ETV Bharat / state

ಜಲಜೀವನ್ ಮಿಷನ್ : ಮನೆಮನೆಗೂ ಗಂಗೆ ಯೋಜನೆಯ ಅನುಷ್ಠಾನ ಕಾರ್ಯ ಬಿರುಸಿನಲ್ಲಿ ನಡೆಯುತ್ತಿದೆ- ಸಚಿವ ಕೆ.ಎಸ್. ಈಶ್ವರಪ್ಪ

author img

By

Published : Feb 11, 2022, 1:39 PM IST

32.41 ಲಕ್ಷ ಕುಟುಂಬಗಳ 60.87 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ. 30.05 ಲಕ್ಷ ಮಹಿಳೆಯರು 5.80 ಲಕ್ಷ ಹಿರಿಯ ನಾಗರಿಕರಿಗೆ ಮತ್ತು 22,400 ಲಕ್ಷ ಕ್ಕೂ ಹೆಚ್ಚು ವಿಶೇಷ ಚೇತನದವರಿಗೆ ಉದ್ಯೋಗ ನೀಡಲಾಗಿದೆ. ಒಟ್ಟು 4,064 ಕೋಟಿ ಕೂಲಿ ಹಣದ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ..

minister K S Ishwarappa press meet
ವಿಧಾನ ಸೌಧದಲ್ಲಿ ಸಚಿವ ಕೆ.ಎಸ್​. ಈಶ್ವರಪ್ಪ ಸುದ್ದಿಗೋಷ್ಠಿ

ಬೆಂಗಳೂರು : ಜಲಜೀವನ್ ಮಿಷನ್-ಮನೆಮನೆಗೂ ಗಂಗೆ ಯೋಜನೆ ಅನುಷ್ಠಾನದಲ್ಲಿ ದಾಪುಗಾಲು ಇಟ್ಟಿದೆ. ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಂದೇ ಬಾರಿಗೆ 16 ಯೋಜನೆಗಳಿಗೆ ಅನುಮೋದನೆ ಪಡೆದು ದಾಖಲೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಮನೆ ಮನೆಗೂ ಗಂಗೆ (ಜಲಜೀವನ ಮಿಷನ್) ಕರ್ನಾಟಕ ರಾಜ್ಯದಲ್ಲಿ ಅತಿ ವೇಗವಾಗಿ ಅನುಷ್ಠಾನಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.

ಒಂದೇ ಬಾರಿಗೆ ಹದಿನಾರು ಯೋಜನೆಗಳಿಗೆ ಅನುಮೋದನೆ ಪಡೆದಿದೆ. ಇದರಿಂದಾಗಿ 6,357 ಹಳ್ಳಿಗಳ 6,17,607 ಮನೆಗಳಿಗೆ ಕೊಳಾಯಿ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತದೆ. ಈವರೆಗೆ ಒಟ್ಟು 45.44 ಲಕ್ಷ ಮನೆಗಳಿಗೆ ನೀರು ಸಂಪರ್ಕ ನೀಡಲಾಗಿದೆ. ಕೇವಲ 2020-21ರಲ್ಲಿ 3.43ಲಕ್ಷ ಮನೆಗಳಿಗೆ ಕೊಳಾಯಿ ನೀರು ಸಂಪರ್ಕ ದೊರೆತಿದೆ ಎಂದು ಮಾಹಿತಿ ನೀಡಿದರು.

2021-22ರಲ್ಲಿ 25.17 ಲಕ್ಷ ಮನೆಗಳಿಗೆ ಕೊಳಾಯಿ ನೀರು ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ 17.60 ಲಕ್ಷ ಕುಟುಂಬಗಳಿಗೆ ಮನೆಯಲ್ಲಿ ಕೋಳಾಯಿ ಸಂಪರ್ಕ ನೀಡಲಾಗಿದೆ. 2022-23ರಲ್ಲಿ 27.14 ಲಕ್ಷ ಮತ್ತು 23-24ರಲ್ಲಿ 17.45 ಲಕ್ಷ ಮನೆಗಳಿಗೆ ಕೊಳಾಯಿ ನೀರು ಸಂಪರ್ಕ ಕಲ್ಪಿಸಿ, ಇಡೀ ರಾಜ್ಯದ 97.91 ಲಕ್ಷ ಗ್ರಾಮೀಣ ಮನೆಗಳಿಗೆ ನೀರು ಸಂಪರ್ಕ ಒದಗಿಸಲಾಗುವುದು ಎಂದರು.

