ಬೆಂಗಳೂರು: ನಾಳೆ ರಾಜ್ಯದ ನೂತನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ನಾಗೇಶ್ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಿಸಲಿದ್ದಾರೆ.
ಸಾಂಕ್ರಾಮಿಕ ಕೊರೊನಾ ಸೋಂಕು ವ್ಯಾಪಿಸಿದ್ದ ಕಾರಣಕ್ಕೆ 2020-21ರ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಬೇಕಾ ಬೇಡವೇ ಎಂಬ ಸಾಕಷ್ಟು ವಾದ-ವಿವಾದಗಳು ನಡೆದಿದ್ದವು. ಇವುಗಳ ಮಧ್ಯೆಯೇ ನಿರಾಳವಾಗಿ ಪರೀಕ್ಷೆಯು ಜುಲೈ 19, 22 ರಂದು ನಡೆಯಿತು. ಎಸ್ಎಸ್ಎಲ್ಸಿ ಪರೀಕ್ಷೆಯನ್ನ ವಿಶೇಷ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ಮಾದರಿಯನ್ನ ಬದಲಾಯಿಸಿ ಬಹುಆಯ್ಕೆ ಪ್ರಶ್ನೆಗಳನ್ನು ನೀಡಿ ನಡೆಸಲಾಗಿತ್ತು. ಅದು ಕೂಡ 6 ದಿನಗಳ ಪರೀಕ್ಷೆಗೆ ಕತ್ತರಿ ಹಾಕಿ, ವಿಷಯವಾರು ಮೂಲಕ ಎರಡೇ ದಿನ ಪರೀಕ್ಷೆ ನಡೆಸಲಾಯ್ತು.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡುವುದು ಹಾಗೂ ಅವರ ಕಲಿಕಾ ಮಟ್ಟ ನಿರ್ಧಾರ ಮಾಡುವುದು ಕಷ್ಟವಾಗಿತ್ತು. ಇದಕ್ಕೆ ಕಾರಣ, ಕಳೆದ ವರ್ಷ 9ನೇ ತರಗತಿಯ ಪರೀಕ್ಷೆಯೇ ನಡೆದಿಲ್ಲ. ಯಾವುದೇ ಮಾನದಂಡ ಇಲ್ಲದೇ ಇರುವುದರಿಂದ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿತ್ತು. ಇದೀಗ ಭವಿಷ್ಯದ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಿಗೆ ಫಲ ಸಿಗುವ ಸಮಯ ಬಂದಿದೆ. ನಾಳೆ ರಾಜ್ಯದ ನೂತನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ನಾಗೇಶ್ ಫಲಿತಾಂಶ ಪ್ರಕಟಿಸಲಿದ್ದಾರೆ.
ಈ ಸಲದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟಾರೆ ಹಾಜರಾತಿ 96.65% ರಷ್ಟು ಇತ್ತು. ಕಳೆದ ವಾರ್ಷಿಕ ಪರೀಕ್ಷೆಗಿಂತ ಹೆಚ್ಚು ಮಕ್ಕಳು ಈ ಸಲ ಹಾಜರಾಗಿದ್ದರು. ಇದೀಗ 8 ಲಕ್ಷಕ್ಕೂ ಅಧಿಕ ಮಕ್ಕಳ ಫಲಿತಾಂಶ ನಾಳೆ ಹೊರಬೀಳಲಿದೆ. ವಿದ್ಯಾರ್ಥಿಗಳ ಎಸ್ಎಂಎಸ್ ಮೂಲಕವೂ ತಮ್ಮ ಫಲಿತಾಂಶ ಪಡೆಯಬಹುದಾಗಿದೆ.
ಇದನ್ನೂ ಓದಿ: ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆ 2021ರ ನೋಂದಣಿ ದಿನಾಂಕ ವಿಸ್ತರಣೆ