ETV Bharat / state

ಭ್ರಷ್ಟಾಚಾರ, ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ, ದಾಖಲೆಯೊಂದಿಗೆ ಉತ್ತರಿಸುವೆ: ಕಾಂಗ್ರೆಸ್ ಗೆ ಸುಧಾಕರ್ ಸವಾಲ್

author img

By

Published : Jan 23, 2023, 11:04 PM IST

minister-sudhakar-challenges-to-congress-for-open-debate-on-corruption-and-acheivements
ಭ್ರಷ್ಟಾಚಾರ, ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ, ದಾಖಲೆಯೊಂದಿಗೆ ಉತ್ತರಿಸುವೆ: ಕಾಂಗ್ರೆಸ್ ಗೆ ಸುಧಾಕರ್ ಸವಾಲ್

ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ - ಭ್ರಷ್ಟಾಚಾರ ಹಾಗೂ ಸಾಧನೆ ಕುರಿತು ಬಹಿರಂಗ ಚರ್ಚೆಗೆ ಬನ್ನಿ- ಕಾಂಗ್ರೆಸ್​​ಗೆ ಸಚಿವ ಡಾ.ಕೆ.ಸುಧಾಕರ್ ಸವಾಲ್​

ಬೆಂಗಳೂರು : ಭ್ರಷ್ಟಾಚಾರದಲ್ಲಿ ಮುಳುಗೆದ್ದಿರುವ ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿಯಾಗಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಯಾವುದೇ ನೈತಿಕತೆಯಿಲ್ಲ. ಭ್ರಷ್ಟಾಚಾರ ಹಾಗೂ ಸಾಧನೆ ಕುರಿತು ಬಹಿರಂಗ ಚರ್ಚೆಗೆ ಬನ್ನಿ. ದಾಖಲೆ ಸಹಿತ ಉತ್ತರಿಸಲು ಸಿದ್ಧವೆಂದು ಕಾಂಗ್ರೆಸ್ ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸವಾಲೆಸೆದಿದ್ದಾರೆ.

ಕಾಂಗ್ರೆಸ್​ ಎಲ್ಲಾ ಯೋಜನೆಯಲ್ಲೂ ಭ್ರಷ್ಟಾಚಾರ : ಮಲ್ಲೇಶ್ವರದ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ 60 ವರ್ಷಗಳಿಂದ ನಮ್ಮ ದೇಶ ಆಳಿದ ಕಾಂಗ್ರೆಸ್ ಯಾವ ರೀತಿ ಭ್ರಷ್ಟಾಚಾರ ಮಾಡಿತು. ಯಾವುದೇ ಯೋಜನೆ ರೂಪಿಸಿದರೂ ಅದರಲ್ಲಿ ಭ್ರಷ್ಟಾಚಾರ ಹೇಗೆ ಅಡಗಿತ್ತು ಎನ್ನುವುದನ್ನು ಈ ಹಿಂದೆ ಕಾಂಗ್ರೆಸ್ ಆಡಳಿತ ಇದ್ದಾಗ ನೋಡಿದ್ದೇವೆ. ರಾಜ್ಯದ ಮೂಲೆ ಮೂಲೆಗೆ ಹೋಗಿ ಬಿಜೆಪಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಹೇಳುವ ತವಕದಲ್ಲಿದ್ದಾರೆ ಎಂದರು.

