ETV Bharat / state

ಶಾಸಕರನ್ನು ಖರೀದಿ ಮಾಡುವುದೇ ಬಿಜೆಪಿಯವರ ಡಿಎನ್ಎ ಆಗಿದೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ

author img

By ETV Bharat Karnataka Team

Published : Oct 29, 2023, 5:18 PM IST

Updated : Oct 29, 2023, 5:38 PM IST

ಬಿಜೆಪಿ ವಿರುದ್ಧ ಕಾಂಗ್ರೆಸ್​​​ ಶಾಸಕರನ್ನು ಸೆಳೆಯುವ ಆರೋಪ ವಿಚಾರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿದ್ದಾರೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ
ಕಂದಾಯ ಸಚಿವ ಕೃಷ್ಣ ಬೈರೇಗೌಡ

ಕಂದಾಯ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್​​​ ಶಾಸಕರನ್ನು ಬಿಜೆಪಿಯು ಹಣದ ಆಮಿಷವೊಡ್ಡಿ ಸೆಳೆಯುವ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪ ಬೆನ್ನಲ್ಲೇ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರತಿಕ್ರಿಯಿಸಿದ್ದಾರೆ. ಪ್ರಜಾಪ್ರಭುತ್ವ ದಮನ ಮಾಡುವುದೇ ಬಿಜೆಪಿ ಸಿದ್ಧಾಂತವಾಗಿದೆ. ವಾಮಮಾರ್ಗದ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯುವುದು ಹೊಸದೇನಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯುತ್ತಿದೆ ಎಂಬ ಆರೋಪ ಕುರಿತು ಮಾತನಾಡಿದ ಸಚಿವರು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಶಾಸಕರನ್ನು ಖರೀದಿ ಮಾಡುತ್ತಿಲ್ಲ. 2008 ಹಾಗೂ 2019 ರಲ್ಲಿ ಆಪರೇಷನ್ ಕಮಲ ಮೂಲಕ ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚಿಸಿತ್ತು. ಇದು ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಮಹಾರಾಷ್ಟ್ರ ರಾಜಸ್ಥಾನ, ಗೋವಾ ಸೇರಿದಂತೆ ಎಲ್ಲಿಲ್ಲಿ ಬಿಜೆಪಿ ಆಡಳಿತವಿದೆಯೋ ಶೇ.75 ರಷ್ಟು ಶಾಸಕರನ್ನು ಖರೀದಿಸಿ ಸರ್ಕಾರಗಳನ್ನು ರಚಿಸಿದೆ ಎಂದು ಸಚಿವ ಬೈರೇಗೌಡ ಆರೋಪಿಸಿದ್ದಾರೆ.

ಕಾಂಗ್ರೆಸ್ ಶಾಸಕರಿಂದಲೇ ಕೇಳಿಬರುತ್ತಿರುವ ಪವರ್ ಶೇರಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಮಯ ಬಂದಾಗ ಹೈಕಮಾಂಡ್ ನಿರ್ಧರಿಸುತ್ತದೆ. ಅವರವರ ಅಭಿಪ್ರಾಯಗಳನ್ನು ಶಾಸಕರು ಹೇಳಿಕೆ ನೀಡಿದ್ದಾರೆ. ಅಧಿಕಾರದ ಚರ್ಚೆ ಹೊರತು ಪಡಿಸಿ ಜನಗಳ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದು ಒಳಿತು ಎಂದರು.

