ETV Bharat / state

ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಗೆ ಪೆರೋಲ್ ನೀಡದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ

author img

By

Published : Mar 24, 2023, 11:02 PM IST

ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೆ ಸನ್ನಡತೆ ಆಧಾರದಲ್ಲಿ ಬಿಡುಗಡೆ ಕೋರಿ ಸಲ್ಲಿಸಿದ ಮನವಿ ಅರ್ಜಿ ತೀರ್ಮಾನಿಸುವಲ್ಲಿ ವಿಳಂಬ. ಜೀವಾವಧಿ ಅಪರಾಧಿಗಳ ಬಿಡುಗಡೆ ಸಮಿತಿಗೆ ಹೈಕೋರ್ಟ್​ ತರಾಟೆ.

high court
ಹೈಕೋರ್ಟ್

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೆ ಸನ್ನಡತೆ ಆಧಾರದಲ್ಲಿ ಬಿಡುಗಡೆ ಕೋರಿ ಸಲ್ಲಿಸಿದ ಮನವಿ ಪತ್ರವನ್ನು ತೀರ್ಮಾನಿಸುವಲ್ಲಿ ವಿಳಂಬ ಮಾಡಿರುವ ಕ್ರಮಕ್ಕೆ ತೀವ್ರವಾಗಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೇ ಸನ್ನಡತೆ ಮೇಲೆ ಕ್ಷಮಾದಾನ ನೀಡಿ ಜೈಲಿನಿಂದ ಬಿಡುಗಡೆ ಮಾಡಲು ಕೋರಿದ ಅರ್ಜಿಗಳನ್ನು ತೀರ್ಮಾನಿಸುವ ಜೀವಾವಧಿ ಅಪರಾಧಿಗಳ ಬಿಡುಗಡೆ ಸಮಿತಿ ವಾರ್ಷಿಕ ಆರು ಮತ್ತು ಎರಡು ತಿಂಗಳಿಗೆ ಒಮ್ಮೆ ಸಭೆ ನಡೆಸಲು ನಿರ್ದೇಶನ ನೀಡಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತುಮಕೂರಿನ ಅಪರಾಧಿ ಓಂಕಾರ್ ಮೂರ್ತಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಈ ಆದೇಶ ಮಾಡಿದೆ. ಅಲ್ಲದೇ ಕೈದಿಯನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವುದಕ್ಕೆ ಸೂಚನೆ ನೀಡಿದೆ.

ಜೀವಾವಧಿ ಅಪರಾಧಿಗಳ ಬಿಡುಗಡೆ ಸಮಿತಿ ಸಭೆ ಮಾಡಿಲ್ಲ: ಜೀವಾವಧಿ ಅಪರಾಧಿಗಳ ಬಿಡುಗಡೆ ಸಮಿತಿ ಸನ್ನಡತೆ ಆಧಾರದಲ್ಲಿ ಶಿಕ್ಷಾವಧಿ ಪೂರ್ಣಗೊಳ್ಳುವ ಮುನ್ನವೇ ಬಿಡುಗಡೆಯಾಗಲು ಅವಕಾಶ ಹೊಂದಿರುತ್ತಾರೆ. ಈ ಪ್ರಕರಣದಲ್ಲಿ ಜೀವಾವಧಿ ಅಪರಾಧಿಗಳ ಬಿಡುಗಡೆ ಸಮಿತಿ, ಕಳೆದ ಎಂಟು ತಿಂಗಳಿಂದ ಸಭೆ ಸೇರಿಲ್ಲ. ಇದರಿಂದ ಅರ್ಜಿದಾರನ ಮನವಿಪತ್ರ ಪರಿಗಣನೆಯಾಗಿಲ್ಲ.

ಸಮಿತಿ ಸಭೆ ನಡೆಸುವುದನ್ನು ಖಾತರಿಪಡಿಸಬೇಕಾದ ಸರ್ಕಾರವೇ ಸಮಿತಿ ಸಭೆ ನಡೆಸಬೇಕಾದ ದಿನಾಂಕವನ್ನು ತಿಳಿಸಿಲ್ಲ. ಆದ್ದರಿಂದ ವರ್ಷಕ್ಕೆ ಆರು ಬಾರಿ ಮತ್ತು ಎರಡು ತಿಂಗಳಿಗೆ ಒಮ್ಮೆ ಸಭೆ ನಡೆಸುವಂತೆ ಸಮಿತಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಬೇಕು.