ನರೇಗಾದಲ್ಲೂ ಸಾಧನೆ : ಮಹಾತ್ಮ ಗಾಂಧಿ ನರೇಗಾ ಯೋಜನೆಯ 2021-22ನೇ ಸಾಲಿನಲ್ಲೂ ಸಾಧನೆ ಮಾಡಿದ್ದೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುಮೋದಿಸಿದ್ದ 13 ಕೋಟಿ ಮಾನವ ದಿನಗಳನ್ನು ಡಿಸಂಬರ್ ತಿಂಗಳಿನಲ್ಲಿಯೇ ಪೂರ್ಣಗೊಳಿಸಿದ ತರುವಾಯ ಮತ್ತೆ 1.40 ಕೋಟಿ ಮಾನವ ದಿನಗಳ ಹೆಚ್ಚುವರಿ ಉದ್ಯೋಗ ನೀಡಲು ರಾಜ್ಯಕ್ಕೆ ಹೆಚ್ಚುವರಿಯಾಗಿ ರೂ. 715 ಕೋಟಿ ಅನುದಾನ ಲಭ್ಯವಾಯಿತು.

32.41 ಲಕ್ಷ ಕುಟುಂಬಗಳ 60.87 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ. 30.05 ಲಕ್ಷ ಮಹಿಳೆಯರು 5.80 ಲಕ್ಷ ಹಿರಿಯ ನಾಗರಿಕರಿಗೆ ಮತ್ತು 22,400 ಲಕ್ಷ ಕ್ಕೂ ಹೆಚ್ಚು ವಿಶೇಷ ಚೇತನದವರಿಗೆ ಉದ್ಯೋಗ ನೀಡಲಾಗಿದೆ. ಒಟ್ಟು 4,064 ಕೋಟಿ ಕೂಲಿ ಹಣದ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದರು.

ಈ ವರ್ಷ ದಾಖಲೆಯ 13.61 ಲಕ್ಷ ಕಾಮಗಾರಿಗಳನ್ನು ತೆಗೆದುಕೊಂಡು ಈಗಾಗಲೇ 4.31 ಲಕ್ಷ ಕಾಮಗಾರಿಗಳನ್ನು ಪೂರ್ಣ ಮಾಡಲಾಗಿದೆ ಎಂದು ವಿವರಿಸಿದರು. ಕೊರೊನಾ ಸಾಂಕ್ರಾಮಿಕದಿಂದ ಸಂಕಷ್ಟಕ್ಕೊಳಗಾದ ವಲಸೆ ಕಾರ್ಮಿಕರಿಗೆ ಕೆಲಸ ಒದಗಿಸುವುದರಲ್ಲಿ ನಾವು ಸಫಲರಾಗಿದ್ದೇವೆ.

ಜಲಶಕ್ತಿ ಅಭಿಯಾನದಲ್ಲಿ ರಾಜ್ಯದಲ್ಲಿ 8.92 ಲಕ್ಷ ಕಾಮಗಾರಿಗಳನ್ನು ಕೈಗೆತ್ತಿಕೊಂಡು, 4.87 ಲಕ್ಷ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದರಲ್ಲಿ ನಾವು ದೇಶದಲ್ಲೇ ಮೊದಲನೇ ಸ್ಥಾನದಲ್ಲಿ ಇದ್ದೇವೆ ಎಂದು ಕೆ ಎಸ್ ಈಶ್ವರಪ್ಪ ತಿಳಿಸಿದರು.

ಜಲಶಕ್ತಿ ಯೋಜನೆ : ನರೇಗಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದಿಂದ ಕಳೆದ 6 ವರ್ಷದಲ್ಲಿ 3,275 ಅಂಗನವಾಡಿ ಕಟ್ಟಡಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲೀಗ 2,335 ಕಟ್ಟಡಗಳನ್ನ ಪೂರ್ಣಗೊಳಿಸಲಾಗಿದೆ. ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚು. ಕೊಳವೆ ಬಾವಿಯಲ್ಲಿ ನೀರು ಕಡಿಮೆ.

ಅದಕ್ಕಾಗಿ ಕೆರೆ, ಕಲ್ಯಾಣಿಗಳನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಅಂತರ್ಜಲ ಅಭಿವೃದ್ಧಿಗೆ ಗಮನ ಹರಿಸಿದ್ದೇವೆ. ಅಂತರ್ಜಲ ಹೆಚ್ಚಾದರೆ ಕೊಳವೆ ಬಾವಿಗೆ ನೀರು ಬರಲಿದೆ. 600 ಕಲ್ಯಾಣಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ನೀರನ್ನು ಉಳಿಸುವ ಕೆಲಸ ಎಲ್ಲ ಕಡೆ ಆಗುತ್ತಿದೆ. ಜಲಶಕ್ತಿ ಯೋಜನೆಯಲ್ಲಿ ರಾಜ್ಯ ಮುಂದಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

ಓದಿ: ನೂರನೇ ವರ್ಷದ ಗುರಿ ಇಟ್ಟುಕೊಂಡು ಬಜೆಟ್ ಮಂಡನೆ: ನಿರ್ಮಲಾ ಸೀತಾರಾಮನ್ ಸಮರ್ಥನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.