ETV Bharat / state

ಮತ್ತೆ ಗೃಹ ಬಳಕೆ ಸಿಲಿಂಡರ್ ಬೆಲೆ ಏಕಾಏಕಿ ಏರಿಸಿದರೆ ಹೇಗೆ?: ಕೇಂದ್ರ ಸರ್ಕಾರ ಯಾರಿಗಾಗಿ ಕೆಲಸ ಮಾಡುತ್ತಿದೆ? ಜೆಡಿಎಸ್ ಪ್ರಶ್ನೆ

author img

By

Published : Mar 1, 2023, 10:46 PM IST

ದೇಶದ ಆರ್ಥಿಕ‌ ಪರಿಸ್ಥಿತಿ ಎತ್ತ ಸಾಗುತ್ತಿದೆ ಎಂಬುದಕ್ಕೆ ಜಿಡಿಪಿ ಮತ್ತು ಇನ್ನಿತರ ಮಾನದಂಡಗಳು ಉತ್ತರ ಹೇಳುತ್ತವೆ ಎಂದು ಕೇಂದ್ರ ಬಿಜೆಪಿಗೆ ಜೆಡಿಎಸ್​ ಪಕ್ಷ ಟೀಕಿಸಿದೆ.

ಜೆಡಿಎಸ್​ ಹಾಗೂ ಬಿಜೆಪಿ
ಜೆಡಿಎಸ್​ ಹಾಗೂ ಬಿಜೆಪಿ

ಬೆಂಗಳೂರು : ಬೆಲೆ ಏರಿಕೆಯ ಬಿಸಿ ಮತ್ತೆ ದೇಶದ ಜನತೆಯನ್ನು ಸಂಕಷ್ಟಕ್ಕೆ ದೂಡಲಿದೆ ಎಂದು ಜೆಡಿಎಸ್ ಕಿಡಿಕಾರಿದೆ. ಈ ಕುರಿತು ಟ್ವೀಟ್ ಮಾಡಿರುವ ಪಕ್ಷ, ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್​ಗೆ 50 ರೂಪಾಯಿ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್​ಗೆ 350.50 ರೂಪಾಯಿಗೆ ಹೆಚ್ಚಳವಾಗಿರುವ ಆಘಾತಕಾರಿ ಸುದ್ದಿ ವರದಿಯಾಗಿದೆ. ದೇಶದ ಆರ್ಥಿಕತೆ ಕಷ್ಟದಲ್ಲಿರುವಾಗ, ಜನತೆಯ ಜೇಬಿಗೆ ಕತ್ತರಿ ಎಷ್ಟು ಸರಿ? ಎಂದು ಪ್ರಶ್ನಿಸಿದೆ.

ಈಗಾಗಲೇ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸಬ್ಸಿಡಿ ನಿಂತಿರುವುದರಿಂದ ಗ್ರಾಮೀಣ ಭಾಗದ ಬಹಳಷ್ಟು ಮಹಿಳೆಯರು ಗ್ಯಾಸ್ ಸಿಲಿಂಡರ್ ಕೊಳ್ಳದೆ ಮತ್ತೆ ಸೌದೆ ಬಳಕೆಗೆ ಹಿಂದಿರುಗಿದ್ದಾರೆ. ಇದೇ ವೇಳೆ, ಮತ್ತೆ ಗೃಹ ಬಳಕೆಯ ಸಿಲಿಂಡರ್ ಬೆಲೆ ಏಕಾಏಕಿ ಏರಿಸಿದರೆ ಹೇಗೆ? ಕೇಂದ್ರ ಸರ್ಕಾರ ಯಾರಿಗಾಗಿ ಕೆಲಸ ಮಾಡುತ್ತಿದೆ? ಎಂದು ವಾಗ್ದಾಳಿ ನಡೆಸಿದೆ.

ದೇಶದ ಜನರು ಹಣದುಬ್ಬರದಿಂದ ತತ್ತರಿಸುತ್ತಿದ್ದರೆ, ಪ್ರಧಾನಿ ಮೋದಿ ಮತ್ತವರ ಸಂಪುಟ ರಾಜ್ಯ ಚುನಾವಣೆಗಳಿಗಾಗಿ ಸುತ್ತುತ್ತಿದ್ದಾರೆ. ನಮ್ಮ ರಾಜ್ಯದ ಸರ್ಕಾರಕ್ಕಂತೂ ಮಾನ-ಮರ್ಯಾದೆ ಇಲ್ಲ. ತಮ್ಮದೇ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾರಣ ಎಲ್ಲವನ್ನೂ ಸಮರ್ಥಿಸುವ ಲಜ್ಜೆಗೇಡಿತನಕ್ಕೆ ಇಳಿದಿದ್ದಾರೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಇಷ್ಟು ದೊಡ್ಡದಾಗಿ ಏರಿಸಿದರೆ ನಾಳೆ ಹೋಟೆಲ್​, ರೆಸ್ಟೋರೆಂಟ್​ಗಳ ಪರಿಸ್ಥಿತಿ ಏನಾಗಬಹುದು? ಇಲ್ಲೆಲ್ಲ ಕೆಲಸ ಮಾಡುವ ಲಕ್ಷಾಂತರ ಮಂದಿಯ ಉದ್ಯೋಗದ ಗತಿ ಏನು? ಆಹಾರದ ಬೆಲೆ ಆಕಾಶದೆತ್ತರಕ್ಕೆ ಏರಿದರೆ ಜನಸಾಮಾನ್ಯರ ಪಾಡೇನು? ಸುಳ್ಳುಗಳನ್ನೇ ಹೇಳುತ್ತಾ ಜನರ ಬದುಕು ನಿರ್ನಾಮ ಮಾಡಲಾಗುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.