ಲೋಕಾಯುಕ್ತವನ್ನು ತೆಗೆದ ಕಾಂಗ್ರೆಸ್​ : ಆದರೆ ನಮ್ಮ ಮೂಲಕ ರಾಜ್ಯದ ಜನತೆಗೆ ಗೊತ್ತಾಗಬೇಕು. 2013ರ ಚುನಾವಣಾ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರ ತಡೆಯೋದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದಾಗ ಲೋಕಾಯುಕ್ತ ತೆಗೆದು, ಎಸಿಬಿ ರಚನೆ ಮಾಡಿದರು.ತಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ದೂರು ದಾಖಲಾದಾಗ ತನಿಖೆ ಎದುರಿಸಬೇಕಾಗಲಿದೆ ಎಂದು ಏಕಾಏಕಿ ಎಲ್ಲೂ ಚರ್ಚೆ ಮಾಡದೆ ರಾತ್ರೋ ರಾತ್ರಿ ಎಸಿಬಿ ಜಾರಿಗೆ ತಂದರು. ಲೋಕಾಯುಕ್ತ ತನ್ನದೇ ಆದ ಗೌರವ ಸಂಪಾದನೆ ಮಾಡಿದೆ. ಅದು ಉಳಿಯಬೇಕು. ಬಿಜೆಪಿ ಪ್ರಣಾಳಿಕೆಯಲ್ಲಿ ಲೋಕಾಯುಕ್ತ ಮರು ಸ್ಥಾಪನೆ ಮಾಡುವುದಾಗಿ ಹೇಳಿದ್ದೆವು‌. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಅಂತಲೇ ಲೋಕಾಯುಕ್ತ ತೆರೆದಿದ್ದು. ಇಲ್ಲದಿದ್ರೆ ಎಸಿಬಿಯನ್ನೆ ಮುಂದುವರೆಸುತ್ತಿದ್ದೆವು ಎಂದರು.

ಬೆಂಗಳೂರು ನಿವಾಸಿಗಳಿಗೆ ಮೋಸ ಮಾಡಿದ್ದಾರೆ : ಇದು ನಾನು ಅಥವಾ ಅಶ್ವಥ್ ನಾರಾಯಣ್ ಮಾಡುತ್ತಿರುವ ಆರೋಪ ಅಲ್ಲ. 2013-2018 ರವರೆಗೆ 35 ಸಾವಿರ ಕೋಟಿ ಫೈನಾನ್ಸಿಯಲ್ ಇರೆಗ್ಯುಲಾರಿಟಿ ಇದೆ ಎಂದು ಹೇಳಿದೆ.10 ಸಾವಿರ ಬೆಂಗಳೂರು ನಿವಾಸಿಗಳಿಗೆ ಅನ್ಯಾಯ ಮಾಡಿದ್ದಾರೆ. 900 ಎಕರೆಗೂ ಹೆಚ್ಚು ಜಾಗವನ್ನು ಡಿ ನೋಟಿಫಿಕೇಷನ್ ಮಾಡಿದ್ದಾರೆ.ಇದಕ್ಕಾಗಿ ಲೋಕಾಯುಕ್ತ ಮುಚ್ಚಿ, ಎಸಿಬಿ ತೆರೆದರು.

ಇಂದಿರಾ ಕ್ಯಾಂಟೀನ್​ನಲ್ಲೂ ಭ್ರಷ್ಟಾಚಾರ : ಇಂದಿರಾ ಕ್ಯಾಂಟೀನ್ ಆರಂಭಿಸಿದಿರಿ. ಬಡವರಿಗೆ ಕೊಡುವ ಊಟದಲ್ಲೂ ಕಮೀಷನ್ ಹೊಡೆದಿರಿ. ಅಲ್ಪಸಂಖ್ಯಾತರಿಗೆ, ದಲಿತರಿಗೆ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಿಲ್ಲ. ಲ್ಯಾಪ್ ಟಾಪ್​ ವಿತರಣೆಯಲ್ಲಿ ಭ್ರಷ್ಟಾಚಾರ ಆಗಿಲ್ವಾ.? ವಸ್ತು ನಿಷ್ಠವಾಗಿ ಕೆಲಸ ಮಾಡಬೇಕು. 2017ರಲ್ಲಿ ರೇಡ್ ಆದಾಗ ಡೈರಿ ಸಿಕ್ಕಿತ್ತು. 1000 ಕೋಟಿ ಹೈಕಮಾಂಡ್‌ಗೆ ಹೇಗೆ ಹೋಯ್ತು? ಸ್ಪೆಷಲ್ ಅಲೋಯನ್ಸ್ ಅಂತ ಬಜೆಟ್ ಮೂಲಕವೇ ಹಣ ಹೋಯ್ತಾ .? ಎಂದು ಪ್ರಶ್ನಿಸಿದರು.

