ETV Bharat / state

ಪತ್ನಿಯ ಶೀಲ ಶಂಕಿಸಿ ಆತ್ಮಹತ್ಯೆ ಶರಣಾದ ಪತಿ

author img

By ETV Bharat Karnataka Team

Published : Dec 18, 2023, 8:19 PM IST

ಬೆಂಗಳೂರು
ಬೆಂಗಳೂರು

ಪತ್ನಿಯ ಶೀಲ ಶಂಕಿಸಿ ವ್ಯಕ್ತಿಯೊಬ್ಬ ಡೆತ್​ನೋಟ್​ ಬರೆದಿಟ್ಟು, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು : ಹೆಂಡತಿ ಅಕ್ರಮ ಸಂಬಂಧ ಹೊಂದಿರುವುದಾಗಿ ಶಂಕಿಸಿ ಡೆತ್​ನೋಟ್ ಬರೆದು ವ್ಯಕ್ತಿಯೊಬ್ಬ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ‌.

ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಮಧ್ಯಾಹ್ನ ರಮೇಶ್ ಎಂಬುವರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ತುಮಕೂರಿನ ಕೊರಟಗೆರೆ ಮೂಲದ ರಮೇಶ್, ಗಾರ್ಮೆಂಟ್ಸ್​ನಲ್ಲಿ‌ ಕೆಲಸ ಮಾಡುತ್ತಿದ್ದರು. 2004ರಲ್ಲಿ ತನ್ನ ಜೊತೆ ಕೆಲಸ ಮಾಡುತ್ತಿದ್ದವಳನ್ನೇ ವಿವಾಹವಾಗಿದ್ದರು. ದಂಪತಿಗೆ ಹೆಣ್ಣು ಮಗಳಿದ್ದು, ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಇವರು ಮಾದಕನಾಯಕಹಳ್ಳಿಯ ಲಕ್ಷ್ಮೀಪುರದಲ್ಲಿ ವಾಸವಾಗಿದ್ದರು. ಅನ್ಯೋನ್ಯವಾಗಿದ್ದ ಸಂಸಾರದಲ್ಲಿ ಕಳೆದ ವರ್ಷ‌ ಪತ್ನಿಯೊಂದಿಗೆ ವೈಮನಸ್ಸು ಮೂಡಿತ್ತು. ತನ್ನ‌ ಪತ್ನಿ ಪರ ಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ರಮೇಶ್ ಅನುಮಾನ ವ್ಯಕ್ತಪಡಿಸಿದ್ದರು.

ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಇದರಿಂದ‌ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.‌ ಮೃತನ ಸಹೋದರ ಬಸವರಾಜ್ ಎಂಬುವರು ನೀಡಿದ ದೂರಿನ ಮೇರೆಗೆ ಪತ್ನಿ, ಆಕೆಯ ಗೆಳೆಯ ಸೇರಿ ಮೂವರ ವಿರುದ್ಧ ಬೆಂಗಳೂರು ಕಂಟ್ಮೋನೆಂಟ್ ರೈಲ್ವೆ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ: ಕೆಲಸಕ್ಕೆ ಹೋಗೆಂದ ಪತ್ನಿ ಕೊಂದು, ಪತಿ ಆತ್ಮಹತ್ಯೆ

ಕೆಲಸಕ್ಕೆ ಹೋಗೆಂದ ಪತ್ನಿ ಕೊಂದು, ಪತಿ ಆತ್ಮಹತ್ಯೆ: ಪ್ರತ್ಯೇಕ ಪ್ರಕರಣವೊಂದರಲ್ಲಿ ಕೆಲಸಕ್ಕೆ‌ ಹೋಗೆಂದ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿದ ಪತಿ ಬಳಿಕ ತಾನೂ ಆತ್ಮಹತ್ಯೆ‌ ಮಾಡಿಕೊಂಡ ಘಟನೆ ಹಳೆ ಹುಬ್ಬಳ್ಳಿಯ ಕಟಕರ ಓಣಿಯಲ್ಲಿ‌ (ಡಿಸೆಂಬರ್- 9-23) ನಡೆದಿತ್ತು. ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿಯ ಹೆಸರು ಮಲೀಕ್ ಬೇಪಾರಿ. ಪತ್ನಿ ಶಾಹಿಸ್ತಾಬಾನುಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ, ನಂತರ ಅದೇ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಲೀಕ್​ ಬೇರೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಮನೆ ನಡೆಸಲು ದುಡಿಮೆ ಮಾಡು ಎಂದು ಒತ್ತಾಯಿಸಿದ್ದೇ ಪತ್ನಿಯ ಕೊಲೆಗೆ ಕಾರಣವಂತೆ‌. ಏನಾದರು ದುಡಿದು ತಾ ಎಂದು ಪತ್ನಿ ಒತ್ತಾಯಿಸುತ್ತಿದ್ದರಂತೆ. ಇದೇ ಕಾರಣಕ್ಕಾಗಿ ಗಂಡ - ಹೆಂಡತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ಅಂದು ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.