ETV Bharat / state

ಮೋದಿ ಅಮೆರಿಕ ಭೇಟಿ ವೇಳೆ ಬೆಂಗಳೂರಿಗೆ ಭರ್ಜರಿ ಕೊಡುಗೆ: ಅಗತ್ಯ ಸಹಕಾರ ನೀಡಿ ಎಂದ ತೇಜಸ್ವಿ ಸೂರ್ಯ

author img

By

Published : Jun 23, 2023, 4:32 PM IST

ಬೆಂಗಳೂರಿಗೆ ಡಬಲ್​ ಇಂಜಿನ್​ ಸರ್ಕಾರ ಇದ್ದಾಗ ಜಾರಿಗೆ ತಂದಿದ್ದ ಯೋಜನೆಗಳು ಮತ್ತು ಸಿಲಿಕಾನ್​ ಸಿಟಿಗೆ ಸರ್ಕಾರ ಮಾಡಿದ ಬಂಡವಾಳ ಹೂಡಿಕೆ ಬಗ್ಗೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಅವುಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಹಾಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

tejasvi surya
ತೇಜಸ್ವಿ ಸೂರ್ಯ

ಸಿದ್ದು ಸರ್ಕಾರಕ್ಕೆ ತೇಜಸ್ವಿ ಸೂರ್ಯ ಆಗ್ರಹ

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಪ್ರಯತ್ನದ ಫಲವಾಗಿ ಬೆಂಗಳೂರಿಗೆ ಅಮೆರಿಕ ರಾಯಭಾರಿ ಕಚೇರಿ, ಅಮೆರಿಕಾದ ಜನರಲ್ ಎಲೆಕ್ಟ್ರಿಕ್ ಕಂಪನಿ ಜೊತೆ ಯುದ್ದ ವಿಮಾನ ಇಂಜಿನ್ ಉತ್ಪಾದನೆ ಕುರಿತು ಹೆಚ್​ಎಎಲ್ ಒಡಂಬಡಿಕೆ, ಅಪ್ಲೈ ಮೆಟೀರಿಯಲ್ಸ್ ಕಂಪನಿ ಜೊತೆ ಸೆಮಿಕಂಡಕ್ಟರ್ ಉತ್ಪಾದನಾ ಘಟಕ, ಅಂತಾರಾಷ್ಟ್ರೀಯ ಬ್ಯಾಟರಿ ಸಂಸ್ಥೆಯಿಂದ ಲಿಥಿಯನ್ ಅಯಾನ್ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪನೆ ಸಂಬಂಧ ಭಾರತ ಅಮೆರಿಕ ನಡುವೆ ಒಡಂಬಡಿಕೆಯಾಗಿದ್ದು, ಇವುಗಳ ಯಶಸ್ವಿ ಅನುಷ್ಠಾನಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರ ನೀಡಿದ ಭರವಸೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಮುಂದುವರೆಸಬೇಕು, ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಚೇರಿ: ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೊಡ್ಡ ಪ್ರಮಾಣದಲ್ಲಿ ಬೆಂಗಳೂರಿನಿಂದ ಅಮೆರಿಕಕ್ಕೆ ವಿದ್ಯಾರ್ಥಿಗಳು, ಉದ್ಯೋಗಿಗಳ, ನಾಗರಿಕರು ಪ್ರಯಾಣಿಸುತ್ತಿದ್ದರೂ ಇಲ್ಲಿ ಅಮೆರಿಕ ರಾಯಭಾರಿ ಕಚೇರಿ ಆರಂಭಿಸುವ ಇಚ್ಚಾಶಕ್ತಿಯನ್ನು ತೋರಿರಲಿಲ್ಲ. ಕೇಂದ್ರ ಸರ್ಕಾರ ಈ ಹಿಂದೆ ಇದಕ್ಕೆ ಸರಿಯಾದ ಮಹತ್ವ ನೀಡಿರಲಿಲ್ಲ. 10 ವರ್ಷ ಯುಪಿಎ ಸರ್ಕಾರ ಹೈದರಾಬಾದ್, ಕೋಲ್ಕತಾದಲ್ಲಿ ಅಮೆರಿಕ ಕಾನ್ಸೊಲೇಟ್ ಆರಂಭವಾದರೂ ಬೆಂಗಳೂರಿನಲ್ಲಿ ಆಗಲಿಲ್ಲ. ಆದರೆ ಮೋದಿ ಸರ್ಕಾರ ಬಂದ ನಂತರ ನಾವು ಮೂರು ಜನ ಸಂಸದರು ಪ್ರಯತ್ನ ನಡೆಸಿದೆವು, ನಾನು ಸಂಸದನಾದ ಮೊದಲ ಸದನದಲ್ಲೇ ಕಾನ್ಸುಲೇಟ್ ಪ್ರಸ್ತಾಪಿಸಿದ್ದೆ, ಪಿಸಿ ಮೋಹನ್ ಕೂಡ ಮನವಿ ಮಾಡಿದ್ದರು ಎಂದು ನೆನಪು ಮಾಡಿಕೊಂಡರು.