ಕಸ ವಿಲೇವಾರಿಯಲ್ಲೂ ಹಗರಣ : ಇನ್ನು ಗಾರ್ಬೇಜ್ ಬಗ್ಗೆ ಮಾತನಾಡುತ್ತಾರೆ. ಇಲ್ಲಿ 1,066 ಕೋಟಿ ಹಗರಣ ಆಗಿದೆ. ಕಸ ವಿಲೇವಾರಿ ಮಾಡುವುದರಲ್ಲೂ ಹಗರಣ ಮಾಡಿದ್ದಾರೆ. 2016-17ರಲ್ಲಿ ಕಸ ವಿಲೇವಾರಿಗೆ 1,066 ಕೋಟಿ ಖರ್ಚಾಗಿದೆ. 2015-16ರಲ್ಲಿ 385 ಕೋಟಿ ಖರ್ಚಾಗಿದೆ‌. ಕೇವಲ ಒಂದೇ ವರ್ಷದಲ್ಲಿ 681 ಕೋಟಿ ಹೆಚ್ಚಾಗಿದೆ. ಇದು ಯಾವ ಸ್ಕೀಮ್, ಎಷ್ಟು ಪರ್ಸೆಂಟ್ ಆಗಿದೆ ಹೇಳಿ.?ಬೆಂಗಳೂರಿಂದ ಹೊರ ಹೋಗುವ ಕಸ ಮಾಯ ಆಗಿಹೋಯ್ತಾ.? ಎಂದು ಕಾಂಗ್ರೆಸ್ ಕಾಲೆಳೆದರು.

ಕಾಂಗ್ರೆಸ್​ ಮೀಸಲಾತಿ ಹೆಚ್ಚಳ ಮಾಡಲಿಲ್ಲ : ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಹೇಳಿ ಮತ ಪಡೆದಿರಿ. ಆದರೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ. ಆದರೆ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಿಸಿದೆ. ಈಗ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಎಂದರು.

ತಾಂಡಾ ಜನರಿಗೆ ಹಕ್ಕು ಪತ್ರ ವಿತರಣೆ :52 ಸಾವಿರ ಜನರಿಗೆ ಒಂದೇ ಬಾರಿ ಹಕ್ಕು ಪತ್ರ ನೀಡಿದ್ದೇವೆ. ಕಂದಾಯ ಇಲಾಖೆಯಲ್ಲಿ ದಾಖಲೆಯಾಗಿದೆ. ಬ್ರಿಟಿಷರ ಕಾಲದಿಂದಲೂ ತಾಂಡಾ ಜನ ಹೋರಾಟ ಮಾಡುತ್ತಿದ್ದರು.ಅರಣ್ಯದಲ್ಲಿ ಇದ್ದರೂ ಬ್ರಿಟಿಷರ ಜೊತೆ ರಾಜಿಯಾಗಲಿಲ್ಲ. ಒಂದು ಮನೆಯನ್ನು ಕೂಡ ಅವರಿಗೆ ನೀವು ನೀಡಲಿಲ್ಲ. ಅವರು ಸ್ವಾಭಿಮಾನಿಯಾಗಿರಲು ನಾವು ಹಕ್ಕು ಪತ್ರ ನೀಡಿದ್ದೇವೆ. ಇದರಿಂದ ಅವರಿಗೆ ಸಾಲ ಕೂಡ ಸಿಗಲಿದೆ ಎಂದರು.

