ETV Bharat / state

BMTC Bus Accident: ಬಿಎಂಟಿಸಿ ಬಸ್ ಹರಿದು ಸವಾರ ಸಾವು

author img

By

Published : Aug 11, 2023, 8:40 PM IST

ಬೆಂಗಳೂರಿನ ಕ್ವೀನ್ಸ್​ ರಸ್ತೆಯಲ್ಲಿ ಸ್ಕೂಟರ್ ಸವಾರನ ಮೇಲೆ ಬಿಎಂಟಿಸಿ ಬಸ್ ಹರಿದು ಸವಾರ ಮೃತಪಟ್ಟಿರುವ ಘಟನೆ ನಡೆದಿದೆ.

ಬಿಎಂಟಿಸಿ
ಬಿಎಂಟಿಸಿ

ಬೆಂಗಳೂರು: ಸ್ಕೂಟರ್ ಸವಾರನನ್ನು ಬಿಎಂಟಿಸಿ ಬಸ್ ಬಲಿ ಪಡೆದಿದೆ.‌ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಯ್ಯ ಜಂಕ್ಷನ್​ನಿಂದ ಕ್ವೀನ್ಸ್ ರಸ್ತೆಯಲ್ಲಿ ಚಲಿಸುವಾಗ ಇಂದು ಸಂಜೆ ಈ ದುರ್ಘಟನೆ ನಡೆದಿದೆ. ಬಸ್ ಚಕ್ರ ಸವಾರನ ಮೇಲೆ ಹರಿದ‌ ಪರಿಣಾಮ, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಸವಾರನ ಹೆಸರು ತಿಳಿದುಬಂದಿಲ್ಲ. ಸುಮಾರು 40 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.

ಇಂದು ಸಂಜೆ ಸಿದ್ದಯ್ಯ ಜಂಕ್ಷನ್​ನಿಂದ ಕ್ವೀನ್ಸ್ ರಸ್ತೆ ಕಡೆ ಬರುವಾಗ ಟಿವಿಎಸ್ ಜ್ಯೂಪಿಟರ್ ಸ್ಕೂಟರ್​ನಲ್ಲಿ ಚಲಿಸುತ್ತಿದ್ದ ವ್ಯಕ್ತಿಗೆ ಬಸ್ ಗುದ್ದಿದೆ‌‌. ನಿಯಂತ್ರಣ ಕಳೆದುಕೊಂಡು ಬಿದ್ದ ಸವಾರನ ಮುಖದ ಮೇಲೆ ಬಸ್ ಹಿಂಬದಿ ಚಕ್ರ ಹರಿದು ಹೋಗಿದೆ. ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಶವವನ್ನ ರವಾನಿಸಲಾಗಿದೆ. ಮೃತನ ಹೆಸರು, ಮನೆ-ವಿಳಾಸ ತಿಳಿದುಬಂದಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಘಟನೆಗೆ ಕಾರಣನಾದ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ತಿಂಗಳು ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಇಬ್ಬರು ಸಾವು: ರಸ್ತೆ ದಾಟುತ್ತಿದ್ದಾಗ ಬಿಎಂಟಿಸಿ ಬಸ್​ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಪಾದಚಾರಿಗಳು (ಜೂನ್​ 15-2023) ಮೃತಪಟ್ಟಿದ್ದರು. ರಿಂಗ್ ರಸ್ತೆಯ ಲಗ್ಗೆರೆ ಬಳಿಯ ಕೆಂಪೇಗೌಡ ಆರ್ಚ್ ಬಳಿ ಘಟನೆ ನಡೆದಿತ್ತು. ಕೊಪ್ಪಳ ಮೂಲದ ಕುಂಟ್ಯಪ್ಪ ಪೂಜಾರ್ (35) ಮತ್ತು ತುರುವೆಕೆರೆ ಬಳಿಯ ವಿಟ್ಲಪುರ ಮೂಲದ ತಿಮ್ಮೆಗೌಡ (25) ಮೃತರು. ಲಗ್ಗೆರೆ ರಿಂಗ್ ರಸ್ತೆಯ ಕೆಂಪೇಗೌಡ ಆರ್ಚ್ ಬಳಿಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ರಾತ್ರಿ 7.30ರಲ್ಲಿ ಅಪಘಾತ ಸಂಭವಿಸಿತ್ತು.

ಗಾರೆ ಕೆಲಸ ಮಾಡುತ್ತಿದ್ದ ಪೂಜಾರ್, ಲಗ್ಗೆರೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಕೆಲಸ ಮುಗಿಸಿಕೊಂಡು ಮನೆಗೆ ಹೋಗಬೇಕಾದರೆ ಅಪಘಾತ ಸಂಭವಿಸಿತ್ತು. ತಿಮ್ಮೇಗೌಡ, ತಮ್ಮ ಊರಿನಲ್ಲಿ ವಾಟರ್‌ಮ್ಯಾನ್ ಆಗಿದ್ದ. ಲಗ್ಗೆರೆಯಲ್ಲಿ ನೆಲೆಸಿದ್ದ ಅಕ್ಕನ ಮನೆಗೆ ಬಂದಾಗ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಕೆಂಪೇಗೌಡ ಆರ್ಚ್ ಬಳಿಯ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಚಾಲಕ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದ. ಬಸ್ ಹಿಂದೆ ಇಬ್ಬರು ಪಾದಚಾರಿಗಳು ರಸ್ತೆ ದಾಟುತ್ತಿದ್ದರು.

ಇದೇ ವೇಳೆ ಹಿಂದೆ ಅತೀ ವೇಗವಾಗಿ ಬಂದ ಮತ್ತೊಂದು ಬಿಎಂಟಿಸಿ ಬಸ್ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ನಿಲ್ದಾಣದಲ್ಲಿ ನಿಂತಿದ್ದ ಬಸ್‌ಗೆ ಗುದ್ದಿತ್ತು. ಈ ಎರಡು ಬಸ್‌ಗಳ ನಡುವೆ ಸಿಲುಕಿ ಇಬ್ಬರು ಪಾದಚಾರಿಗಳು ಸ್ಥಳದಲ್ಲಿಯೇ ಅಸುನೀಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿ ರಾಜಾಜಿನಗರ ಸಂಚಾರ ಠಾಣೆ ಪೊಲೀಸರು, ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಸಂಬಂಧ ರಾಜಾಜಿನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಿಎಂಟಿಸಿ ಬಸ್‌ನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಇಬ್ಬರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.