ETV Bharat / state

ಪ್ರಹ್ಲಾದ್ ಜೋಶಿ ನಮ್ಮ ಬ್ರಾಹ್ಮಣರಲ್ಲ, ಅವರನ್ನು ಮುಂದಿನ‌ ಸಿಎಂ ಮಾಡಲು ಆರ್​ಎಸ್ಎಸ್ ನಿರ್ಧರಿಸಿದೆ: ಹೆಚ್​ಡಿಕೆ

author img

By

Published : Feb 5, 2023, 4:42 PM IST

Updated : Feb 5, 2023, 6:52 PM IST

ಪ್ರಹ್ಲಾದ ಜೋಶಿ ಹಳೇ ಮೈಸೂರು ಭಾಗದ ಬ್ರಾಹ್ಮಣರಲ್ಲ - ಅವರು ಮಹಾರಾಷ್ಟ್ರದ ಪೇಶ್ವೆ ವಂಶಕ್ಕೆ ಸೇರಿದ ಬ್ರಾಹ್ಮಣರು - ಜೋಶಿ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು

Former CM HD Kumaraswamy
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಇದಕ್ಕಾಗಿ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್​, ಜಾತ್ಯತೀತ ಜನತಾದಳ, ಆಮ್​ ಆದ್ಮಿ ಪಕ್ಷ ಸೇರಿದಂತೆ ಇತರರು ಚುನಾವಣಾ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಹಲವು ತಂತ್ರಗಳನ್ನು ಹೆಣೆಯುತ್ತಿದ್ದಾರೆ. ನಾಯಕರ ಮಧ್ಯೆ ಆರೋಪ, ಪ್ರತ್ಯಾರೋಪ ಮತ್ತು ಟೀಕೆಗಳು ಜೋರಾಗಿವೆ. ಈ ನಿಟ್ಟಿನಲ್ಲಿ ಪಂಚರತ್ನ ರಥಯಾತ್ರೆ ಆರಂಭಿಸಿರುವ ಜೆಡಿಎಸ್​ ನಾಯಕ ಹೆಚ್​ ಡಿ ಕುಮಾರಸ್ವಾಮಿ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಮುಂದಿನ ಸಿಎಂ ಮಾಡಲು ಆರ್​ಎಸ್ಎಸ್ ನಿರ್ಧಾರ ಮಾಡಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಹ್ಲಾದ್​ ಜೋಶಿ ಸಿಎಂ ಮಾಡಲು ಆರ್​ಎಸ್​ಎಸ್ ನಿರ್ಧಾರ​: ದಾಸರಹಳ್ಳಿ ಪಂಚರತ್ನಯಾತ್ರೆ ವೇಳೆ ಮಾತನಾಡಿದ ಅವರು, ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡಿ, 8 ಮಂದಿ ಉಪಮುಖ್ಯಮಂತ್ರಿ ಮಾಡುವ ಪ್ಲಾನ್ ಬಗ್ಗೆ ಆರ್​ಎಸ್ ಎಸ್ ದೆಹಲಿ ಕಚೇರಿಯಲ್ಲಿ ಚರ್ಚೆ ನಡೆದಿದೆ. ಪ್ರಹ್ಲಾದ್ ಜೋಶಿ ಅವರನ್ನು ಬಿಜೆಪಿ ಮುಂದಿನ ಸಿಎಂ ಮಾಡಲು ಆರ್ ಎಸ್ ಎಸ್ ನಿರ್ಧಾರ ಮಾಡಿದೆ ಎಂದು ಆರೋಪಿಸಿದರು. ಹೀಗಾಗಿ ನಿನ್ನೆಯಿಂದ ನಮ್ಮ ಮೇಲೆ ಗಧಾ ಪ್ರಹಾರ ಶುರು ಮಾಡಿದ್ದಾರೆ. ಅವರು ಶೃಂಗೇರಿ ಮಠ ಧ್ವಂಸ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಸೇರಿದವರು. ಅವರಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ ಬೇಕಿಲ್ಲ. ನಮ್ಮ ಭಾಗದ ಹಳೇ ಮೈಸೂರು ಭಾಗದ ಬ್ರಾಹ್ಮಣ ವರ್ಗಕ್ಕೆ ಸೇರಿದವರಲ್ಲ ಎಂದು ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರದ ಪೇಶ್ವೆ ವಂಶಕ್ಕೆ ಸೇರಿದ ಜೋಶಿ: ಜೆಡಿಎಸ್‌ದು ಪಂಚರತ್ನ ಯಾತ್ರೆಯಲ್ಲ, ಕುಟುಂಬದ ನವಗ್ರಹ ಯಾತ್ರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಹಳೇ ಮೈಸೂರು ಭಾಗದ ಬ್ರಾಹ್ಮಣರು ಸರ್ವೇ ಜನೋ ಸುಖಿನೋ ಭವಂತು ಎನ್ನುವವರು. ಆದರೆ ಪ್ರಹ್ಲಾದ ಜೋಶಿ ಅವರು ಮಹಾರಾಷ್ಟ್ರದ ಪೇಶ್ವೆ ವಂಶಕ್ಕೆ ಸೇರಿದವರು. ಅವರಿಗೆ ಸಂಸ್ಕೃತಿ ಇಲ್ಲ. ಅವರಿಗೆ ದೇಶ ಒಡೆಯುವಂತದ್ದು, ಕುತಂತ್ರ ರಾಜಕಾರಣ ಮಾಡುವಂತದ್ದು, ದೇಶಭಕ್ತಿಯ ಹೆಸರಲ್ಲಿ ದೇಶಕ್ಕೆ ಕೊಡುಗೆ ಕೊಟ್ಟಂತವರನ್ನು ಮಾರಣಹೋಮ ಮಾಡುವಂತದ್ದು. ಈ ವರ್ಗದವರಿಂದ ಬಂದವರ ಕೃತ್ಯ. ರಾಜ್ಯದ ವೀರಶೈವ, ಒಕ್ಕಲಿಗ, ಹಿಂದುಳಿದ, ದಲಿತ ಸಮುದಾಯ ಬಿಜೆಪಿಯ ಆರ್ ಎಸ್ ಎಸ್ ಹುನ್ನಾರಕ್ಕೆ ಮರಳಾಗಬೇಡಿ. ಈ ರಾಜ್ಯವನ್ನು ಅವರು ಒಡೆಯುತ್ತಾರೆ. ರಾಜ್ಯವನ್ನು ಕುಲಗೆಡಿಸುವ ಇಂಥವರ ವಿರುದ್ಧ ನನ್ನ ಹೋರಾಟ ಎಂದು ಕುಮಾರಸ್ವಾಮಿ ಗುಡುಗಿದರು.

