ವಿಚ್ಛೇದಿತ ಸರ್ಕಾರಿ ಉದ್ಯೋಗಿ ಸೇವೆಯಲ್ಲಿರುವಾಗಲೇ ಮೃತಪಟ್ಟರೆ ಅವಲಂಬಿತರ ನೇಮಕಾತಿ : ಸರ್ಕಾರದ ಸ್ಪಷ್ಟನೆ

author img

By

Published : Jan 25, 2023, 10:03 PM IST

recruitment-on-compassionate-basis-administrative-reforms-department-clarification

ವಿಚ್ಛೇದಿತ ಸರ್ಕಾರಿ ನೌಕರರು ಮೃತಪಟ್ಟಿದ್ದು, ಅವರಿಗೆ ಮಕ್ಕಳಿಲ್ಲದ ಸಂದರ್ಭಗಳಲ್ಲಿ ಅವರ ಅವಲಂಬಿತರಿಗೆ ಅವಕಾಶ ನೀಡಬಹುದೇ ಎಂಬ ಬಗ್ಗೆ ಹಲವು ಇಲಾಖೆಗಳಿಂದ ಸ್ಪಷ್ಟನೆ ಕೇಳಲಾಗಿದೆ.

ಬೆಂಗಳೂರು: ವಿಚ್ಛೇದಿತ ಸರ್ಕಾರಿ ಉದ್ಯೋಗಿ ಸೇವೆಯಲ್ಲಿರುವಾಗಲೇ ಮೃತಪಟ್ಟು ಅವರಿಗೆ ಮಕ್ಕಳಿಲ್ಲದಿದ್ದರೆ ಅವರನ್ನು ಅವಿವಾಹಿತ ಎಂದು ಪರಿಗಣಿಸಿ ಅವರಿಗೆ ಅವಲಂಬಿತರಾಗಿರುವ ಸಹೋದರ ಅಥವಾ ಸಹೋದರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಬಹುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸ್ಪಷ್ಟನೆ ನೀಡಿದೆ.

ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996 ರ ಅನ್ವಯ ಸೇವೆಯಲ್ಲಿರುವಾಗಲೇ ಮೃತಪಡುವ ಸರ್ಕಾರಿ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಲು ಅವಕಾಶವಿದೆ. ವಿವಾಹಿತ ಸರ್ಕಾರಿ ನೌಕರ ಮೃತಪಟ್ಟರೆ ಅವರ ಪತಿ ಅಥವಾ ಪತ್ನಿ, ಮಗ, ಮಗಳಿಗೆ ನೇಮಕಾತಿಗೆ ಅವಕಾಶವಿದೆ. ಇನ್ನು, ಅವಿವಾಹಿತ ಸರ್ಕಾರಿ ನೌಕರರು ಮೃತಪಟ್ಟರೆ ಅವರ ಸಹೋದರ, ಸಹೋದರಿಗೆ ಅವಕಾಶವಿದೆ.

ವಿಚ್ಛೇದಿತ ಪುರುಷ ಅಥವಾ ಮಹಿಳಾ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ ಪತಿ ಅಥವಾ ಪತ್ನಿ ಕಾನೂನಾತ್ಮಕವಾಗಿ ಆ ನೌಕರರಿಂದ ಬೇರ್ಪಟ್ಟಿರುವುದರಿಂದ ಅವರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಲು ಅವಕಾಶವಿರುವುದಿಲ್ಲ ಎಂದು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ, ವಿಚ್ಛೇದಿತ ನೌಕರರ ಮಕ್ಕಳು ಅವರಿಗೆ ಅವಲಂಬಿತರಾಗಿದ್ದರೆ ಹಾಗೂ ಅವರೊಂದಿಗೆ ವಾಸಿಸುತ್ತಿದ್ದರೆ ಅವರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಬಹುದು.

ಇನ್ನು, ವಿಚ್ಛೇದಿತ ಸರ್ಕಾರಿ ನೌಕರರು ಮೃತಪಟ್ಟಿದ್ದು ಅವರಿಗೆ ಮಕ್ಕಳಿಲ್ಲದ ಸಂದರ್ಭಗಳಲ್ಲಿ ಅವರ ಸಹೋದರ ಅಥವಾ ಸಹೋದರಿಗೆ ಅವಕಾಶ ನೀಡಬಹುದೇ ಎಂಬ ಬಗ್ಗೆ ಹಲವು ಇಲಾಖೆಗಳಿಂದ ಸ್ಪಷ್ಟನೆ ಕೇಳಲಾಗಿದೆ. ಅಂತಹ ಸಂದರ್ಭಗಳಲ್ಲಿ ಅವರನ್ನು ಅವಿವಾಹಿತ ಸರ್ಕಾರಿ ನೌಕರ ಎಂದು ಪರಿಗಣಿಸಿ ಸಹೋದರ ಅಥವಾ ಸಹೋದರಿಗೆ ಅನುಕಂಪದ ಆಧಾರದ ನೇಮಕಾತಿ ಮಾಡಬಹುದು. ಆದರೆ, ಅವರು ಮೃತರಿಗೆ ಅವಲಂಬಿತರು ಎಂದು ಸಾಬೀತಾಗಬೇಕು. ಈ ಬಗ್ಗೆ ಇರುವ ಷರತ್ತು ಹಾಗೂ ನಿಬಂಧನೆಗಳಿಗೆ ಬದ್ಧವಾಗಿ ಅವಕಾಶ ನೀಡಬಹುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸ್ಪಷ್ಟನೆ ನೀಡಿ ಇಂದು ಆದೇಶ ಹೊರಡಿಸಿದೆ.

ಇದನ್ನೂ ಓದಿ: ಮರಾಠಿ ಸಿನಿಮಾಗಳ ಮೇಲೆ ಪಠಾಣ್​ ಪರಿಣಾಮ: ಚಿತ್ರಮಂದಿರಗಳ ಮಾಲೀಕರಿಗೆ ಎಂಎನ್ಎ​ಸ್ ಎಚ್ಚರಿಕೆ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.