ETV Bharat / state

ಸಚಿವ ನಾಗೇಂದ್ರ ವಿರುದ್ಧ ಆರೋಪ ನಿಗದಿ ಪ್ರಕ್ರಿಯೆ ಆಗಸ್ಟ್​​ ಅಂತ್ಯದವರೆಗೂ ಮುಂದೂಡಿಕೆ

author img

By

Published : Aug 7, 2023, 9:36 PM IST

ಕ್ರೀಡಾ ಸಚಿವ ಬಿ.ನಾಗೇಂದ್ರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆರೋಪ ನಿಗದಿ ಪ್ರಕ್ರಿಯೆಯನ್ನು ಹೈಕೋರ್ಟ್ ಮುಂದೂಡಿದೆ.

high-court-adjourned-the-charge-sheeting-process-against-minister-nagendra-end-of-august
ಸಚಿವ ನಾಗೇಂದ್ರ ವಿರುದ್ಧ ಆರೋಪ ನಿಗದಿ ಪ್ರಕ್ರಿಯೆ ಆಗಸ್ಟ್​​ ಅಂತ್ಯದ ವರೆಗೂ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಕಬ್ಬಿಣದ ಅದಿರಿನ ಅಕ್ರಮ ವ್ಯಾಪಾರಕ್ಕೆ ಸಂಬಂಧಿಸಿದಂತೆ ರಾಜ್ಯ ಯುವಜನ ಸಬಲೀಕರಣ ಮತ್ತ ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ ಅವರ ವಿರುದ್ಧ ಲೋಕಾಯುಕ್ತ ವಿಶೇಷ ತನಿಖಾ ದಳದ (ಎಸ್‌ಐಟಿ) ಪೊಲೀಸರು ದಾಖಲಿಸಿರುವ 16 ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳ ಕುರಿತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆರೋಪ ನಿಗದಿ ಪ್ರಕ್ರಿಯೆಯನ್ನು ಹೈಕೋರ್ಟ್ ಆಗಸ್ಟ್​ ಅಂತ್ಯದವರೆಗೆ ಮುಂದೂಡಿತು.

ತಮ್ಮ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ (42ನೇ ಎಸಿಸಿಎಂಎಂ) ಮತ್ತು ಸೆಷನ್ಸ್ ನ್ಯಾಯಾಲಯದ (82ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ) ವಿಚಾರಣೆ ರದ್ದುಪಡಿಸುವಂತೆ ಕೋರಿ ನಾಗೇಂದ್ರ ಸಲ್ಲಿಸಿರುವ ಪ್ರತ್ಯೇಕ 16 ಕ್ರಿಮಿನಲ್ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನಡೆಸಿದರು.

ವಿಚಾರಣೆಯಲ್ಲಿ ಅರ್ಜಿದಾರರ ಪರ ಹಿರಿಯ ವಕೀಲ ಮೂರ್ತಿ ಡಿ. ನಾಯಕ್ ಅವರ ವಾದ ಆಲಿಸಿದ ನ್ಯಾಯಾಪೀಠ, ಆರೋಪ ನಿಗದಿ ಪ್ರಕ್ರಿಯೆ ಮುಂದೂಡಿತು. ಇದೇ ವೇಳೆ ಮಧ್ಯಂತರ ಆದೇಶವನ್ನು ಪ್ರಕರಣಗಳ ಇತ್ಯರ್ಥದವರೆಗೆ ಮುಂದುವರಿಸಬೇಕು ಎಂಬ ಮನವಿಯನ್ನು ಪೀಠ ನಿರಾಕರಿಸಿತು. ಇದಕ್ಕೂ ಮುನ್ನ ಮೂರ್ತಿ ನಾಯಕ್‌, ಅರ್ಜಿದಾರರ ವಿರುದ್ಧ ವ್ಯಾಪ್ತಿ ಮೀರಿ ದೂರುಗಳನ್ನು ದಾಖಲಿಸಲಾಗಿದೆ. 2008 ಮತ್ತು 2009ರ ಆರೋಪಗಳಿಗೆ ಸಂಬಂಧಿಸಿದಂತೆ 2023ರಲ್ಲಿ ದೂರು ದಾಖಲಿಸಲಾಗಿದೆ. 2015ರಲ್ಲಿ ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ (ಎಂಎಂಡಿಆರ್) ಕಾಯಿದೆಗೆ ತಿದ್ದುಪಡಿ ಮಾಡಲಾಗಿದ್ದು, ಈಗ ಅದನ್ನು ಅನ್ವಯಿಸಲಾಗಿದೆ. ಹೀಗಾಗಿ, ದೂರು ದಾಖಲಿಸಿರುವುದು ಕಾನೂನು ಬಾಹಿರ ಎಂದು ವಾದ ಮಂಡಿಸಿದರು.

