ETV Bharat / state

ಜೆಸಿಬಿ ಮೂಲಕ ಬಡವರ ಮನೆ ಮೇಲೆರಗಿದ ಅಧಿಕಾರಿಗಳು: ನಿವಾಸಿಗಳ ಪ್ರತಿಭಟನೆ, ಬಂಧನ

author img

By

Published : Apr 9, 2021, 7:35 AM IST

ಆನೇಕಲ್‌ನ ಸರ್ಜಾಪುರ ಹೋಬಳಿಯ ಕೂಡ್ಲು ಗ್ರಾಮದಲ್ಲಿ ಸರ್ಕಾರಿ ಗೋಮಾಳದಲ್ಲಿ ವಾಸವಿದ್ದ ಜನರ ಮನೆಗಳನ್ನು ತಹಶೀಲ್ದಾರ್ ಮತ್ತು ಬೆಂಗಳೂರು ನಗರ ಪೊಲೀಸರು ನೆಲಸಮಗೊಳಿಸಿದ್ದಾರೆ. ಯಾವುದೇ ಸೂಚನೆ ನೀಡದೆ ಏಕಾಏಕಿ ಮನೆಗಳನ್ನು ತೆರವು ಮಾಡಿದ್ದಕ್ಕೆ ಅಲ್ಲಿನ ನಿವಾಸಿಗಳು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಆನೇಕಲ್ಲಿನಲ್ಲಿ ಮನೆ ತೆರವು ಮಾಡಿದ ಅಧಿಕಾರಿಗಳ ವಿರುದ್ದ ನಿವಾಸಿಗಳ ಪ್ರತಿಭಟನೆ
Revenue Department and police officers demolished houses in Anekal

ಆನೇಕಲ್​: ನಿವಾಸಿಗಳಿಗೆ ಸೂಚನೆ ನೀಡದೆ ದಶಕಗಳಿಂದ ಸರ್ಕಾರಿ ಗೋಮಾಳದಲ್ಲಿ ವಾಸವಿದ್ದ ಜನರ ಮನೆಗಳನ್ನು ತಹಶೀಲ್ದಾರ್ ಮತ್ತು ಬೆಂಗಳೂರು ನಗರ ಪೊಲೀಸರು ನೆಲಸಮಗೊಳಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಆನೇಕಲ್ಲಿನಲ್ಲಿ ಮನೆ ತೆರವು ಮಾಡಿದ ಅಧಿಕಾರಿಗಳ ವಿರುದ್ದ ನಿವಾಸಿಗಳ ಪ್ರತಿಭಟನೆ

ಸರ್ಜಾಪುರ ಹೋಬಳಿಯ ಕೂಡ್ಲು ಗ್ರಾಮದ ಸರ್ವೆ ನಂ.148 ರಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಮನೆಗಳು‌ ನೆಲಸಮ ಗೊಳಿಸಲಾಗಿದೆ. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ದಸಂಸ (ಅಂಬೇಡ್ಕರ್ ವಾದ)ದ ಸಂಘಟಕರು ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟಿಸಿದರು. ಅದಕ್ಕೂ ಜಗ್ಗದ ತಾಲೂಕು ಆಡಳಿತ ಪ್ರತಿಭಟನಾಕಾರರನ್ನು ಬಂಧಿಸಿ ಆಡುಗೋಡಿ ಪೊಲೀಸ್ ಠಾಣೆಗೆ ಬಸ್ಸಿನಲ್ಲಿ ಕರೆದೊಯ್ದರು.

ಮಾಜಿ ಸಭಾಪತಿ ಹಾಗೂ ಸಚಿವ ಬಿ.ಕೆ.ಚಂದ್ರಶೇಖರ್​​​ಗೆ ಎರಡೆಕರೆ ಜಮೀನಿನ ಶಿಕ್ಷಣ ಸಂಸ್ಥೆಗೆ ಗುತ್ತಿಗೆ ನೀಡಲು ಸರ್ಕಾರ ಆತುರಾತುರವಾಗಿ ಈ ಕಾರ್ಯಾಚರಣೆ ನಡೆಯುವಂತೆ ನೋಡಿಕೊಂಡಿದ್ದಾರೆಂದು ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಆರೋಪಿಸಿದ್ದಾರೆ.

