ETV Bharat / state

ಮಂಗಳೂರಿಗೆ 38 ಶ್ರೀಲಂಕಾ ಪ್ರಜೆಗಳ ಕಳ್ಳಸಾಗಣೆ ಪ್ರಕರಣ: ತಮಿಳುನಾಡಿನ ಕುಖ್ಯಾತ ಆರೋಪಿ NIA ಬಲೆಗೆ

author img

By ETV Bharat Karnataka Team

Published : Oct 22, 2023, 5:36 PM IST

Updated : Oct 22, 2023, 5:47 PM IST

Etv Bharat
Etv Bharat

2021ರಲ್ಲಿ ಮಂಗಳೂರಿಗೆ 38 ಶ್ರೀಲಂಕಾ ಪ್ರಜೆಗಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಕಳ್ಳಸಾಗಾಣಿಕೆದಾರ ಮೊಹಮ್ಮದ್ ಇಮ್ರಾನ್ ಖಾನ್ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಬೆಂಗಳೂರು: ಶ್ರೀಲಂಕಾದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಬೆಂಗಳೂರಿನ ಎಟಿಟಿ (Absconder Tracking Team -ATT) ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಮೊಹಮ್ಮದ್ ಇಮ್ರಾನ್ ಖಾನ್ ಹಾಜಾ ನಜರ್​​ಭೀಡೆನ್ ಎಂಬಾತನೇ ಬಂಧಿತ ಆರೋಪಿ.

2021ರಲ್ಲಿ ಅಧಿಕೃತ ಹಾಗೂ ಮಾನ್ಯ ದಾಖಲೆಗಳಿಲ್ಲದೆ ಶ್ರೀಲಂಕಾ ಪ್ರಜೆಗಳ ಗುಂಪೊಂದು ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಿತ್ತು. ಈ ಸಂಬಂಧ ಗುಪ್ತಚರ ಮಾಹಿತಿ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸರು ಕಾರ್ಯಾಚರಣೆ ನಡೆಸಿ, 38 ಶ್ರೀಲಂಕಾ ಪ್ರಜೆಗಳನ್ನು ಅದೇ ವರ್ಷದ ಜೂನ್​ 6ರಂದು ಬಂಧಿಸಿದ್ದರು. ಇವರನ್ನು ಅಕ್ರಮವಾಗಿ ತಮಿಳುನಾಡು ಮತ್ತು ಬೆಂಗಳೂರು ಮೂಲಕ ಮಂಗಳೂರಿಗೆ ಕರೆತರಲಾಗಿತ್ತು ಎಂದು ತನಿಖೆಯಲ್ಲಿ ಬಯಲಾಗಿತ್ತು.

