ETV Bharat / state

Krishna Byre Gowda: ಭೂಗಳ್ಳರಿಂದ ಶೀಘ್ರವೇ ಎಲ್ಲ ಸರ್ಕಾರಿ ಜಮೀನು ವಶಕ್ಕೆ: ಸಚಿವ ಕೃಷ್ಣ ಬೈರೇಗೌಡ

author img

By

Published : Jul 25, 2023, 7:06 AM IST

ಸಚಿವ ಕೃಷ್ಣ ಬೈರೇಗೌಡ ಸಭೆ
ಸಚಿವ ಕೃಷ್ಣ ಬೈರೇಗೌಡ ಸಭೆ

Krishna Byre Gowda: ಭೂಗಳ್ಳರು, ಖಾಸಗಿಯವರಿಂದ ಶೀಘ್ರದಲ್ಲೇ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆಯಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬೆಂಗಳೂರು: ಅತೀ ಶೀಘ್ರದಲ್ಲಿ ಖಾಸಗಿಯವರು, ಭೂಗಳ್ಳರು ಕಬಳಿಸಿರುವ ಎಲ್ಲ ಸರ್ಕಾರಿ ಭೂಮಿಗಳನ್ನು ಕಾನೂನಾತ್ಮಕವಾಗಿ ವಶಕ್ಕೆ ಪಡೆಯುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ತಪ್ಪುಗಳಿಂದ ಸರ್ಕಾರಿ ಆಸ್ತಿಗಳು ಖಾಸಗಿಯವರ ಪಾಲಾಗಿದ್ದರೆ, ಅವುಗಳನ್ನು ಮತ್ತೆ ಸರ್ಕಾರಕ್ಕೆ ವಶಕ್ಕೆ ಪಡೆಯಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಭೂಮಿಯನ್ನು ಭೂಗಳ್ಳರು ಅಕ್ರಮವಾಗಿ ತಮ್ಮ ಹೆಸರಿಗೆ ದಾಖಲು ಮಾಡಿಕೊಂಡಿದ್ದಾರೆ. ಹೀಗೆ ಕಬಳಿಸಲಾದ ಭೂಮಿಯನ್ನು ಮತ್ತೆ ಸರ್ಕಾರದ ವಶಕ್ಕೆ ಪಡೆದುಕೊಳ್ಳಲು ನಾವು ಬದ್ಧ. ನಾವು ನೀಡಿದ ಆಶ್ವಾಸನೆಯನ್ನು ಈಡೇರಿಸುವ ಸಮಯ ಈಗ ಬಂದಿದೆ ಎಂದಿದ್ದಾರೆ.

ದಾಖಲೆಗಳಲ್ಲಿ ‘ಸರ್ಕಾರಿ’ ಎಂದು ನಮೂದಾಗಿರುವ ಅನೇಕ ಜಮೀನುಗಳು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭೂಗಳ್ಳರ ಪಾಲಾಗುತ್ತಿರುವುದನ್ನು ತಪ್ಪಿಸಿ ಅಂತಹ ಆಸ್ತಿಗಳನ್ನು ಮತ್ತೆ ಸರ್ಕಾರದ ವಶಕ್ಕೆ ಪಡೆಯಲು ಗಂಭೀರ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿ ಈ ನಿಟ್ಟಿನಲ್ಲಿ ಸೂಚನೆ ನೀಡಲಾಗಿದೆ. ಯಲಹಂಕ ತಾಲೂಕು ಜಾಲ ಹೋಬಳಿಯಲ್ಲಿ ಸರ್ಕಾರದ ವಶದಲ್ಲಿದ್ದ, ‘ಸರ್ಕಾರಿ’ ಎಂದು ದಾಖಲೆಯಲ್ಲಿದ್ದ ಅತ್ಯಂತ ಬೆಲೆ ಬಾಳುವ ಜಮೀನುಗಳನ್ನು ಕಳೆದ ಕೆಲವು ವರ್ಷಗಳಿಂದ ಅಕ್ರಮವಾಗಿ ನೈಜವಲ್ಲದ ದಾಖಲೆಗಳ ಆಧಾರದ ಮೇಲೆ ಖಾಸಗಿಯವರ ಹೆಸರಿಗೆ ದಾಖಲೆಗಳನ್ನು ಮಾಡಿಕೊಟ್ಟಿರುವುದು ಗಮನಕ್ಕೆ ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.

