ETV Bharat / state

ಧರ್ಮ, ಕಾನೂನಿನಲ್ಲಿ ಹೆಂಡತಿ - ಮಕ್ಕಳಿಗೆ ಜೀವನಾಂಶ ಪಾವತಿಸುವುದು ಗಂಡನ ಜವಾಬ್ದಾರಿ : ಹೈಕೋರ್ಟ್

author img

By ETV Bharat Karnataka Team

Published : Sep 11, 2023, 10:30 PM IST

Divorce case in High Court: ಧರ್ಮ ಹಾಗೂ ಕಾನೂನಿನಲ್ಲಿ ಹೆಂಡತಿ ಮತ್ತು ಮಕ್ಕಳಿಗೆ ಜೀವನಾಂಶ ಪಾವತಿಸುವುದು ಗಂಡನ ಕರ್ತವ್ಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

husband-is-responsible-to-pay-maintenance-to-wife-and-children-high-court
ಧರ್ಮ, ಕಾನೂನಿನಲ್ಲಿ ಹೆಂಡತಿ, ಮಕ್ಕಳಿಗೆ ಜೀವನಾಂಶ ಪಾವತಿಸುವುದು ಗಂಡನ ಜವಾಬ್ದಾರಿ : ಹೈಕೋರ್ಟ್

ಬೆಂಗಳೂರು : ಧರ್ಮ ಹಾಗೂ ಕಾನೂನಿನಲ್ಲಿ ಹೆಂಡತಿ ಮತ್ತು ಮಕ್ಕಳಿಗೆ ಜೀವನಾಂಶ ಪಾವತಿಸುವುದು ಗಂಡನ ಕರ್ತವ್ಯವಾಗಿರಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪತ್ನಿ ಮಕ್ಕಳಿಗೆ ನಿರ್ವಹಣಾ ವೆಚ್ಚವನ್ನಾಗಿ 15 ಸಾವಿರ ರೂ.ಗಳ ಪಾವತಿ ಮಾಡುವಂತೆ ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.

ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ನಿವಾಸಿ ಶಿವಕುಮಾರ್ (ಹೆಸರು ಬದಲಿಸಲಾಗಿದೆ) ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಪತ್ನಿ ಮಕ್ಕಳಿಗೆ ಜೀವನಾಂಶ ನೀಡುವುದು ಬ್ಯಾಂಕ್ ಮತ್ತು ಸಾಲಗಾರನ ನಡುವಿನ ಒಪ್ಪಂದವಲ್ಲ. ಮಹಿಳೆ ಮತ್ತು ಇಬ್ಬರು ಸುಂದರ ಮಕ್ಕಳ ಜೀವನದ ಪ್ರಶ್ನೆಯಾಗಿದೆ ಎಂದು ಪೀಠ ತಿಳಿಸಿದ್ದು, ಮಾಸಿಕ 15 ಸಾವಿರ ರೂ.ಗಳ ಜೀವನಾಂಶ ಪಾವತಿಸುವಂತೆ ನಿರ್ದೇಶನ ನೀಡಿ ಆದೇಶಿಸಿದೆ.

ಅಲ್ಲದೇ, ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಪತ್ನಿ ತನ್ನ ತವರು ಮನೆಗೆ ತೆರಳಿದ್ದು, ಇಬ್ಬರು ಮಕ್ಕಳನ್ನು ಸಾಕುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಮೂವರು ಜೀವನ ನಡೆಸುವುದಕ್ಕೆ 15 ಸಾವಿರ ರೂ.ಗಳು ಅತ್ಯಲ್ಪವಾಗಿವೆ ಎಂದು ಪೀಠ ತಿಳಿಸಿದೆ. ಅಷ್ಟೇ ಅಲ್ಲದೆ, ಪ್ರಕರಣದಲ್ಲಿ ಪತ್ನಿ ಯಾವುದೇ ಲಾಭದಾಯಕ ಹುದ್ದೆಯಲ್ಲಿ ಇಲ್ಲ. ಈ ಸಂಬಂಧ ಅರ್ಜಿದಾರರು ಯಾವುದೇ ದಾಖಲೆಗಳನ್ನೂ ಸಲ್ಲಿಸಿಲ್ಲ. ಹೀಗಾಗಿ ಪತ್ನಿ ಮತ್ತು ಮಕ್ಕಳನ್ನು ಸಾಕುವುದು ಪತಿಯ ಜವಾಬ್ದಾರಿಯಾಗಿದೆ ಎಂದು ಪೀಠ ಹೇಳಿದೆ.

ಸಾಧನಾ ಲೋಧ್ ವಿರುದ್ಧದ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಪೀಠ, ವಿವಾಹ ವಿಚ್ಛೇದನವಾದ ಬಳಿಕ ಪತ್ನಿ ಮತ್ತು ಮಕ್ಕಳು ನಿರ್ಗತಿಕರಾಗದಂತೆ ನೋಡಿಕೊಳ್ಳುವುದೇ ನಿರ್ವಹಣಾ ವೆಚ್ಚ ನೀಡುವ ಮುಖ್ಯ ಉದ್ದೇಶವಾಗಿದೆ ಎಂದು ತನ್ನ ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ: ಹೊಸಕೋಟೆಯ ಶಿವಕುಮಾರ್ ಮತ್ತು ಶಿವಮೊಗ್ಗದ ಶೈಲಜಾ ಸುಮಾರು 10 ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಗು ಇದ್ದರು. ಈ ನಡುವೆ ಅರ್ಜಿದಾರ ಶಿವಕುಮಾರ್ ವಿಚ್ಛೇದನ ಕೋರಿ 2023 ರ ಜನವರಿ 24 ರಂದು ಶಿವಮೊಗ್ಗದ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಕೌಟುಂಬಿಕ ನ್ಯಾಯಾಯ 15 ಸಾವಿರ ರೂ. ನಿರ್ವಹಣಾ ವೆಚ್ಚ ನೀಡುವಂತೆ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಸಿಆರ್‌ಪಿಸಿ ಸೆಕ್ಷನ್ 125 ರ ಅಡಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಘನ ತ್ಯಾಜ್ಯ ವಿಲೇವಾರಿಯಲ್ಲಿ ನಿಯಮ ಉಲ್ಲಂಘನೆ : ಶಿಕ್ಷೆ, ದಂಡದ ಪ್ರಮಾಣ ಹೆಚ್ಚಳ ಮಾಡಲು ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.