ETV Bharat / state

ಬೆಳಗಾವಿ: ಮತ್ತೊಂದು ಅಮಾನವೀಯ ಘಟನೆ; ಆಸ್ತಿ ವಿವಾದಕ್ಕೆ ವಿಕಲಚೇತನನ ಮನೆ ಧ್ವಂಸ ಆರೋಪ

author img

By ETV Bharat Karnataka Team

Published : Dec 13, 2023, 12:44 PM IST

Updated : Dec 13, 2023, 2:38 PM IST

House destroyed
ಮನೆ ಧ್ವಂಸ

Allegation of demolish of house of disabled person:ಆಸ್ತಿ ವಿವಾದದ ಕಲಹಕ್ಕೆ ವಿಕಲಚೇತನನ ಮನೆ ಬಲಿಯಾಗಿದೆ ಎಂಬ ಆರೋಪ ಬೆಳಗಾವಿ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಮನೆ ಧ್ವಂಸಗೊಳಿಸುವ ವಿಡಿಯೋ ಒದಗಿದೆ.

ಸಂತ್ರಸ್ತ ಸಿದ್ದಪ್ಪ ಅಪ್ಪಯ್ಯ ತುರಬಿರಿಂದ ಹೇಳಿಕೆ

ಬೆಳಗಾವಿ: ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. 30 ವರ್ಷಗಳಿಂದ ಕುಟುಂಬದೊಂದಿಗೆ ಶೆಡ್​ನಲ್ಲಿ ವಾಸವಿದ್ದ ವಿಕಲಚೇತನನ ಮನೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿರುವ ಆರೋಪ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದಿಂದ ತಡವಾಗಿ ಬೆಳಕಿಗೆ ಬಂದಿದೆ. ಐದು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಾಡಹಗಲೇ ಬಡಿಗೆ ಕೋಲುಗಳಿಂದ ಮನೆ ಒಡೆದು ಧ್ವಂಸಗೊಳಿಸಲಾಗಿದೆ. ಉದಗಟ್ಟಿ ಗ್ರಾಮದ ಸಿದ್ದಪ್ಪ ಅಪ್ಪಯ್ಯ ತುರಬಿ (44) ವಾಸವಿದ್ದ ಪತ್ರಾಸ್ ಶೆಡ್ ಇದಾಗಿದೆ. ಆಸ್ತಿ ವಿವಾದದ ಕಲಹಕ್ಕೆ ವಿಕಲಚೇತನನ ಮನೆ ಬಲಿಯಾಗಿದೆ ಎಂದು ಸಂತ್ರಸ್ತ ಸಿದ್ದಪ್ಪ ಅಪ್ಪಯ್ಯ ತುರಬಿ ಆರೋಪಿಸಿದ್ದಾರೆ. ಸಿದ್ದಪ್ಪ ತುರಬಿ ವಾಸ ಮಾಡುತ್ತಿದ್ದ ಪತ್ರಾಸ್ ಶೆಡ್ 172 ಸರ್ವೆ ನಂಬರ್​ ಸಂಬಂಧ ಕೋರ್ಟ್​ನಲ್ಲಿ ಕೇಸ್ ದಾಖಲಾಗಿದೆ. ಕೇಸ್​ ಇದ್ದರು ಮನೆಯಲ್ಲಿ ಯಾರು ಇಲ್ಲದಿರುವಾಗ ಮನೆಗೆ ದಾಳಿ ಮಾಡಿ, ಮನೆಯಲ್ಲಿನ ವಸ್ತುಗಳನ್ನು ಹಾಳು ಮಾಡಿದ್ದಾರೆ. ದೂರು ದಾಖಲಾದರೂ ಆರೋಪಿಗಳ ಮೇಲೆ ಕ್ರಮಕ್ಕೆ ಪೊಲೀಸರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ ಎಂದು ಸಿದ್ದಪ್ಪ ಆರೋಪ ಮಾಡಿದ್ದಾರೆ. ಉದಗಟ್ಟಿ ಗ್ರಾಮದ ಲಕ್ಷ್ಮಣ ತುರಬಿ, ಸತ್ಯಪ್ಪಾ ತುರಬಿ, ಗಣಪತಿ ತುರಬಿ, ಫಕ್ಕೀರಪ್ಪ ತುರಬಿ ಸೇರಿ 8 ಜನರ ವಿರುದ್ಧ ದೂರು ದಾಖಲಾಗಿದೆ.

ನ್ಯಾಯಾಲಯದಲ್ಲಿ ಕೇಸ್​ ಇದ್ದರೂ ಲಕ್ಷ್ಮಣ ತುರಬಿ ಕುಟುಂಬಸ್ಥರು ಮನೆ ಧ್ವಂಸ ಮಾಡಿದ್ದಾರೆ. ಎಫ್ಐಆರ್ ದಾಖಲಾಗಿ ಐದು ದಿನ ಕಳೆದರೂ ಆರೋಪಿಗಳನ್ನು ಬಂಧನ ಮಾಡುತ್ತಿಲ್ಲ. ನನ್ನನ್ನು ಕೊಲ್ಲಲು ಲಕ್ಷ್ಮಣ ತುರಬಿ ಹುಡುಕಾಟ ನಡೆಸಿದ್ದಾರೆ. ಹೆಂಡತಿ ‌ಮಕ್ಕಳ ಜೊತೆಗೆ ಗ್ರಾಮವನ್ನೇ ತೊರೆದಿದ್ದೇನೆ. ನನಗೆ ಜೀವ ಬೆದರಿಕೆ ಇದ್ದು ಪೊಲೀಸರು ರಕ್ಷಣೆ ನೀಡುವಂತೆ ವಿಡಿಯೋ ಮಾಡಿ ಸಿದ್ದಪ್ಪ ತುರಬಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಂಡ್ಯ: ಮಗಳ ಮುಂದೆಯೇ ತಾಯಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ

Last Updated :Dec 13, 2023, 2:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.