ETV Bharat / state

ಅಕ್ಕಿ ಬದಲು ನಗದು ನೀಡುವ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಸದ್ಯದ ಸ್ಥಿತಿಗತಿ ಏನಿದೆ?

author img

By ETV Bharat Karnataka Team

Published : Jan 15, 2024, 6:31 PM IST

ಅನ್ನಭಾಗ್ಯ ಯೋಜನೆ
ಅನ್ನಭಾಗ್ಯ ಯೋಜನೆ

ರಾಜ್ಯ ಕಾಂಗ್ರೆಸ್​ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಪ್ರಮುಖವಾಗಿದೆ.

ಬೆಂಗಳೂರು : ರಾಜ್ಯ ಸರ್ಕಾರ ತನ್ನ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ.‌ ಅಕ್ಕಿ ಕೊರತೆ ಹಿನ್ನೆಲೆ ಅಕ್ಕಿ ಬದಲು ನಗದು ಜಮೆ ಮಾಡುವುದನ್ನು ಮುಂದುವರಿಸಿದೆ. ರಾಜ್ಯ ಸರ್ಕಾರದ ನಗದು ಜಮೆ ಮಾಡುವ ಅನ್ನ ಭಾಗ್ಯ ಯೋಜನೆ ಆರಂಭವಾಗಿ ಏಳು ತಿಂಗಳು ಕಳೆದಿದ್ದು, ಸದ್ಯದ ಸ್ಥಿತಿಗತಿ ಏನಿದೆ?. ಎಷ್ಟು ಮಂದಿಗೆ ಇನ್ನೂ ನಗದು ವರ್ಗಾವಣೆ ಆಗುತ್ತಿಲ್ಲ ಎಂಬ ವರದಿ ಇಲ್ಲಿದೆ.

ಅನ್ನ ಭಾಗ್ಯ ಯೋಜನೆ ರಾಜ್ಯದ ಬಿಪಿಎಲ್ ಕಾರ್ಡ್ ದಾರರಿಗೆ ಐದು ಕೆ.ಜಿ. ಉಚಿತ ಅಕ್ಕಿ ವಿತರಿಸುವ ಉದ್ದೇಶಿತ ಯೋಜನೆ ಇದಾಗಿದೆ. ಆದರೆ ಅಕ್ಕಿ ಕೊರತೆ ಹಿನ್ನೆಲೆ ಕೇಂದ್ರದಿಂದ ಅಕ್ಕಿ ಸಿಗದ ಕಾರಣ ರಾಜ್ಯ ಸರ್ಕಾರ ಅನಿವಾರ್ಯವಾಗಿ ಅಕ್ಕಿ ಬದಲು ನಗದು ನೀಡಲು ನಿರ್ಧರಿಸಿತು. ಜುಲೈನಿಂದ ಕಾಂಗ್ರೆಸ್ ಸರ್ಕಾರ ನಗದು ವರ್ಗಾವಣೆ ರೂಪದಲ್ಲಿ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿತು. ಇತ್ತ ಕೇಂದ್ರ ಸರ್ಕಾರ ತನ್ನ ಪಾಲಿನ ಉಚಿತ ಐದು ಕೆ.ಜಿ ಅಕ್ಕಿಯನ್ನು ರಾಜ್ಯದ ಬಿಪಿಎಲ್ ಪಡಿತರದಾರಿಗೆ ವಿತರಿಸುತ್ತಿದೆ.

ಆದರೆ, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊರತೆ ಹಿನ್ನೆಲೆ ತನ್ನ ಗ್ಯಾರಂಟಿಯಾದ 5 ಕೆ.ಜಿ ಅಕ್ಕಿ ಬದಲು ನಗದು ನೀಡುವ ವ್ಯವಸ್ಥೆ ಜಾರಿಗೊಳಿಸಿತು. ರಾಜ್ಯದ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರದಾರರಿಗೆ ಜುಲೈ 10ರಿಂದ ಫಲಾನುಭವಿಗಳ ಖಾತೆಗೆ ಅಕ್ಕಿ ಬದಲು ನಗದು ಜಮೆ ಮಾಡುವ ಪ್ರಕ್ರಿಯೆ ಆರಂಭಿಸಿತ್ತು. ಪ್ರತಿ ಕೆ.ಜಿಗೆ 34 ರೂ.ರಂತೆ ಮಾಸಿಕ 170 ರೂ.‌ ನಗದು ಹಣವನ್ನು ಪಡಿತರ ಫಲಾನುಭವಿಯ ಕುಟುಂಬದ ಮುಖ್ಯಸ್ಥರ ಬ್ಯಾಂಕ್‌ ಖಾತೆಗೆ DBT ಮೂಲಕ ವರ್ಗಾಯಿಸಲಾಗುತ್ತಿದೆ. ಇದೀಗ ನಗದು ವರ್ಗಾವಣೆಯ ಅನ್ನಭಾಗ್ಯಕ್ಕೆ ಏಳು ತಿಂಗಳು ಕಳೆದಿದೆ.

