ETV Bharat / state

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಆರೋಪ; 4 ಪ್ರತ್ಯೇಕ ತನಿಖಾ ಸಮಿತಿ ರಚಿಸಿ ಸರ್ಕಾರ ಆದೇಶ

author img

By

Published : Aug 7, 2023, 8:18 PM IST

four-separate-investigation-committees-for-investigation-of-illegality-in-bbmp
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಆರೋಪ; ನಾಲ್ಕು ಪ್ರತ್ಯೇಕ ತನಿಖಾ ಸಮಿತಿ ರಚಿಸಿ ಸರ್ಕಾರ ಆದೇಶ

BBMP: ಬಿಬಿಎಂಪಿ ವ್ಯಾಪ್ತಿಯ ವಿವಿಧ ವಲಯದಲ್ಲಿ ನಡೆದಿರುವ ಅವ್ಯವಹಾರ ಆರೋಪ ಸಂಬಂಧ ತನಿಖೆ ನಡೆಸಲು ನಾಲ್ಕು ವಿಶೇಷ ತನಿಖಾ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 2019-20 ರಿಂದ 2022-23 ರವರೆಗೆ ನಡೆದ ಅವ್ಯವಹಾರ ಆರೋಪ ಸಂಬಂಧ ನಾಲ್ಕು ವಿಶೇಷ ತನಿಖಾ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಘನತ್ಯಾಜ್ಯ ನಿರ್ವಹಣೆ ಕಾಮಗಾರಿ ಸಂಬಂಧ, ರಸ್ತೆ ಅಭಿವೃದ್ಧಿ, ಒಎಫ್‌ಸಿ ಕೇಬಲ್ ಕಾಮಗಾರಿ, ನೀರುಗಾಲುವೆ, ನಗರ ಯೋಜನೆ, ಸ್ವಾಧೀನ ಭೂಪತ್ರ ಸಂಬಂಧ ಹಾಗೂ ಕೆರೆ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಕಾಮಗಾರಿಗಳ ಸಂಬಂಧ ಪ್ರತ್ಯೇಕ ನಾಲ್ಕು ತನಿಖಾ ಸಮಿತಿ ರಚಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 2019-20 ರಿಂದ 2022-23 ರವರೆಗೆ ಪ್ರಮುಖವಾಗಿ ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳು, ರಸ್ತೆ ಅಭಿವೃದ್ಧಿ ಕಾಮಗಾರಿಗಳು, ಒಎಫ್‌ಸಿ ಕೇಬಲ್ ಅಳವಡಿಕೆ, ಬೃಹತ್ ನೀರುಗಾಲುವೆ ಕಾಮಗಾರಿಗಳು, ಕೇಂದ್ರ / ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪತ್ರ ನೀಡುವಿಕೆ, ಕೆರೆಗಳ ಅಭಿವೃದ್ಧಿ ಕಾಮಗಾರಿಗಳು, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿನ ಕಾಮಗಾರಿಗಳು ಮತ್ತು ವಾರ್ಡ್ ಮಟ್ಟದ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಬಾಹ್ಯ ಮೂಲದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಆಯಾ ವಿಷಯ ವ್ಯಾಪ್ತಿಗೊಳಪಟ್ಟಂತೆ ಪರಿಣಿತರು, ತಜ್ಞರುಗಳನ್ನೊಳಗೊಂಡ ತನಿಖಾ ಸಮಿತಿಗಳನ್ನು ರಚಿಸಿ ಸ್ವತಂತ್ರ ವಿಚಾರಣೆ ನಡೆಸಲಿದೆ.

ಈ ಅಕ್ರಮಗಳ ಆರೋಪ ಸಂಬಂಧ ಸ್ಥಳ ಮತ್ತು ದಾಖಲಾತಿಗಳ ಪರಾಮರ್ಶೆಯೊಂದಿಗೆ ಆರೋಪಿತರ ಸ್ಪಷ್ಟ ಗುರುತಿಸುವಿಕೆಯ ಸಹಿತ ಪರಿಪೂರ್ಣ ತನಿಖಾ ವರದಿಯನ್ನು ಸೂಕ್ತ ಅಭಿಪ್ರಾಯ, ಶಿಫಾರಸಿನೊಂದಿಗೆ 30 ದಿನಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸುವ ಸೂಚನೆಯೊಂದಿಗೆ ತಜ್ಞರ / ಪರಿಣಿತರ ತನಿಖಾ ಸಮಿತಿಯನ್ನು ರಚಿಸಿ, ಆದೇಶಿಸಲಾಗಿದೆ.

