ETV Bharat / state

ಉತ್ತಮ ಆರೋಗ್ಯಕ್ಕಾಗಿ ನಿತ್ಯ ಕನಿಷ್ಠ ಒಂದು ಗಂಟೆ ವಾಕಿಂಗ್ ಮಾಡಿ: ಡಾ ಸಿ ಎನ್ ಮಂಜುನಾಥ್ ಸಲಹೆ

author img

By

Published : Jan 10, 2023, 10:16 PM IST

ಮಲ್ಲೇಶ್ವರಂ ಕ್ಷೇತ್ರದ ಗಾಂಧಿಗ್ರಾಮದಲ್ಲಿ ಉನ್ನತೀಕರಿಸಿದ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪ್ರಧಾನಮಂತ್ರಿ ಜನೌಷಧ ಕೇಂದ್ರ ಉದ್ಘಾಟನೆ - ಮನುಷ್ಯನ ಸಾಧನೆಗೆ ದೇಹ ಹಾಗೂ ಮನಸ್ಸಿನ ಆರೋಗ್ಯವೂ ಸದೃಢವಾಗಿರಬೇಕೆಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳ ಸಲಹೆ.

primary health center inaugurated
ಯಲಹಂಕದ ಗಾಂಧಿಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ನಡೆಯಿತು

ಬೆಂಗಳೂರು: ಇಂದು ದೇಶದಲ್ಲಿ ಶೇಕಡ 60ರಷ್ಟು ಸಾವುಗಳಿಗೆ ಜೀವನಶೈಲಿಯೇ ಕಾರಣವಾಗಿದೆ. ಚಿಕ್ಕ ವಯಸ್ಸಿನವರಲ್ಲೇ ಮಧುಮೇಹ, ಹೃದ್ರೋಗ, ರಕ್ತದ ಒತ್ತಡ ಕಂಡು ಬರುತ್ತಿದೆ. ಕನಿಷ್ಠಪಕ್ಷ ಎಲ್ಲರೂ ದಿನವೂ ಒಂದು ಗಂಟೆ ಕಾಲ ವಾಕಿಂಗ್ ಮಾಡಬೇಕು ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ ಸಿ ಎನ್ ಮಂಜುನಾಥ್ ಸಲಹೆ ನೀಡಿದರು. ಮಲ್ಲೇಶ್ವರಂ ಕ್ಷೇತ್ರದ ವ್ಯಾಪ್ತಿಯ ಗಾಂಧೀಗ್ರಾಮದಲ್ಲಿ ಉನ್ನತೀಕರಿಸಿದ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪ್ರಧಾನಮಂತ್ರಿ ಜನೌಷಧ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು ಈ ಸಲಹೆ ನೀಡಿದ್ದಾರೆ
’’ನಾವು ಹಿಂದಿನವರ ಆಹಾರ ಪದ್ಧತಿಯನ್ನು ಅರಿತು ರೂಢಿಸಿ ಕೊಳ್ಳಬೇಕು. ಜನರು ಬೈಸಿಕಲ್ ಮೂಲಕ ಸಂಚಾರ ಮಾಡಬೇಕು. ತಂತ್ರಜ್ಞಾನದ ಇತಿಮಿತಿಗಳನ್ನು ಅರ್ಥ ಮಾಡಿಕೊಂಡು, ಮನುಷ್ಯ ಸಂಬಂಧಗಳಿಗೆ ಮಹತ್ವ ಕೊಡಬೇಕು‘‘ ಎಂದು ಸಿ ಎನ್​ ಮಂಜುನಾಥ್​ ಕಿವಿಮಾತು ಹೇಳಿದರು. ಭಾರತದಲ್ಲಿ ಶೇ.30 ರಷ್ಟು ಜನರು ಹೃದಯಸಂಬಂಧಿಗೆ ಕಾಯಿಲೆಗೆ ಮೃತರಾಗುತ್ತಿದ್ದಾರೆ. ಉಳಿದಂತೆ ರಕ್ತದೊತ್ತಡ, ಡಯಾಬಿಟಿಸ್, ಕ್ಯಾನ್ಸರ್, ಸ್ಟ್ರೋಕ್ ಕೂಡ ಮಾನವನನ್ನು ಕಾಡುತ್ತಿದೆ. 45 ವರ್ಷದಿಂದ 60 ವರ್ಷದವರಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೃದಯ ಸಂಬಂಧಿ ಕಾಯಿಲೆ ಫ್ಯಾಮಿಲಿ ಹಿಸ್ಟರಿ ಇದ್ದವರೂ ಎಚ್ಚರಿಕೆಯಿಂದ ಇರಬೇಕು. ಅಂಥವರು ಆಗ್ಗಿಂದಾಗೆ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಮನುಷ್ಯ ಸಾಧನೆಗೆ ಆರೋಗ್ಯ ಮುಖ್ಯ: ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪ್ರಧಾನಮಂತ್ರಿ ಜನೌಷಧ ಕೇಂದ್ರ ಉದ್ಘಾಟಿಸಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು, 'ಮನುಷ್ಯ ಸಾಧನೆ ಮಾಡಬೇಕು ಎಂದರೆ ದೇಹ ಮುಖ್ಯ. ಇದಕ್ಕಿಂತ ಮನಸ್ಸಿನ ಆರೋಗ್ಯ ಇನ್ನೂ ಮುಖ್ಯ ಎಂದು ಉಪದೇಶಿಸಿದರು.