ಬೆಂಗಳೂರಿನ ಎಚ್ಎಸ್ಆರ್ ಬಡಾವಣೆಗೆ ಹೊಂದಿಕೊಂಡಂತಿರುವ ಈ ಜಮೀನನ್ನು ಮೊದ ಮೊದಲು ಬೇಡ ಎನ್ನುತ್ತಿದ್ದ ಮಾಜಿ ಸಭಾಪತಿ, ಇದೀಗ ಭೂಮಿಯ ಇಂಚಿಂಚು ಬೆಲೆ ಗಗನಕ್ಕೇರಿದ್ದರಿಂದ ಇದೇ ಜಾಗದ ಪಕ್ಕದಲ್ಲಿ ವಿಶಾಲವಾದ ಹೊರವರ್ತುಲ ರಸ್ತೆಯ ಯೋಜನೆಯೂ ಹಾದು ಹೋಗುವುದರಿಂದ ಬಿ.ಕೆ.ಚಂದ್ರಶೇಖರ್ ಇದೇ ಜಾಗಕ್ಕಾಗಿ ಒತ್ತಾಯ ಇಟ್ಟಿದ್ದಾರೆ ಎಂದು ದಸಂಸ ಮುಖಂಡ ಮಹಲ್ ಚೌಡದೇನಹಳ್ಳಿ ವೇಣು ಆರೋಪಿಸಿದರು.

ಇದನ್ನೂ ಓದಿ: ಮಾಸ್ಕ್​ ಹಾಕದವರಿಗೆ 1,000 ರೂ. ದಂಡ ಹಾಕಿ: ತೆಲಂಗಾಣ ಸಿಎಂ ಆದೇಶ

ಕೂಡ್ಲು ಗ್ರಾಮದ ಸರ್ವೆ ನಂ.148 ರಲ್ಲಿ 2010ಕ್ಕೂ ಮೊದಲೇ ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್ ರ ಶಿಕ್ಷಣ ಸಂಸ್ಥೆಗಳಿಗೆ ಅಂದಿನ ಸರ್ಕಾರ ಗುತ್ತಿಗೆ ಅಧಾರದ ಮೇಲೆ ಜಮೀನು ಮಂಜೂರು ಮಾಡಿದೆ. ಆದರೆ ಅದೇ ಜಾಗದಲ್ಲಿ ಅಕ್ರಮವಾಗಿ ಕೆಲವರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ಚಂದ್ರಶೇಖರ್​​ರವರು ಬೆಳ್ಳಂಡೂರು ಠಾಣೆಯಲ್ಲಿ ತಮ್ಮ ಜಮೀನಿನಲ್ಲಿ ಅತಿಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರನ್ನು ತೆರವುಗೊಳಿಸುವಂತೆ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸರು ಹದ್ದು ಬಸ್ತು ನಿರ್ಧರಿಸಿಕೊಡುವಂತೆ ತಹಶೀಲ್ದಾರ್ ಕಚೇರಿಯ ಮೋಜಣಿ ಇಲಾಖೆಗೆ ಪತ್ರ ಬರೆದಿದ್ದರು. ಆದರಂತೆ ಸರ್ವೆ ಸ್ಕೆಚ್ ಮಾಡಿ ಕೊಡಲಾಗಿದ್ದು, ಪೊಲೀಸರು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಸ್ಥಳದಲ್ಲಿಯೇ ಉಪಸ್ಥಿತರಿರುವುದಾಗಿ ತಹಶೀಲ್ದಾರ್ ದಿನೇಶ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.