ETV Bharat / state

ಬೆಂಗಳೂರು: ಕರ್ತವ್ಯನಿರತ ಮಹಿಳಾ ಪಿಎಸ್ಐಗೆ ಧಮ್ಕಿ; ಹೋಟೆಲ್ ಮಾಲೀಕ ಸೇರಿ ಮೂವರ ಬಂಧನ

author img

By ETV Bharat Karnataka Team

Published : Dec 3, 2023, 7:57 PM IST

Etv Bharat
Etv Bharat

ಕರ್ತವ್ಯನಿರತ ಮಹಿಳಾ ಪಿಎಸ್ಐ ಜೊತೆ ಅನುಚಿತ ವರ್ತನೆ ತೋರಿ, ಜೀವಬೆದರಿಕೆ ಹಾಕಿದ ಮೂವರನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಕರ್ತವ್ಯನಿರತ ಮಹಿಳಾ ಪಿಎಸ್ಐ ಜೊತೆ ಅನುಚಿತ ವರ್ತನೆ ತೋರಿದ್ದಲ್ಲದೆ, ನಿಂದಿಸಿ ಜೀವಬೆದರಿಕೆ ಹಾಕಿದ್ದ ಮೂವರು ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುದ್ದಿನಪಾಳ್ಯ ಮುಖ್ಯ ರಸ್ತೆಯ ಅಶ್ವ ವೆಜ್ ಮತ್ತು ನಾನ್ ವೆಜ್ ಹೋಟೆಲ್ ಮಾಲೀಕ ಸಂಜೀವ್ ಗೌಡ, ಕ್ಯಾಶಿಯರ್ ಸಂದೀಪ್ ಕುಮಾರ್ ಹಾಗೂ ಹೇಮಂತ್ ಎಂಬುವರನ್ನು ಬಂಧಿಸಲಾಗಿದೆ.

ನಡೆದಿದ್ದೇನು?: ಶನಿವಾರ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆ ಪಿಎಸ್ಐ ಪ್ರತಿಮಾ ಮಧ್ಯರಾತ್ರಿ 1:30ರ ಸುಮಾರಿಗೆ ಮುದ್ದಿನಪಾಳ್ಯ ಮುಖ್ಯ ರಸ್ತೆಯ ಅಶ್ವ ವೆಜ್ ಮತ್ತು ನಾನ್ ವೆಜ್ ಹೋಟೆಲ್ ಬಳಿ ತೆರಳಿದ್ದರು. ಅವಧಿ ಮುಗಿದ ಬಳಿಕವೂ ಹೋಟೆಲ್ ತೆರೆದಿದ್ದರಿಂದ ಬಂದ್​ ಮಾಡುವಂತೆ ಹೋಟೆಲ್ ಸಿಬ್ಬಂದಿಗೆ ಸೂಚಿಸಿದ್ದರು.

ಈ ವೇಳೆ ಹೋಟೆಲ್ ಮಾಲೀಕ ಸಂಜೀವ್ ಗೌಡ 'ತನಗೆ ದಿನದ 24 ಗಂಟೆಯೂ ಹೋಟೆಲ್ ತೆರೆದಿರಲು ಅನುಮತಿಯಿದೆ' ಎಂದಿದ್ದಾನೆ. ಅನುಮತಿ ಪತ್ರ ತೋರಿಸಿ ಎಂದಾಗ, 'ಆರ್.ಟಿ.ಐನಲ್ಲಿ ಅಫ್ಲೈ ಮಾಡಿ ಪಡೆದುಕೋ' ಎನ್ನುತ್ತಾ ಏಕವಚನದಲ್ಲಿ ನಿಂದಿಸುತ್ತ, ಅಸಭ್ಯವಾಗಿ ಕೈ ಬೆರಳು ಪ್ರದರ್ಶಿಸಿದ್ದಾನೆ. ಅಲ್ಲದೇ, 'ನೀವೇ ಲಂಚ ಕೇಳಲು ಬಂದಿದ್ದೀರಿ ಎಂದು ವಿಡಿಯೋ ವೈರಲ್ ಮಾಡುತ್ತೇನೆ, ನಿಮ್ಮ ಬಟ್ಟೆ ಬಿಚ್ಚಿಸಿ, ಜನ್ಮ ಜಾಲಾಡುತ್ತೇನೆ' ಎಂದು ಬಾಯಿಗೆ ಬಂದಂತೆ ಮಾತನಾಡುತ್ತ ಬೆದರಿಕೆ ಹಾಕಿದ್ದಾನೆ. ಆರೋಪಿಗೆ ಕ್ಯಾಶಿಯರ್ ಸಂದೀಪ್ ಕುಮಾರ್ ಹಾಗೂ ಹೇಮಂತ್ ಸಾಥ್ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಕ್ಷಣ ಜ್ಞಾನಭಾರತಿ ಪೊಲೀಸ್​ ಠಾಣೆ ಸಿಬ್ಬಂದಿಯನ್ನು ಕರೆಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಪಿಎಸ್ಐ ಪ್ರತಿಮಾರಿಂದ ದೂರು ಪಡೆದು ಐಪಿಸಿ ಸೆಕ್ಷನ್ 341 (ಒತ್ತಾಯಪೂರ್ವಕವಾಗಿ ನಿರ್ಬಂಧ), 190 (ಸರ್ಕಾರಿ ಅಧಿಕಾರಿಗೆ ಬೆದರಿಕೆ), 353 (ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ), 354 (ಮಹಿಳೆಯ ಮೇಲೆ ಸಾರ್ವಜನಿಕವಾಗಿ ಕ್ರಿಮಿನಲ್ ಬಲಪ್ರಯೋಗ) ಮತ್ತಿತರ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಹೋಟೆಲ್ ಮಾಲೀಕ ಸಂಜೀವ್ ಗೌಡ, ಕ್ಯಾಶಿಯರ್ ಸಂದೀಪ್ ಕುಮಾರ್ ಹಾಗೂ ಹೇಮಂತ್ ಎಂಬಾತನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಹಾವೇರಿ: 7 ಜೀವಂತ ನಾಡ ಬಾಂಬ್‌ ಪತ್ತೆ, ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.