ಇಂದಿನ ದಿನಗಳಲ್ಲಿ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯವನ್ನು ನಿರ್ಲಕ್ಷಿಸುವುದು ಸಮಂಜಸವಲ್ಲ. ಒತ್ತಡದ ಬದುಕಿನಲ್ಲೂ ದಿನನಿತ್ಯ ವ್ಯಾಯಾಮ,ಯೋಗ ಮಾಡಬೇಕು. ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಸಾತ್ವಿಕ ಆಹಾರ ಸೇವಿಸಬೇಕು. ಉತ್ತಮ ಆರೋಗ್ಯದ ಮುಂದೆ ಯಾವುದೇ ಸಂಪತ್ತವೂ ದೊಡ್ಡದಲ್ಲ ಎಂದು ಆಶೀರ್ವಚನ ನೀಡಿದ ಅವರು, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಜನಪರ ಕಾಳಜಿಯೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಈ ಆಸ್ಪತ್ರೆ ಸಾಕ್ಷಿಯಾಗಿದೆ' ಎಂದು ತಿಳಿಸಿದರು.

ಮನುಷ್ಯ ಯಾವಾಗಲೂ ಕೋಪದ ಪರವಶನಾಗಬಾರದು. ಬದಲಿಗೆ ಸಮಾಧಾನ ಚಿತ್ತದೊಂದಿಗೆ ಸ್ಥಿತಪ್ರಜ್ಞತೆ ರೂಢಿಸಿ ಕೊಳ್ಳಬೇಕು. ಸಚಿವ ಅಶ್ವತ್ಥನಾರಾಯಣ ಅವರು, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಕಾರ್ಯದಲ್ಲಿ ಉತ್ಸಾಹದಿಂದ ಕೆಲಸ ಮಾಡುವ ಮೂಲಕ ಗಮನ ಸೆಳೆದರು ಎಂದು ಅವರು ಬಣ್ಣಿಸಿದರು.

ಅತ್ಯುತ್ತಮ ಚಿಕಿತ್ಸೆ ಲಭ್ಯ:ಈ ವೇಳೆ ಮಾತನಾಡಿದ ಸಚಿವ ಸಚಿವ ಅಶ್ವತ್ಥನಾರಾಯಣ, ಸ್ಥಳೀಯರಿಗೆ ಉಚಿತವಾಗಿ ಅತ್ಯುತ್ತಮ ಚಿಕಿತ್ಸೆ ಸಿಗಬೇಕು ಎನ್ನುವ ಧ್ಯೇಯದೊಂದಿಗೆ ಈ ಆಸ್ಪತ್ರೆ ಆರಂಭಿಸಲಾಗಿದೆ. ಇಲ್ಲಿ ಪರಿಣತ ವೈದ್ಯರಿದ್ದು, ವರ್ಚುಯಲ್ ಕ್ಲಿನಿಕ್ ಕೂಡ ಇದೆ. ಆಧುನಿಕತೆ, ಒತ್ತಡ, ವೃತ್ತಿಗಳ ಸಂಕೀರ್ಣತೆ, ಜೀವನಶೈಲಿ ಇತ್ಯಾದಿಗಳಿಂದ ಆಯುಸ್ಸು 90 ವರ್ಷಗಳಿಂದ 70 ವರ್ಷಕ್ಕೆ ಇಳಿದಿದೆ. ಆದ್ದರಿಂದ ಆರೋಗ್ಯ ರಕ್ಷಣೆಯ ಕಡೆಗೆ ಹೆಚ್ಚಿನ ಗಮನ‌ ಕೊಡಬೇಕು. ಈ ಆಸ್ಪತ್ರೆಯಲ್ಲಿ ಎಲ್ಲ ವೈದ್ಯಕೀಯ ಸೌಲಭ್ಯಗಳೂ ಇವೆ ಎಂದು ಅವರು ಹೇಳಿದರು.
ಪಾಲಿಕೆ ಆರೋಗ್ಯ ಆಯುಕ್ತ ಡಾ.ತ್ರಿಲೋಕಚಂದ್ರ, ಪಶ್ಚಿಮ ವಲಯ ಆಯುಕ್ತ ಡಾ.ದೀಪಕ್, ಜಂಟಿ ಆಯುಕ್ತ ಶ್ರೀನಿವಾಸ, ಪಾಲಿಕೆ ಮಾಜಿ ಸದಸ್ಯ ಮಂಜುನಾಥ ರಾಜು, ಮಂಜುನಾಥ, ಬಿಜೆಪಿ ‌ಮುಖಂಡರಾದ ಸುರೇಶಗೌಡ, ನಾಗೇಶ ಇದ್ದರು.

ಇದನ್ನೂಓದಿ ವಿಜಯಪುರ.. ಸರಳವಾಗಿ ಸಿದ್ದೇಶ್ವರ ಜಾತ್ರೆ ಆಚರಣೆ: ಅಕ್ಕಿಯಲ್ಲಿ ಅರಳಿದ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳು

ಇದನ್ನೂಓದಿ:ರಾಜ್ಯದಲ್ಲಿರುವುದು ಜನಾಶೀರ್ವಾದದ ಸರ್ಕಾರವಲ್ಲ, ಅಪರೇಷನ್​ ಕಮಲದ ಸರ್ಕಾರ: ಹೆಚ್​ಡಿ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.