ETV Bharat / state

ಚಿರತೆ ಸೆರೆಗೆ ಥರ್ಮಲ್ ಇಮೇಜ್ ಕ್ಯಾಮರಾ ಬಳಸಿ ಕಾರ್ಯಾಚರಣೆ: ಸಚಿವ ಈಶ್ವರ್ ಖಂಡ್ರೆ

author img

By ETV Bharat Karnataka Team

Published : Oct 31, 2023, 10:37 PM IST

ಬೆಂಗಳೂರಿನ ಹೊರವಲಯದಲ್ಲಿ ಕಾಣಿಸಿಕೊಂಡಿರುವ ಚಿರತೆ ಪತ್ತೆ ಕಾರ್ಯಾಚರಣೆ ರಾತ್ರಿಯೂ ಮುಂದುವರೆದಿದೆ.

ಸಚಿವ ಈಶ್ವರ್ ಖಂಡ್ರೆ
ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು: ಬೆಂಗಳೂರು ನಗರದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಉಂಟುಮಾಡಿದ್ದು, ಆದಷ್ಟು ಶೀಘ್ರ ಚಿರತೆ ಹಿಡಿಯಲು ಇಲಾಖೆ ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಮಂಗಳವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಾರ್ಯಾಚರಣೆ ಮಾಡುತ್ತಿದೆ. ಡ್ರೋನ್ ಕ್ಯಾಮೆರಾಗಳ ನೆರವಿನಿಂದಲೂ ಶೋಧ ಕಾರ್ಯ ನಡೆಸುತ್ತಿದೆ. ಈಗಾಗಲೇ ಚಿರತೆ ಓಡಾಡಿರುವ ಕಡೆಗಳಲ್ಲಿ ಬೋನು ಇಡಲಾಗಿದ್ದು. ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬೆಂಗಳೂರಿನಂತಹ ಮಹಾನಗರದಲ್ಲೂ ಥರ್ಮಲ್ ಇಮೇಜ್ ಕ್ಯಾಮರಾಗಳನ್ನು ಬಳಸಿ ರಾತ್ರಿಯ ವೇಳೆಯೂ ಚಿರತೆ ಪತ್ತೆ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮೈಸೂರಿನಿಂದ ಚಿರತೆ ಹಿಡಿಯಲು ತಂಡವೂ ಆಗಮಿಸಿದೆ. ಮುಖ್ಯಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ ಅವರೂ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಸಿಸಿಎಫ್, ಡಿಸಿಎಫ್. ನೇತೃತ್ವದ 70 ಜನರ ತಂಡ ಚಿರತೆ ಸೆರೆಗೆ ಪ್ರಯತ್ನಿಸುತ್ತಿದೆ. ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿದು ಕಾಡಿಗೆ ಮರಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಆತಂಕ ಬೇಡ ಮುನ್ನೆಚ್ಚರಿಕೆ ಅಗತ್ಯ: ವನ್ಯಜೀವಿಗಳು ಬೆಂಗಳೂರಿನಂತಹ ನಗರ ಪ್ರದೇಶಕ್ಕೆ ಬಂದಾಗ ಆತಂಕ ಸಹಜ. ಆದರೂ ನಾಗರಿಕರು ಹೆಚ್ಚು ಗಾಬರಿ ಆಗುವುದು ಬೇಡ. ಮುನ್ನೆಚ್ಚರಿಕೆ ಅಗತ್ಯ. ಚಿರತೆ ಕಾಣಿಸಿಕೊಂಡಿರುವ ಸುತ್ತಮುತ್ತಲ ಪ್ರದೇಶದಲ್ಲಿ ನಿವಾಸಿಗಳು ತಮ್ಮ ಮಕ್ಕಳನ್ನು ಒಂಟಿಯಾಗಿ ರಸ್ತೆಯಲ್ಲಿ ಆಟವಾಡಲು ಬಿಡಬಾರದು. ರಾತ್ರಿಯ ವೇಳೆ ಜನ ಒಂಟಿಯಾಗಿ ಸಂಚರಿಸಬಾರದು. ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕೂಡ್ಲು ಗೇಟ್, ಇಬ್ಬಲೂರು ಸುತ್ತಮುತ್ತಲ ಪ್ರದೇಶದಲ್ಲಿನ ಮನೆ, ಸಮುಚ್ಚಯಗಳ ಜನರಿಗೆ ಅಧಿಕಾರಿಗಳು ಇಂತಹ ಮುನ್ನೆಚ್ಚರಿಕೆ ಸೂಚನೆ ನೀಡಿದ್ದಾರೆ. ಮೈಕ್​ಗಳಲ್ಲಿ ಪ್ರಕಟಣೆ ನೀಡಿದ್ದಾರೆ. ಮಾಧ್ಯಮಗಳೂ ಎಚ್ಚರಿಕೆ ನೀಡುತ್ತಿವೆ. ಬಹುಶಃ ಈ ಚಿರತೆ ಬನ್ನೇರುಘಟ್ಟ ಕಾಡಿನಿಂದ ಬಂದಿರುವ ಸಾಧ್ಯತೆ ಇದೆ. ಚಿರತೆಯನ್ನು ಆದಷ್ಟು ಬೇಗ ಹಿಡಿದು ಅದರ ದೇಹಸ್ಥಿತಿ, ಆರೋಗ್ಯ ಪರಿಶೀಲಿಸಿ ನಂತರ ಕಾಡಿಗೆ ಬಿಡಬೇಕೋ, ವನ್ಯಜೀವಿ ಪರಿಪಾಲನಾ ಕೇಂದ್ರಕ್ಕೆ ಬಿಡಬೇಕೋ ಎಂಬ ಬಗ್ಗೆ ಅಧಿಕಾರಿಗಳು, ವೈದ್ಯರು ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವರು ತಿಳಿಸಿದರು.

ಅಧಿಕಾರಿಗಳಿಗೆ ಸೂಚನೆ: ಈ ಮಧ್ಯೆ ಅರಣ್ಯ ಭವನದಲ್ಲಿಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ 156ನೇ ಸಾಮಾನ್ಯ ಆಡಳಿತ ಮಂಡಳಿ ಸಭೆ ಇಂದು ಸಂಜೆ ನಡೆಯಿತು. ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅರಣ್ಯ ಸಚಿವರು ಚಿರತೆ ಸೆರೆ ಹಿಡಿಯಲು ಎಲ್ಲಾ ಸಾಧ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದರು.

ಇದನ್ನೂ ಓದಿ: ಬೆಂಗಳೂರು: ಅರಣ್ಯ ಇಲಾಖೆಯ ಬೋನಿಗೆ ಬೀಳದ ಚಿರತೆ, ಮುಂದುವರೆದ ಕಾರ್ಯಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.