ETV Bharat / state

ವಿಧ್ವಂಸಕ ಕೃತ್ಯಕ್ಕೆ ಸಂಚು : ಬೆಂಗಳೂರಿನ ಆರು ಕಡೆ ಎನ್​ಐಎ ದಾಳಿ, ಪರಿಶೀಲನೆ

author img

By ETV Bharat Karnataka Team

Published : Dec 13, 2023, 10:02 AM IST

Updated : Dec 13, 2023, 7:14 PM IST

NIA raid  NIA raid in Bangalore  National Investigation Agency  National Investigation Agency Government of India  ಎನ್​ಐಎ ಅಧಿಕಾರಿಗಳು ದಾಳಿ  ದಾಖಲೆಗಳು ಪರಿಶೀಲನೆ  ಬೆಂಗಳೂರಿನ ಆರು ಸ್ಥಳಗಳಲ್ಲಿ ದಾಳಿ  ಬೆಳ್ಳಂಬೆಳಗ್ಗೆ ನಗರದಲ್ಲಿ ಎನ್ಐಎ ದಾಳಿ  ಭಯೋತ್ಪಾಧನ ಕೃತ್ಯ ಮತ್ತು ಮತಾಂತರ ವಿಚಾರ
ಎನ್​ಐಎ ಅಧಿಕಾರಿಗಳು ದಾಳಿ

ಎನ್​ಐಎ ಅಧಿಕಾರಿಗಳು ಬೆಂಗಳೂರಿನ ಆರು ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ಬೆಂಗಳೂರು : ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಅಧಿಕಾರಿಗಳು ನಗರದ ಆರು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಜುಲೈ ತಿಂಗಳಲ್ಲಿ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಎನ್​ಐಎಗೆ ಹಸ್ತಾಂತರಿಸಲಾಗಿತ್ತು.

ಪ್ರಕರಣ ಸಂಬಂಧ ಎನ್​ಐಎ ಅಧಿಕಾರಿಗಳು ಶಂಕಿತ ಉಗ್ರರಿಗೆ ಸಂಬಂಧಿಸಿದ ಮನೆ ಹಾಗೂ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ನಾಲ್ವರು ಶಂಕಿತ ಉಗ್ರರ ಮನೆ ಮೇಲೆ ದಾಳಿ ಎನ್​ಐಎ ಪರಿಶೀಲನೆ ನಡೆಸಿದೆ. ಜೊತೆಗೆ ಇನ್ನಿಬ್ಬರು ಶಂಕಿತರಿಗೆ ಸಂಬಂಧಿಸಿದ ಮನೆ ಮತ್ತು ವಿವಿಧ ಸ್ಥಳಗಳಲ್ಲೂ ಎನ್​ಐಎ ಶೋಧ ಕಾರ್ಯ ನಡೆಸಿದೆ.