ನಿನ್ನೆ ಥಣಿ ಸಂದ್ರದಲ್ಲಿರುವ ಹಜ್ ಭವನದಲ್ಲಿ ಕಾಣಿಸಿಕೊಂಡ ಬೆಂಕಿ ಹಿನ್ನೆಲೆ ಸ್ಥಳಕ್ಕೆ ಹೋಗಿ ಸಚಿವರು ಪರಿಶೀಲಿಸಿದರು. ಬಳಿಕ ಮಾತನಾಡಿ ಶಾಕ್ ಸರ್ಕ್ಯೂಟ್​​ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಸಭಾಂಗಣದಲ್ಲಿರುವ ಸುಮಾರು 500ಕ್ಕಿಂತ ಹೆಚ್ಚು ಕುರ್ಚಿಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿ ಹಬೆ ಹೆಚ್ಚಾಗಿ ಸಭಾಂಗಣ ಮೇಲ್ಚಾವಣಿಗೆ ಬಿಸಿ ತಟ್ಟಿದ್ದು ಪರಿಣಾಮ ಬಿರುಕು ಮೂಡಿವೆ. ಘಟನೆಯಲ್ಲಿ ಆಡಿಟೋರಿಯಂ ವಿನ್ಯಾಸಕ್ಕೆ ಧಕ್ಕೆಯಾಗಿದೆಯಾ ಎಂಬುದರ ಬಗ್ಗೆ ತನಿಖೆ ನಡೆಸಬೇಕಿದೆ. ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆ ಸಂಭವಿಸಿದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಭೂ ಡಿಜಿಟಲ್​ಗೆ ಒತ್ತು: ಆಡಳಿತದಲ್ಲಿ ಪಾರದರ್ಶಕತೆ ಹಾಗೂ ದುರುಪಯೋಗ ತಡೆಗಟ್ಟಲು ರಾಜ್ಯದಲ್ಲಿ ಜಾರಿಯಾಗಿರುವ ಕಾವೇರಿ ತಂತ್ರಾಂಶ-2 ಹಾಗೂ ಆಸ್ತಿ ಮಾರ್ಗಸೂಚಿ ದರ ಪರಿಷ್ಕೃತಗೊಳಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ನಾನಾ ಸವಾಲುಗಳು ಎದುರಾಗಿದ್ದು, ಭವಿಷ್ಯದಲ್ಲಿ ಭೂ ದಾಖಲೆಯನ್ನು ಡಿಜಿಟಲೀಕರಣ ಮಾಡಿ ಕಾವೇರಿ-2 ತಂತ್ರಾಂಶದಡಿ ಅಳವಡಿಸುವ ಪಣ ತೊಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ನೋಂದಣಿ ಹಾಗೂ ಮುದ್ರಾಂಕ ಇಲಾಖೆಯು ನಗರದ ಯವನಿಕಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಅಲ್ಲದೆ ಕಳೆದ ಸಾಲಿನಲ್ಲಿ ಇಲಾಖೆಯು ನೀಡಿದ ನಿಗದಿತ ಗುರಿ ಸಾಧಿಸಿದ ಜಿಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಿದರು. ಬಳಿಕ ಮಾತನಾಡಿದ ಸಚಿವರು ಆಡಳಿತದಲ್ಲಿ ಪಾರದರ್ಶಕತೆ ಹಾಗೂ ನ್ಯೂನತೆಗಳನ್ನು ಸರಿಪಡಿಸಿ ನಾಗರಿಕ ಸ್ನೇಹಿ ಮಾಡಲು ಕಳೆದ ಜುಲೈನಲ್ಲಿ ಕಾವೇರಿ ತಂತ್ರಾಂಶ-2 ಜಾರಿ ತರಲಾಗಿದೆ.

ಆರಂಭದಲ್ಲಿ ಟೀಕೆ-ಟಿಪ್ಪಣಿ ಕೇಳಿ ಬಂದರೂ ಸವಾಲಾಗಿ ಸ್ವೀಕರಿಸಿ ಅನುಷ್ಠಾನ ತಂದ ಬಳಿಕ ಇಂದು ದಿನಕ್ಕೆ ಸುಮಾರು 26 ಸಾವಿರ ನೋಂದಣಿಯಾಗುತ್ತಿವೆ. ಇದಕ್ಕೂ ಮುನ್ನ 10 ಸಾವಿರ ನೋಂದಣಿಯಾಗುತ್ತಿದ್ದವು. ಅಲ್ಲದೆ ನಾಗರೀಕರು ಕಚೇರಿಗೆ ಬಂದು ಕಾಯುವ ಸಮಯ 20 ನಿಮಿಷಕ್ಕೆ ಇಳಿಸಲಾಗಿದೆ ಹರ್ಷ ವ್ಯಕ್ತಪಡಿಸಿದರು.

