ETV Bharat / state

ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನಿರಾಕರಿಸಿದ ಕೇಂದ್ರದ ಕ್ರಮಕ್ಕೆ ಸಮಾನ ಮನಸ್ಕರ ಒಕ್ಕೂಟ ಖಂಡನೆ

author img

By

Published : Jun 20, 2023, 9:27 AM IST

2020ರ ಅಂಕಿ ಅಂಶಗಳ ಅನ್ವಯ ಪ್ರಪಂಚದಾದ್ಯಂತ 720 ಮಿಲಿಯನ್​ ಮತ್ತು 811 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದಾರೆ.

ಅಕ್ಕಿ
ಅಕ್ಕಿ

ಬೆಂಗಳೂರು : ಸಕಾರಣ ನೀಡದೇ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಪೂರೈಕೆಯನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ ಎಂದು ಆರೋಪಿಸಿರುವ ಸಮಾನ ಮನಸ್ಕರ ಒಕ್ಕೂಟ, ಕೇಂದ್ರದ ಕ್ರಮವನ್ನು ಬಲವಾಗಿ ಖಂಡಿಸಿದೆ. ಒಕ್ಕೂಟದ ಪರವಾಗಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಲಾಗಿದ್ದು, ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 2, 2030 ರ ಹೊತ್ತಿಗೆ ಹಸಿವು ಮುಕ್ತ ಜಗತ್ತನ್ನು ಸೃಷ್ಟಿಸುವುದಾಗಿದೆ. 2020 ರ ಅಂಕಿ ಅಂಶಗಳ ಅನ್ವಯ ಪ್ರಪಂಚದಾದ್ಯಂತ 720 ಮಿಲಿಯನ್ ಮತ್ತು 811 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದಾರೆ.

ಹಾಗೆಯೇ ಸುಮಾರು 2.4 ಶತಕೋಟಿ ಜನರು, ಅಥವಾ ಪ್ರಪಂಚದ ಜನಸಂಖ್ಯೆಯ ಶೇಕಡಾ 30 ಕ್ಕಿಂತ ಹೆಚ್ಚು ಜನರು ತೀವ್ರವಾಗಿ ಆಹಾರ-ಅಭದ್ರತೆಯಿಂದ ಬಳಲುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಹಸಿವಿನಿಂದ ಮತ್ತು ಆಹಾರದ ಅಭದ್ರತೆಯಿಂದ ಬಳಲುತ್ತಿರುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ ಎಂದು ವಿವರಿಸಿದೆ.

ಕೋವಿಡ್- 19 ಬಿಕ್ಕಟ್ಟು ಹಸಿವಿನ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ ಮತ್ತು ಎಲ್ಲಾ ರೀತಿಯ ಅಪೌಷ್ಟಿಕತೆಯನ್ನು ಉಲ್ಬಣಗೊಳಿಸಿದೆ. ಎರಡನೆಯ ಮಹಾಯುದ್ಧದ ನಂತರ ಅತಿದೊಡ್ಡ ಜಾಗತಿಕ ಆಹಾರ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ. ಆಹಾರ ಅಭದ್ರತೆಯ ಪರಿಣಾಮಗಳ ಬೆಳಕಿನಲ್ಲಿ, ಪ್ರತಿಯೊಬ್ಬರ ಮೇಲೆ, ವಿಶೇಷವಾಗಿ ಬಡವರು ಮತ್ತು ಅತ್ಯಂತ ದುರ್ಬಲರ ಮೇಲೆ ಗಣನೀಯ ಪರಿಣಾಮ ಬೀರುವ ದೊಡ್ಡ ಆಘಾತಗಳ ಅಪಾಯವನ್ನು ತಗ್ಗಿಸಲು ಆಹಾರ ಪೂರೈಕೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ತ್ವರಿತ ಕ್ರಮಗಳ ಅಗತ್ಯವಿದೆ ಎಂದು ವಿಶ್ವ ಸಂಸ್ಥೆ ಹೇಳುತ್ತದೆ ಎಂದು ಒಕ್ಕೂಟ ಅಭಿಪ್ರಾಯ ಪಟ್ಟಿದೆ.

ಕೇಂದ್ರದ ನೆರವನ್ನು ಕೋರಿ ಪತ್ರ : ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕರ್ನಾಟಕವನ್ನು ಹಸಿವು ಮುಕ್ತಗೊಳಿಸಲು ಪ್ರತಿ ವ್ಯಕ್ತಿಗೆ 10 ಕೆ ಜಿ ಉಚಿತ ಅಕ್ಕಿಯನ್ನು ವಿತರಣೆಗೆ ಮುಂದಾಗಿದೆ . ಈ ಕಾರ್ಯಕ್ರಮದ ಪರಿಣಾಮಕಾರಿ ಜಾರಿಗೆ ಕೇಂದ್ರದ ನೆರವನ್ನು ಕೋರಿ ಪತ್ರ ಬರೆದಿತ್ತು.