ಅನ್ನಭಾಗ್ಯದಡಿ ಈವರೆಗೆ ಜಮೆ ಮಾಡಿದ ಹಣ ಏನು? : ಅನ್ನಭಾಗ್ಯಕ್ಕೆ ರಾಜ್ಯ ಸರ್ಕಾರ 2023-24 ಸಾಲಿನಲ್ಲಿ ಒಟ್ಟು 10,265 ಕೋಟಿ ರೂ. ಹಂಚಿಕೆ ಮಾಡಿದೆ. ಈ ಪೈಕಿ ಡಿಸೆಂಬರ್ ವರೆಗೆ 4,071 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಅನ್ನಭಾಗ್ಯ ಯೋಜನೆಯಡಿ ಡಿಸೆಂಬರ್ ವರೆಗೆ 3,998.54 ಕೋಟಿ ರೂ. ವೆಚ್ಚವಾಗಿದೆ ಎಂದು ಕೆಡಿಪಿ ಪ್ರಗತಿ ಅಂಕಿ - ಅಂಶದಲ್ಲಿ ತೋರಿಸಲಾಗಿದೆ. ಮಾಸಿಕ ಸುಮಾರು 600 - 655 ಕೋಟಿ ರೂ. ವರೆಗೆ ಫಲಾನುಭವಿಗಳ ಖಾತೆಗೆ ಡಿಬಿಟಿ ಮಾಡಲಾಗುತ್ತಿದೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.

ಆಹಾರ ಇಲಾಖೆ ನೀಡಿದ ಅಂಕಿ - ಅಂಶದ ಪ್ರಕಾರ ಜುಲೈ ತಿಂಗಳಲ್ಲಿ ಆಹಾರ ಇಲಾಖೆ ರಾಜ್ಯದ ಒಟ್ಟು 3.45 ಕೋಟಿ ಪಡಿತರ ಫಲಾನುಭವಿಗಳ ಖಾತೆಗಳಿಗೆ ಸುಮಾರು 566 ಕೋಟಿ ರೂ.‌ ಡಿಬಿಟಿ (ನಗದು ವರ್ಗಾವಣೆ) ಮಾಡಿದೆ. ಅದೇ ಆಗಸ್ಟ್ ನಲ್ಲಿ ಒಟ್ಟು 3.36 ಕೋಟಿ ಫಲಾನುಭವಿಗಳ ಖಾತೆಗಳಿಗೆ ಸುಮಾರು 605.88 ಕೋಟಿ ರೂ. ಡಿಬಿಟಿ ಮಾಡಿದೆ. ಇನ್ನು ಸೆಪ್ಟೆಂಬರ್ ತಿಂಗಳಲ್ಲಿ ಆಹಾರ ಇಲಾಖೆ 3.86 ಕೋಟಿ ಫಲಾನುಭವಿಗಳ ಖಾತೆಗಳಿಗೆ ಒಟ್ಟು 627.73 ಕೋಟಿ ರೂ. ನಗದು ಜಮೆ ಮಾಡಿದೆ.

ಅಕ್ಟೋಬರ್ ತಿಂಗಳಲ್ಲಿ ರಾಜ್ಯದ ಸುಮಾರು 3.92 ಕೋಟಿ ಫಲಾನುಭವಿಗಳ ಖಾತೆಗಳಿಗೆ ಒಟ್ಟು 644.45 ಕೋಟಿ ರೂ. ನಗದು ಜಮೆ ಮಾಡಿದೆ. ನವೆಂಬರ್ ತಿಂಗಳಲ್ಲಿ ಸುಮಾರು 3.97 ಕೋಟಿ ಫಲಾನುಭವಿಗಳ ಖಾತೆಗಳಿಗೆ ಒಟ್ಟು 651.73 ಕೋಟಿ ರೂ. ಹಣ ಜಮೆ ಮಾಡಿದೆ. ಅದೇ ರೀತಿ ಡಿಸೆಂಬರ್ ತಿಂಗಳಲ್ಲಿ ಸುಮಾರು 3.99 ಕೋಟಿ ಫಲಾನುಭವಿಗಳ ಖಾತೆಗಳಿಗೆ ಸುಮಾರು 655.22 ಕೋಟಿ ರೂ. ನಗದು ಜಮೆ ಮಾಡಬೇಕಾಗಿದ್ದು, ಈವರೆಗೆ 112.84 ಕೋಟಿ ರೂ. ನಗದು ವರ್ಗಾವಣೆ ಮಾಡಲಾಗಿದೆ.

