ETV Bharat / state

ವ್ಯಕ್ತಿಯ ವೃಷಣ ಹಿಸುಕಿ ಗಾಯಗೊಳಿಸಿದ ಪ್ರಕರಣ.. ಆರೋಪಿಗೆ ವಿಧಿಸಿದ್ದ ಶಿಕ್ಷೆ ಇಳಿಕೆ ಮಾಡಿದ ಹೈಕೋರ್ಟ್

author img

By

Published : Jun 26, 2023, 4:21 PM IST

ಚಿಕ್ಕಮಗಳೂರಿನ ಪ್ರಧಾನ ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಕಾರಾಗೃಹ ಶಿಕ್ಷೆಯನ್ನು ಹೈಕೋರ್ಟ್ ಇಳಿಕೆ ಮಾಡಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು : ಊರ ಹಬ್ಬದಲ್ಲಿ ನಡೆದ ಗಲಾಟೆಯಲ್ಲಿ ಎದುರಾಳಿಯ ವೃಷಣಗಳನ್ನು ಹಿಸುಕಿ ಗಂಭೀರವಾಗಿ ಗಾಯಗೊಳಿಸಿದ ವ್ಯಕ್ತಿಗೆ ‘ಕೊಲೆ ಯತ್ನ’(ಐಪಿಸಿ 307)ಅಡಿ ಅಪರಾಧವೆಂದು ಭಾವಿಸಿ ವಿಚಾರಣಾ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸಿತ್ತು. ಇದೀಗ ಹೈಕೋರ್ಟ್ 3 ವರ್ಷಕ್ಕೆ ಕಾರಾಗೃಹ ಶಿಕ್ಷೆಯನ್ನು ಇಳಿಕೆ ಮಾಡಿದೆ. ಜೊತೆಗೆ, ಉದ್ದೇಶಪೂರ್ವಕವಾಗಿ ಅಪಮಾನ ಮಾಡಿದ ಮತ್ತು ಅಕ್ರಮವಾಗಿ ತಡೆಹಿಡಿದ ಅಪರಾಧಕ್ಕೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಪ್ರಮಾಣವನ್ನು ಎತ್ತಿಹಿಡಿದಿದೆ.

ಕೊಲೆ ಯತ್ನದ ಅಪರಾಧಕ್ಕಾಗಿ 7 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಚಿಕ್ಕಮಗಳೂರಿನ ಪ್ರಧಾನ ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಕೋರಿ ಆರೋಪಿ ಪರಮೇಶ್ವರಪ್ಪ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಕೊಲೆ ಮಾಡುವ ಉದ್ದೇಶವಿಲ್ಲದೆ ಜಗಳವಾಡುವ ಸಂದರ್ಭದಲ್ಲಿ ವೃಷಣಗಳನ್ನು ಹಿಸುಕಿದರೆ ಅದು ಐಪಿಸಿ ಸೆಕ್ಷನ್ 307ರ (ಕೊಲೆ ಯತ್ನ) ಅಡಿಯಲ್ಲಿ ಅಪರಾಧವಾಗುವುದಿಲ್ಲ. ಬದಲಿಗೆ ಐಪಿಸಿ ಸೆಕ್ಷನ್ 325ರ (ಗಂಭೀರವಾಗಿ ಗಾಯಗೊಳಿಸುವ) ಅಡಿಯಲ್ಲಿ ಅಪರಾಧವೆನಿಸಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕೊಲೆ ಯತ್ನದ ಬದಲಿಗೆ ಗಂಭೀರ ಗಾಯಗೊಳಿಸಿದ ಅಪರಾಧಕ್ಕಾಗಿ ಅರ್ಜಿದಾರನನ್ನು ದೋಷಿ ಎಂದು ತೀರ್ಮಾನಿಸಿದೆ. ಜೊತೆಗೆ, ವಿಚಾರಣಾ ನ್ಯಾಯಾಲಯ ವಿಧಿಸಿದ್ದ 7 ವರ್ಷ ಶಿಕ್ಷೆಯನ್ನು ಮಾರ್ಪಾಡುಗೊಳಿಸಿ, 3 ವರ್ಷ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ದಂಡದ ಮೊತ್ತವನ್ನು ಸಂತ್ರಸ್ತ ವ್ಯಕ್ತಿಗೆ ಪರಿಹಾರವಾಗಿ ಪಾವತಿಸುವಂತೆ ಅಪರಾಧಿಗೆ ನಿರ್ದೇಶನ ನೀಡಿದೆ.

ಸಾಕ್ಷ್ಯಧಾರ ಮತ್ತು ಪ್ರತ್ಯಕ್ಷ ಸಾಕ್ಷಿ ಪ್ರಕಾರ ಆರೋಪಿ ಮತ್ತು ಗಾಯಾಳು ನಡುವೆ ಮೊದಲೆ ದ್ವೇಷವಿತ್ತು. ಈ ಹಿನ್ನೆಲೆಯಲ್ಲಿ ಊರ ಜಾತ್ರೆ-ಮೆರವಣಿಗೆ ಗಾಯಾಳು ಕುಣಿಯುತ್ತಿದ್ದ ಸಂದರ್ಭದಲ್ಲಿ ಗಲಾಟೆ ಪ್ರಾರಂಭಿಸಿ ಆತನ ವೃಷಣಗಳನ್ನು ಹಿಸುಕಿದ್ದಾನೆ. ಆತನನ್ನು ಆಸ್ಪತ್ರೆಗೆ ಕರೆದೊಯ್ದಾದಾಗ ವೈದ್ಯರು ಗಾಯಾಳುವಿನ ಎಡ ಭಾಗದ ವೃಷಣ ತೆಗೆದು ಜೀವ ಉಳಿಸಿದ್ದರು. ವೃಷಣವು ದೇಹದ ಸೂಕ್ಷ್ಮ ಮತ್ತು ಪ್ರಮುಖ ಅಂಗ. ತಕ್ಷಣವೇ ಗಾಯಾಳುವಿಗೆ ಚಿಕಿತ್ಸೆ ಸಿಗದಿದ್ದರೆ ಆತ ಸಾಯುವ ಸಾಧ್ಯತೆಯಿತ್ತು. ವೃಷಣವನ್ನು ಗಾಯಗೊಳಿಸಿದರೆ ಜೀವಕ್ಕೆ ಅಪಾಯವಾಗಲಿದೆ ಎಂಬ ತಿಳುವಳಿಕೆ ಆರೋಪಿಗೆ ಇರಲಿಲ್ಲ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ.