2020 ರಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಸಚಿವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದೆವು ಅಂದು ಅವರು ನಾವು ಅಮೆರಿಕದಲ್ಲಿ ಒಂದು ಹೊಸ ಕಚೇರಿ ತೆರೆದರೆ ಅವರು ಇಲ್ಲಿ ಹೊಸ ಕಚೇರಿ ತೆರೆಯಲಾಗುತ್ತದೆ ಇದು ಇರುವ ವ್ಯವಸ್ಥೆ ಎಂದಿದ್ದರು. ನಂತರ ಅಮೆರಿಕ ರಾಯಭಾರಿಗಳನ್ನೆಲ್ಲಾ ಭೇಟಿ ಮಾಡಿ ಬೆಂಗಳೂರಿನಲ್ಲಿ ಕಚೇರಿ ತೆರೆಯುವ ಮನವಿ ಮಾಡಿದ್ದೆವು. ಯುಎಸ್ ರಾಯಭಾರಿಯ ಡಾ ಕೆನ್ನೆತ್ ಜಸ್ಟರ್ ಜೊತೆ ಮಾತುಕತೆ ವೇಳೆ ಅವರು ಮುಂದಿನ ಕಚೇರಿ ಆರಂಭದ ವೇಳೆ ಬೆಂಗಳೂರಿಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದ್ದರು ಎಂದು ತೇಜಸ್ವಿ ಸೂರ್ಯ ಹೇಳಿದರು.

ಜೈಶಂಕರ್ ಕೂಡ ನಮಗೆ ಈ ಬಗ್ಗೆ ಭರವಸೆ ನೀಡಿದ್ದರು. ಈ ಎಲ್ಲಾ ಪ್ರಯತ್ನದ ಫಲವಾಗಿ ನಿನ್ನೆ ನಮ್ಮೆಲ್ಲರಿಗೂ ಸಂತಸ ತರುವಂತೆ ಬೆಂಗಳೂರಿಗೆ ಯುಎಸ್ ಕಾನ್ಸುಲೇಟ್ ಆರಂಭಿಸುವ ಪ್ರಕಟಣೆ ಮಾಡಿದೆ ಇದರಿಂದಾಗಿ ನಾಲ್ಕೈದು ಲಕ್ಷ ಜನ ಅಮೆರಿಕ ವೀಸಾಗಾಗಿ ಬೇರೆ ರಾಜ್ಯಗಳಿಗೆ ಅಲೆಯುವುದು ತಪ್ಪಲಿದೆ. ಯಡಿಯೂರಪ್ಪ ಕೂಡ ರಾಯಭಾರಿ ಕಚೇರಿ ಆರಂಭಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದರು. ಅದರಂತೆ ಅಂದಿನ ಐಟಿಬಿಟಿ ಸಚಿವ ಅಶ್ವತ್ಥನಾರಾಯಣ ಕೇಳಿದ ಸ್ಥಳದಲ್ಲಿ ಕಚೇರಿಗೆ ಅವಕಾಶ ಹಾಗೂ ಸೌಲಭ್ಯ ಕಲ್ಪಿಸುವ ಭರವಸೆ ನೀಡಿತ್ತು. ಈ ಬದ್ಧತೆಯನ್ನು ಈ ಸರ್ಕಾರ ಮುಂದುವರೆಸಿ ಎಲ್ಲ ಸವಲತ್ತು ಮಾಡಬೇಕು ಎಂದು ಮನವಿ ಮಾಡಿದರು.

