ETV Bharat / state

ಹೆಚ್ಡಿಕೆ ಸತ್ಯ ಹರಿಶ್ಚಂದ್ರ ಅಲ್ಲ,ಇದೇ ರೀತಿ ಮಾತನಾಡಿದರೆ ವೆಸ್ಟ್ ಎಂಡ್ ಬಗ್ಗೆ ಮಾತನಾಡಬೇಕಾಗುತ್ತೆ: ರವಿಕುಮಾರ್

author img

By

Published : Feb 5, 2023, 6:03 PM IST

Updated : Feb 5, 2023, 6:16 PM IST

ರಾಜ್ಯದ ಅತ್ಯಂತ ಸ್ವಾರ್ಥ ರಾಜಕಾರಣಿ ಎಂದರೆ ಕುಮಾರಸ್ವಾಮಿ - ಹೆಚ್​ಡಿಕೆ ಕಿರುಕುಳಕ್ಕೆ ಅವರ ಪಕ್ಷದಲ್ಲಿ ಇದ್ದ ಬ್ರಾಹ್ಮಣ ವೈಎಸ್​ವಿ ದತ್ತಾ ಪಕ್ಷ ಬಿಟ್ಟು ಹೋಗಿದ್ದಾರೆ - ಹೆಚ್​ಡಿಕೆ ವಿರುದ್ಧ ಎನ್ ರವಿಕುಮಾರ್ ವಾಗ್ದಾಳಿ.

N Ravikumar reaction on HD kumaraswamy
ಹೆಚ್​ಡಿಕೆ ಏನೂ ಸತ್ಯ ಹರಿಶ್ಚಂದ್ರ ಅಲ್ಲ, ಇದೇ ರೀತಿ ಮಾತನಾಡಿದರೆ ವೆಸ್ಟ್ ಎಂಡ್ ಪ್ರಕರಣ ಮಾತನಾಡಬೇಕಾಗುತ್ತೆ:ರವಿಕುಮಾರ್

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಏನೂ ಸತ್ಯ ಹರಿಶ್ಚಂದ್ರ ಅಲ್ಲ, ಅವರು ತಾಜ್ ವೆಸ್ಟ್ ಎಂಡ್​ನ ನಾಯಕ, ತಾಜ್ ವೆಸ್ಟ್ ಎಂಡ್ ಬಗ್ಗೆ ಇನ್ನೂ ಎಳೆ ಎಳೆಯಾಗಿ ಬಿಚ್ಚಿಡಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದರು. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣರ ಸಮುದಾಯದ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಈ ರೀತಿ ಅವಹೇಳನ ಮಾಡಬಾರದು, ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು.

ಕುಮಾರಸ್ವಾಮಿ ಸ್ವಜಾತಿ ಕೂಪ ಮಂಡೂಕ ಸ್ವಜಾತಿ ಬಿಟ್ಟು ಹೊರಗೆ ಬರಲ್ಲ ಅವರು, ತಮ್ಮ ಕುಟುಂಬ, ಮನೆ ಬಿಟ್ಟು ಹೊರಗೆ ಬರಲಿ, ಅವರ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಅಂತ ಹೇಳಲಿ, ಅವರು ಸಿಎಂ ಆಗಿದ್ದಾಗ ತಾಜ್ ವೆಸ್ಟ್ ಎಂಡ್ ಹೋಟೆಲ್​ನಿಂದ ಆಡಳಿತ ಮಾಡುತ್ತಿದ್ದರು. ಇದನ್ನು ಜನ ಮರೆತಿಲ್ಲ, ಅಷ್ಟೊಂದು ಸ್ವಾರ್ಥಿ ರಾಜಕಾರಣಿ ಅವರು ಎಂದು ಹೆಚ್​ಡಿಕೆ ವಿರುದ್ಧ ರವಿಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.

ಹೆಚ್​ಡಿಕೆ ಭಯದಿಂದ ಚಡಪಡಿಸುತ್ತಿದ್ದಾರೆ: ಗಾಂಧಿ ಅವರ ಹತ್ಯೆ ಪ್ರಕರಣ ಬಗ್ಗೆ ಜಸ್ಟೀಸ್ ಕಪೂರ್ ಕಮಿಟಿ ವರದಿ ಕೊಟ್ಟಿದೆ. ಈ ವರದಿಯನ್ನು ಕುಮಾರಸ್ವಾಮಿ ಓದಲಿ, ಗಾಂಧಿ ಹತ್ಯೆ ಪ್ರಕರಣದಲ್ಲಿ ಸಂಘ ಪರಿವಾರದ ಪಾತ್ರ ಇಲ್ಲ ಅಂತ ವರದಿಯಲ್ಲಿದೆ, ಸುಪ್ರೀಂಕೋರ್ಟ್ ಕೂಡಾ ಇದನ್ನೇ ಹೇಳಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸತ್ಯ ಹೇಳಿದ್ದಾರೆ, ಅಷ್ಟಕ್ಕೇ ಕುಮಾರಸ್ವಾಮಿ ಅವರಿಗೆ ಸಿಟ್ಟು ಬಂದಿದೆ. ರಾಜ್ಯದಲ್ಲಿ ಸ್ಮಾರ್ಥ ಬ್ರಾಹ್ಮಣರು, ಪೇಶ್ವೆ ಬ್ರಾಹ್ಮಣರು ಅಂತ ಇಲ್ಲ. ಮಹಾರಾಷ್ಟ್ರದಲ್ಲಿ ‌ಇರೋದು, ಕುಮಾರಸ್ವಾಮಿ ಅವರು ಇದರಲ್ಲಿ ಪಿಹೆಚ್​ಡಿ ಮಾಡಿದ್ದಾರಾ? ಅವರ ಕಿರುಕುಳಕ್ಕೆ ಅವರ ಪಕ್ಷದಲ್ಲಿ ಇದ್ದ ಬ್ರಾಹ್ಮಣ ನಾಯಕ ವೈಎಸ್​ವಿ ದತ್ತಾ ಜೆಡಿಎಸ್​ ಪಕ್ಷ ಬಿಟ್ಟು ಹೋಗಿದ್ದಾರೆ. ಬ್ರಾಹ್ಮಣರು ಸಿಎಂ, ಎಂಟು ಜನ ಡಿಸಿಎಂ ಮಾಡೋ ಬಗ್ಗೆ ಚರ್ಚೆ ಆಗಿಲ್ಲ, ಆಥರ ಏನೂ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬರುವ ಭಯದಿಂದ ಅವರು ಹೀಗೆ ಮಾತಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಹೆಚ್​ಡಿಕೆ ಭಯದಿಂದ ಚಡಪಡಿಸುತ್ತಿದ್ದಾರೆ ಎಂದರು.