ಎಲ್ಲೆಲ್ಲಿ ಸರ್ಕಾರಿ ಜಮೀನು ಒತ್ತುವರಿ?: ನವರತ್ನಅಗ್ರಹಾರ ಸರ್ವೆ ನಂ.03ರಲ್ಲಿ 5-9 ಎಕರೆ ಮತ್ತು ಸರ್ವೆ ನಂ.13ರಲ್ಲಿ 5 ಎಕರೆ (ಸುಮಾರು 25 ಕೋಟಿ ರೂ ಮೌಲ್ಯ) ಸರ್ಕಾರದ ವಶದಲ್ಲಿದ ಜಮೀನು ಇಂದು ಖಾಸಗಿಯವರ ಪಾಲಾಗಿದೆ. ತಪ್ಪು ವರದಿಗಳನ್ನು ನೀಡಿ ಖಾಸಗಿಯವರಿಗೆ ಅನುಕೂಲ ಮಾಡಿಕೊಡಲಾಗಿದೆ ಎನ್ನುವ ಆರೋಪವಿದೆ.

ಹುಣಸಮಾರನಹಳ್ಳಿ ಸರ್ವೆ ನಂ.179 ರಲ್ಲಿ 13 ಎಕರೆ ಸುಮಾರು ರೂ. 120.00 ಕೋಟಿ ಬೆಲೆ ಬಾಳುವ ಜಮೀನು ಹಿಂದೆ ಸತತವಾಗಿ ಸರ್ಕಾರಿ ಎಂದು ಆದೇಶವಾಗಿ, ಸರ್ಕಾರದ ವಶದಲ್ಲಿದ್ದರೂ ಖಾಸಗಿಯವರ ಪಾಲಾಗಿದ್ದು ಹೇಗೆ? ಎಂಬುದನ್ನು ಪರಿಶೀಲಿಸಬೇಕಿದೆ.

ಕಾಡಗಾನಹಳ್ಳಿ ಸರ್ವೆ ನಂ.23ರಲ್ಲಿ 1 ಎಕರೆ 6 ಕೋಟಿ ರೂ ಬೆಲೆ ಬಾಳುವ ಸರ್ಕಾರದ ಜಮೀನು ಖಾಸಗಿಯವರ ಪಾಲಾಗಿದೆ. ಕುದುರೆಗೆರೆ ಸರ್ವೆ ನಂ. 55ರಲ್ಲಿ 1.30 ಎಕರೆ ಮತ್ತು ಸರ್ವೆ ನಂ.59ರಲ್ಲಿ 7.05 ಎಕರೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಮಂಜೂರಾಗಿದ್ದ ಸುಮಾರು 25 ಕೋಟಿ ರೂ ಬೆಲೆ ಬಾಳುವ ಸರ್ಕಾರದ ಜಮೀನು ಕೂಡ ಖಾಸಗಿಯವರಿಗೆ ನೀಡಲಾಗಿದೆ.

ಕಟ್ಟಿಗೇನಹಳ್ಳಿ ಸರ್ವೆ ನಂ. 28ರಲ್ಲಿ 2 ಎಕರೆ ಸುಮಾರು 20 ಕೋಟಿ ರೂ ಬೆಲೆ ಬಾಳುವ ಸರ್ಕಾರದ ಜಮೀನು ಭೂಗಳ್ಳರಿಗೆ ಸೇರಿದೆ. ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಮಂಜೂರಾಗಿರುವ 4 ಎಕರೆ ಜಮೀನು ಸುಮಾರು 40 ಕೋಟಿ ರೂ ಬೆಲೆ ಬಾಳುವ ಸರ್ಕಾರದ ಜಮೀನನ್ನು ಕಬಳಿಸಲು ಖಾಸಗಿಯವರ ಸಂಚು ನಡೆಯುತ್ತಿರುವ ಮಾಹಿತಿ ಇದೆ.

