ETV Bharat / state

ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಆಪ್ತ ಕಾರ್ಯದರ್ಶಿ ವಿರುದ್ಧದ ಪ್ರಕರಣ ರದ್ಧತಿಗೆ ಹೈಕೋರ್ಟ್ ನಕಾರ

author img

By ETV Bharat Karnataka Team

Published : Oct 18, 2023, 4:30 PM IST

Etv Bharat
Etv Bharat

ಧಾರವಾಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿ ಸೋಮಶೇಖರ್ ನ್ಯಾಮಗೌಡ ವಿರುದ್ಧದ ಪ್ರಕರಣ ರದ್ದು ಮಾಡಲು ಹೈಕೋರ್ಟ್​ ನಿರಾಕರಿಸಿದೆ.

ಬೆಂಗಳೂರು : ಸರ್ಕಾರಿ ಅಧಿಕಾರಿಯಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ರಕ್ಷಣೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ಧಾರವಾಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮಶೇಖರ್ ನ್ಯಾಮಗೌಡ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ 21ನೇ ಆರೋಪಿಯಾಗಿರುವ ನ್ಯಾಮಗೌಡ (ಪ್ರಸ್ತುತ ತುಮಕೂರು ಜಿಲ್ಲೆಯ ತಿಪಟೂರಿನ ಎಪಿಎಂಸಿ ಕಾರ್ಯದರ್ಶಿ) ತಮ್ಮ ವಿರುದ್ಧದ ಪ್ರಕರಣ ಕೈಬಿಡುವುದಕ್ಕೆ ನಿರಾಕರಿಸಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣ ಸಂಬಂಧ ಸಿಬಿಐ ಸಲ್ಲಿಸಿದ್ದ ಆರೋಪ ಪಟ್ಟಿ ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ನ್ಯಾಯಪೀಠ, ಮೇಲ್ನೋಟಕ್ಕೆ ಆರೋಪಿಯ ವಿರುದ್ಧ ಸಾಕ್ಷ್ಯಾಧಾರಗಳು ಲಭ್ಯವಿದೆ. ಜೊತೆಗೆ, ಯೋಗೇಶ್ ಗೌಡ ಅವರ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳು ರೂಪಿಸಿರುವ ಸಂಚಿನ ಕುರಿತು ಅರ್ಜಿದಾರರಿಗೆ ಅರಿವಿತ್ತು ಎಂದು ವಿಶೇಷ ನ್ಯಾಯಾಲಯ ತಿಳಿಸಿದೆ. ಅಲ್ಲದೇ, ಶ್ರೀನಿವಾಸ ರೆಡ್ಡಿ ಮತ್ತು ರಾಕೇಶ್ ಶರ್ಮಾ ಮತ್ತಿತರರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿರುವಂತೆ, ಸರ್ಕಾರಿ ನೌಕರರಿಗಿರುವ ರಕ್ಷಣೆಯನ್ನು ಕಾನೂನು ಬಾಹಿರ ಕೃತ್ಯಗಳಲ್ಲಿ ಬಳಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೇ, ಸುಳ್ಳು ಪ್ರವಾಸ ಕಾರ್ಯಕ್ರಮವನ್ನು ಸಿದ್ದಪಡಿಸುವುದು ಯೋಗೇಶ್ ಗೌಡರ ಕೊಲೆಗೆ ಸಂಚು ರೂಪಿಸಿರುವ ಭಾಗವಾಗಿದೆ. ಜೊತೆಗೆ ಎಲ್ಲ ಕಾರ್ಯಗಳನ್ನು ಪ್ರಮುಖ ಆರೋಪಿ ವಿನಯ್ ಕುಲಕರ್ಣಿ ಅವರ ಸೂಚನೆಯಂತೆ ನಡೆದುಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಹೀಗಾಗಿ ಈ ಅರ್ಜಿ ವಜಾಗೊಳಿಸುತ್ತಿರುವುದಾಗಿ ನ್ಯಾಯಪೀಠವು ಆದೇಶದಲ್ಲಿ ಹೇಳಿದೆ.

