ETV Bharat / state

ಬೆಂಗಳೂರು: ಮನೆಗಳ್ಳತನದಲ್ಲಿ ಶತಕ ಬಾರಿಸಿರುವ ಕುಖ್ಯಾತ 'ಎಸ್ಕೇಪ್​ ಕಾರ್ತಿಕ್'​ ಅರೆಸ್ಟ್​

author img

By ETV Bharat Karnataka Team

Published : Nov 4, 2023, 1:12 PM IST

Bengaluru crime: ಕುಖ್ಯಾತ ಮನೆ ಕಳವು ಆರೋಪಿ ಕಾರ್ತಿಕ್​ನನ್ನು ಗೋವಿಂದರಾಜ ನಗರ ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

thief Escape karthik arrested
ಮನೆಗಳ್ಳತನದಲ್ಲಿ ಶತಕ ಬಾರಿಸಿರುವ ಕುಖ್ಯಾತ ಕಳ್ಳನ ಬಂಧನ

ಬೆಂಗಳೂರು: ನೂರಕ್ಕೂ ಅಧಿಕ ಮನೆಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಮನೆ ಕಳ್ಳತನ ಪ್ರಕರಣಗಳ ಆರೋಪಿ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್​ನನ್ನು ಗೋವಿಂದರಾಜ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿಲಾಸಿ ಜೀವನ ಕ್ಯಾಸಿನೋ ಚಟಕ್ಕಾಗಿ ಮನೆಗಳ್ಳತನದಲ್ಲಿ ಭಾಗಿಯಾಗುತ್ತಿದ್ದ ಆರೋಪಿ, ಕಳವು ಮಾಡಿದ ವಸ್ತುಗಳನ್ನು ಅಡವಿಟ್ಟು ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ.

ತನ್ನ 16 ವಯಸ್ಸಿನಲ್ಲೇ ಮನೆಗಳ್ಳತನ ಆರಂಭಿಸಿದ್ದ ಕಾರ್ತಿಕ್ ಹೆಣ್ಣೂರು ನಿವಾಸಿ. ಮದುವೆಯಾಗಿರುವ ಕಾರ್ತಿಕ್​ಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇದುವರೆಗೂ ನೂರಕ್ಕೂ ಅಧಿಕ ಮನೆಗಳ್ಳತನ ಕೃತ್ಯ ಎಸಗಿರುವ ಆರೋಪಿಯ ವಿರುದ್ಧ ಬೆಂಗಳೂರಿನ ಕಾಮಾಕ್ಷಿಪಾಳ್ಯ, ಹೆಣ್ಣೂರು, ಕೊತ್ತನೂರು ಮಾತ್ರವಲ್ಲದೇ ಮೈಸೂರು, ಹಾಸನದಲ್ಲಿಯೂ ಪ್ರಕರಣಗಳಿವೆ. ಬೆಂಗಳೂರು ಪೊಲೀಸರಿಂದಲೇ ಬರೋಬ್ಬರಿ 20ಕ್ಕೂ ಹೆಚ್ಚು ಬಾರಿ ಬಂಧನವಾಗಿದ್ದಾನೆ.

ಬೆಂಗಳೂರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ, 2008 ಹಾಗೂ 2010ರಲ್ಲಿ ಪೊಲೀಸರ ಕಸ್ಟಡಿಯಿಂದ ಎಸ್ಕೇಪ್ ಆಗಿದ್ದರಿಂದ ಎಸ್ಕೇಪ್ ಕಾರ್ತಿಕ್ ಎಂದೇ ಕುಖ್ಯಾತಿ ಹೊಂದಿದ್ದಾನೆ. ಕಳೆದ ವರ್ಷ ನವೆಂಬರ್‌ನಲ್ಲಿ ಹೆಣ್ಣೂರು‌ ಠಾಣಾ ಪೊಲೀಸರು ಕಾರ್ತಿಕ್​ನನ್ನು ಬಂಧಿಸಿದ್ದರು. ಸದ್ಯ ಪ್ರಕರಣವೊಂದರ ಸಂಬಂಧ ಗೋವಾಗೆ ತೆರಳಿದ್ದ ಗೋವಿಂದರಾಜನಗರ ಠಾಣಾ ಪೊಲೀಸರು ಎಸ್ಕೇಪ್ ಕಾರ್ತಿಕ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕೌಟುಂಬಿಕ ಕಲಹ ಸರಿಪಡಿಸುವುದಾಗಿ ಮಾಂಗಲ್ಯ ಸರ ಕದ್ದೊಯ್ದ ನಕಲಿ ಸ್ವಾಮೀಜಿ!

ಪ್ರತ್ಯೇಕ ಪ್ರಕರಣ: ಇತ್ತೀಚೆಗೆ, ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಕಳ್ಳನನ್ನು ಬೆಳ್ತಂಗಡಿ ಠಾಣೆ ಪೊಲೀಸರು ಬಂಧಿಸಿದ್ದರು. ಆಂಧ್ರಪ್ರದೇಶ ಮೂಲದ ಸದ್ಯ ತಮಿಳುನಾಡಿನ ಕನ್ಯಾಕುಮಾರಿ ನಿವಾಸಿ ಉಮೇಶ್​ ಬಳೆಗಾರ ಬಂಧಿತ ಆರೋಪಿ. ಕಳೆದ ಆಗಸ್ಟ್ 12ರಂದು ಉಜಿರೆ ಗ್ರಾಮದ ಕಲ್ಲೆ ನಿವಾಸಿ ಫೆಲಿಕ್ಸ್ ಎಂಬವರ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳಗೆ ನುಗ್ಗಿದ ಆರೋಪಿ 15 ಪವನ್ ಚಿನ್ನಾಭರಣ ಮತ್ತು 20 ಸಾವಿರ ನಗದು ಎಗರಿಸಿ ಪರಾರಿಯಾಗಿದ್ದನು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್​ 28ರಂದು ಆರೋಪಿ ಉಮೇಶ್​ ಬಳೆಗಾರನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು.

ವಿವಿಧ ರಾಜ್ಯದಲ್ಲಿ ಕಳ್ಳತನ: ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ‌ ಈಗಾಗಲೇ ಹಲವು ಕಳ್ಳತನ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿ ಜೈಲು ಪಾಲಾಗಿದ್ದ. ಬಳಿಕ ಜಾಮೀನು ಪಡೆದು ಹೊರಬಂದ ಬಳಿಕ ಆರೋಪಿ ನ್ಯಾಯಾಲಯಕ್ಕೆ ಹಾಜರಾಗುತ್ತಿರಲಿಲ್ಲ. ಹೀಗಾಗಿ ಈ ವಿರುದ್ಧ ನಾಲ್ಕು ರಾಜ್ಯದ ನ್ಯಾಯಾಲಯಗಳಿಂದ ವಾರೆಂಟ್ ಜಾರಿಯಾಗಿತ್ತು. ನಾಲ್ಕು ರಾಜ್ಯದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು‌. ಈ ವೇಳೆ ಬೆಳ್ತಂಗಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದು, ಜೈಲು ಸೇರಿದ್ದ.

ಇದನ್ನೂ ಓದಿ: ಸಮುದ್ರ, ವಿಮಾನದ ಮೂಲಕ ಚಿನ್ನ ಕಳ್ಳ ಸಾಗಣೆ.. 12 ಕೋಟಿ ಮೌಲ್ಯದ ಬಂಗಾರ ವಶ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.