಣ ಸವದಿಯನ್ನು ಕಳೆದ ಚುನಾವಣೆಯಲ್ಲಿ ಸೋಲಿಸಿದ್ದು ಮಹೇಶ್ ಕುಮಠಳ್ಳಿ. ಆದ್ರೂ ಸಹ ಸವದಿಯನ್ನು ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಮಾಡಿದ್ದೆವು. ಸೋತಾಗ ನಾನೇ ಸವದಿ ಜೊತೆಗೆ ಮಾತಾಡಿದೆ. ಅವರನ್ನೇ ನಾವು ಎಂಎಲ್‌ಸಿ ಮಾಡಿದ್ವಿ, ಮಂತ್ರಿ ಮಾಡಿದ್ವಿ, ಎಂಎಲ್‌ಸಿ ಅವಧಿ ಇದ್ರೂ ಯಾಕೆ ಪಕ್ಷ ಬಿಟ್ರೀ ಅಂತಾ ನೀವು ಪ್ರಶ್ನೆ ಮಾಡಬೇಕು. ಪಕ್ಷ ಬಿಟ್ಟು ಹೋಗಿ ಕಾಂಗ್ರೆಸ್ ಸೇರಿಕೊಂಡ್ರಿ. ಭಜರಂಗಬಲಿಗೆ ಅವಮಾನ ಮಾಡುವ ಪಕ್ಷ ಸೇರಿಕೊಂಡ್ರಿ, ಕಾಂಗ್ರೆಸ್​ನವರು ಮುಸ್ಲಿಂರಿಗೆ ಮೀಸಲಾತಿ ಕೊಡ್ತೇವಿ ಅಂತಿದ್ದಾರೆ. ಲಿಂಗಾಯತರ ಮೀಸಲಾತಿ ಕಿತ್ತುಕೊಂಡು ಮುಸ್ಲಿಂ ಸಮುದಾಯಕ್ಕೆ ಕೊಡ್ತೀರಾ? ಬಯ್ಯಾ ಲಕ್ಷ್ಮಣ ಪದೇ ಪದೇ ನನ್ನ ಬಳಿ ಮಹದಾಯಿ ಯೋಜನೆಗಾಗಿ ಬರ್ತಿದ್ರೀ, ನೀರಾವರಿ ಯೋಜನೆ ಸಲುವಾಗಿ ನನ್ನ ಬಳಿ ಬಂದಾಗ ಕಾಂಗ್ರೆಸ್‌ಗೆ ಬೈಯ್ಯುತ್ತಿದ್ರಿ ಇವತ್ತೇನಾಗಿದೆ'' ಎಂದು ಶಾ ಕಿಡಿಕಾರಿದ್ರು.