ಅಲ್ಲದೆ, ಯೋಗೇಶ್‌ ಗೌಡ ಕೊಲೆ ಸಂದರ್ಭದಲ್ಲಿ ಸಚಿವರು ದೆಹಲಿಯಲ್ಲಿದ್ದರು ಎಂಬುದಾಗಿ ಹೇಳಿಕೊಳ್ಳುವುದಕ್ಕಾಗಿ ಸಚಿವರ ಆಪ್ತ ಕಾರ್ಯದರ್ಶಿಯಾಗಿದ್ದ ನ್ಯಾಮಗೌಡ ಅವರು 2016ರ ಜೂನ್ 12ರಂದು ಪ್ರಕರಣದ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಅವರಿಗೆ ಸುಳ್ಳು ಪ್ರವಾಸ ಕಾರ್ಯಕ್ರಮ ಸೃಷ್ಟಿಸಿದ್ದರು. ಜೊತೆಗೆ ಅದೇ ದಿನ ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಲು ತೆರಳುತ್ತಿರುವುದಾಗಿ ವಿಮಾನದ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು ಎಂದು ಸಿಬಿಐ ಆರೋಪಿಸಿತ್ತು.

ಆದರೆ, ಸಭೆಗೆ ಸಂಬಂಧಿಸಿಂತೆ ಕೇಂದ್ರ ಸಚಿವರಿಗೆ ಯಾವುದೇ ಮನವಿಯನ್ನು ರವಾನಿಸಿರಲಿಲ್ಲ. ಜೊತೆಗೆ, ಅದೇ ಸಂದರ್ಭದಲ್ಲಿ ಕೇಂದ್ರ ಸಚಿವರು ರಾಷ್ಟ್ರಮಟ್ಟದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಅಲಹಾಬಾದ್‌ಗೆ ಭೇಟಿ ನೀಡಿದ್ದರು ಎಂದು ಸಿಬಿಐ ತನ್ನ ಆರೋಪ ಪಟ್ಟಿಯಲ್ಲಿ ತಿಳಿಸಿತ್ತು.

ಪ್ರಕರಣದಲ್ಲಿ ಅರ್ಜಿದಾರರು ಸಾರ್ವಜನಿಕ ಸೇವಕನಾಗಿದ್ದು, ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಆದ್ದರಿಂದ ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಕರ್ತವ್ಯಗಳು ಅಧಿಕೃತ ಎಂಬ ಅಂಶ ಕಂಡು ಬಂದಲ್ಲಿ ಅವರನ್ನು ವಿಚಾರಣೆಯಿಂದ ಕೈಬಿಡಬಹುದು. ಜೊತೆಗೆ, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ವಿಚಾರಣೆ ಮುಂದುವರೆಸಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಮ್ಮ ವಿರುದ್ಧದ ಆರೋಪಗಳು ಸಚಿವರಾಗಿದ್ದ ವಿನಯ್ ಕುಲಕರ್ಣಿ ಅವರ ಅಧಿಕೃತ ಕರ್ತವ್ಯದಲ್ಲಿದ್ದುಕೊಂಡು ನಿರ್ವಹಿಸಿರುವ ಕೆಲಸಗಳಾಗಿವೆ. ಆದರೆ, ಸರ್ಕಾರಿ ಅಧಿಕಾರಿ ಆಗಿರುವುದರಿಂದ ಅವರ ವಿರುದ್ಧ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ವಿಚಾರಣೆಗೆ ಪರಿಗಣಿಸಿದ್ದು, ಈ ಪ್ರಕರಣ ರದ್ದು ಮಾಡಬೇಕು ಎಂದು ಕೋರಿದ್ದರು.

ಇದನ್ನು ಓದಿ: ತುಂಗಾನದಿಯಲ್ಲಿ ಬಾಂಬ್‌ ಸ್ಫೋಟ ಪ್ರಯೋಗ ಪ್ರಕರಣ: ತೀರ್ಥಹಳ್ಳಿಯ ನಾಲ್ವರಿಗೆ ಎನ್‌ಐಎ ನೊಟೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.