ಲೋಕಾಯುಕ್ತದ ವಿಶೇಷ ತನಿಖಾ ದಳ ಪ್ರತಿನಿಧಿಸಿದ್ದ ವಕೀಲರಾದ ಬಿ.ಎಸ್‌.ಪ್ರಸಾದ್, ಎಂಎಂಆರ್‌ಡಿ ಕಾಯಿದೆಯ ಪ್ರಕಾರ ಆರೋಪ ಪಟ್ಟಿಯ ಜೊತೆಗೆ ದೂರು ಸಲ್ಲಿಸಲಾಗಿದೆ. ನಿಯಮಗಳನ್ನು ಪಾಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿದರು.

ಪ್ರಕರಣದ ಹಿನ್ನೆಲೆ: ಅಕ್ರಮ ಅದಿರು ವ್ಯಾಪಾರ ಸೇರಿದಂತೆ ಇತರೆ ಆರೋಪಗಳ ಸಂಬಂಧ ಗಣಿ- ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ (ಎಂಎಂಡಿಆರ್) ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸಚಿವ ನಾಗೇಂದ್ರ ವಿರುದ್ಧ ಲೋಕಾಯುಕ್ತ ಎಸ್‌ಐಟಿ 16 ಪ್ರಕರಣಗಳನ್ನು ದಾಖಲಿಸಿದೆ. ಅವು ಜನ ಪ್ರತಿನಿಧಿಗಳಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಿರುವ ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಆ ವಿಚಾರಣೆ ರದ್ದು ಕೋರಿ ಸಚಿವ ನಾಗೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಡಿ.ಕೆ.ಶಿವಕುಮಾರ್​ ಪ್ರಕರಣ: ಮತ್ತೊಂದೆಡೆ, ನ್ಯಾಯಾಂಗ ಶಿಷ್ಟಾಚಾರದ ಪ್ರಕಾರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್​ನಲ್ಲಿನ ವಿವಿಧ ಪ್ರಕರಣಗಳನ್ನು ಎದುರಿಸುತ್ತಿರುವವರು ಉಭಯ ನ್ಯಾಯಾಲಯಗಳ ನ್ಯಾಯಮೂರ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳಬಹುದೇ ಎಂದು ಮಾಜಿ ಕಾನೂನು ಸಚಿವರೂ ಆದ ಶಾಸಕ ಎಸ್.ಸುರೇಶ್​ಕುಮಾರ್​ ಪ್ರಶ್ನಿಸಿದ್ದಾರೆ.

ಕರ್ನಾಟಕ ರಾಜ್ಯ ವಕೀಲರ ಪರಿಷತ್ ವತಿಯಿಂದ ಮೈಸೂರಿನಲ್ಲಿ ಆಗಸ್ಟ್ 12ರಂದು ವಕೀಲರ ರಾಜ್ಯಮಟ್ಟದ ಹತ್ತನೇ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಉಪಮುಖ್ಯಮಂತ್ರಿ ಡಿಕೆಶಿ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ನ್ಯಾಯಾಂಗ ಶಿಷ್ಟಾಚಾರದಲ್ಲಿ ಅವಕಾಶವಿದಿಯೇ ಎಂದು ಅವರು ಹೈಕೋರ್ಟ್‌ನ ರಿಜಿಸ್ಟಾರ್ ಜನರಲ್ ಅವರಿಗೆ ಬರೆದ ಪತ್ರದಲ್ಲಿ ಕೇಳಿದ್ದಾರೆ.

ಈ ಸಂಬಂಧ ಆಗಸ್ಟ್ 5ರಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದಿದ್ದ ಅಂಶಗಳನ್ನೇ ಸುರೇಶ್‌ ಕುಮಾರ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರ ವಿರುದ್ಧದ ಪ್ರಕರಣಗಳು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನಲ್ಲಿ ಬಾಕಿ ಇದ್ದು, ನ್ಯಾಯಮೂರ್ತಿಗಳ ಜೊತೆ ಅವರು ವೇದಿಕೆ ಹಂಚಿಕೊಳ್ಳುವುದರಿಂದ ಪ್ರಭಾವ ಬೀರುತ್ತಾರೆ ಎಂಬ ಭಾವನೆ ಯಾರಲ್ಲೂ ಬರಬಾರದು ಅಲ್ಲವೇ ಎಂಬ ಅಂಶವನ್ನು ಸೇರ್ಪಡೆ ಮಾಡಿದ್ದಾರೆ. ಅಲ್ಲದೇ, 1923ರಲ್ಲಿ ಇಂಗ್ಲೆಂಡ್‌ನ ಮುಖ್ಯ ನ್ಯಾಯಮೂರ್ತಿ ಹೇವರ್ಟ್‌ ಎಂಬವರು ನ್ಯಾಯದಾನ ಮಾಡಲಾಗುತ್ತಿದೆ ಎಂಬ ರೀತಿ ಮಾಡುವುದಲ್ಲ, ಅದನ್ನು ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲದಂತೆ ಮಾಡಬೇಕು ಎಂದು ಹೇಳಿರುವುದು ಸತ್ಯ ಅಲ್ಲವೇ? ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಆರೋಪ; 4 ಪ್ರತ್ಯೇಕ ತನಿಖಾ ಸಮಿತಿ ರಚಿಸಿ ಸರ್ಕಾರ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.