ಶಂಕಿತ ಉಗ್ರರಾದ ಮೊಹಮ್ಮದ್ ಉಮರ್, ಮೊಹಮ್ಮದ್ ಫೈಸಲ್ ರಬ್ಬಾನಿ, ತನ್ವೀರ್ ಅಹ್ಮದ್ ಮತ್ತು ಮೊಹಮ್ಮದ್ ಫಾರೂಕ್ ಹಾಗೂ ತಲೆ ಮರೆಸಿಕೊಂಡಿರುವ ಜುನೈದ್ ಅಹ್ಮದ್ ಅವರಿಗೆ ಸಂಬಂಧಿಸಿದ ವಿವಿಧೆಡೆ ದಾಳಿ ನಡೆಸಲಾಗಿದೆ. ಈ ವೇಳೆ ಎನ್​ಐಎ ಅಧಿಕಾರಿಗಳು 7.3 ಲಕ್ಷ ರೂ ನಗದು, ಡಿಜಿಟಲ್ ಸಾಧನಗಳು, ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ಮೂವರು ತಲೆಮರೆಸಿಕೊಂಡಿದ್ದು, ಇವರ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆ ಮತ್ತು ಸ್ಪೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣ ಸಂಬಂಧ ಐವರು ಶಂಕಿತ ಉಗ್ರರನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದರು. ಈ ವೇಳೆ ಬಂಧಿತರಿಂದ ಶಸ್ತ್ರಾಸ್ತ್ರಗಳು, 7 ಪಿಸ್ತೂಲ್​ಗಳು, 4 ಹ್ಯಾಂಡ್​ ಗ್ರೆನೇಡ್​​ಗಳು, ಒಂದು ಮ್ಯಾಗಜಿನ್​ ಮತ್ತು 45 ಜೀವಂತ ಗುಂಡುಗಳು ಮತ್ತು ನಾಲ್ಕು ವಾಕಿಟಾಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಂಧಿತ ಐವರ ವಿಚಾರಣೆ ಬಳಿಕ ಅವರು ನೀಡಿದ ಮಾಹಿತಿ ಮೇರೆಗೆ ಮತ್ತೋರ್ವ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದರು. ಈ ಮೂಲಕ ಪ್ರಕರಣದಲ್ಲಿ ಒಟ್ಟು 6 ಮಂದಿಯನ್ನು ಬಂಧಿಸಲಾಗಿತ್ತು. ಬಳಿಕ 2023ರ ಅಕ್ಟೋಬರ್​ 25ರಂದು ಈ ಪ್ರಕರಣವು ಎನ್​ಐಎಗೆ ವರ್ಗಾವಣೆ ಆಗಿತ್ತು.

ಎನ್​ಐಎ ತನಿಖೆಯಿಂದ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಲಷ್ಕರ್​ ಎ ತೊಯ್ಬಾದ ಉಗ್ರ ಟಿ ನಾಸೀರ್​ ಸಂಪರ್ಕಕ್ಕೆ ಈ ಐವರು ಶಂಕಿತರು ಬಂದಿದ್ದರು. ಬಳಿಕ ಇವರನ್ನು ಉಗ್ರ ನಾಸಿರ್​ ಮನಃಪರಿವರ್ತನೆ ಮಾಡಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಪ್ರೇರೇಪಿಸಿದ್ದನು ಎಂದು ತಿಳಿಸಿದೆ. ಬಳಿಕ ಪರಪ್ಪನ ಅಗ್ರಹಾರದಿಂದ ಬಿಡುಗಡೆಗೊಂಡ ಐವರು ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಇವರಿಗೆ ಜುನೈದ್​ ಅಹ್ಮದ್​ ಮತ್ತು ಟಿ ನಾಸೀರ್​ ಸಹಕಾರ ನೀಡುತ್ತಿದ್ದರು ಎಂದು ಹೇಳಿದೆ.

ಶಂಕಿತ ಜುನೈದ್​, 2021ರಲ್ಲಿ ರಕ್ತ ಚಂದನ ಮರ ಕಳ್ಳ ಸಾಗಣೆ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದು, ಇತರ ಶಂಕಿತ ಉಗ್ರರ ಜೊತೆಗೆ ಆನ್​ಲೈನ್​ ಮೂಲಕ ಸಂಪರ್ಕ ಸಾಧಿಸುತ್ತಿದ್ದನು.ಜುನೈದ್​ ಆರೋಪಿಗಳಿಗೆ ವಿಧ್ವಂಸಕ ಕೃತ್ಯ ಎಸಗಲು ಹಣ ಪೂರೈಕೆ ಮತ್ತು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಹಕರಿಸಿದ್ದನು ಎಂದು ಎನ್ಐಎ ತಿಳಿಸಿದೆ.

ಇದನ್ನೂ ಓದಿ : Suspected Terrorists: ಶಂಕಿತ ಉಗ್ರರ ಪೊಲೀಸ್ ಕಸ್ಟಡಿ ಅಂತ್ಯ: ಇಂದು ಕೋರ್ಟ್​ಗೆ ಹಾಜರು

Last Updated :Dec 13, 2023, 7:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.