ಬಿಜೆಪಿಗೆ ಕುಟುಕಿದ ಜೆಡಿಎಸ್​: ದೇಶದ ಆರ್ಥಿಕ‌ ಪರಿಸ್ಥಿತಿ ಎತ್ತ ಸಾಗುತ್ತಿದೆ ಎಂಬುದಕ್ಕೆ ಜಿಡಿಪಿ ಮತ್ತು ಇನ್ನಿತರ ಮಾನದಂಡಗಳು ಉತ್ತರ ಹೇಳುತ್ತವೆ. ರಾಷ್ಟ್ರೀಯ ಸಾಂಖ್ಯಿಕ ‌ಕಚೇರಿಯ ಅಂಕಿ - ಅಂಶಗಳ ಪ್ರಕಾರ, ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆ ಶೇಕಡ 4.4ಕ್ಕೆ ಕುಸಿತ ಕಂಡಿದೆ. ಅಚ್ಚೆ ದಿನ್ ಎಂದು ಯಾವ ಬಾಯಲ್ಲಿ ಹೇಳಬೇಕೀಗ? ಎಂದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಪಕ್ಷ ಕುಟುಕಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪಕ್ಷ, ಒಂದು ಕಡೆ ಸುಳ್ಳುಗಳ ಮೇಲೆ ಸೌಧ ಕಟ್ಟಿ, ಜನರನ್ನು ತಪ್ಪುದಾರಿಗೆ ಎಳೆಯುತ್ತಿರುವ ಕೇಂದ್ರ ಸರ್ಕಾರ ದೇಶದ ಆರ್ಥಿಕತೆಯ ಹಳಿ ತಪ್ಪಲು ನೇರ ಕಾರಣ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಮುಂತಾದ ಅಗತ್ಯ ವಸ್ತುಗಳ ಬೆಲೆ ಕಂಡೂ ಕೇಳರಿಯದ ರೀತಿಯಲ್ಲಿ ಏರಿಕೆಯಾಗಿದೆ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.

ಹಣದುಬ್ಬರ ಮಿತಿಗೆ ಬರುವ ಯಾವ ಲಕ್ಷಣವೂ ಸದ್ಯ ಕಾಣುತ್ತಿಲ್ಲ. ಜನರ ಆದಾಯ ಅಧೋಗತಿಗೆ ಇಳಿದಿದೆ. ಆರ್ಥಿಕ ‌ಬೆಳವಣಿಗೆ ಕುಂಟುತ್ತಿದೆ. ತಯಾರಿಕ ವಲಯದ ಉತ್ಪಾದನೆಯಲ್ಲಿ ಋಣಾತ್ಮಕ (ಶೇ -1.1) ಕುಸಿತ ದಾಖಲಾಗಿದೆ. ವಿತ್ತೀಯ ಕೊರತೆ ಹೆಚ್ಚಾಗಿ, ವರಮಾನ ಸಂಗ್ರಹ ಕುಸಿದಿದೆ. ಕೇಂದ್ರ ಸರ್ಕಾರದ ಖಜಾನೆಗೆ ಸಂಗ್ರಹವಾಗುವ ವರಮಾನ‌ ಮತ್ತು ಅದು ಮಾಡುತ್ತಿರುವ ವೆಚ್ಚಗಳ ನಡುವಿನ ಕೊರತೆಯ ಅಂತರವು ಜನವರಿ ಅಂತ್ಯಕ್ಕೆ 11.9 ಲಕ್ಷ ಕೋಟಿ ತಲುಪಿದೆ.

ದೇಶದ ಸಾಲ ಎಗ್ಗಿಲ್ಲದೆ ಹೆಚ್ಚಿದೆ. ಒಟ್ಟಿನಲ್ಲಿ, ದೇಶದ ಆರ್ಥಿಕ ಬೆಳವಣಿಗೆ ಚೇತರಿಕೆಯಾಗುವುದು ದುಸ್ತರವಾಗಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಬರೀ ಚುನಾವಣೆ ಗೆಲ್ಲಲು, ಅಧಿಕಾರ ಹಿಡಿಯಲು ಸುಳ್ಳು, ಅರ್ಧ ಸತ್ಯ ಹೇಳಿ ಈ ವಾಸ್ತವ ಸಂಗತಿಯನ್ನು ಮರೆಮಾಚುತ್ತಿವೆ.‌ ಜನಸಾಮಾನ್ಯರ ಬದುಕಿನ ಜತೆ ಚೆಲ್ಲಾಟವಾಡುವುದು‌ ವಿಕೃತಿಯೇ ಸರಿ. ಜನರು ಈಗಲಾದರೂ ಎಚ್ಚೆತ್ತುಕೊಳ್ಳುವುದು ಅಗತ್ಯ ಎಂದು ಎಚ್ಚರಿಸಿದೆ.

ಇದನ್ನೂ ಓದಿ : ಚಿಕ್ಕಮಗಳೂರು: ಸಿದ್ದರಾಮಯ್ಯ ವಿರುದ್ಧ ಎಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.