ETV Bharat / state

ಬೆಂಗಳೂರಲ್ಲಿ ಮಾಲಿನ್ಯ ಕಡಿಮೆಯಾದರೂ ನೀರಿನ ಗುಣಮಟ್ಟ ವೃದ್ಧಿಯಾಗಿಲ್ಲ : ಹೈಕೋರ್ಟ್​ಗೆ ಕೆಎಸ್​ಪಿಸಿಬಿ ಮಾಹಿತಿ

author img

By

Published : Jun 13, 2020, 11:15 PM IST

ಲಾಕ್​ಡೌನ್ ಬಳಿಕ ಕೈಗಾರಿಕೆಗಳು ಸ್ಥಗಿತಗೊಂಡಿದ್ದರಿಂದ ಅವುಗಳು ಹೊರಬಿಡುತ್ತಿದ್ದ ತ್ಯಾಜ್ಯ ನೀರು ಕೆರೆಗಳನ್ನು ಸೇರುವುದು ಕಡಿಮೆಯಾಗಿತ್ತು. ಹೀಗಾಗಿಯೇ ಬೆಂಗಳೂರಿನ ಕೆರೆಗಳಲ್ಲಿನ ಕಲ್ಮಶ ಪ್ರಮಾಣ ಕಡಿಮೆಯಾಗಿದ್ದು ನೀರು ತಿಳಿಯಾಗಿದೆ. ನೀರಿನ ಒಟ್ಟಾರೆ ಗುಣಮಟ್ಟದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲ ಎಂದು ಕೆಎಸ್​ಪಿಸಿಬಿ ವರದಿ ನೀಡಿದೆ.

high-court
ಹೈಕೋರ್ಟ್​

ಬೆಂಗಳೂರು: ಲಾಕ್​ಡೌನ್ ಬಳಿಕ ಬೆಂಗಳೂರಿನ ವೃಷಭಾವತಿ ನದಿ, ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಸೇರಿದಂತೆ ನಗರದ ಕೆರೆಗಳಲ್ಲಿನ ಮಾಲಿನ್ಯ ಪ್ರಮಾಣ ಇಳಿಕೆಯಾದರೂ ನೀರಿನ ಗುಣಮಟ್ಟದಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿಲ್ಲ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

ಲಾಕ್​ಡೌನ್ ಅವಧಿಯಲ್ಲಿ ನಗರದ ಕೆರೆಗಳು ಮತ್ತು ವೃಷಭಾವತಿ ನದಿ ಕಲ್ಮಶ ಕಡಿಮೆಯಾಗಿದೆ. ಹೀಗಾಗಿ ಜಲಮೂಲಗಳನ್ನು ಸಂರಕ್ಷಿಸುವ ಭರವಸೆ ನೀಡದೇ ಕಾರ್ಖಾನೆಗಳ ಕಾರ್ಯಾರಂಭಕ್ಕೆ ಕೂಡಲೇ ಅನುಮತಿ ನೀಡದಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ವಕೀಲೆ ಗೀತಾ ಮಿಶ್ರಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದ ವೇಳೆ ಕೆಎಸ್​ಪಿಸಿಬಿ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ.

ವರದಿಯಲ್ಲಿ, ಲಾಕ್​ಡೌನ್ ಬಳಿಕ ಕೈಗಾರಿಕೆಗಳು ಸ್ಥಗಿತಗೊಂಡಿದ್ದರಿಂದ ಅವುಗಳು ಹೊರಬಿಡುತ್ತಿದ್ದ ತ್ಯಾಜ್ಯ ನೀರು ಕೆರೆಗಳನ್ನು ಸೇರುವುದು ಕಡಿಮೆಯಾಗಿತ್ತು. ಹೀಗಾಗಿಯೇ ಕೆರೆಗಳಲ್ಲಿನ ಕಲ್ಮಶ ಪ್ರಮಾಣ ಕಡಿಮೆಯಾಗಿದ್ದು ನೀರು ತಿಳಿಯಾಗಿದೆ. ಈ ನೀರನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದಾಗ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ಆದರೆ ನೀರಿನ ಒಟ್ಟಾರೆ ಗುಣಮಟ್ಟದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲ ಎಂದು ಕೆಎಸ್​ಪಿಸಿಬಿ ವರದಿ ನೀಡಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ ವರದಿಯನ್ನು ದಾಖಲಿಸಿಕೊಂಡಿರುವ ಪೀಠ, ನಗರದ ಕೆರೆಗಳ ಸುತ್ತಮುತ್ತಲಿನ ಕೈಗಾರಿಕೆಗಳು ಮತ್ತು ಅಪಾರ್ಟ್ಮೆಂಟ್​ಗಳಿಗೆ ಭೇಟಿ ನೀಡಿ ಪರಿಶೀಲಿಸುವ ಅಧಿಕಾರ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್​ಜಿಟಿ) ನೇಮಕ ಮಾಡಿರುವ ಸಮಿತಿಗೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಕೆಎಸ್​ಪಿಸಿಬಿಗೆ ಸೂಚಿಸಿ ವಿಚಾರಣೆ ಮುಂದೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.