ಹೆಚ್​ಎಎಲ್​ಗೆ ಮರು ಜೀವ: ಹೆಚ್​ಎಎಲ್ ಮತ್ತು ಜನರಲ್ ಎಲೆಕ್ಟ್ರಿಕ್ ಕಂಪನಿ ಜೊತೆ ಒಪ್ಪಂದ ಮಾಡಿಸಲಾಗಿದೆ. ಎಫ್414 ಯುದ್ಧ ವಿಮಾನ ಉತ್ಪಾದನೆ ಕುರಿತು ಜಂಟಿ ಒಡಂಬಡಿಕೆ ಮೂಲಕ ಹೆಚ್​ಎಎಲ್​ನಲ್ಲಿ ನಿರ್ಮಾಣ ಮಾಡುವ ಒಪ್ಪಂದ ಆಗಿದೆ. ಇದರಿಂದ 4 ಸಾವಿರಕ್ಕೂ ಹೆಚ್ಚು ಹೈ ಎಂಡ್ ಇಂಜಿನಿಯರ್ ಹುದ್ದೆಗಳು ಸೃಷ್ಟಿಯಾಗಲಿದೆ. ಕನ್ನಡಿಗರಿಗೆ ಉದ್ಯೋಗಾವಕಾಶ ಲಭಿಸಲಿದೆ. ಜಾಗತಿಕ ಮಟ್ಟದಲ್ಲಿ ಹೆಚ್​ಎಎಲ್ ಭದ್ರವಾಗಿ ನೆಲೆಯೂರುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಹತ್ತು ವರ್ಷದ ಹಿಂದೆ ಹೆಚ್​ಎಎಲ್ ಮುಚ್ಚುವ ಹಂತದಲ್ಲಿತ್ತು. ಆದರೆ, 48,000 ಕೋಟಿ ರೂಪಾಯಿ ಮೊತ್ತದ ಎಲ್​ಸಿಎ ತೇಜಸ್ ಉತ್ಪಾದನೆ ಮಾಡುವ ಡೀಲ್ ಕೊಟ್ಟಿದ್ದರಿಂದ ಎಚ್ಎಎಲ್ ಪುನರ್ಜೀವನಗೊಂಡಿತು. ಏಷ್ಯಾದ ಅತಿ ದೊಡ್ಡ ಹೆಲಿಕ್ಯಾಪ್ಟರ್ ಉತ್ಪಾದನಾ ಘಟಕ ನಿರ್ಮಾಣಕ್ಕೂ ಪ್ರಧಾನಿ ಮೋದಿ ಅವಕಾಶ ಮಾಡಿಕೊಟ್ಟರು. ಈಗ ಹೆಚ್​ಎಎಲ್ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಅಮೆರಿಕದಲ್ಲಿ ಜನರಲ್ ಎಲೆಕ್ಟ್ರಿಕ್ ಕಂಪನಿ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಯುದ್ಧ ವಿಮಾನ ಇಂಜಿನ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಮೂಲಕ ಹೆಚಗ್​​ಎಎಲ್​ಗೆ ಹೆಚ್ಚಿನ ಬಲ ಕಲ್ಪಿಸಿದೆ ಎಂದು ಹೇಳಿದರು.

ಸೆಮಿಕಂಡಕ್ಟರ್ ಹಬ್​​: ಅಪ್ಲೈ ಮೆಟೀರಿಯಲ್ಸ್ ಎನ್ನುವ ಜಗತ್ತಿನ ಅತಿ ದೊಡ್ಡ ಸೆಮಿಕಂಡಕ್ಟರ್ ಉತ್ಪಾದನಾ ಕಂಪನಿ ಜೊತೆ ನಾನೂರು ಮಿಲಿಯನ್ ಡಾಲರ್​ಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಸೆಮಿ ಕಂಡಕ್ಟರ್ ತಂತ್ರಜ್ಞಾನದಲ್ಲಿ ಮತ್ತು ಅದಕ್ಕೆ ಬಿಡಿಭಾಗಗಳ ಉತ್ಪಾದನೆ ಮತ್ತು ಆವಿಷ್ಕಾರ ಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಒಂದು ಕೇಂದ್ರ ಸ್ಥಾಪನೆ ಮಾಡುವ ಸಹಿ ಮಾಡಿದೆ. ಬೆಂಗಳೂರು ಪ್ರಪಂಚದ ಸೆಮಿಕಂಡಕ್ಟರ್​ಗೆ ಬಹಳ ದೊಡ್ಡ ಹಬ್ ಆಗಲಿದೆ ಎಂದರು.

