ಬೆಂಗಳೂರು: ವಿಧಾನ ಪರಿಷತ್ನಲ್ಲಿ ಅನರ್ಹ ಪದದ ಕಿಚ್ಚು ಕಾಣಿಸಿತು. ಕಾಂಗ್ರೆಸ್ ಆರೋಪಕ್ಕೆ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡಿದ ನೂತನ ಸಚಿವರು, ನಾವು ಅನರ್ಹರಲ್ಲ ಅರ್ಹರು. ಜನರಿಂದ ಪುನರಾಯ್ಕೆಯಾಗಿ ಬಂದಿದ್ದೇವೆ. ನೀವು ನಮ್ಮ ದುಷ್ಮನ್ಗಳೆಂದೇ ನಾವು ನಿಮ್ಮನ್ನು ಬಿಟ್ಟು ಬಂದಿದ್ದೇವೆ ಎಂದು ಟಾಂಗ್ ನೀಡಿದ್ರು.
ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 68ರ ಅಡಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದ ಕಾಂಗ್ರೆಸ್ನ ಆರ್ ಬಿ ತಿಮ್ಮಾಪುರ, ಭಾಷಣದ ನಡುವೆ ಗೋಲಿಬಾರ್ ಮಾಡಿದ ಯಾವುದೇ ಸರ್ಕಾರ ಉಳಿದಿಲ್ಲ ಎಂದರು. ಈ ವೇಳೆ ಎದ್ದ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ, ಈ ಸರ್ಕಾರವೂ ಉಳಿಯೋದಿಲ್ಲ ಎಂದರು. ಆಗ ಯಾಕೆ ಉಳಿಯಲ್ಲ ಎಂದು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು. ಈ ವೇಳೆ ಕೂಡಲೇ ಎದ್ದ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ. ಇದು ಅನರ್ಹ ಸರ್ಕಾರ ಎಂದರು.
ನಾರಾಯಣಸ್ವಾಮಿ ಮಾತಿಗೆ ಕೆಂಡಕಾರಿದ ಸಚಿವರಾದ ಬಿ.ಸಿ ಪಾಟೀಲ್, ಸೋಮಶೇಖರ್, ಅನರ್ಹ ಎಂದ ಕಾಂಗ್ರೆಸ್ ವಿರುದ್ಧ ಮುಗಿ ಬಿದ್ದರು. ಬಿಜೆಪಿ ಸದಸ್ಯರು ಕೂಡ ಆಕ್ರೋಶ ವ್ಯಕ್ತಪಡಿಸಿದರು. ನಾವು ಅನರ್ಹರಲ್ಲ ಅರ್ಹರು. ನಾವು ಜನರಿಂದ ಆಯ್ಕೆ ಆಗಿದ್ದೇವೆ. ಬಾಯಿಗೆ ಬಂದಂತೆ ಮಾತಾಡಬೇಡಿ ಎಂದು ಸಚಿವರಾದ ಬಿ ಸಿ ಪಾಟೀಲ್, ಎಸ್ ಟಿ ಸೋಮಶೇಖರ್ ವಾಗ್ದಾಳಿ ನಡೆಸಿದರು. ಕೋರ್ಟ್ ಆದೇಶದಂತೆ ನಾವು ಗೆದ್ದಿದ್ದೇವೆ ಎಂದು ಕಿಡಿಕಾರಿದರು.
ಈ ವೇಳೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ನ ಪಿ ಆರ್ ರಮೇಶ್ ಮಧ್ಯ ಪ್ರವೇಶಿಸಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ 17 ಜನರನ್ನ ವೈರಸ್ ಎಂದಿದ್ದಾರೆ ಎಂದು ಆರೋಪಿಸಿದರು. ರಮೇಶ್ ಮಾತಿಗೆ ಸದನದಲ್ಲಿ ಮತ್ತೆ ಗದ್ದಲ ಗಲಾಟೆ ನಡೆಯಿತು.
ನಾವು ವೈರಸ್ ಆಗಲಿ ಏನೇ ಆಗಲಿ ನಿಮಗೇಕೆ ಸುಮ್ಮನಿರಿ ಎಂದು ಕಾಂಗ್ರೆಸ್ ಸದಸ್ಯರಿಗೆ ತಿರುಗೇಟು ನೀಡಿದರು. ಕೂಡಲೇ ಕಾಂಗ್ರೆಸ್ನ ನಾರಾಯಣಸ್ವಾಮಿ ನಾವು ನಿಮ್ಮ ಸ್ನೇಹಿತರು ಅಂತಾ ಹೇಳಿಕೆ ನೀಡಿದರು. ಇದಕ್ಕೆ ಸಿಟ್ಟಾದ ಸಚಿವ ಸೋಮಶೇಖರ್. ನೀವು ಸ್ನೇಹತರಲ್ಲ ದುಷ್ಮನ್ಗಳು ಎಂದು ಕಿಡಿಕಾರಿದರು. ನಿಮ್ಮ ಸಹವಾಸ ಬೇಡ ಅಂತಾನೆ ನಿಮ್ಮನ್ನ ಬಿಟ್ಟು ಬಂದಿದ್ದೇವೆ ಎಂದು ಬಿ ಸಿ ಪಾಟೀಲ್ ಹೇಳಿದರು. ಈ ವೇಳೆ ಸದನದಲ್ಲಿ ಮತ್ತೆ ಗದ್ದಲ ಗಲಾಟೆ ನಡೆಯಿತು.