ETV Bharat / state

ಬೆಂಗಳೂರು: ಅರಣ್ಯ ಇಲಾಖೆಯ ಬೋನಿಗೆ ಬೀಳದ ಚಿರತೆ, ಮುಂದುವರೆದ ಕಾರ್ಯಾಚರಣೆ

author img

By ETV Bharat Karnataka Team

Published : Oct 31, 2023, 3:11 PM IST

Updated : Nov 1, 2023, 12:13 PM IST

ಬೆಂಗಳೂರಿನ ಹೊರವಲಯದಲ್ಲಿ ಕಾಣಿಸಿಕೊಂಡ ಚಿರತೆ ಸೆರೆ ಹಿಡಿಯಲು ಮೈಸೂರಿನಿಂದ ವಿಶೇಷ ತಂಡ ಆಗಮಿಸಿದೆ.

forest department started leopard capture operation bengaluru
ಬೆಂಗಳೂರು: ಅರಣ್ಯಾಧಿಕಾರಿಗಳ ಬೋನಿಗೆ ಬೀಳದ ಚಿರತೆ, ಮುಂದುವರೆದ ಕಾರ್ಯಾಚರಣೆ

ಚಿರತೆಗಾಗಿ ಮುಂದುವರೆದ ಕಾರ್ಯಾಚರಣೆ

ಬೆಂಗಳೂರು: ನಗರದ ಹೊರವಲಯದಲ್ಲಿರುವ ಬೊಮ್ಮನಹಳ್ಳಿಯ ಸಿಂಗಸಂದ್ರ ಎಇಸಿಎಸ್ ಲೇಔಟ್‌ನಲ್ಲಿ ಸೋಮವಾರ ಕಾಣಿಸಿಕೊಂಡ ಚಿರತೆ, ಈವರೆಗೆ ಅಧಿಕಾರಿಗಳ ಕಣ್ಣಿಗೆ ಬಿದ್ದಿಲ್ಲ. ಪರಿಣಾಮ ಜನರು ಭಯದಲ್ಲಿಯೇ ಓಡಾಡುಂತಾಗಿದೆ. ಸೆರೆಗಾಗಿ ಎರಡು ಬೋನುಗಳನ್ನು ಇಟ್ಟಿರುವ ಅರಣ್ಯ ಇಲಾಖೆ ಐದು ತಂಡಗಳನ್ನು ನಿಯೋಜಿಸಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಕಡೆಂಜಾ ಅಪಾರ್ಟ್​ಮೆಂಟ್​ ಸಮೀಪ ಚಿರತೆ ಓಡಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಆದರೆ, ಚಿರತೆ ಮಾತ್ರ ಅಧಿಕಾರಿಗಳ ತಪ್ಪಿಸಿಕೊಂಡು ಓಡಾಡುತ್ತಿದೆ.

ಮೈಸೂರಿನಿಂದ ವಿಶೇಷ ತಂಡ ಸೇರಿದಂತೆ ಬನ್ನೇರುಘಟ್ಟದ ಅರವಳಿಕೆ ತಜ್ಞರು ಕೂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೂ, ಸಹ ಚಿರತೆ ಪತ್ತೆಯಾಗಿಲ್ಲ. ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್​​ ಲೇಔಟ್​ನ ಪಾಳು ಬಿದ್ದ ಕಟ್ಟಡದಲ್ಲಿ ಚಿರತೆಯ ಜಾಡು ಪತ್ತೆಯಾಗಿದ್ದು ಬೆಳಗ್ಗೆಯಿಂದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಆದರೆ, ಈ ಕಟ್ಟಡದಲ್ಲಿಲ್ಲ ಎಂದು ಖಚಿತಪಡಿಸಿಕೊಂಡ ಅಧಿಕಾರಿಗಳು, ಸದ್ಯಕ್ಕೆ ಬೋನನ್ನು ಅಳವಡಿಸಿ ಅಲ್ಲಿಂದ ಬೇರೆಡೆಗೆ ಕಾರ್ಯಚರಣೆಯನ್ನು ಶಿಫ್ಟ್ ಮಾಡಿದ್ದಾರೆ.

