ETV Bharat / state

ನಾನು ಎಲ್ಲಿಗೂ ಹೋಗುವುದಿಲ್ಲ, ಬಿಜೆಪಿಯಲ್ಲೇ ಇರುತ್ತೇನೆ : ಸಚಿವ ವಿ ಸೋಮಣ್ಣ ಸ್ಪಷ್ಟನೆ

author img

By

Published : Mar 14, 2023, 3:35 PM IST

ಬಿಜೆಪಿಯಲ್ಲೇ ಮುಂದುವರೆಯುತ್ತೇನೆ. ಇನ್ಮುಂದೆ ನಾನು ಮುಖ್ಯಮಂತ್ರಿಗಳಿಗೆ ಅಗೌರವ ತರುವ ರೀತಿ ನಡೆದುಕೊಳ್ಳಲ್ಲ ಎಂದು ಸಚಿವ ವಿ ಸೋಮಣ್ಣ ಅವರು ತಿಳಿಸಿದ್ದಾರೆ.

ಸಚಿವ ವಿ ಸೋಮಣ್ಣ
ಸಚಿವ ವಿ ಸೋಮಣ್ಣ

ಬೆಂಗಳೂರು : ನಾನು ಎಲ್ಲಿಗೂ ಹೋಗಲ್ಲ. ಬಿಜೆಪಿಯಲ್ಲೇ ಇರುತ್ತೇನೆ. ಟಿಕೆಟ್ ಕೊಟ್ರೆ ಸ್ಪರ್ಧೆ ಮಾಡುತ್ತೇನೆ ಎಂದು ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದರು. ಕಾವೇರಿ ಭವನದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪಕ್ಷ ತೊರೆಯುವ ಬಗ್ಗೆ ಇದ್ದ ಊಹಾಪೋಹದ ಬಗ್ಗೆ ಸ್ಪಷ್ಟನೆ ನೀಡುತ್ತ, ಪ್ರಧಾನಿ ಅವರು ಉತ್ತಮ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ರಾಜ್ಯದಲ್ಲಿನ ನಮ್ಮ ಗೊಂದಲಗಳಿಗೆ ಇತಿಶ್ರೀ ಹಾಡೋಣ. ಬಿಜೆಪಿಯಲ್ಲೇ ಮುಂದುವರೆಯುತ್ತೇನೆ. ಇನ್ಮುಂದೆ ನಾನು ಮುಖ್ಯಮಂತ್ರಿಗಳಿಗೆ ಅಗೌರವ ತರುವ ರೀತಿ ನಡೆದುಕೊಳ್ಳಲ್ಲ. ಪಕ್ಷ ಹೇಳಿದ್ರೆ ಚುನಾವಣೆಗೆ ನಿಲ್ತೀನಿ. ಇಲ್ಲ ಅಂದರೆ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ನನ್ನ ಮಗ ಏನೋ ಆಗಬೇಕು ಅನ್ನೋ ಆಸೆ ನನಗಿಲ್ಲ. ನಮ್ಮಪ್ಪ ತಪ್ಪು ಮಾಡಿದ್ರು ತಪ್ಪೇ. ನನ್ನ ಮಗ ಏನಾದರೂ ಪಕ್ಷದ ವಿರುದ್ಧ ನಡೆದುಕೊಂಡ್ರೆ, ಅವನ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿ. ಪಕ್ಷಕ್ಕೆ ನಾನು ಆಗಲಿ, ನನ್ನ ಪುತ್ರನಿಂದ ಆಗಲಿ ಮುಜುಗರ ತರುವುದಿಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ಟಿಕೆಟ್ ಕೊಟ್ರೆ ಸ್ಪರ್ಧೆ ಮಾಡ್ತೇನೆ, ಇಲ್ಲದಿದ್ರೆ ಸುಮ್ಮನಾಗ್ತೇನೆ. ನಾನು ಈಗಾಗಲೇ ಹಲವು ಬಾರಿ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.

ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಅರುಣ್ ಸೋಮಣ್ಣ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸುತ್ತ, ನನ್ನ ಮಗ ಡಾಕ್ಟರ್. ಅವನಿಗೆ 47 ವರ್ಷ. ಸಣ್ಣ ಮಗು ಅಲ್ಲ. ಕೆಲಸವನ್ನು ಸ್ವೀಕಾರ ಮಾಡಬೇಕು. ರಾಜಕೀಯದಲ್ಲಿ ಯಾರಿಗೆ ಯಾರೂ ಶತ್ರು ಅಲ್ಲ. ಯಾರೂ ಈ ರೀತಿ ಮಾಡಬಾರದು. ವಿಜಯಸಂಕಲ್ಪ ಯಾತ್ರೆ ಶುರುವಾಗಿದೆ. ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಮಂತ್ರಿ ಆಗಿದ್ದೇನೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗೋದು ಅಂತಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ನಮ್ಮ ನಾಯಕರು. ನಾವು ಚುನಾವಣೆ ಎದುರಿಸ್ತೇವೆ ಎಂದು ಸ್ಪಷ್ಟಪಡಿಸಿದರು.

ಕಣ್ಣೀರು ಹಾಕಿದ ವಿ. ಸೋಮಣ್ಣ : ಮಾಧ್ಯಮಗೋಷ್ಟಿ ವೇಳೆ ಸಚಿವ ವಿ. ಸೋಮಣ್ಣ ಕಣ್ಣೀರು ಹಾಕಿದ ಘಟನೆ ನಡೆಯಿತು. ನಾನು ಬೆಂಗಳೂರಿಗೆ ಬಂದಿದ್ದು ಹೊಟ್ಟೆ ಪಾಡಿಗೆ. ನನ್ನ ಜೀವನವನ್ನು ನಾನೇ ರೂಪಿಸಿಕೊಂಡಿದ್ದೇನೆ. ಸಂಜೆ ಕಾಲೇಜಿನಲ್ಲಿ ಓದಿದ್ದೇನೆ. ಕಸ್ತೂರಿ ಮಾತ್ರೆ ಮಾರಿದ್ದೇನೆ. ಆರಡಿ ಎಂಟಡಿ ರೂಮ್ ನಲ್ಲಿ 16 ವರ್ಷ ವಾಸಿಸಿದ್ದೇನೆ ಎಂದು ಭಾವುಕರಾಗಿ ನುಡಿದರು.

ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನಾನು ಸುಮ್ಮನೆ ಇರೋನಲ್ಲ. ಸುಳ್ಳು ಹೇಳಿ ನಾನು ನನ್ನ ಜೀವನ ಮಾಡಲ್ಲ. ನಮ್ಮ ತಾಯಿ ತಂದೆ ನನಗೆ ಸಂಸ್ಕಾರ ಕಲಿಸಿ ಕೊಟ್ಟಿದ್ದಾರೆ. ನಾನು ಯಾರ ಮುಲಾಜಲ್ಲೂ ಬದುಕಿಲ್ಲ. ಅನಾವಶ್ಯಕವಾಗಿ ಇನ್ನೊಬ್ಬರ ತೇಜೋವಧೆ ಮಾಡೋದು ಒಳ್ಳೆಯದಲ್ಲ ಎಂದು ಕಣ್ಣೀರು ಹಾಕಿದರು.

ಕಾಂಗ್ರೆಸ್​ಗೆ ಹೋಗಿ ಎರಡು ಸಾರಿ ಎಂಎಲ್ಎ ಆದೆ. ಆ ನಂತರ ಯಡಿಯೂರಪ್ಪರಿಂದ ಬಿಜೆಪಿ ಸೇರಿದೆ. ಎಲ್ಲಾ ಉಪಚುನಾವಣೆಯಲ್ಲಿ ಜವಾಬ್ದಾರಿ ನೀಡಿದ್ರು. ಗೆಲ್ಲಿಸಿಕೊಂಡು ಬಂದೆ. ನಾನು ಪಕ್ಷಕ್ಕೆ ನಿಷ್ಠೆಯಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ನನಗೆ ಡಬಲ್ ಸ್ಟಾಂಡರ್ಡ್ ಅನ್ನೋದು ಗೊತ್ತಿಲ್ಲ. ನಾನು ಯಾವತ್ತಾದರೂ ಬಿಜೆಪಿ ಬಿಡ್ತೀನಿ ಅಂತಾ ಹೇಳಿದ್ದೇನಾ?. ಯಾರು ನಮ್ಮಿಂದ ಬೆಳೆದಿದ್ದಾರೋ ಅವರೇ ನನಗೆ ತೊಂದರೆ ಕೊಡ್ತಿರೋದು. ಮೊನ್ನೆ ಧರ್ಮೇಂದ್ರ ಪ್ರಧಾನ್ ಕೂಡ ನನ್ನ ಜೊತೆ ಮಾತಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಮಾತಾಡಿದ್ದಾರೆ ಎಂದು ಸೋಮಣ್ಣ ಹೇಳಿದ್ರು.