ತಿರುಮೇನಹಳ್ಳಿ ಸರ್ವೆ ನಂ.42ರಲ್ಲಿ 2-12 ಎಕರೆ ಸುಮಾರು 22 ಕೋಟಿ ರೂ ಬೆಲೆ ಬಾಳುವ ಸರ್ಕಾರದ ಜಮೀನು ಖಾಸಗಿಯವರಿಗೆ ಮಂಜೂರು ಮಾಡಲು ಪ್ರಯತ್ನ ನಡೆದಿರುವ ಆರೋಪ ಕೂಡ ಇದೆ. ಜಾಲ ಹೋಬಳಿ, ಬೈಯಪ್ಪನಹಳ್ಳಿ ಸರ್ವೆ ನಂ.80ರಲ್ಲಿ 23.20 ಎಕರೆ ಜಮೀನನ್ನು ರಾಜೀವ್​ಗಾಂಧಿ ವಸತಿ ನಿಗಮಕ್ಕೆ ಮಂಜೂರಾಗಿದ್ದು, ಅದರಲ್ಲಿ 10 ಎಕರೆ ಜಮೀನಿನಲ್ಲಿ ಕಲ್ಲು ಬಂಡೆ ಇದೆ. 2.20 ಎಕರೆ ಖಾಸಗಿ ವ್ಯಕ್ತಿಗಳಿಗೆ ಪಹಣಿಯಾಗಿದೆ. 3 ಎಕರೆ ಜಮೀನನ್ನು ಅನಧಿಕೃತ ವ್ಯಕ್ತಿ ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಒಂದು ತಿಂಗಳಲ್ಲಿ ವರದಿ ನೀಡಲು ಅಧಿಕಾರಿಗಳಿಗೆ ಆದೇಶ: ಇಂತಹ ಬೆಲೆ ಬಾಳುವ ಸರ್ಕಾರಿ ಜಮೀನುಗಳು ಖಾಸಗಿಯವರ ವಶಕ್ಕೆ ಬಂದಿದ್ದು ಹೇಗೆ? ಅನುಭವದಲ್ಲಿ ಎಂದೂ ಇಲ್ಲದೆ ಇದ್ದರೂ ಖಾಸಗಿಯವರಿಗೆ ನೀಡಲು ಸಾಧ್ಯವೇ? ಇದರಲ್ಲಿ ತಪ್ಪುಗಳು/ಅಕ್ರಮಗಳು ನಡೆದಿವೆಯೇ? ದಾಖಲೆಗಳು ನೈಜವೇ? ಅಸಮರ್ಪಕ ದಾಖಲೆಗಳು, ತಪ್ಪು ಅಥವಾ ಉದ್ದೇಶಪೂರ್ವಕವಾಗಿ ದ್ವಂದ್ವ ವರದಿಗಳನ್ನು ನೀಡಲಾಗಿದೆಯೇ? ಎಂಬ ಕುರಿತು ಮಾಹಿತಿ ಕಲೆಹಾಕುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಚಿವರು ಆದೇಶಿಸಿದ್ದಾರೆ.ಈ ಅಂಶಗಳನ್ನು ಪರಿಶೀಲಿಸಿ, ನಡೆದಿರಬಹುದಾದ ತಪ್ಪು, ಅಕ್ರಮಗಳ ಬಗ್ಗೆ ಮತ್ತು ತಪ್ಪು ಮಾಡಿರುವ, ತಪ್ಪು, ದ್ವಂದ್ವ ವರದಿ ನೀಡಿ ಸಹಕರಿಸಿರುವ ಅಧಿಕಾರಿಗಳು ಯಾರು ಎಂಬ ತನಿಖಾ ವರದಿಯನ್ನು ಒಂದು ತಿಂಗಳೊಳಗೆ ನೀಡಲು ಸೂಚಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಉಪನಗರ ರೈಲು ಯೋಜನೆ: ನೆರೆಯ ಜಿಲ್ಲೆಗಳಿಗೂ ವಿಸ್ತರಣೆ ಮಾಡುವ ಕುರಿತು ರಾಜ್ಯ ಸರ್ಕಾರದ ಚಿಂತನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.