"ಬೆಳಗ್ಗಿನ ಸಮಯದಲ್ಲಿ ಓಡಾಡಲು ಭಯವಾಗುತ್ತಿದೆ. ಜನರು ವಾಕ್​ ಬರುವುದನ್ನು ನಿಲ್ಲಿಸಿದ್ದಾರೆ. ಅಪಾರ್ಟ್​ಮೆಂಟ್​ನಲ್ಲಿ ಚಿರತೆ ಕಾಣಿಸಿಕೊಂಡ ದಿನದಿಂದ ಆತಂಕ ಶುರುವಾಗಿದೆ. ಆದಷ್ಟು ಬೇಗ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಬೇಕು" ಎಂದು ಸ್ಥಳೀಯ ನಿವಾಸಿ ಸೌಂದರ್​ ರಾಜ್​ ಮನವಿ ಮಾಡಿದರು.

ದೊಣ್ಣೆ ಹಿಡಿದು ಓಡಾಡುತ್ತಿರುವ ಜನರು: ಅಕ್ಟೋಬರ್​​ 29ರ ರಾತ್ರಿ ಬೊಮ್ಮನಹಳ್ಳಿಯ ಕೂಡ್ಲು ಭಾಗದ ಜನವಸತಿ ಪ್ರದೇಶ ಸಮೀಪದ ಕಾರಿನ ಗ್ಯಾರೇಜ್​ನಲ್ಲಿಯೂ ಚಿರತೆ ಓಡಾಡಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿರತೆ ಭಯಕ್ಕೆ ಇಲ್ಲಿನ ಜನರು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ.

ಮೈಸೂರಿನಿಂದ ವಿಶೇಷ ತಂಡ ಆಗಮನ: ಚಿರತೆ ಕಾರ್ಯಾಚರಣೆಗಾಗಿ ಮೈಸೂರಿನಿಂದ ವಿಶೇಷ ತಂಡ ಬೆಂಗಳೂರಿಗೆ ಆಗಮಿಸಿದೆ. ಈಗಾಗಲೇ ಹಲವೆಡೆ ಚಿರತೆ ಹಿಡಿದು ಪರಿಣತರಾಗಿರುವ ಸಿಬ್ಬಂದಿ ಈ ತಂಡದಲ್ಲಿದ್ದಾರೆ. ಸುರಕ್ಷತಾ ಜಾಕೆಟ್​ ಬಳಸಿ ತಂಡ ಅಖಾಡಕ್ಕಿಳಿದಿದೆ. ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್​ ಪ್ರದೇಶದಲ್ಲಿ ಚಿರತೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿ ಪಿಸಿಸಿಎಫ್​ ಸುಭಾಷ್​ ಮಾಲ್ಕೆಡೆ, ಡಿಎಫ್​ಒ ರವೀಂದ್ರ ನೇತೃತ್ವದ ಅಧಿಕಾರಿಗಳ ತಂಡ ಭೇಟಿ​ ನೀಡಿದೆ. "ಜನರು ಸಾಕಷ್ಟು ಹುಷಾರಾಗಿರಬೇಕು. ಮೈಸೂರಿನಿಂದ ಟಾಸ್ಕ್​ ಫೋರ್ಸ್​ ಬಂದಿದೆ. ವೆಟರ್ನರಿ ಡಾಕ್ಟರ್​ ಟ್ರ್ಯಾಂಕುಲೈಸ್ ಮಾಡುತ್ತಾರೆ. ಚಿರತೆ ಈಗ ಸ್ಟ್ರೆಸ್​ನಲ್ಲಿರುತ್ತೆ. ಈ ಸಮಯದಲ್ಲಿ ಯಾರೂ ಇಲ್ಲಿರಬಾರದು. ಅಪಾರ್ಟ್​ಮೆಂಟ್​ ಬಳಿ ಎಚ್ಚರಿಕೆವಹಿಸಿ. ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಬೇಕು" ಎಂದು ಸುಭಾಷ್​ ಮಾಲ್ಕೆಡೆ ಹೇಳಿದ್ದಾರೆ.