ನಿಮ್ಮಿಂದ ಬೆಳೆದಿರೋರು ಯಾರು ತೊಂದರೆ ಕೊಡುತ್ತಿದ್ದಾರೆಂಬ ಪ್ರಶ್ನೆಗೆ, ಅದೆಲ್ಲಕ್ಕೂ ಕಾಲವೇ ಉತ್ತರ ಕೊಡುತ್ತದೆ. ನಾನು ಬಿಜೆಪಿ ಬಿಡುವುದಿಲ್ಲ, ಬಿಜೆಪಿಯಲ್ಲೇ ಇರುತ್ತೇನೆ. ಯಾವ ನಾಯಕರು ನನ್ನ ಗೌರವಕ್ಕೆ ಧಕ್ಕೆ ತಂದಿಲ್ಲ. ಬಿಜೆಪಿಯಲ್ಲಿ ಯಾವುದೇ ರೀತಿಯ ಗೊಂದಲಗಳು ಇಲ್ಲ. ಬೊಮ್ಮಾಯಿ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ಇಷ್ಟೆಲ್ಲ ಆದ ಮೇಲೂ ನನ್ನ ಮೇಲೆ ಯಾವೊಬ್ಬ ನಾಯಕರು ಏನು ಹೇಳಿಲ್ಲ. ಸೋಮಣ್ಣ ಒಬ್ಬ ಸೌಮ್ಯ ಸ್ವಭಾವದ ವ್ಯಕ್ತಿ ಬಿಡು ಎಂದು ಸುಮ್ಮನೆ ಆಗಿದ್ದಾರೆ ಎಂದರು.

ಬಿಎಸ್​ವೈ ನಮ್ಮ ಪ್ರಶ್ನಾತೀತ ನಾಯಕ: ಯಡಿಯೂರಪ್ಪ ಅವರು ನಮ್ಮ ಪ್ರಶ್ನಾತೀತ ನಾಯಕರು. ಅವರು ಆರೋಗ್ಯವಾಗಿ ಇರಲಿ. ಬಿ.ಎಲ್ ಸಂತೋಷ್ ನಮ್ಮ ನಾಯಕರು, ಪ್ರಹ್ಲಾದ್ ಜೋಶಿ ನಮ್ಮ ನಾಯಕರು. ನಾನು ಬಿಜೆಪಿಗೆ ಬರಲು ಅನಂತ್ ಕುಮಾರ್ ಕಾರಣ. ಇನ್ನು ಮುಂದಾದ್ರೂ ತೇಜೋವಧೆ ಮಾಡಬೇಡಿ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರು ಚೆನ್ನಾಗಿರಲಿ ಎಂದು ಸಚಿವ ಸೋಮಣ್ಣ ತಿಳಿಸಿದರು.

ಸೋಮಣ್ಣ ಮಠ-ಮಾನ್ಯಗಳಿಗೆ ಕೊಂಡಿ ಆಗಿದ್ದು, ಒಬ್ಬನೇ ನಾನು ಎಲ್ಲಾ ಮಠ ಮಾನ್ಯಗಳಿಗೆ ಕೊಂಡಿ ಆಗಿದ್ದೆ. ನನ್ನ ಸಹಾಯ ಪಡೆದು ಬೆಳೆದವರು ಇಂದು ಏನೇನೋ ಆಗಿದ್ದಾರೆ ಎಂದರು.

ಇದನ್ನೂ ಓದಿ : ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನಾನೇ ಅಂತಿಮ ತೀರ್ಮಾನ ತೆಗೆದುಕೊಳ್ಳೋದು.. ಸಿ ಎಂ ಇಬ್ರಾಹಿಂಗೆ ಹೆಚ್​ಡಿಕೆ ಬ್ರೇಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.