ಇನ್ನೂ ಹಲವರಿಗೆ ತಲುಪದ ನಗದು ಭಾಗ್ಯ : ಇನ್ನೂ ಹಲವರಿಗೆ ನಗದು ಅನ್ನಭಾಗ್ಯ ತಲುಪಿಲ್ಲ. ಆಧಾರ್ ಜೋಡಣೆ ಆಗದಿರುವ ಪಡಿತರದಾರರು, ಖಾತೆ ಹೊಂದಿಲ್ಲದವರು, ಕುಟುಂಬದಲ್ಲಿ ಮನೆ ಯಜಮಾನ ಇಲ್ಲದಿರುವ ನಾನಾ ಕಾರಣಗಳಿಂದ ಹಲವು ಫಲಾನುಭವಿಗಳ ಖಾತೆಗಳಿಗೆ ಈಗಲೂ ನಗದು ಪಾವತಿಯಾಗುತ್ತಿಲ್ಲ.

ರಾಜ್ಯದಲ್ಲಿ ಅನ್ನಭಾಗ್ಯದ ನಗದು ವರ್ಗಾವಣೆ ವ್ಯಾಪ್ತಿಯಡಿ 44,14,817 ಅಂತ್ಯೋದಯ ಅನ್ನ ಯೋಜನೆ ಪಡಿತರ ಫಲಾನುಭವಿಗಳು ಹಾಗೂ 3,94,23,608 ಆದ್ಯತಾ ಪಡಿತರ ಫಲಾನುಭವಿಗಳಿದ್ದಾರೆ. ಅಂದರೆ ಒಟ್ಟು 4,38,38,425 ಕೋಟಿ ಫಲಾನುಭವಿಗಳು ನಗದು ವರ್ಗಾವಣೆ ವ್ಯಾಪ್ತಿಗೆ ಬರುತ್ತಾರೆ. ಸದ್ಯ ಡಿಸೆಂಬರ್ ತಿಂಗಳಲ್ಲಿ ಗರಿಷ್ಠ ಒಟ್ಟು 3,99,25,249 ಫಲಾನುಭವಿಗಳ ಖಾತೆಗಳಿಗೆ ನಗದು ವರ್ಗಾವಣೆ ಆಗಲಿದೆ.

ಅಂದರೆ ಒಟ್ಟು 4,38,38,425 ಫಲಾನುಭವಿಗಳ ಪೈಕಿ 3,99,25,249 ಫಲಾನುಭವಿಗಳ ಖಾತೆಗಳಿಗೆ ನಗದು ಜಮೆ ಆಗುತ್ತಿದೆ. ಉಳಿದಂತೆ ಖಾತೆ ಇಲ್ಲದಿರುವ, ಆಧಾರ್ ಜೋಡಣೆ ಆಗದಿರುವುದು ಸೇರಿ ನಾನಾ ತಾಂತ್ರಿಕ ಕಾರಣಗಳಿಂದ ರಾಜ್ಯದ ಸುಮಾರು 39 ಲಕ್ಷ ಬಿಪಿಎಲ್ ಪಡಿತರ ಫಲಾನುಭವಿಗಳ ಖಾತೆಗಳಿಗೆ ಇನ್ನೂ ನಗದು ವರ್ಗಾವಣೆ ಆಗುತ್ತಿಲ್ಲ ಎಂಬುದು ಅಂಕಿ - ಅಂಶದಿಂದ ತಿಳಿದು ಬಂದಿದೆ.

ಈ ಪೈಕಿ ರಾಜ್ಯದಲ್ಲಿ ಪಡಿತರ ಕುಟುಂಬದ ಮುಖ್ಯಸ್ಥರನ್ನು ಹೊಂದಿಲ್ಲದ ಪಡಿತರ ಚೀಟಿಗಳು, ಒಂದಕ್ಕಿಂತ ಹೆಚ್ಚು ಕುಟುಂಬದ ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿಗಳು, ಆಧಾರ್ ಜೋಡಣೆ ಆಗಿಲ್ಲದ ಪಡಿತರ ಚೀಟಿಗಳು ಹಾಗೂ ID Validation and NPCI failed Ration cards ಪಡಿತರ ಚೀಟಿಗಳ ಸಂಖ್ಯೆ ಸುಮಾರು 10 ಲಕ್ಷ ಇದೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿಂದು 'ಯುವನಿಧಿ' ಗ್ಯಾರಂಟಿಗೆ ಸಿಎಂ ಚಾಲನೆ; ಬೃಹತ್​ ವೇದಿಕೆ ಸಿದ್ಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.