ಅಕ್ಟೋಬರ್​ 29ರ ರಾತ್ರಿಯಿಂದ ಸಿಂಗಸಂದ್ರ, ಹೊಸಪಾಳ್ಯ, ಕೂಡ್ಲುಭಾಗದಲ್ಲಿ ಚಿರತೆ ಓಡಾಟ ಹೆಚ್ಚಾಗಿದೆ. ಪ್ರತಿಷ್ಠಿತ ಅಪಾರ್ಟ್​ಮೆಂಟ್​ಗಳ ಆವರಣ ಹಾಗೂ ಲೇಔಟ್​ಗಳಲ್ಲಿ ಸಂಚರಿಸಿದೆ. ಕತ್ತಲಾಗುತ್ತಿದ್ದಂತೆ ಅಪಾರ್ಟ್​ಮೆಂಟ್​ನ ಮೆಟ್ಟಿಲು, ಲಿಫ್ಟ್ ಹಾಗೂ ಪಾರ್ಕಿಂಗ್ ಪ್ರದೇಶಗಳಲ್ಲಿ ಚಿರತೆ ಓಡಾಡಿದೆ.

ಡ್ರೋನ್​ ಮೂಲಕ ಸಿಬ್ಬಂದಿ ಸರ್ಚ್​ ಮಾಡಿದೆ. ಈವರೆಗೂ ಪತ್ತೆಯಾಗಿಲ್ಲ. ಪಾರ್ಕಿಂಗ್​ ಲಾಟ್​ನಲ್ಲಿ ಪ್ರಾಣಿಯ ಹೆಜ್ಜೆ ಗುರುತು ಸಿಕ್ಕಿದೆ. ಪಕ್ಕದಲ್ಲಿಯೇ ಮತ್ತೊಂದು ಕಾಡು ಇದೆ. ಸದ್ಯ ಅಲ್ಲಿ ಹುಡುಕುವ ಪ್ರಯತ್ನ ಮಾಡಲಾಗುವುದು. - ರವೀಂದ್ರ , ಡಿಸಿಎಫ್

ಚಿರತೆ ಕಾಣಿಸಿಕೊಂಡಿದ್ದು ನಿಜ. ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ಸೆರೆ ಹಿಡಿಯುವ ಕ್ರಮ ಕೈಗೊಂಡಿದ್ದಾರೆ. ಸ್ಥಳೀಯ ಪೊಲೀಸರು ಸಹ ಈ ಕಾರ್ಯಾಚಣೆಯಲ್ಲಿ ಪಾಲ್ಗೊಂಡಿದ್ದಾರೆ. ಅಧಿಕಾರಿಗಳು ಅದರ ಹೆಜ್ಜೆ ಗುರುತನ್ನು ಪತ್ತೆ ಮಾಡಿದ್ದು ಸದ್ಯದಲ್ಲಿಯೇ ಸೆರೆ ಹಿಡಿಯಲಿದ್ದಾರೆ. - ಸತೀಶ್ ರೆಡ್ಡಿ, ಬೊಮ್ಮನಹಳ್ಳಿ ಶಾಸಕರು.

ಇದನ್ನೂ ಓದಿ: ಬೆಂಗಳೂರು ಹೊರವಲಯದ ರಸ್ತೆ, ಅಪಾರ್ಟ್​ಮೆಂಟ್​ಗಳಲ್ಲಿ ಚಿರತೆ ಓಡಾಟ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

Last Updated :Nov 1, 2023, 12:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.