ಭೂಮಿ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ದೇಶಕ್ಕೆ ಭೂಮಿ ಆರ್ಥಿಕ ಆಸ್ತಿ ಎಂದೇ ಪರಿಗಣಿಸಬಹುದು. ಅದರ ಮೌಲ್ಯ ಹೆಚ್ಚಾಗಬೇಕಾದರೆ ದಾಖಲೆ ಸ್ಪಷ್ಟವಾಗಿರಬೇಕು. ಹೀಗಾಗಿ ಭೂ ದಾಖಲಾತಿ ವಿಭಾಗ, ಸರ್ವೇ ರೂಮ್​ನಲ್ಲಿರುವ ಸ್ಕಾನ್ ಮಾಡಿ ಡಿಜಿಟಲೀಕರಣ ಮಾಡಿ ಕಾವೇರಿ -2 ತಂತ್ರಾಂಶಕ್ಕೆ ಅಳವಡಿಸಿಕೊಳ್ಳಬೇಕು.

ಹಂತ-ಹಂತವಾಗಿ ಈ ನಿಟ್ಟಿನಲ್ಲಿ ಕಾರ್ಯನ್ಮುಖವಾಗುತ್ತೇವೆ. ಭೂ ಡಿಜಿಟಲ್ ಮಾಡಿದರೆ ಭೂ ವ್ಯಾಜ್ಯಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗಿದೆ. ಸಬ್ ರಿಜಿಸ್ಟ್ರಾರ್​ ಕಚೇರಿಗಳನ್ನು ಪುನರ್ ರಚನೆ, ಮೂಲಸೌಕರ್ಯಕ್ಕೆ ಒತ್ತು ನೀಡಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಕಡೆಗಳಲ್ಲಿ ಹೆಚ್ಚುವರಿ ಹುದ್ದೆ ಸೃಷ್ಟಿ ಹಾಗೂ ಬಡ್ತಿ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

ಆಸ್ತಿ ಮಾರ್ಗಸೂಚಿ ಪರಿಷ್ಕೃತ ದರ ಇದೇ ತಿಂಗಳು ಅಕ್ಟೋಬರ್ 1 ರಿಂದ ಜಾರಿಯಾಗಿದೆ. 2019ರ ಬಳಿಕ ಗೈಡ್ ಲೈನ್ಸ್ ವ್ಯಾಲ್ಯೂ ಏರಿಕೆ ಮಾಡಿರಲಿಲ್ಲ. ವೈಜ್ಞಾನಿಕ ಅಧ್ಯಯನ ನಡೆಸಿ ಆಯಾಪ್ರದೇಶ ಅನುಗುಣವಾಗಿ ಆಸ್ತಿ ಮಾರ್ಗಸೂಚಿಯನ್ನು ಹೆಚ್ಚಳ ಮಾಡಲಾಗಿದೆ. ಇದರಿಂದ ಪ್ರಸ್ತಕ ಸಾಲಿನಲ್ಲಿ ಇಲಾಖೆಗೆ ನೀಡಿದ 25 ಸಾವಿರ ಕೋಟಿ ಸಂಗ್ರಹದ ಗುರಿ ನೀಡಿದ್ದು. ಇನ್ನೂ ಐದು ತಿಂಗಳಲ್ಲಿ ಗುರಿ ಮುಟ್ಟುವ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಅಧಿಕಾರಕ್ಕಾಗಿ ಒಳಜಗಳ ಶುರುವಾಗಿದ್ದು, ಡೈವರ್ಟ್ ಮಾಡಲು ಹುಲಿ ಉಗುರು ಪೆಂಡೆಂಟ್ ವಿಚಾರ ತಂದಿದ್ದಾರೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Last Updated : Oct 29, 2023, 5:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.