ಇದನ್ನೂ ಓದಿ: ಮಾನವ ಕಳ್ಳಸಾಗಣೆ ಜಾಲ; ಮಂಗಳೂರು ಪೊಲೀಸರಿಂದ 38 ಶ್ರೀಲಂಕಾ ಪ್ರಜೆಗಳ ಬಂಧನ

ಈ ಪ್ರಕರಣದ ಅಂತರರಾಷ್ಟ್ರೀಯ ಆಯಾಮಗಳನ್ನು ಗುರುತಿಸಿ, ಎನ್​ಐಎ ಮರು ತನಿಖೆ ಕೈಗೊಂಡಿತ್ತು. ಈ ಸಂದರ್ಭದಲ್ಲಿ ತಮಿಳುನಾಡಿನ ರಾಮನಾಥಪುರಂ ನಿವಾಸಿಯಾದ ಇಮ್ರಾನ್ ಖಾನ್ ಈ ಪ್ರಕರಣದ ಪ್ರಮುಖ ಆರೋಪಿ ಎಂದೂ ಪತ್ತೆ ಹಚ್ಚಲಾಗಿತ್ತು. ಆದರೆ, ಅಂದಿನಿಂದಲೂ ಈತ ಪರಾರಿಯಾಗಿದ್ದ. ಹೀಗಾಗಿ ಕಳೆದ ಹಲವು ತಿಂಗಳುಗಳಿಂದ ಆತನ ಚಲನವಲನಗಳ ಮೇಲೆ ಬೆಂಗಳೂರಿನ ಎಟಿಟಿ ನಿಗಾ ಇರಿಸಿತ್ತು. ಇದೀಗ ತಮಿಳುನಾಡಿನ ಥೇಣಿ ಜಿಲ್ಲೆಯ ಅಜ್ಞಾತ ಸ್ಥಳದಿಂದ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಅಲ್ಲದೇ, ದೀರ್ಘಕಾಲದಿಂದಲೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ ಕುಖ್ಯಾತ ಕಳ್ಳಸಾಗಾಣಿಕೆದಾರ ಎಂಬುದಾಗಿಯೂ ತಿಳಿದು ಬಂದಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಪ್ರಕರಣದ ಸಂಪೂರ್ಣ ವಿವರ: ಈ ಆರೋಪಿ ಇಮ್ರಾನ್ ಖಾನ್ ಈ ಹಿಂದೆ ಎಲ್‌ಟಿಟಿಇಯೊಂದಿಗೆ ನಂಟು ಹೊಂದಿದ್ದ ಶ್ರೀಲಂಕಾದ ಪ್ರಜೆ ಈಸನ್‌ನ ಸಹಯೋಗದೊಂದಿಗೆ 38 ಶ್ರೀಲಂಕಾ ಪ್ರಜೆಗಳನ್ನು ಅವರ ತಾಯ್ನಾಡಿನಿಂದ ತಮಿಳುನಾಡಿನ ವಿವಿಧ ಸ್ಥಳಗಳಿಗೆ ಅಕ್ರಮವಾಗಿ ಸಾಗಿಸಲು ಯೋಜನೆ ರೂಪಿಸಿದ್ದ ಎಂಬುದು ಬಹಿರಂಗವಾಗಿತ್ತು. ಕೆನಡಾಕ್ಕೆ ವಲಸೆ ಹೋಗಲು ಕಾನೂನುಬದ್ಧ ದಾಖಲಾತಿಗಳು ಕಲ್ಪಿಸಿ ಉದ್ಯೋಗ ಒದಗಿಸುವ ಸುಳ್ಳು ಭರವಸೆಯ ಮೇಲೆ ಶ್ರೀಲಂಕಾ ಪ್ರಜೆಗಳಿಗೆ ವಂಚಿಸಲಾಗಿತ್ತು.

ನಂತರ ಇಮ್ರಾನ್ ಖಾನ್, ಇತರ ಸಹ ಆರೋಪಿಗಳೊಂದಿಗೆ ಅವರನ್ನು ಬೆಂಗಳೂರು ಮತ್ತು ಮಂಗಳೂರಿನ ವಿವಿಧ ಸ್ಥಳಗಳಿಗೆ ಸಾಗಿದ್ದ. ಈತ ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆಯ ಪಿತೂರಿಯಲ್ಲಿ ಪ್ರಮುಖ ಆರೋಪಿಯಾಗಿದ್ದು, ಶ್ರೀಲಂಕಾದ ಪ್ರಜೆಗಳನ್ನು ಅವರ ತಾಯ್ನಾಡಿನಿಂದ ಭಾರತಕ್ಕೆ ಮತ್ತು ನಂತರ ಇತರ ರಾಷ್ಟ್ರಗಳಿಗೆ ಸಾಗಿಸುವ ದಂಧೆಯಲ್ಲಿ ತೊಡಗಿದ್ದ ಎಂದು ಎನ್​ಐಎ ತಿಳಿಸಿದೆ.

ಈ ಪ್ರಕರಣದಲ್ಲಿ ಐದು ದಿನಕರನ್ ಅಲಿಯಾಸ್​ ಅಯ್ಯ, ಕಾಸಿ ವಿಶ್ವನಾಥನ್, ರಸೂಲ್, ಸತಂ ಉಷೇನ್ ಮತ್ತು ಅಬ್ದುಲ್ ಮುಹೀತು ವಿರುದ್ಧ ಎನ್ಐಎ 2021ರಲ್ಲಿ ಪ್ರಾಥಮಿಕ ಚಾರ್ಜ್​ಶೀಟ್​ ಸಲ್ಲಿಸಿತ್ತು. ಇಲ್ಲಿಯವರೆಗೆ ಒಟ್ಟಾರೆ 13 ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಇನ್ನೂ ಹಚ್ಚಿನ ತನಿಖೆ ಮುಂದುವರೆದಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: ಗರ್ಭದಲ್ಲಿದ್ದಾಗಲೇ ಶಿಶುಗಳ ಜೀವಕ್ಕೆ ಬೆಲೆ.. ಹೊಕ್ಕುಳಬಳ್ಳಿ ಕತ್ತರಿಸುವ ಮುನ್ನವೇ ಒಪ್ಪಂದ.. ಇದು ಮಕ್ಕಳ ಮಾರಾಟ ದಂಧೆಯ ಕರಾಳ ಮುಖ!

Last Updated :Oct 22, 2023, 5:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.