ETV Bharat / state

ರಾಜ್ಯದಲ್ಲಿ ಶೇ.5 ಕ್ಕಿಳಿದ ಕೋವಿಡ್: ಚುನಾವಣೆ ಹೊಸ್ತಿಲಲ್ಲಿ ನಿಯಂತ್ರಣಕ್ಕೆ ಬರ್ತಿದೆ ಮಹಾಮಾರಿ

author img

By

Published : Oct 23, 2020, 3:17 PM IST

ಸೆಪ್ಟೆಂಬರ್ ಕೊನೆಯಲ್ಲಿ ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ 7 ಬಾರಿ ರಾಜ್ಯದಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿತ್ತು. ಆದರೆ, ಎರಡನೇ ವಾರದಿಂದ ಇಳಿಕೆಯಾಗುತ್ತಿದ್ದು, ಸದ್ಯ ಪಾಸಿಟಿವ್ ಪ್ರಕರಣ ಕೇವಲ ಶೇ. 5 ರಷ್ಟು ಮಾತ್ರ ಇದೆ.

only Five percent Covid Cases in Karnataka
ಕರ್ನಾಟಕದಲ್ಲಿ ಕೋವಿಡ್​ ಪ್ರಕರಣ ಇಳಿಕೆ

ಬೆಂಗಳೂರು : ಕಳೆದ ಏಳೆಂಟು ತಿಂಗಳಿನಿಂದ ದಿನೇ ದಿನೆ ಏರಿಕೆಯಾಗುತ್ತಲೇ ಇದ್ದ ರಾಜ್ಯದ ಕೊರೊನಾ ಸೋಂಕಿತರ ಸಂಖ್ಯೆ, ಇದೀಗ ಕಡೆಮೆಯಾಗುತ್ತಾ ಬರುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಬರುವ ಎಲ್ಲಾ ಶುಭ ಸೂಚನೆಗಳು ಗೋಚರಿಸುತ್ತಿವೆ.

ಈಗಾಗಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬಂದಿದ್ದ ದೇಶದ ಹಲವು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬಂದಿದೆ. ರಾಜ್ಯದಲ್ಲೂ ಅಕ್ಟೋಬರ್​ 15 ರಿಂದ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಾಣಲಿದೆ. ಹೆಚ್ಚು ಹೆಚ್ಚು ಪರೀಕ್ಷೆ ನಡೆಸಿದರೆ ಸೋಂಕು ನಿಯಂತ್ರಿಸಲು ಸಾಧ್ಯ ಎಂದು ತಜ್ಞರು ತಿಳಿಸಿದ್ದರು. ಅದರಂತೆಯೇ, ಅಕ್ಟೋಬರ್​ 15 ರಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖ ಕಾಣುತ್ತಿದೆ.

ರಾಜ್ಯದಲ್ಲಿ ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಸೋಂಕಿತರ ಸಂಖ್ಯೆಯಲ್ಲೂ ಇಳಿಮುಖ ಕಾಣುತ್ತಿದೆ. ಆದರೆ, ನವೆಂಬರ್​ ಅಥವಾ ಡಿಸೆಂಬರ್​ ತಿಂಗಳ ಆರಂಭದಲ್ಲಿ ಕೊರೊನಾದ ಎರಡನೇ ಅಲೆ ಪ್ರಾರಂಭವಾಗಲಿದೆಯಾ ಎಂಬ ಆತಂಕವೂ ಪ್ರಾರಂಭವಾಗಿದೆ. ಈಗಾಗಲೇ ಕೇರಳ, ದೆಹಲಿಯಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಶುರುವಾಗಿದೆ.

ಸೆಪ್ಟೆಂಬರ್ ಕೊನೆಯಲ್ಲಿ ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ 7 ಬಾರಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿತ್ತು. ಆದರೆ, ಎರಡನೇ ವಾರದಿಂದ ಇಳಿಕೆಯಾಗುತ್ತಿದ್ದು, ಸದ್ಯ ಪಾಸಿಟಿವ್ ಪ್ರಕರಣ ಕೇವಲ ಶೇ. 5 ರಷ್ಟು ಮಾತ್ರ ಇದೆ. ಆದರೆ, ಇತ್ತ ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ 5 ಸಾವಿರದ ಗಡಿ ದಾಟುತ್ತಿದ್ದು, 40 ಸಾವಿರ ಕೋವಿಡ್​ ಪರೀಕ್ಷೆಗಳ ಪೈಕಿ 2 ಸಾವಿರ ಜನರಿಗೆ ಪಾಟಿಸಿವ್ ದೃಢಪಟ್ಟಿದೆ.

ಪ್ರತಿದಿನ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಈ ರೀತಿಯಿದೆ:

ಅಕ್ಟೋಬರ್ 15 - 8,477
ಅಕ್ಟೋಬರ್ 16 - 7,542
ಅಕ್ಟೋಬರ್ 17 - 7,184
ಅಕ್ಟೋಬರ್ 18 - 7,012
ಅಕ್ಟೋಬರ್ 19 - 5,018
ಅಕ್ಟೋಬರ್ 20 - 6,297
ಅಕ್ಟೋಬರ್ 21 - 5,872
ಅಕ್ಟೋಬರ್ 22 - 5,778

ETV Bharat Logo

Copyright © 2024 Ushodaya Enterprises Pvt. Ltd., All Rights Reserved.