ಆದರೆ, ಆರೋಪಿಯು ಗಾಯಾಳುವನ್ನು ಕೊಲೆಗೈಯ್ಯುವ ಉದ್ದೇಶದಿಂದಲೇ ಘಟನಾ ಸ್ಥಳಕ್ಕೆ ಬಂದಿದ್ದಾನೆ ಎಂದು ಹೇಳಲಾಗುವುದಿಲ್ಲ. ಕೊಲೆ ಮಾಡುವ ಉದ್ದೇಶ ಹೊಂದಿದ್ದರೆ, ಯಾವುದಾದರೂ ಮಾರಕಾಸ್ತ್ರ ತರುತ್ತಿದ್ದ. ಹಾಗಾಗಿದ್ದರೂ ದೇಹದ ಪ್ರಮುಖ ಅಂಗವನ್ನು ಹಿಸುಕಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಇದು ಕೊಲೆಯತ್ನ ಬದಲಿಗೆ ಐಪಿಸಿ ಸೆಕ್ಷನ್ 325 ಅಡಿಯಲ್ಲಿ ಗಂಭೀರವಾಗಿ ಗಾಯಗೊಳಿಸಿದ ಅಪರಾಧವಾಗುತ್ತದೆ ಎಂದು ತಿಳಿಸಿದ ಪೀಠ ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು? : ನರಸಿಂಹಸ್ವಾಮಿ ಜಾತ್ರೆಯ ಮೆರವಣಿ ನಡೆಯುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಜೊತೆ ಜಗಳ ತೆಗೆದಿದ್ದ ಪರಮೇಶ್ವರಪ್ಪ, ಅವಾಚ್ಯ ಶಬ್ದಗಳಿಂದ ನಿಂದಿಸಿ ಆತನ ವೃಷಣಗಳನ್ನು ಹಿಸುಕಿ ಗಂಭೀರವಾಗಿ ಗಾಯಗೊಳಿಸಿದ್ದರು. ವೈದ್ಯರು ಚಿಕಿತ್ಸೆ ಕಲ್ಪಿಸಿ ಪೊಲೀಸರಿಗೆ ಮೆಡಿಕೋ ಲೀಗಲ್ ಕೇಸ್ (ಎಂಎಲ್‌ಸಿ) ಶಿಫಾರಸ್ಸು ಮಾಡಿದ್ದರು. ಈ ಸಂಬಂಧ ಮಾ. 16ರಂದು ಆಸ್ಪತ್ರೆಗೆ ತೆರಳಿದಿದ್ದ ಪೊಲೀಸರು ಗಾಯಾಳುವಿನಿಂದ ಹೇಳಿಕೆ ದಾಖಲಿಸಿಕೊಂಡು ಪರಮೇಶ್ವರಪ್ಪ ವಿರುದ್ಧ ದೂರು ನೀಡಿದ್ದರು.

ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಪರಮೇಶ್ವರಪ್ಪ ವಿರುದ್ಧ ಐಪಿಸಿ ಸಕ್ಷನ್ 307 (ಕೊಲೆಯತ್ನ), 341 (ಅಕ್ರಮವಾಗಿ ತಡೆ ಹಿಡಿದಿರುವುದು), 504 (ಶಾಂತಿ ಕದಡಲು ಉದ್ದೇಶಪೂರ್ವಕವಾಗಿ ಅಪಮಾನ ಮಾಡಿರುವುದು) ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ನಡುವೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಪರಮೇಶ್ವರಪ್ಪ ಬಳಿಕ ಜಾಮೀನು ಪಡೆದುಕೊಂಡಿದ್ದರು. ಈ ಪ್ರಕರಣ ಸಂಬಂಧ ಸುಧೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಪರಮೇಶ್ವರಪ್ಪ ಅವರನ್ನು ದೋಷಿಯಾಗಿ ತೀರ್ಮಾನಿಸಿ ಕೊಲೆಯತ್ನ ಅಪರಾಧಕ್ಕೆ 7 ವರ್ಷ, ಅಕ್ರಮವಾಗಿ ವ್ಯಕ್ತಿಯನ್ನು ತಡೆಹಿಡಿದ ಒಂದು ತಿಂಗಳು ಮತ್ತು ಅಪಮಾನ ಮಾಡಿದ್ದಕ್ಕೆ 1 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪರಮೇಶ್ವರಪ್ಪ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ : ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಆಸ್ತಿ ತೆರಿಗೆ ಪಾವತಿಗೆ ವಿನಾಯಿತಿ ಪ್ರಮಾಣಪತ್ರ ಪಡೆಯಬೇಕಾಗಿಲ್ಲ : ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.