ಆಗಷ್ಟೇ ಸನ್ನಡತೆ ಆದೇಶದ ಮೇಲೆ ಬಿಡುಗಡೆಗೆ ಕೋರಿ ಅಪರಾಧಿಗಳು ಸಲ್ಲಿಸಿದ ಮನವಿಗಳು ಮೆರಿಟ್ ಮೇಲೆ ಸಕಾಲದಲ್ಲಿ ಪರಿಗಣಿಸಿ ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ಪೀಠ ತಿಳಿಸಿದೆ.ಅಲ್ಲದೆ, ಸಮಿತಿಯ ಮುಂದೆ ಮನವಿಪತ್ರ ಇರಿಸಲು ನಿರ್ದೇಶಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿಗಳು ಸಲ್ಲಿಕೆಯಾಗುವುದೂ ತಪ್ಪುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಸ್ತುತದ ಪ್ರಕರಣದಲ್ಲಿ ಓಂಕಾರ್ ಮೂರ್ತಿಯ ಅರ್ಜಿಯು ಸಮಿತಿಯ ಮುಂದೆ ಪರಿಗಣಿಸಲ್ಪಡುವವರೆಗೆ ಪೆರೋಲ್ ಮೇಲೆ ಆತನನ್ನು ಬಿಡುಗಡೆ ಮಾಡಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ, ಸಮಿತಿ 2023ರ ಏ.10 ರೊಳಗೆ ಸಭೆ ನಡೆಸಬೇಕು. ಅರ್ಜಿದಾರರ ಮನವಿ ಪತ್ರ ಮತ್ತು ಕ್ಷಮದಾನದ ಮೇಲೆ ಬಿಡುಗಡೆಗೆ ಕೋರಿದ ಇತರೆ ಅರ್ಜಿಗಳನ್ನು ಪರಿಗಣಿಸಬೇಕು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಮಿತಿ ಎರಡು ತಿಂಗಳಿಗೆ ಒಂದು ಮತ್ತು ವರ್ಷಕ್ಕೆ ಆರು ಬಾರಿ ಸಭೆ ನಡೆಸಬೇಕು. ಈ ಕುರಿತು ಸಮಿತಿಗೆ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಕೊಲೆ, ಅತ್ಯಾಚಾರ ಮತ್ತು ಸಾಕ್ಷ್ಯ ನಾಶ ಪ್ರಕರಣದಲ್ಲಿ ಓಂಕಾರ್ ಮೂರ್ತಿ 2007ರ ನ.23ರಿಂದ ಬಂಧನದಲ್ಲಿದ್ದರು. ಅತ್ಯಾಚಾರ ಪ್ರಕರಣದಿಂದ ಖುಲಾಸೆಯಾದರೂ ಕೊಲೆ ಮತ್ತು ಸಾಕ್ಷ್ಯ ನಾಶ ಪ್ರಕರಣದಲ್ಲಿ 2010ರ ಅ.12ರಂದು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಕಳೆದ 16 ವರ್ಷ, 10 ತಿಂಗಳದಿಂದ ಜೈಲಿನಲ್ಲಿದ್ದಾರೆ. ಈ ನಡುವೆ ಓಂಕಾರ್‌ಗೆ ಜೈಲು ಪ್ರಾಧಿಕಾರವು ಸನ್ನಡತೆ ಪ್ರಮಾಣಪತ್ರ ವಿತರಿಸಿತ್ತು.

ಇದರಿಂದ ಶಿಕ್ಷಾವಧಿ ಪೂರ್ಣಗೊಳ್ಳುವ ಮುನ್ನವೇ ಕ್ಷಮದಾನದ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿ ಆತ ಅರ್ಜಿ ಸಲ್ಲಿಸಿದ್ದನು. ಆದರೆ, ಅರ್ಜಿಯನ್ನು ಪರಿಶೀಲಿಸಿ ನಿರ್ಣಯ ಕೈಗೊಳ್ಳಬೇಕಾದ ಜೀವಾವಧಿ ಅಪರಾಧಿಗಳ ಬಿಡುಗಡೆ ಎಂಟು ತಿಂಗಳಿಂದ ಸಭೆ ನಡೆಸಿರಲಿಲ್ಲ. ಇದರಿಂದ ತಮ್ಮ ಮನವಿಯನ್ನು ಸಮಿತಿ ಮುಂದೆ ಇರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಸರ್ಕಾರಕ್ಕೆ ಈ ಸೂಚನೆ ನೀಡಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ ವಿಚಾರ: ಸತ್ಯ ಹೇಳಿದವರಿಗೆ ಬಿಜೆಪಿ ಶಿಕ್ಷೆ ಕೊಡಲು ಹೊರಟಿದೆ ಎಂದ ಸಿದ್ಧರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.