ETV Bharat / state

ಬೆಂಗಳೂರು: ಆತ್ಮಾಹುತಿ ದಾಳಿಗೆ ಸಂಚು ಪ್ರಕರಣ; ಎಲ್​ಇಟಿಯ ಎಂಟು ಸದಸ್ಯರ ವಿರುದ್ಧ ಎನ್ಐಎ ಚಾರ್ಜ್​​ಶೀಟ್

author img

By ETV Bharat Karnataka Team

Published : Jan 13, 2024, 11:17 AM IST

NIA chargesheet against eight members of LeT in Suicide Attack Conspiracy Case
ಬೆಂಗಳೂರು: ಆತ್ಮಾಹುತಿ ದಾಳಿಗೆ ಸಂಚು ಪ್ರಕರಣ - ಎಲ್​ಇಟಿಯ ಎಂಟು ಸದಸ್ಯರ ವಿರುದ್ಧ ಎನ್ಐಎ ಚಾರ್ಜ್​​ಶೀಟ್

NIA Chargesheet: ಬೆಂಗಳೂರಿನಲ್ಲಿ ಆತ್ಮಾಹುತಿ ದಾಳಿಗೆ ಸಂಚು ಪ್ರಕರಣದಲ್ಲಿ ಎಲ್​ಇಟಿಯ ಎಂಟು ಸದಸ್ಯರ ವಿರುದ್ಧ ಎನ್ಐಎ ಚಾರ್ಜ್​​ಶೀಟ್ ದಾಖಲಿಸಿದೆ.

ಬೆಂಗಳೂರು: ಜೈಲಿನಲ್ಲಿ ಕುಳಿತು ದೇಶದ ವಿರುದ್ಧ ಪಿತೂರಿ ಹಾಗೂ 'ಫಿದಾಯೀನ್' (ಆತ್ಮಹತ್ಯೆ) ದಾಳಿಯ ಸಂಚು ಪ್ರಕರಣದಲ್ಲಿ ಲಷ್ಕರ್ ಎ ತೊಯ್ಬಾ (ಎಲ್​ಇಟಿ) ಉಗ್ರ ಸಂಘಟನೆಯ ಎಂಟು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಇದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಓರ್ವ ಮತ್ತು ತಲೆಮರೆಸಿಕೊಂಡಿರುವ ಇಬ್ಬರನ್ನೂ ಹೆಸರಿಸಲಾಗಿದೆ.

ಯಾರ ವಿರುದ್ಧ ಚಾರ್ಜ್​​ಶೀಟ್?: ಈ ಪ್ರಕರಣದಲ್ಲಿ ಟಿ.ನಜೀರ್, ಜುನೈದ್ ಅಹ್ಮದ್, ಸಲ್ಮಾನ್ ಖಾನ್, ಸೈಯ್ಯದ್ ಸುಹೈಲ್ ಖಾನ್, ಮೊಹಮ್ಮದ್ ಉಮರ್, ಜಾಹೀದ್ ತಬ್ರೇಜ್, ಸೈಯ್ಯದ್ ಮುದಾಸಿರ್ ಪಾಶಾ ಮತ್ತು ಮೊಹಮ್ಮದ್ ಫೈಸಲ್ ರಬ್ಬಾನಿ ವಿರುದ್ಧ ಭಾರತೀಯ ದಂಡ ಸಂಹಿತೆ, ಯುಎಪಿಎ ಕಾಯ್ದೆ, ಸ್ಪೋಟಕ ಹಾಗೂ ಶಸ್ತ್ರಾಸ್ತ್ರ ನಿಗ್ರಹ ಕಾಯ್ದೆಯ ವಿವಿಧ ಸೆಕ್ಷನ್​ಗಳಡಿ ಎನ್ಐಎ ಈ ಚಾರ್ಜ್​​ಶೀಟ್ ದಾಖಲಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣ: ಜೈಲಲ್ಲಿರುವ ಮಾಸ್ಟರ್‌ಮೈಂಡ್ ನಜೀರ್‌ ವಶಕ್ಕೆ ಪಡೆಯಲು ಮುಂದಾದ ಸಿಸಿಬಿ

ಈ ಪೈಕಿ ಟಿ.ನಜೀರ್ ಜೀವಾವಧಿ ಶಿಕ್ಷೆಗೆ ಗುರಿಯಾಗಿ 2013ರಿಂದಲೂ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಜುನೈದ್ ಅಹಮದ್, ಸಲ್ಮಾನ್ ಖಾನ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಉಳಿದಂತೆ ಇತರರು ಸಹ ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ.