ರಾಜ್ಯದ ಅತ್ಯಂತ ಸ್ವಾರ್ಥ ರಾಜಕಾರಣಿ ಎಂದರೆ ಕುಮಾರಸ್ವಾಮಿ, ಯಾರಿಗೂ ಬಹುಮತ ಬರಬಾರದು, ನಮ್ಮನೆ ಬಾಗಿಲಿಗೆ ಎಲ್ಲರೂ ಬರಬೇಕು ಅಂದುಕೊಂಡಿದ್ದಾರೆ. ಅವರು ಕೂಪ ಮಂಡೂಕ ಯೋಚನೆಗಳಿಂದ ಹೊರಗೆ ಬರಲಿ, ಪಂಚರತ್ನ ಯಾತ್ರೆ ಬದಲು ನವಗ್ರಹ ಯಾತ್ರೆ ಮಾಡಲಿ. ಐದು ಜನ ಅಲ್ಲ ಒಂಭತ್ತು ಜನ ಅವರ ಮನೆಯಲ್ಲಿದ್ದಾರೆ ಎಂದು ರವಿಕುಮಾರ್ ವ್ಯಂಗ್ಯವಾಡಿದರು.

ಮಾಜಿ ಸಿಎಂ ಕುಮಾರಸ್ವಾಮಿ ಅವರದ್ದು ಇದ್ಯಾ ಸಿಡಿ: ಸಿಡಿ ಯಾತ್ರೆ ಕುರಿತು ಕುಮಾರಸ್ವಾಮಿ ಆರೋಪಕ್ಕೆ ಪ್ರತಿಯಿಸಿದ ರವಿಕುಮಾರ್, ಹೊಸ ಬಾಂಬ್ ಸಿಡಿಸಿದ್ದಾರೆ. ಕುಮಾರಸ್ವಾಮಿ ಯವರದ್ದು ತಾಜ್ ವೆಸ್ಟೆಂಡ್, ತೋಟದ ಮನೆಯಲ್ಲಿ ಏನೇನು ಆಗಿದೆ ಎಂದು ಎಳೆ ಎಳೆಯಾಗಿ ಬೇಕಿದ್ದರೆ ನಾವು ಬಿಚ್ಚಿಡುತ್ತೇವೆ ಎಂದರು. ಹಾಗಿದ್ದರೆ ಅವರದ್ದು ಸಿಡಿ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರವಿಕುಮಾರ್, ಹೌದು ಅವರು ಮುಂದೆ ಮಾತಾಡಲಿ, ನಾವು ಅದಕ್ಕೆ ಸರಿಯಾಗಿ ಉತ್ತರ ಕೊಡುತ್ತೇವೆ. ಹೆಚ್​ಡಿಕೆ ಬಗ್ಗೆ ಸಿಡಿ ಮತ್ತು ತಾಜ್ ವೆಸ್ಟೆಂಡ್ ಹೋಟೆಲ್, ಅವರ ಮನೆ, ತೋಟದ ಮನೆ, ಇವೆಲ್ಲ ಪ್ರಕರಣಗಳ ಬಗ್ಗೆ ನಮಗೂ ಗೊತ್ತಿದೆ. ಅವರು ಇದೇ ಥರ ಮುಂದುವರೆದರೆ ನಾವೂ ಮಾತಾಡುತ್ತೇವೆ. ನಾವೂ ರಾಜಕಾರಣ ಮಾಡಲು ಬಂದವರು, ಅವರೇನು ಹರಿಶ್ಚಂದ್ರ ಅಲ್ಲ, ನಾವೂ ಮಾತಾಡುತ್ತೇವೆ ಎಂದು ಟಾಂಗ್​ ಕೊಟ್ಟರು.

ಇದನ್ನೂ ಓದಿ:ಪ್ರಹ್ಲಾದ್ ಜೋಶಿ ನಮ್ಮ ಬ್ರಾಹ್ಮಣರಲ್ಲ, ಅವರನ್ನು ಮುಂದಿನ‌ ಸಿಎಂ ಮಾಡಲು ಆರ್​ಎಸ್ಎಸ್ ನಿರ್ಧರಿಸಿದೆ: ಹೆಚ್​ಡಿಕೆ

Last Updated : Feb 5, 2023, 6:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.