ETV Bharat / state

ಎರಡು ವರ್ಷದ ಪ್ರೀತಿಗೆ ಎಳ್ಳುನೀರು : ಬೇರೆ ಮದುವೆಯಾಗಲು ಮುಂದಾದ ಮಹಿಳೆ ಕೊಂದ ಪ್ರೇಮಿ

author img

By

Published : Aug 30, 2021, 3:37 PM IST

woman-murder-in-kengeri-bangalore
ಕಂಗೇರಿ ಮಹಿಳೆ ಕೊಲೆ ಪ್ರಕರಣ

ಅನಿತಾ ಐದು ವರ್ಷದ ಹಿಂದೆ ಆಂಧ್ರದಲ್ಲಿ ಮದುವೆ ಮಾಡಿಕೊಂಡಿದ್ದಳು. ಆರಂಭದಲ್ಲಿ ಅನೋನ್ಯವಾಗಿದ್ದ ದಂಪತಿ ವಿವಿಧ ಕಾರಣಗಳಿಂದಾಗಿ ಗಂಡನಿಂದ ದೂರವಾಗಿದ್ದಳು‌. ಜೀವನಕ್ಕಾಗಿ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಘಟನೆ ಸಂಬಂಧ ಆಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದೆ‌ ಎಂದು ಪೊಲೀಸರು ಮಾಹಿತಿ ನೀಡಿದರು..

ಬೆಂಗಳೂರು : ಮದುವೆಯಾಗಲು ನಿರಾಕರಿಸಿದ ಮಹಿಳೆಯನ್ನು ಪ್ರೇಮಿಯೊಬ್ಬ ನಡುರಸ್ತೆಯಲ್ಲಿ ಚಾಕುವಿನಿಂದ ಕತ್ತು ಸೀಳಿ ಕೊಲೆಗೈದ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕಂಗೇರಿ ಮಹಿಳೆ ಕೊಲೆ ಪ್ರಕರಣ

ಆಂಧ್ರ ಮೂಲದ ಅನಿತಾ (23) ಎಂಬುವರು ಮೃತ ಮಹಿಳೆ. ವೆಂಕಟೇಶ್ (27) ಬಂಧಿತ ಆರೋಪಿ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ದೊಡ್ಡಬೆಲೆ ಮುಖ್ಯರಸ್ತೆಯ ಬೃಂದಾವನ ಲೇಔಟ್ ಬಳಿ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ವೆಂಕಟೇಶ್ ಚಾಕುವಿನಿಂದ ಕತ್ತು ಸೀಳಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನಿತಾಳನ್ನು ಸ್ನೇಹಿತರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತ್ತಪಟ್ಟಿದ್ದಾಳೆ‌. ಪ್ರಕರಣ ದಾಖಲಿಸಿಕೊಂಡು ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಆಂಧ್ರ ಮೂಲದ ವೆಂಕಟೇಶ್​ ಹಾಗೂ ಅನಿತಾ ಕಳೆದ‌ ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಇಬ್ಬರ ಪರಿಚಯವಾಗಿತ್ತು. ಕಳೆದ ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು.

ಇಬ್ಬರ ನಡುವೆ ದೈಹಿಕ ಸಂಪರ್ಕವಿತ್ತು ಎಂದು ಹೇಳಲಾಗುತ್ತಿದೆ‌. ವೆಂಕಟೇಶ್​​ನೊಂದಿಗೆ ಹೆಚ್ಚು ಓಡಾಡುತ್ತಿರುವ ಬಗ್ಗೆ ಅರಿತ ಮೃತಳ ತಂದೆ ಆಕ್ಷೇಪ ವ್ಯಕ್ತಪಡಿಸಿ, ಬೇರೆ ಮದುವೆಯಾಗುವಂತೆ ಹೇಳಿದ್ದರು.

ಇದರಂತೆ ಕಳೆದ ಎರಡು ವರ್ಷಗಳಿಂದ ಇದ್ದ ಸಂಬಂಧ ಮೊಟಕುಗೊಳಿಸಿ ಅನಿತಾ ಸ್ನೇಹಿತನಿಂದ ಅಂತರ ಕಾಯ್ದುಕೊಂಡಿದ್ದಳು. ಇತ್ತೀಚೆಗೆ ಬೇರೆ ಮದುವೆಯಾಗುವುದಾಗಿ ವೆಂಕಟೇಶ್ ಬಳಿ ಹೇಳಿಕೊಂಡಿದ್ದಳು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಬೇರೆ ಮದುವೆಯಾಗದಂತೆ ವೆಂಕಟೇಶ್ ತಾಕೀತು ಮಾಡಿದ್ದ.

ಮಾತು ಕೇಳದ ಸ್ನೇಹಿತೆ ಮೇಲೆ ಸಿಟ್ಟಾಗಿ ಕೊಲೆ ಮಾಡಲು ನಿರ್ಧರಿಸಿದ್ದನು. ಅನಿತಾಳಿಗೆ ಕರೆ ಮಾಡಿ ಮಾತನಾಡುವ ಸೋಗಿನಲ್ಲಿ ಬೃಂದಾವನ ಲೇಔಟ್ ಬಳಿ ಬರುವಂತೆ ಹೇಳಿದ್ದ. ಭೇಟಿ ವೇಳೆ‌ ಮದುವೆಯಾಗುವಂತೆ ಮಹಿಳೆಗೆ ಒತ್ತಾಯಿಸಿದ್ದಾನಂತೆ. ಇದಕ್ಕೆ ಅನಿತಾ ಒಪ್ಪದ ಹಿನ್ನೆಲೆ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಳಿಗೆ ಐದು ವರ್ಷದ ಹಿಂದೆ ಮದುವೆ

ಅನಿತಾ ಐದು ವರ್ಷದ ಹಿಂದೆ ಆಂಧ್ರದಲ್ಲಿ ಮದುವೆ ಮಾಡಿಕೊಂಡಿದ್ದಳು. ಆರಂಭದಲ್ಲಿ ಅನೋನ್ಯವಾಗಿದ್ದ ದಂಪತಿ ವಿವಿಧ ಕಾರಣಗಳಿಂದಾಗಿ ಗಂಡನಿಂದ ದೂರವಾಗಿದ್ದಳು‌. ಜೀವನಕ್ಕಾಗಿ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಘಟನೆ ಸಂಬಂಧ ಆಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದೆ‌ ಎಂದು ಪೊಲೀಸರು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.