ಇದೇ ಸಂದರ್ಭದಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಎಫ್​ಸಿಐ ಗೋದಾಮುಗಳಲ್ಲಿ 185.58 ಲಕ್ಷ ಟನ್ ಧಾನ್ಯಗಳ ಹೆಚ್ಚುವರಿ ದಾಸ್ತಾನು ಇದೆ. ಇದರಿಂದ ರಾಜ್ಯಕ್ಕೆ ಅಗತ್ಯವಿರುವ 1.66 ಲಕ್ಷ ಟನ್ ಹೆಚ್ಚುವರಿ ಅಕ್ಕಿ ಕೊಡಲು ಕಷ್ಟವೇನಿಲ್ಲ. ಆದರೂ, ಮೋದಿ ನೇತೃತ್ವದ ಬಿಜೆಪಿ ಸರಕಾರ ನಿರಾಕರಿಸುತ್ತಿದೆ. ಇದು ಸರಿಯಲ್ಲ ಎಂದು ಹೇಳಲಾಗಿದೆ.

ಕೇಂದ್ರ ಸರ್ಕಾರವು ಸಂವಿಧಾನದ ಗಣತಂತ್ರ ಹಾಗು ಒಕ್ಕೂಟ ವ್ಯವಸ್ಥೆಯ ತತ್ವಗಳಿಗೆ ಅನುಗುಣವಾಗಿ, ಭಾರತವನ್ನು ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 2 ರ ಅನ್ವಯ ಹಸಿವು ಮುಕ್ತಗೊಳಿಸಲು ಮೊದಲ ಹೆಜ್ಜೆ ಇರಿಸಿರುವ ಕರ್ನಾಟಕ ಸರಕಾರವನ್ನು ಅಭಿನಂದಿಸಿ, ಕರ್ನಾಟಕ ಸರ್ಕಾರ ಸಲ್ಲಿಸಿರುವ ಬೇಡಿಕೆಯನ್ನು ಈಡೇರಿಸುವ ಮೂಲಕ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಜಾರಿಗೊಳಿಸಲು ಮುಂದಾಗಬೇಕಿತ್ತು.

ಕರ್ನಾಟಕಕ್ಕೆ ಅಗತ್ಯ ಅಕ್ಕಿ ಬಿಡುಗಡೆ ಮಾಡಬೇಕು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಪ್ರಕಾರ, ರಾಜ್ಯಗಳಿಗೆ ಅಗತ್ಯವಿರುವ ಹೆಚ್ಚುವರಿ ಧಾನ್ಯವನ್ನು ಹಂಚಿಕೆ ಮಾಡಬೇಕು. ಬದಲಾಗಿ, ಕೇಂದ್ರ ಸರಕಾರವು ಈ ವಿಷಯವನ್ನು ರಾಜಕೀಯಕರಣಗೊಳಿಸಿ, ಕರ್ನಾಟಕ ಸರ್ಕಾರ ಸಲ್ಲಿಸಿರುವ ಹೆಚ್ಚುವರಿ ಅಕ್ಕಿಯನ್ನು ಬಿಡುಗಡೆ ಮಾಡಲು ನಿರಾಕರಿಸಿರುವ ಕ್ರಮವನ್ನು ಸಮಾನ ಮನಸ್ಕರ ಒಕ್ಕೂಟ ಬಲವಾಗಿ ಖಂಡಿಸುತ್ತದೆ. ಕೇಂದ್ರ ಸರಕಾರ ಸಂವಿಧಾನದ ಒಕ್ಕೂಟ ತತ್ವಗಳಿಗೆ ಅನುಗುಣವಾಗಿ, ರಾಜ್ಯ ಸರಕಾರಗಳು ಸಲ್ಲಿಸುವ ಮನವಿಗಳಿಗೆ ಪೂರಕವಾಗಿ ಸ್ಪಂದಿಸಬೇಕೆಂದು ಒತ್ತಾಯಿಸುತ್ತದೆ . ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಕರ್ನಾಟಕಕ್ಕೆ ಅಗತ್ಯ ಅಕ್ಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತದೆ ಎಂದಿದೆ.

ಒಕ್ಕೂಟದಲ್ಲಿ ಹಿರಿಯ ಸಾಹಿತಿಗಳಾದ ಡಾ. ಕೆ ಎಂ ಮರುಳಸಿದ್ದಪ್ಪ, ಪ್ರೊ. ಎಸ್ ಜಿ ಸಿದ್ದರಾಮಯ್ಯ, ಡಾ . ನಿರಂಜನಾರಾಧ್ಯ. ವಿ. ಪಿ, ದಿನೇಶ್ ಅಮಿನಮಟ್ಟು, ಜಾಣಗೆರೆ ವೆಂಕಟರಾಮಯ್ಯ, ರುದ್ರಪ್ಪ ಹನಗವಾಡಿ, ವಿಮಲಾ ಕೆ. ಎಸ್, ಡಾ. ಲೀಲಾ ಸಂಪಿಗೆ ಮತ್ತಿತರರು ಇದ್ದಾರೆ.

ಇದನ್ನೂ ಓದಿ: ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ನಾಳೆ ಕಾಂಗ್ರೆಸ್ ಪ್ರತಿಭಟನೆ: ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.