ಏನಿದು ಪ್ರಕರಣ?: ಕಳೆದ ವರ್ಷ ಜುಲೈ 18ರಂದು ಬೆಂಗಳೂರು ಸಿಸಿಬಿ ಪೊಲೀಸರು ಆರೋಪಿಗಳು ವಾಸವಿದ್ದ ಮನೆಯೊಂದರ ಮೇಲೆ ದಾಳಿ ಮಾಡಿದ್ದರು. ಆಗ ಶಸ್ತ್ರಾಸ್ತ್ರ, ಹ್ಯಾಂಡ್ ಗ್ರೆನೇಡ್, ವಾಕಿ ಟಾಕಿಗಳ ಸಹಿತ ಏಳು ಜನರನ್ನ ಬಂಧಿಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಎನ್ಐಎ ಕೈಗೆತ್ತಿಕೊಂಡಿತ್ತು.

ಎನ್ಐಎ ತನಿಖೆಯಲ್ಲಿ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. 2017ರಲ್ಲಿ ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಸಲ್ಮಾನ್ ಖಾನ್ ಹಾಗೂ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಉಳಿದ ಆರೋಪಿಗಳಿಗೆ ಜೈಲಿನಲ್ಲೇ ಟಿ.ನಜೀರ್ ಸಂಪರ್ಕಕ್ಕೆ ಬಂದಿದ್ದ. ಜೈಲಿನಲ್ಲಿ ಎಲ್ಲರನ್ನೂ ತನ್ನ ಬ್ಯಾರಕ್​ಗೆ ಶಿಫ್ಟ್ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ನಜೀರ್, ಆರಂಭದಲ್ಲಿ ಜುನೈದ್ ಅಹಮದ್, ಸಲ್ಮಾನ್ ಖಾನ್ ಹಾಗೂ ನಂತರದಲ್ಲಿ ಉಳಿದ ಆರೋಪಿಗಳನ್ನು ಲಷ್ಕರ್ ಎ ತೊಯ್ಬಾಗೆ ಸಂಘಟನೆಯ ಸದಸ್ಯರನ್ನಾಗಿ ಸೇರಿಸಿಕೊಂಡಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಇದನ್ನೂ ಓದಿ: ಶಂಕಿತ ಉಗ್ರನ ಮನೆಯಲ್ಲಿ ಪತ್ತೆಯಾದವು 4 ಹ್ಯಾಂಡ್ ಗ್ರೆನೇಡ್: ರಾಜಧಾನಿಯಲ್ಲಿ‌ ದೊರಕಿದ್ದು ಇದೇ ಮೊದಲು!

ಜೈಲಿನಿಂದ ಬಿಡುಗಡೆಯಾದ ಬಳಿಕ ಕೆಲ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ವಿದೇಶಕ್ಕೆ ತೆರಳಿರುವ ಜುನೈದ್ ಅಹಮದ್, ಇಲ್ಲಿನ ಜೈಲಿನ ಒಳಗೆ ಹಾಗೂ ಹೊರಗೆ ಲಷ್ಕರ್​ ಚಟುವಟಿಕೆಗಳಿಗೆ ವಿದೇಶದಿಂದಲೇ ಹಣ ಒದಗಿಸುತ್ತಿದ್ದ. ಅಲ್ಲದೇ, ಹ್ಯಾಂಡ್ ಗ್ರೆನೇಡ್, ವಾಕಿ ಟಾಕಿಗಳನ್ನು ಉಳಿದ ಆರೋಪಿಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಸಲ್ಮಾನ್ ಖಾನ್​ಗೆ ವಹಿಸಲಾಗಿತ್ತು. ಅವುಗಳನ್ನ ಬಳಸಿ ಟಿ.ನಜೀರ್​ನನ್ನ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಆತ್ಮಾಹುತಿ ದಾಳಿ ಮಾಡಿ, ಆತ ಪರಾರಿಯಾಗಲು ನೆರವಾಗಲು ಬೇಕಾದ ಸಿದ್ಧತೆಗಳನ್ನು ಆರೋಪಿಗಳು ಆರಂಭಿಸಿದ್ದರು. ಕೃತ್ಯದ ತಯಾರಿಯ ಭಾಗವಾಗಿ ಪೊಲೀಸ್ ಕ್ಯಾಪ್‌ಗಳನ್ನು ಕದಿಯಲು ಮತ್ತು ಸರ್ಕಾರಿ ಬಸ್‌ಗಳಿಗೆ ಬೆಂಕಿ ಹಚ್ಚಿ ತಪ್ಪಿಸಿಕೊಳ್ಳುವಂತೆ ಸಹ ಆರೋಪಿಗಳಿಗೆ ಜುನೈದ್ ಸೂಚನೆ ನೀಡಿದ್ದ ಎಂದು ಎನ್ಐಎ ತಿಳಿಸಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಐಎಸ್‌ಐ ಶಂಕಿತ ಏಜೆಂಟ್​ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.