ETV Bharat / state

ಅಡ್ಜೆಸ್ಟ್​ಮೆಂಟ್ ರಾಜಕೀಯ ಮಾಡಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಸಿಎಂ ಸಿದ್ದರಾಮಯ್ಯ ಸವಾಲು!

author img

By

Published : Jul 12, 2023, 5:41 PM IST

ನನ್ನ ರಾಜಕೀಯ ಜೀವನದಲ್ಲಿ ನಾನು ಎಂದೂ ಕೂಡಾ ಅಡ್ಜೆಸ್ಟ್​ಮೆಂಟ್​ ರಾಜಕೀಯ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್
ಸಿಎಂ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು : ಪ್ರತಿಪಕ್ಷದ ನಾಯಕರೊಂದಿಗೆ ಅಡ್ಜೆಸ್ಟ್​ಮೆಂಟ್ ರಾಜಕೀಯ ಮಾಡಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸವಾಲು ಹಾಕಿದ್ದಾರೆ. ಪ್ರತಿಪಕ್ಷದ ನಾಯಕರು ಯಾರ ಮನೆ ಬಾಗಿಲಿಗೂ ನಾನು ಹೋಗಿಲ್ಲ. ಈ ಸದನದಲ್ಲಿ ಮುಖ್ಯಮಂತ್ರಿಯಾಗಿದ್ದವರು, ಮಂತ್ರಿಯಾಗಿದ್ದವರು ಇದ್ದಾರೆ. ಯಾರ ಮನೆ ಬಾಗಿಲಿಗೆ ಹೋಗಿದ್ದೆ ಅಂತ ಹೇಳಲಿ ಎಂದರು.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲಿ ಉಚಿತ ವಿದ್ಯುತ್ ಪ್ರಸ್ತಾಪಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 1983 ರಿಂದಲೂ ಸದನದ ಸದಸ್ಯನಾಗಿದ್ದೇನೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಆರ್ ವಿ ದೇಶಪಾಂಡೆ, ಶಾಸಕ ಬಿ.ಆರ್ ಪಾಟೀಲ್ ಅವರು ಕೂಡ ಅದೇ ಸಂದರ್ಭದಲ್ಲೇ ಸದನಕ್ಕೆ ಬಂದವರು. ನನ್ನ ರಾಜಕೀಯ ಜೀವನದಲ್ಲಿ ಎಂದೂ ಕೂಡ ಅಡ್ಜೆಸ್ಟ್​ಮೆಂಟ್ ರಾಜಕೀಯ ಮಾಡಿಲ್ಲ. ಪ್ರತಿಪಕ್ಷದ ನಾಯಕನಾಗಿದ್ದಾಗಲೂ ಮುಖ್ಯಮಂತ್ರಿ ಮನೆಗೆ ಹೋಗಿದ್ದರೆ ಯಾರಾದರು ಹೇಳಲಿ ನೋಡೋಣ ಎಂದರು.

ಆ ಸಂದರ್ಭದಲ್ಲಿ ಬಿಜೆಪಿಯ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ಮನೆಗೆ ಏಕೆ ಹೋಗಬೇಕು ಎಂದು ಛೇಡಿಸಿದರು. ಆಗ ಮುಖ್ಯಮಂತ್ರಿ, ನೀವು ಎರಡು ಬಾರಿ ಶಾಸಕರಾಗಿದ್ದೀರಿ ಎಂದು ಮೇಲಿನಂತೆ ಪ್ರತಿಕ್ರಿಯಿಸಿದರು.ಇದಕ್ಕೂ ಮುನ್ನ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪದೇ ಪದೆ ಎದ್ದು ನಿಂತು ಮಾತನಾಡಿದರೆ ನಿಮ್ಮನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವುದಿಲ್ಲ ಎಂದರು.

ಆಗ ಬಿಜೆಪಿಯ ಸದಸ್ಯರಾದ ಎಸ್ ಟಿ ಸೋಮಶೇಖರ್, ಆರಗ ಜ್ಞಾನೇಂದ್ರ ಅವರು, ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರನ್ನು ಕೂಡ ಮುಖ್ಯಮಂತ್ರಿಯಾಗಲ್ಲ ಎಂದು ಹೇಳಿದ್ದೀರಿ. ಆದರೆ, ಅವರು ಸಿಎಂ ಆದರು ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಪ್ರತಿ ಕ್ವಿಂಟಲ್ ಉಂಡೆ ಕೊಬ್ಬರಿಗೆ 1,250 ರೂ. ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್

ಮತ್ತೆ ಸಿದ್ದರಾಮಯ್ಯ ಮಾತು ಮುಂದುವರೆಸಿ, ಅಶೋಕ್, ಆರಗ ಜ್ಞಾನೇಂದ್ರ, ಅಶ್ವತ್ಥ ನಾರಾಯಣ ನೀವು ವಿರೋಧ ಪಕ್ಷ ನಾಯಕನ ಸ್ಥಾನದ ಆಕಾಂಕ್ಷಿಯಲ್ಲವೇ? ಎಂದು ಪ್ರಶ್ನಿಸಿದರು. ಆಗ ಅವರು ಇಲ್ಲ ಎನ್ನುವಂತೆ ಸನ್ನೆ ಮಾಡಿದರು. 200 ಯೂನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿದ್ದೇವೆ ನಿಜ. ಆದರೆ, ಒಬ್ಬರು ಒಂದು ತಿಂಗಳು 120, ಮತ್ತೊಂದು ತಿಂಗಳು 130 ಯೂನಿಟ್​ ಹೀಗೆ ಬಳಸಿರುತ್ತಾರೆ. ಹಾಗಾಗಿ ಒಂದು ವರ್ಷದ ಸರಾಸರಿ ತೆಗೆದು ಅದರ ಮೇಲೆ ಹೆಚ್ಚುವರಿ ಶೇ 10ರಷ್ಟು ಯೂನಿಟ್​ ಬಳಕೆ ಮಾಡಲು ಅನುಮತಿ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದರು.

200 ಯೂನಿಟ್‍ವರೆಗೆ ಉಚಿತ ಕೊಡುತ್ತಿದ್ದೇವೆ: ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದವರಿಗೂ ಏಕೆ 200 ಯೂನಿಟ್ ಕೊಡಬೇಕು. ಉಚಿತ ವಿದ್ಯುತ್ ನೀಡುವುದರಲ್ಲಿ ಜಾತಿ, ಧರ್ಮ ಯಾವುದೇ ತಾರತಮ್ಯ ಮಾಡದೇ ಎಲ್ಲರಿಗೂ ಕೊಡುತ್ತಿದ್ದೇವೆ. 200 ಯೂನಿಟ್‍ವರೆಗೆ ಉಚಿತ ಕೊಡುತ್ತಿದ್ದೇವೆ. ಆದರೆ ಕಡಿಮೆ ಬಳಸುವವರಿಗೆ ಯಾಕೆ 200 ಯೂನಿಟ್ ಎಂದು ಮುಖ್ಯಮಂತ್ರಿ ಪ್ರಶ್ನೆ ಮಾಡಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಇದನ್ನೂ ಓದಿ: ಗ್ಯಾರಂಟಿ ಹಣ ಭರಿಸಲು ಸರ್ಕಾರಿ ಭೂಮಿ ಮಾರಾಟ ಇಲ್ಲ: ಕೃಷ್ಣ ಬೈರೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.