  • " class="align-text-top noRightClick twitterSection" data="">

ನೀವು ಬೈಯ್ದಷ್ಟು ಕಮಲ ಅರಳಲಿದೆ: ''ಸೋನಿಯಾ ಗಾಂಧಿ ಗೋವಾ ಚುನಾವಣೆ ವೇಳೆ ಕರ್ನಾಟಕಕ್ಕೆ ಮಹದಾಯಿ ನೀರು ಕೊಡಲ್ಲಾ ಅಂದಿದ್ರು. ಆದ್ರೆ, ಸೋನಿಯಾ ಗಾಂಧಿನೂ ಹೋದ್ರೂ, ಅವರ ಪಕ್ಷವೂ ಗೋವಾದಿಂದ ಹೋಯಿತು. ಮೋದಿ ಬಂದ ಮೇಲೆ ಉತ್ತರ ಕರ್ನಾಟಕಕ್ಕೆ ಮಹದಾಯಿ ನೀರು ಕೊಡುವ ಕೆಲಸ ಆಗಿದೆ. ಜಾರಕಿಹೊಳಿ ಮತ್ತು ಮಹೇಶ್ ಬಂದ ಮೇಲೆ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ರಾಹುಲ್ ಬಾಬಾ ಐದು ಗ್ಯಾರಂಟಿ ಕೊಟ್ಟಿದ್ದಾರೆ. ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ, ಅಸ್ಸೋಂ, ಮಣಿಪುರ, ನಾಗಾಲ್ಯಾಂಡ್, ತ್ರಿಪುರದಲ್ಲಿ ಐದು ಗ್ಯಾರಂಟಿ ಕೊಟ್ಟಿದ್ದಿರಿ. ಎಲ್ಲ ಕಡೆ ನಿಮ್ಮನ್ನು ಜನ ಸೋಲಿಸಿದ್ದಾರೆ. ಕರ್ನಾಟಕದಲ್ಲಿ ನಿಮ್ಮ ಗ್ಯಾರಂಟಿಯನ್ನು ಯಾರೂ ಕೂಡ ನಂಬಲ್ಲ. ಮೋದಿ ಅವರನ್ನು ನಂಬುತ್ತಾರೆ. ಖರ್ಗೆ ಅವರೇ ನೀವು ಮೋದಿ ಅವರಿಗೆ ಎಷ್ಟು ಬೈಯುತ್ತಿರಿ ಬೈಯ್ತಾಯಿರಿ. ನೀವು ಬೈಯ್ದಷ್ಟು ಕಮಲ ಅರಳಲಿದೆ'' ಎಂದು ಶಾ ಹೇಳಿದ್ರು.

ರತ್ನಾ ಮಾಮನಿ ಪರ ಅಬ್ಬರದ ಪ್ರಚಾರ: ''2024ರಲ್ಲಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಆಗುತ್ತೆ ಟಿಕೆಟ್ ನೋಂದಣಿ ಮಾಡಿ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜರಂಗದಳ ನಿಷೇಧ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಬಜರಂಗಬಲಿ ಹುಟ್ಟಿದ ದಿನ ಕೇಳುತ್ತಾರೆ. ಇಡೀ ದೇಶಕ್ಕೆ ಗೊತ್ತು ಹನುಮಾನ್ ಜಯಂತಿ ಎಂದಿದೆ ಅಂತಾ. ನಿಮಗೆ ಕೇವಲ ತುಷ್ಟೀಕರಣ ನೆನಪಿದೆ. ಪಿಎಫ್ಐ ಬ್ಯಾನ್ ಮಾಡಿದ್ದು ಸರಿನಾ ತಪ್ಪಾ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದರು. ಸವದತ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,‌ ''ಪ್ರಭು ಶ್ರೀರಾಮನನ್ನು ಕಾಂಗ್ರೆಸ್​ನವರು ಬಂಧಿಸಿ ಇಟ್ಟಿದ್ದರು. 2024ರಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗಲಿದೆ. ಬಜರಂಗದಳ ನಿಷೇಧ ಮಾಡೋ ಮಾತನ್ನು ಕಾಂಗ್ರೆಸ್ ಆಡಿದೆ‌. ದೇಶ ವಿರೋಧಿ ಕೆಲಸ ಮಾಡೋವರಿಗೆ ಜೈಲಿನ ಕಂಬಿಯ ಹಿಂದೆ ಕಳುಹಿಸಲಾಗುವುದು. ಪಿಎಫ್ಐ ನಿಷೇಧ ಮಾಡಿದ್ದು ನಮ್ಮ ಸರ್ಕಾರ. ಪಿಎಫ್ಐ ಏಜೆಂಟ್ ರೀತಿಯಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಬಸವಣ್ಣನ ಸಿದ್ಧಾಂತದ ಮೇಲೆ ಕೆಲಸ ಮಾಡುವವರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ. ಲಿಂಗಾಯತರಿಗೆ ಅಪಮಾನ ಮಾಡೋ ಕೆಲಸವನ್ನು ಕಾಂಗ್ರೆಸ್ ‌ಮಾಡಿದೆ'' ಎಂದು ಶಾ ಆರೋಪಿಸಿದರು.