ಕಾಂಗ್ರೆಸ್​ ಕೇವಲ 80 ರಿಂದ 90ಕ್ಕೆ ಸೀಟಿಗೆ ಸೀಮಿತ : ಕಾಂಗ್ರೆಸ್ ಬಗ್ಗೆ ಭವಿಷ್ಯ ನುಡಿದ ಸುಧಾಕರ್, ಕರ್ನಾಟಕದಲ್ಲಿ ಕಾಂಗ್ರೆಸ್​​ 80-90 ಸ್ಥಾನಗಳಿಗೆ ಸೀಮಿತವಾಗಲಿದೆ. ಸೋತ ಮೇಲೆ ಅನೇಕರು ಪಕ್ಷ ಬಿಡುತ್ತಾರೆ. ಚುನಾವಣೆ ಬಳಿಕ ಯಾರ್ಯಾರು ಪಕ್ಷ ಬಿಡುತ್ತಾರೆ. ಯಾರ್ಯಾರು ಇಲ್ಲಿಗೆ ಬರ್ತಾರೆ ಎಂದು ಗೊತ್ತಿದೆ. ಇಷ್ಟು ವರ್ಷ ಹಣ ಬಲ, ತೋಳ್ಬಲ ಮೂಲಕ ಅಧಿಕಾರಕ್ಕೆ ಬಂದಿರಿ. ರಮೇಶ್ ಕುಮಾರ್ ಇದನ್ನೇ ಹೇಳಿದ್ದಾರೆ. ಅದು ಅನುಭವದ ಮಾತು, ಮನದಾಳದ ಮಾತು ಎಂದರು. ನಮ್ಮ ನಾಯಕ ಪ್ರಧಾನಿ ನರೇಂದ್ರ ಮೋದಿ ಕೆಲಸ ನೋಡಿದ್ದೀರಿ. ಅವರ ಕಾಲದ ಕೆಲಸವನ್ನೂ ನೋಡಿದ್ದೀರಿ. ಕೋವಿಡ್‌ನಂತಹ ಕಾಲದಲ್ಲಿ ಪರಿಸ್ಥಿತಿಯನ್ನು ಹೇಗೆ ಎದುರಿಸಿದ್ದೇವೆ ಎಂದು ನಿಮಗೆ ಗೊತ್ತಿದೆ. ಸಮರ್ಥವಾಗಿ ಕೆಲಸ ನಿರ್ವಹಣೆ ಮಾಡಿದ್ದೇವೆ ಎಂದು ಬಿಜೆಪಿ ಸರ್ಕಾರವನ್ನು ಸಮರ್ಥಿಸಿಕೊಂಡರು.

ಪ್ರಜಾ ಧ್ವನಿ ಅಲ್ಲ..ಪ್ರಜಾ ದ್ರೋಹ ಅಭಿಯಾನ : ಕಾಂಗ್ರೆಸ್ ಬಸ್ ಯಾತ್ರೆ ಪ್ರಜಾ ಧ್ವನಿ ಅಲ್ಲ, ಪ್ರಜಾ ದ್ರೋಹ ಅಭಿಯಾನ. ಕೆಲವೆಡೆ ಕಾಂಗ್ರೆಸ್ ವೈಟ್ ವಾಶ್ ಆಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತೆ ಮೇಲೇಳಲು ಸಾಧ್ಯವಿಲ್ಲ. ಪ್ರಿಯಾಂಕ ಗಾಂಧಿ ಹೋದಲ್ಲೆಲ್ಲಾ ಸೋಲಾಗಿದೆ. ಉತ್ತರ ಪ್ರದೇಶಕ್ಕೆ ಹೋದ ಬಳಿಕ ಇರುವ ಸೀಟುಗಳೂ ಕಡಿಮೆ ಆಗಿದೆ ಎಂದು ಹೇಳಿದರು. ಬಿಜೆಪಿ ಎಷ್ಟು ಸ್ಥಾನ ಗೆಲ್ಲಲಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಧಾಕರ್, ನಾವು 125ಕ್ಕೂ ಹೆಚ್ಚು ಸೀಟ್​ ಗೆಲ್ಲುತ್ತೇವೆ. ನಮ್ಮದು 150 ಟಾರ್ಗೆಟ್ ಇದೆ ಎಂದು ಹೇಳಿದರು.

ಇದನ್ನೂ ಓದಿ : ಕೆಪಿಸಿಸಿಗೆ ಕೊತ್ವಾಲ್ ಕಾಂಗ್ರೆಸ್ ಎಂದು ಮರುನಾಮಕರಣ ಮಾಡಿ: ಬಿಜೆಪಿ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.