ETV Bharat / state

ಗಗನಸಖಿ‌ ಅನುಮಾನಾಸ್ಪದ ಸಾವು ಪ್ರಕರಣ: ಹತ್ಯೆ ಪ್ರಕರಣ ದಾಖಲು, ಪ್ರಿಯಕರ ಪೊಲೀಸ್ ವಶಕ್ಕೆ

author img

By

Published : Mar 13, 2023, 8:39 PM IST

Updated : Mar 13, 2023, 9:09 PM IST

ಗಗನಸಖಿ‌ ಅನುಮಾನಾಸ್ಪದ ಸಾವು ಪ್ರಕರಣ
ಗಗನಸಖಿ‌ ಅನುಮಾನಾಸ್ಪದ ಸಾವು ಪ್ರಕರಣ

ಬೆಂಗಳೂರಲ್ಲಿ ಗಗನಸಖಿ ಅನುಮಾನಾಸ್ಪ ಸಾವು ಪ್ರಕರಣ ಸಂಬಂಧ ಆಕೆಯ ಪ್ರಿಯಕರನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಡಿಸಿಪಿ ಸಿ ಕೆ ಬಾಬು ಮಾಹಿತಿ

ಬೆಂಗಳೂರು: ಇಲ್ಲಿನ ಅಪಾರ್ಟ್ ಮೆಂಟ್​​ನ ನಾಲ್ಕನೇ‌ ಮಹಡಿಯಿಂದ ಶನಿವಾರ ಗಗನಸಖಿ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ ಸಂಬಂಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಯುವತಿಯ ಪೋಷಕರು ನೀಡಿದ ದೂರಿನ ಮೇರೆಗೆ ಯುವತಿಯ ಪ್ರಿಯಕರನ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಆರೋಪಿ ಯುವಕ ಆದೇಶ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅರ್ಚನಾ ಧಿಮಾನ್ (28) ಅನುಮಾನಾಸ್ಪದವಾಗಿ ಮೃತಪಟ್ಟ ಗಗನಸಖಿ.

ತಮ್ಮ‌ ಮಗಳ ಸಾವು ಅನುಮಾನಸ್ಪಾದವಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಅರ್ಚನಾ ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರತಿಷ್ಠಿತ ವಿಮಾನಯಾನ ಕಂಪೆನಿಯೊಂದರಲ್ಲಿ ಗಗನಸಖಿಯಾಗಿ ಅರ್ಚನಾ ಕೆಲಸ ಮಾಡುತ್ತಿದ್ದಳು. ಆದೇಶ್, ನಗರದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಅರ್ಚನಾ ಮತ್ತು ಆದೇಶ್ ಪ್ರೀತಿಸುತ್ತಿದ್ದರು. ಅಂತೆಯೇ ಆದೇಶ್​ನನ್ನು ಭೇಟಿಯಾಗಲು ಕೆಲ ದಿನಗಳ ಹಿಂದೆ ದುಬೈನಿಂದ ಬೆಂಗಳೂರಿಗೆ ಅರ್ಚನಾ ಬಂದಿದ್ದಳು. ಆದೇಶ್ ಮತ್ತು ಅರ್ಚನಾ ಮಧ್ಯೆ ಶನಿವಾರ ಜಗಳವಾಗಿದ್ದು, ಆ ಬಳಿಕ ರಾತ್ರಿ ಅಪಾರ್ಟ್ಮೆಂಟ್​ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಳು. ಈ ಬಗ್ಗೆ ಯುವತಿ ಪೋಷಕರು ಅನುಮಾನ ವ್ಯಕ್ತಪಡಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಡೇಟಿಂಗ್ ಆ್ಯಪ್​​ ಮುಖಾಂತರ ಕೆಲವರ್ಷಗಳ ಹಿಂದೆ ಇಬ್ಬರ ಮಧ್ಯೆ ಪರಿಚಯವಾಗಿ, ಪ್ರೀತಿಯಲ್ಲಿದ್ದರು. ಇಬ್ಬರ‌‌ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಆರು ತಿಂಗಳ ಹಿಂದೆ ದೂರವಾಗಿದ್ದರು. ಈ ಮಧ್ಯೆ ಕಳೆದ ಮೂರು ದಿನಗಳ ಹಿಂದೆ ದುಬೈನಿಂದ ಬಂದಿದ್ದ ಗಗನಸಖಿಯು ಆದೇಶ್ ನನ್ನ ಭೇಟಿಯಾಗಿದ್ದಳು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ‌ ನಡೆದಿದ್ದು ಗಲಾಟೆ ತಾರಕಕ್ಕೇರಿದೆ. ಆಗ ಕೋರಮಂಗಲದ 8ನೇ ಹಂತದ ರೇಣುಕಾ ಅಪಾರ್ಟ್ ಮೆಂಟ್​​ನ ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತಾಂತ್ರಿಕ ಸಾಕ್ಷ್ಯಾಧಾರಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ಇದನ್ನೂ ಓದಿ: ಮಲಗಿದ ಜಾಗದಲ್ಲೇ ಸಜೀವ ದಹನವಾದ ಬಿಎಂಟಿಸಿ ಕಂಡಕ್ಟರ್: ದುರಂತದ ಹಿಂದಿದೆ ಸಾಕಷ್ಟು ಗುಮಾನಿ

ತಾಯಿಯ ಮೇಲಿನ ದ್ವೇಷಕ್ಕೆ ಮಗ ಬಲಿ: ಇನ್ನೊಂದು ಘಟನೆಯಲ್ಲಿ ಸ್ನೇಹಿತ ಎಂದು ನಂಬಿದವನ ಮೋಸದಿಂದ ವ್ಯಕ್ತಿಯೋರ್ವ ಸಂಸಾರದ ನೆಮ್ಮದಿಯ ಜೊತೆಗೆ ಮಗನನ್ನೂ ದಾರುಣವಾಗಿ ಕಳೆದುಕೊಂಡ ಘಟನೆ ನಗರದ ಬಾಗಲೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ನೇಹಿತ ಪ್ರವೀಣ್ ಹಾಗೂ ಆತನ ಮಾಜಿ ಪತ್ನಿ ಪುಷ್ಪಾ ಮೇಲಿನ ದ್ವೇಷಕ್ಕೆ ಅವರ ಮಗನನ್ನು ಅಮಾನುಷವಾಗಿ ಕೊಲೆ ಮಾಡಿದ್ದ ಸಂಪತ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ‌. ಚೇತನ್ ಕೊಲೆಗೀಡಾದ ಬಾಲಕ.

ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ಸಾವು: ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳಾ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ಭಾನುವಾರ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ನಡೆದಿದೆ. ಕೃಷ್ಣಾ ಬಾಯಿ ತುಕಾರಾಂ ಪಡ್ಕೆ (25) ಮೃತರು. ಇವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಎಸ್ಗಳ್ಳಿ ಗ್ರಾಮದವರು. ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಶಾನುಭೋಗನಹಳ್ಳಿ ಗ್ರಾಮದಲ್ಲಿ ಲೆಕ್ಕಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ಪತ್ನಿ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತಿಲ್ಲ: ಪೊಲೀಸ್ ಠಾಣೆ ಮೆಟ್ಟಿಲೇರಿದ ನೊಂದ ಪತಿ

Last Updated :Mar 13, 2023, 9:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.