ಲಿಥಿಯಂ ಅಯಾನ್ ಬ್ಯಾಟರಿ ಉತ್ಪಾದನಾ ಕಂಪನಿ ಅಮೆರಿಕದಲ್ಲಿದೆ, ನಾವೀಗ ವಿದ್ಯುತ್ ಚಾಲಿತ ವಾಹನಗಳ ಜಮಾನದ ಆರಂಭಿಕ ಹಂತದಲ್ಲಿದ್ದೇವೆ. ಜಗತ್ತು ಇವಿಗಳತ್ತ ಹೊರಳಿದೆ ಇಂತಹ ಸಂದರ್ಭದಲ್ಲಿ ಬೆಂಗಳೂರು ಎಲೆಕ್ಟ್ರಿಕ್ ವಾಹನಗಳ ರಾಜಧಾನಿ ಎನ್ನಬಹುದಾಗಿದೆ. ಇಂತಹ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಬ್ಯಾಟರಿ ಕಂಪನಿ ಜೊತೆ 8000 ಕೋಟಿ ರೂಪಾಯಿಗಳ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಇದರಿಂದ 5000 ನೇರವಾಗಿ ಮತ್ತು 20,000 ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತೇಜಸ್ವಿ ಸೂರ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇಸ್ರೋ ಮತ್ತು ನಾಸದ ಜೊತೆಗೆ ಹೊಸ ಒಪ್ಪಂದ ಮಾಡಿಕೊಳ್ಳಲಾಗಿದೆ ಆ ಒಪ್ಪಂದದ ಪ್ರಕಾರ ಚಂದ್ರಯಾನಕ್ಕೆ ಬೇಕಾಗಿರುವ ಮಿಷನ್ 5ಜಿ ಮತ್ತು 6ಜಿ ಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಸಂಬಂಧಿಸಿದಂತೆ ಇಸ್ರೋ ಮತ್ತು ನಾಸಾ ಜೊತೆ ಕೆಲ ಒಪ್ಪಂದಗಳಾಗಿವೆ, ಆ ಒಪ್ಪಂದಗಳಲ್ಲಿಯೂ ಬೆಂಗಳೂರಿಗೆ ಬಹಳ ದೊಡ್ಡ ಮಟ್ಟದ ಪ್ರಯೋಜನ ಆಗಲಿದೆ ಎಂದು ಅವರು ಪ್ರತಿಪಾದಿಸಿದರು.

ಬೆಂಗಳೂರಿಗೆ ಮೋದಿ ಕೊಡುಗೆ: ಒಂದು ಲಕ್ಷ ಕೋಟಿ ರೂಪಾಯಿಗಳ ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಕೊಟ್ಟಿದ್ದಾರೆ, ಕಾವೇರಿ ಹೊಸ ಯೋಜನೆ, ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್, ಮೆಟ್ರೋ ಕನೆಕ್ಟಿವಿಟಿ, ಉಪನಗರ ಇತ್ಯಾದಿಗಳಿಗೆ ಒಂದು ಲಕ್ಷ ಕೋಟಿ ಯೋಜನೆಗಳನ್ನು ಕೊಟ್ಟಿದ್ದಾರೆ ಎಚ್ಎಎಲ್ ಪುನರ್ಜೀವನಕ್ಕೆ ಆದ್ಯತೆ ಕೊಟ್ಟಿದ್ದಾರೆ, ಬೆಂಗಳೂರಿಗೆ ಯುಎಸ್ ಕ್ಯಾನ್ಸುಲೇಟ್ ತಂದಿದ್ದಾರೆ ಬೆಂಗಳೂರಿಗೆ ಬಹಳ ಪ್ರೋತ್ಸಾಹ ಕೊಟ್ಟಿದ್ದಾರೆ ಹಾಗಾಗಿ ಮೋದಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್‌ ಕಚೇರಿ: ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ ತೇಜಸ್ವಿ ಸೂರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.