ದಾಸರಹಳ್ಳಿಯಲ್ಲಿ ಪಂಚರತ್ನ ಯಾತ್ರೆ: ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಜೆಡಿಎಸ್‌ ಪಂಚರತ್ನ ರಥಯಾತ್ರೆ ಸಂಜೆವರೆಗೂ ಕಾರ್ಯಕ್ರಮ ಇದೆ. ನಂತರ ಮಾರ್ಚ್ 1ರಿಂದ 8-10 ಕ್ಷೇತ್ರದಲ್ಲಿ ಬೆಂಗಳೂರು ರಥಯಾತ್ರೆ. ಮಾರ್ಚ್ ನಲ್ಲಿ ಬೆಂಗಳೂರಿನಲ್ಲಿ ಪಂಚರತ್ನ ರಥಯಾತ್ರೆ ಸಾಗಲಿದೆ. ಈ ತಿಂಗಳ 27 ರ ವರೆಗೂ ನಿರಂತರವಾಗಿ ರಥಯಾತ್ರೆ ನಡೆಯಲಿದೆ. ಶಿವರಾತ್ರಿ ಒಂದು ದಿನ ಮಾತ್ರ ಬಿಡುವು ನೀಡುತ್ತೇವೆ. ಮಾರ್ಚ್ ನಲ್ಲಿ ಹಾಸನ, ಮೈಸೂರು, ಬೆಂಗಳೂರಿನಲ್ಲಿ ಪಂಚರತ್ನ ರಥಯಾತ್ರೆ ನಡೆಸುತ್ತೇವೆ. ಬೆಂಗಳೂರಿನಲ್ಲಿ 8 ರಿಂದ 10 ಕ್ಷೇತ್ರ ಗೆಲ್ಲಬೇಕಿದೆ ಎಂದು ಹೆಚ್​ಡಿಕೆ ಹೇಳಿದರು.

ಪಂಚರತ್ನ ಯಾತ್ರೆಗೆ ಬಿಜೆಪಿ ಅಡ್ಡಗಾಲು: ಮಾರ್ಚ್ 20-25ಕ್ಕೆ ಪಂಚರತ್ನ ರಥಯಾತ್ರೆಯ ಸಮಾರೋಪ ನಡೆಯಲಿದ್ದು, ಬೃಹತ್ ಕಾರ್ಯಕ್ರಮ ಮಾಡಲಾಗುವುದು. ಬೆಂಗಳೂರಿನ ದಾಸರಹಳ್ಳಿಯ ನಮ್ಮ ಶಾಸಕ ಮಂಜುನಾಥ್ ಅವರಿಗೆ ಕಾರ್ಯಕ್ರಮ ಮಾಡಲು ಬಿಡದೆ ತೊಂದರೆ ಕೊಡ್ತಿದ್ದಾರೆ. ಟೆಂಡರ್ ಪ್ರೋಸೆಸ್ ಮಾಡಲು ಬಿಡದೆ ಕಿರುಕುಳ ನೀಡಿದ್ದಾರೆ. ಸಂಸದ ಸದಾನಂದ ಗೌಡರು ಸೇರಿದಂತೆ ಹಲವರು ಅಡ್ಡಗಾಲು ಹಾಕಿದ್ದಾರೆ. ಜನಮನ್ನಣೆ ನೀಡದೆ ಕಿರುಕುಳ ನೀಡ್ತಿದ್ದಾರೆ. ಕ್ಷುಲ್ಲಕ ಕಾರಣದಿಂದ ಬೆಂಗಳೂರು ನಗರ ಸೇರದಂತೆ ಎಲ್ಲೆಡೆ ಬಿಜೆಪಿ ತನ್ನ ಸ್ಥಾನ ಕಳೆದುಕೊಳ್ಳಲಿದೆ ಎಂದು ಹೆಚ್​ ಡಿ ಕುಮಾರಸ್ವಾಮಿ ಕಿಡಿಕಾರಿದರು.

ಇದನ್ನೂ ಓದಿ:'ಬಿಜೆಪಿಯವರು ಯಡಿಯೂರಪ್ಪರನ್ನೇ ಪಂಕ್ಚರ್ ಮಾಡಿದ್ದಾರೆ'

Last Updated :Feb 5, 2023, 6:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.