ಲಿಂಗಾಯತರಿಗೆ ಸನ್ಮಾನ ಮಾಡಿದ ಬಿಜೆಪಿ: ''ಬಸವಣ್ಣನವರ ಸಂದೇಶ ಸಾರುವವರನ್ನು ಅಪಮಾನ ಮಾಡ್ತೀರಿ. ಭ್ರಷ್ಟಾಚಾರವನ್ನು ಒಂದು ಸಮುದಾಯಕ್ಕೆ ಹೋಲಿಸೋದು ಎಷ್ಟರ ಮಟ್ಟಿಗೆ ಸರಿ? ಇಂದಿರಾ ಗಾಂಧಿ ನಿಜಲಿಂಗಪ್ಪರಿಗೆ ಅಪಮಾನ ಮಾಡಿದ್ರು. ರಾಜೀವ್ ಗಾಂಧಿ ವೀರೇಂದ್ರ ಪಾಟೀಲ್‌ಗೆ ಅಪಮಾನ ಮಾಡಿದ್ರು. ‌ಬಿಜೆಪಿ ಯಡಿಯೂರಪ್ಪ, ಬೊಮ್ಮಾಯಿ ಅವರನ್ನು ಸಿಎಂ ಮಾಡಿದೆ. ಲಿಂಗಾಯತರಿಗೆ ಸನ್ಮಾನ ಮಾಡೋ ಕೆಲಸವನ್ನು ಬಿಜೆಪಿ ಮಾಡಿದೆ'' ಎಂದು ಅವರು ಸಮರ್ಥಿಸಿಕೊಂಡರು.

ಕಣ್ಣೀರು ಹಾಕಿದ ರತ್ನಾ ಮಾಮನಿ‌: ಸಮಾವೇಶದಿಂದ ಅಮಿತ್ ಶಾ ತೆರಳಿದ ಬಳಿಕ, ನಾಮಪತ್ರ ಸಲ್ಲಿಕೆ ವಿಚಾರದಲ್ಲಿ ಆಗಿರುವ ತೊಂದರೆ ನೆನೆದು ರತ್ನಾ ಮಾಮನಿ ಕಣ್ಣೀರು ಹಾಕಿದರು. ಆಗ ನನಗೆ ಬಹಳ ತೊಂದರೆ ಆಗಿತ್ತು. ಒಬ್ಬ ಹೆಣ್ಣು ‌ಮಗಳ ಮೇಲೆ ಇವರ ಪೌರುಷ ತೋರಿಸುತ್ತಿದ್ದಾರೆ. ಅವರಿಗೆ ನಾನು ಮೇ 13ಕ್ಕೆ ಉತ್ತರ ಕೊಡುತ್ತೇನೆ ಎಂದು ಪತಿ ಆನಂದ ಮಾಮನಿ ನೆನೆದು ಕಣ್ಣೀರು ಹಾಕಿದರು. ಯಾರೋ ಒಬ್ಬರು ಎಲ್ಲೋ ಕುಳಿತುಕೊಂಡು ರಾಜಕೀಯ ಮಾಡಿದರೆ ಆಗೋದಿಲ್ಲ, ಯಾರೋ ಬೇರೆ ತಾಲೂಕಿನಿಂದ ಬಂದು ಇಲ್ಲಿ ರಾಜಕೀಯ ಮಾಡೋದು ಬೇಡ‌ ಎಂದು ಪರೋಕ್ಷವಾಗಿ ಸತೀಶ್ ಜಾರಕಿಹೊಳಿಗೆ ರತ್ನಾ ಮಾಮನಿ ಟಾಂಗ್ ಕೊಟ್ಟರು.

ಇದನ್ನೂ ಓದಿ: ಭಜರಂಗಬಲಿಯೇ ಬೇರೆ, ಬಜರಂಗ ದಳವೇ ಬೇರೆ.. ನಾವು ಹನುಮನ ನಿಜವಾದ ಭಕ್ತರು: ಜೈರಾಮ್ ರಮೇಶ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.