ETV Bharat / state

ಸಾಯಿಬಣ್ಣ ಕರ್ಜಗಿ ಶೂಟೌಟ್ ಕೇಸ್ ಸಿಐಡಿಗೆ ವಹಿಸಲು ನಿರ್ಧಾರ.. ಪರಿಷತ್​ನಲ್ಲಿ ಧರಣಿ ಕೈಬಿಟ್ಟ ಬಿಜೆಪಿ

author img

By

Published : Jul 18, 2023, 3:33 PM IST

ಸಾಯಿಬಣ್ಣ ಶೂಟೌಟ್​ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಈ ಹಿನ್ನೆಲೆ ಬಿಜೆಪಿ ಸದಸ್ಯರು ಪರಿಷತ್​ನಲ್ಲಿ ಧರಣಿ ವಾಪಸ್​ ಪಡೆದಿದ್ದಾರೆ.

ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಪರಮೇಶ್ವರ್

ಸಾಯಿಬಣ್ಣ ಕರ್ಜಗಿ ಶೂಟೌಟ್ ಕೇಸ್ ಸಿಐಡಿಗೆ ವಹಿಸಲು ನಿರ್ಧಾರ

ಬೆಂಗಳೂರು: ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ರಮ ಮರಳು ಸಾಗಾಣಿಕೆ ತಡೆಯಲು ಹೋದ ಪೊಲೀಸ್ ಕಾನ್​ಸ್ಟೇಬಲ್​ ಹತ್ಯೆ ತನಿಖೆಯಲ್ಲಿ ನಡೆದಿರುವ ಸಾಯಿಬಣ್ಣ ಶೂಟೌಟ್ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ವಿಧಾನ ಪರಿಷತ್​ನಲ್ಲಿ ನಡೆಸುತ್ತಿದ್ದ ಧರಣಿಯನ್ನು ವಾಪಸ್ ಪಡೆದರು.

ವಿಧಾನಪರಿಷತ್ ಬೆಳಗಿನ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ನ್ಯಾಯಾಂಗ ತನಿಖೆಗೆ ಗೃಹ ಸಚಿವ ಪರಮೇಶ್ವರ್ ನಿರಾಕರಿಸಿದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಸದನದ ಬಾವಿಗಿಳಿದು ಧರಣಿ ನಡೆಸಿದ ಬಿಜೆಪಿ ಶಾಸಕರು ಇಂದು ಬೆಳಗ್ಗೆ ಕೂಡ ಸದನದಲ್ಲಿ ಧರಣಿ ಮುಂದುವರೆಸಿದರು. ನ್ಯಾಯಾಂಗ ತನಿಖೆಗೆ ಆದೇಶಿಸುವವರೆಗೂ ಧರಣಿ ಮುಂದುವರೆಸುವುದಾಗಿ ಹೇಳಿದರು. ಪ್ರತಿಪಕ್ಷ ಬಿಜೆಪಿ ಹೋರಾಟಕ್ಕೆ ಮಣಿದ ಗೃಹ ಸಚಿವ ಪರಮೇಶ್ವರ್, ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಐಡಿ ತನಿಖೆಗೊಳಪಡಿಸುತ್ತೇನೆ ಎಂದರು. ಗೃಹ ಸಚಿವರು ಸಿಐಡಿಗೆ ಪ್ರಕರಣ ವಹಿಸಿದ ಹಿನ್ನೆಲೆಯಲ್ಲಿ ಸದನದ ಬಾವಿಯಿಂದ ಹೊರಬಂದ ಬಿಜೆಪಿ ಸದಸ್ಯರು ಪ್ರತಿಭಟನೆ ಕೈಬಿಟ್ಟು ಕಲಾಪದಲ್ಲಿ ಭಾಗಿಯಾದರು.

