ETV Bharat / state

ನಾಗಮಂಗಲ KSRTC ಬಸ್​ ಚಾಲಕನ ಆತ್ಮಹತ್ಯೆ ಯತ್ನದ ಹಿಂದೆ ರಾಜಕೀಯ ಒತ್ತಡವಿಲ್ಲ: ಸಿಐಡಿ ವರದಿ

author img

By

Published : Jul 21, 2023, 6:46 AM IST

ನಾಗಮಂಗಲ ಕೆಎಸ್ಆರ್​ಟಿಸಿ ಬಸ್ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣದ ಸಂಬಂಧ ತನಿಖೆ ನಡೆಸಿದ ಸಿಐಡಿ, ಸರ್ಕಾರಕ್ಕೆ ವರದಿ ನೀಡಿದೆ.

session
ಕಲಾಪ

ಬೆಂಗಳೂರು : ನಾಗಮಂಗಲದಲ್ಲಿ ಕೆಎಸ್ಆರ್​ಟಿಸಿ ಬಸ್​ ಚಾಲಕರೋರ್ವರು ಆತ್ಮಹತ್ಯೆಗೆ ಯತ್ನಿಸಿರುವುದು ರಾಜಕೀಯ ಮತ್ತು ಮಾನಸಿಕ ಒತ್ತಡದಿಂದಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಸ್ಪಷ್ಟಪಡಿಸಿದರು. ಈ ಕುರಿತ ಸಿಐಡಿ ತನಿಖಾ ವರದಿಯ ವಿವರವನ್ನು ಅವರು ಸದನಕ್ಕೆ ನೀಡಿದರು.

ಗುರುವಾರ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್, ಕೆಎಸ್ಆರ್​ಟಿಸಿ ಬಸ್​ ಬಾಲಕನ ಆತ್ಮಹತ್ಯೆ ಯತ್ನ ಸಂಬಂಧ ಸಿಐಡಿ ತನಿಖಾ ತಂಡ 38 ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ. ಇದು ವೈಯಕ್ತಿಕ ಕಾರಣಕ್ಕೆ ನಡೆದ ಆತ್ಮಹತ್ಯೆ ಯತ್ನ. ಯಾವುದೇ ರಾಜಕೀಯ, ಮಾನಸಿಕ ಒತ್ತಡದಿಂದಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.

ವರ್ಗಾವಣೆ ರದ್ದುಪಡಿಸಲು ಒತ್ತಡ ಹೇರುವ ನಿಟ್ಟಿನಲ್ಲಿ ಕೀಟನಾಶಕ ಸೇವನೆ ಮಾಡಿದ್ದಾರೆ. ಚಾಲಕ ಜಗದೀಶ್ ಹಾಗೂ ಆತ್ಮಹತ್ಯೆ ನೋಟ್ ಬರೆದು ಕೊಟ್ಟ ಚಾಲಕ ನವೀನ್ ಕುಮಾರ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಸಹಾಯಕ ಕಾರ್ಯ ಅಧೀಕ್ಷಕ ಮಂಜುನಾಥ್ ಎಸ್.ಎಲ್ ವಿರುದ್ಧ ಶಿಸ್ತು ಕ್ರಮಕ್ಕೆ ತನಿಖಾ‌ ತಂಡ ಶಿಫಾರಸು ಮಾಡಿದೆ ಎಂದು ತಿಳಿಸಿದರು. ಚಾಲಕ ಇದ್ದ ಆಂಬ್ಯುಲೆನ್ಸ್ ತಡೆದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಸಿಐಡಿ ತಿಳಿಸಿದೆ. ಹಾಗೆಯೇ, ಈ ಬಗ್ಗೆ ಕ್ರಮ ಕೈಗೊಳ್ಳದ ಠಾಣಾಧಿಕಾರಿ ಅಶೋಕ್ ಕುಮಾರ್ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ : ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣ : ವಾಗ್ವಾದ, ಧರಣಿ

ಈ ವರದಿ ಬಗ್ಗೆ ಕಾಂಗ್ರೆಸ್ ಸದಸ್ಯ ನರೇಂದ್ರ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ವರದಿ ನ್ಯಾಯೋಚಿತವಾಗಿಲ್ಲ. ಇದರಲ್ಲಿ ಯಾರನ್ನೋ ರಕ್ಷಿಸುವ ಉದ್ದೇಶವಿದೆ. ಪ್ರಕರಣದಲ್ಲಿ ಶಾಸಕರ ಮಾನ- ಮರ್ಯಾದೆ ಕಳೆದಿದ್ದಾರೆ. ಕುಮಾರಸ್ವಾಮಿ ಏನು ದೇವರಾ?, ಅವರ ಬಗ್ಗೆ ನಾವು ಮಾತನಾಡಬಾರದಾ?. ಅವರು ಮಾಜಿ ಸಿಎಂ ಎಂದು ನಮಗೂ ಗೌರವವಿದೆ. ಆದರೆ, ಇಲ್ಲಸಲ್ಲದ ಆರೋಪ ಮಾಡಿದರೆ ಹೇಗೆ?. ನಾವು ಹೇಗೆ ತಡೆದುಕೊಳ್ಳಬೇಕು?. ವರದಿಯಲ್ಲಿ ಅಧಿಕಾರಿಗಳು ಯಾರನ್ನೋ ಉಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಇದನ್ನೂ ಓದಿ : ಚಾಲಕ ಆತ್ಮಹತ್ಯೆ ಯತ್ನ ಪ್ರಕರಣ : ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ : ಜಿ.ಪರಮೇಶ್ವರ್

ಪ್ರಕರಣದ ಸಂಕ್ಷಿಪ್ತ ಹಿನ್ನೆಲೆ : ಮಂಡ್ಯ ಜಿಲ್ಲೆಯಲ್ಲಿ ಕೆಎಸ್​ಆರ್​ಟಿಸಿ ಚಾಲಕ ಜಗದೀಶ್​ ಆತ್ಮಹತ್ಯೆ ಯತ್ನ ಪ್ರಕರಣ ಇತ್ತೀಚೆಗೆ ನಡೆದಿತ್ತು. ವಿಧಾನಸಭೆ ಅಧಿವೇಶನದಲ್ಲಿ ಗದ್ದಲ, ಕೋಲಾಹಲ ನಡೆದ ಬಳಿಕ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ್ದ ಸಿಐಡಿ ಅಧಿಕಾರಿಗಳು, ನಾಗಮಂಗಲಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು.

ಇದನ್ನೂ ಓದಿ : ಕೆಎಸ್ಆರ್​ಟಿಸಿ ಡ್ರೈವರ್ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಸಿಐಡಿ ತನಿಖೆ ನಡೆಯುತ್ತಿದೆ : ಸಚಿವ ಚಲುವರಾಯಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.