ಪ್ರಕರಣದ ಹಿನ್ನೆಲೆ: ಸೋಮವಾರ ಸಂಜೆ ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330 ರ ಅಡಿ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ರೈತನೊಬ್ಬ ಮರಳು ಸಾಗಾಣಿಕೆ ಮಾಡುವ ವೇಳೆ ತಡೆಯಲು ಬಂದ ಕಾನ್​ಸ್ಟೇಬಲ್​ ಮೃತಪಟ್ಟ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಶಶಿಲ್ ನಮೋಶಿ, ರವಿಕುಮಾರ್, ತಳವಾರ್ ಸಾಬಣ್ಣ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ಗೃಹ ಸಚಿವ ಪರಮೇಶ್ವರ್, ಪೊಲೀಸರು ತಡೆದಾಗ ಟ್ರ್ಯಾಕ್ಟರ್ ಅನ್ನು ನಿಲ್ಲಿಸಿದ್ದರೆ ದಂಡ ಹಾಕಿ ಬಿಡುತ್ತಿದ್ದರು. ಆದರೆ ಇಲ್ಲಿ ನಮ್ಮ ಪೊಲೀಸ್ ಕಾನ್​ಸ್ಟೇಬಲ್​ ಮೃತರಾಗಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸರ್ಕಾರದ ಅವಧಿಯ ಎಪಿಎಂಸಿ ಕಾಯ್ದೆ ಹಿಂಪಡೆಯುವ ತಿದ್ದುಪಡಿ ವಿಧೇಯಕ ಅಂಗೀಕಾರ: ಬಿಜೆಪಿ, ಜೆಡಿಎಸ್​ ವಿರೋಧ

ತನಿಖೆ ವೇಳೆ ಸಾಯಿಬಣ್ಣ ಟ್ರ್ಯಾಕ್ಟರ್ ಮಾಲೀಕ ಎಂದು ಆತನ ವಿಚಾರಣೆ ನಡೆಸಲು ಮುಂದಾದಾಗ ಚಾಕು ತೆಗೆದು ಇರಿಯಲು ಯತ್ನಿಸಿದ್ದರಿಂದ ಕಾಲಿಗೆ ಶೂಟ್ ಮಾಡಲಾಯಿತು. ಇಡೀ ಪ್ರಕರಣವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಹಾಗಾಗಿ, ನ್ಯಾಯಾಂಗ ತನಿಖೆಗೆ ವಹಿಸಲ್ಲ ಎಂದಿದ್ದರು. ಸರ್ಕಾರದ ಉತ್ತರ ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ್ದರು. ಪೊಲೀಸರು ಗೃಹ ಸಚಿವರ ದಾರಿ ತಪ್ಪಿಸಿದ್ದಾರೆ. ಪೊಲೀಸ್ ತನಿಖೆಯ ಮೇಲೆ ನಮಗೆ ವಿಶ್ವಾಸ ಇಲ್ಲ. ಹಾಗಾಗಿ ನ್ಯಾಯಾಂಗ ತನಿಖೆಗೆ ವಹಿಸಬೇಕು, ಅಲ್ಲಿಯವರೆಗೂ ಧರಣಿ ನಿಲ್ಲಿಸಲ್ಲ ಎಂದಿದ್ದರು. ಅದರಂತೆ ಇಂದು ಬೆಳಗ್ಗೆಯೂ ಧರಣಿ ನಡೆಸಿದ್ದು, ಸಿಐಡಿಗೆ ಪ್ರಕರಣದ ತನಿಖೆ ವಹಿಸುವ ನಿರ್ಧಾರ ಪ್ರಕಟಿಸಿದ್ದರಿಂದ ಬಿಜೆಪಿ ಧರಣಿ ಕೈಬಿಟ್ಟಿತು.

ಇದನ್ನೂ ಓದಿ: ನೆಲೋಗಿ ಪ್ರಕರಣದ ನ್ಯಾಯಾಂಗ ತನಿಖೆಗೆ ನಕಾರ: ಬಿಜೆಪಿ ಸದಸ್ಯರ ಧರಣಿ, ಪರಿಷತ್ ಕಲಾಪ ನಾಳೆಗೆ ಮುಂದೂಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.