ತನಿಖಾ ಸಮಿತಿ ಪರಿಗಣಿಸಬೇಕಾದ ಅಂಶಗಳೇನು? :

  • ನಡೆದಿರುವ ಸಂಗ್ರಹಣೆಗಳಲ್ಲಿ (ಬಿಬಿಎಂಪಿ ಮತ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಸೇರಿದಂತೆ) ಕೆ.ಟಿ.ಪಿ.ಪಿ, ಕಾಯ್ದೆಯ ಪಾಲನೆ ಮಾಡಿರುವ ಮತ್ತು ಸರ್ಕಾರದ ಅನುಮೋದನೆ ಪಡೆದಿರುವ ಬಗ್ಗೆ ಪರಿಶೀಲನೆ.
  • ಟೆಂಡರ್ ಪ್ರಕ್ರಿಯೆಯಲ್ಲಿ ಕೆ.ಟಿ.ಪಿ.ಪಿ. ನಿಯಮಾವಳಿಗಳನ್ನು ತಿರುಚಿದಲ್ಲಿ ಅಥವಾ ಸಡಿಲಗೊಳಿಸಿದಲ್ಲಿ ಮೌಲ್ಯಮಾಪನದಲ್ಲಿ ದುರ್ವ್ಯವಹಾರ, ಅನರ್ಹರಿಗೆ ಟೆಂಡರ್ ನೀಡಿರುವುದು ಮುಂತಾದ ಅಕ್ರಮಗಳನ್ನು ಪರೀಕ್ಷಿಸುವುದು.
  • ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರು ಸಲ್ಲಿಸಿದ ಎಲ್ಲ ವಾರ್ಷಿಕ ವಹಿವಾಟು ಮತ್ತು ಪೂರ್ವಾನುಭವ ಪ್ರಮಾಣ ಪತ್ರಗಳ ಪರಿಶೀಲನೆ. ಸದರಿ ಪರಿಶೀಲನೆ ಸಂದರ್ಭದಲ್ಲಿ ಗುತ್ತಿಗೆದಾರರು ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಭಾಗವಹಿಸಿರುವ ಹಲವಾರು ಟೆಂಡರ್‌ಗಳಲ್ಲಿ ಸಲ್ಲಿಸಿರುವ ವಾರ್ಷಿಕ ವಹಿವಾಟು ಮತ್ತು ಪೂರ್ವಾನುಭವ ಪ್ರಮಾಣ ಪತ್ರಗಳನ್ನು ತಾಳೆ ಮಾಡುವುದು.
  • ನಿರ್ದಿಷ್ಟ ಗುತ್ತಿಗೆದಾರರ ಹೆಸರಿನಲ್ಲಿ ಕಾರ್ಯಾದೇಶ ನೀಡಿದ್ದು, ಆದರೆ ಅದೇ ಕಾಮಗಾರಿಯ ಹಣ ಪಾವತಿಯನ್ನು ಮಾತ್ರ ಬೇರೆಯವರಿಗೆ ಮಾಡಿರುವ ಬಗ್ಗೆ ಪರಿಶೀಲಿಸುವುದು.
  • ಸೇವೆಗಳ ಸಂಗ್ರಹಣೆಗೆ ಸಕಾಲದಲ್ಲಿ ಟೆಂಡರ್ ಮಾಡದೇ ಹಿಂದೆ ಜಾರಿಯಲ್ಲಿದ್ದ ನಿಗದಿತ ಅವಧಿಯ ಕಾರ್ಯಾದೇಶಗಳನ್ನು ವಿಸ್ತರಿಸಿರುವ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸುವುದು.
  • ಅಗಾಧ ವೆಚ್ಚದಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದಾಗ್ಯೂ ಸಹ ಅವುಗಳ ನಿರ್ವಹಣೆಗಾಗಿ ಪುನಃ ಅನಗತ್ಯ ವೆಚ್ಚ ಕೈಗೊಳ್ಳಲಾಗುತ್ತಿರುವ ಬಗ್ಗೆ‌ ಪರಿಶೀಲನೆ ನಡೆಸುವುದು.
  • ಅನಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದು ಅನಗತ್ಯ ಬಾಬ್ತುಗಳನ್ನು ಅಳವಡಿಸಲಾಗಿರುವ ಬಗ್ಗೆ ಪರಿಶೀಲನೆ ನಡೆಸುವುದು.
  • ಕಾಮಗಾರಿ ಬದಲಾವಣೆ ಪ್ರಸ್ತಾವನೆಗಳಿದ್ದಲ್ಲಿ ಅನುದಾನ ದುರುಪಯೋಗದ ಕಾರಣಕ್ಕಾಗಿ ಸಲ್ಲಿಸಲಾಗಿದೆಯೇ ಎಂಬ ಬಗ್ಗೆ ಹಾಗೂ ಮೂಲ ಅಂದಾಜು ಪಟ್ಟಿಯಲ್ಲಿ ಅನುಮೋದನೆಗೊಂಡ ಸ್ಥಳದಲ್ಲಿ ಕಾಮಗಾರಿ ನಿರ್ವಹಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸುವುದು.
  • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಯೋಜನೆ (ವಲಯ ಮತ್ತು ಕೇಂದ್ರ ವಿಭಾಗಕ್ಕೆ ಸಂಬಂಧಿಸಿದಂತೆ, ವಸತಿ ಸಮುಚ್ಛಯ, ವಾಣಿಜ್ಯ ಹಾಗೂ ಕೈಗಾರಿಕಾ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡುವಾಗ ಮತ್ತು ಸ್ವಾಧೀನಾನುಭವ (Occupation Certificate) ಪತ್ರ ನೀಡುವಾಗ ಪಾಲಿಕೆಗೆ ಆರ್ಥಿಕ ನಷ್ಟ ಉಂಟಾಗಿರುವ ಅಂಶಗಳ ಸಹಿತ ನಿಯಮದ ಪಾಲನೆಯ ಬಗ್ಗೆ ಪರಿಶೀಲನೆ ಮಾಡುವುದು.
  • ಪಾಲಿಕೆಯಿಂದ ಅನುಮತಿ ಪಡೆಯದೆ, ಅನಧಿಕೃತವಾಗಿ ಒಎಫ್‌ಸಿ ಕೇಬಲ್‌ಗಳನ್ನು ಅಳವಡಿಸಿ ಪಾಲಿಕೆಗೆ ಅಪಾರ ಆರ್ಥಿಕ ನಷ್ಟ ಉಂಟು ಮಾಡಿರುವ ಬಗ್ಗೆ, ರಸ್ತೆ ಅಗೆತಕ್ಕೆ ಅನುಮತಿ ಪಡೆಯುವಾಗ ಕಡಿಮೆ ಅಳತೆಗೆ ಪಡೆದು, ಹೆಚ್ಚುವರಿ ಕೇಬಲ್‌ಗಳನ್ನು ಅಳವಡಿಸಿರುವ ಪ್ರಕರಣಗಳು, ಯಾವುದೋ ಒಎಫ್‌ಸಿ ಏಜೆನ್ಸಿ ಅನುಮತಿ ಪಡೆದು ಅದರಲ್ಲಿ ಅನಧಿಕೃತವಾಗಿ ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೆ ಇರುವ ಇತರೆ ಏಜೆನ್ಸಿಗಳು ಅನುಮತಿ ಪಡೆದವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ತಮ್ಮ ಕಂಪನಿಯ ಕೇಬಲ್‌ಗಳನ್ನು ಅಳವಡಿಸಿ ಪಾಲಿಕೆಗೆ ಅಪಾರ ಆರ್ಥಿಕ ನಷ್ಟ ಉಂಟು ಮಾಡಿರುವ ಬಗ್ಗೆ‌‌‌ ಪರಿಶೀಲನೆ ನಡೆಸುವುದು.
  • ಅನುಷ್ಠಾನಗೊಳಿಸಲಾದ ಕಾಮಗಾರಿ / ಯೋಜನೆಗಳ ಗುಣಮಟ್ಟ ಪರಿಶೀಲನೆ.
  • ವಾಸ್ತವ್ಯವಾಗಿ ಹೊರಡಿಸಲಾದ ಕಾರ್ಯಾದೇಶ, ಈ ಸಂಬಂಧ ಆಗಿರುವ ಟೆಂಡರ್ ವಿವರಗಳು ಮತ್ತು ಕಾಮಗಾರಿಯ ಅನುಷ್ಠಾನದಲ್ಲಿ ಎಷ್ಟು ಮೊಬಲಗು ಬಿಡುಗಡೆಯಾಗಿದೆ. ತತ್ಸಂಬಂಧ ಎಷ್ಟು ಮೊತ್ತ ವೆಚ್ಚವಾಗಿದೆ. ಬಿಡುಗಡೆಯ ಮೊತ್ತ ಮತ್ತು ವೆಚ್ಚ ಹಾಗೂ ಕಾಮಗಾರಿಯ ಅನುಷ್ಠಾನದ ಪ್ರಮಾಣ- ಇವುಗಳನ್ನು ತಾಳೆ ಮಾಡಿ ಅನುಷ್ಠಾನದಲ್ಲಿ ಆಗಿರುವ ಲೋಪದೋಷಗಳನ್ನು ಪರಿಶೀಲಿಸುವುದು.
  • ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಉಂಟಾಗಿರುವ ಹೆಚ್ಚುವರಿ ವ್ಯತ್ಯಾಸದ ಅನಿವಾರ್ಯತೆ ಮತ್ತು ಅಗತ್ಯತೆ, ಅನಿವಾರ್ಯವಾಗಿದ್ದಲ್ಲಿ ಮೂಲ ಅಂದಾಜಿನಲ್ಲಿ ಕೈಬಿಡಲು ಕಾರಣಗಳು ಹಾಗೂ ಇವುಗಳಿಗೆ ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿರುವ ಬಗ್ಗೆ‌ ಪರಿಶೀಲನೆ.
  • ಕಾಮಗಾರಿಗಳನ್ನು ಪ್ರಾರಂಭಿಸುವ ಮೊದಲು ಸಾಮಗ್ರಿಗಳು, ಉಪಕರಣಗಳು, ಇತ್ಯಾದಿಗಳ ಗುಣಮಟ್ಟ ಪರೀಕ್ಷೆಗಳನ್ನು ನಿರ್ದಿಷ್ಟಪಡಿಸಿ, ಅಧಿಕೃತ ಏಜೆನ್ಸಿಗಳಿಂದ ಮಾಡಿಸಿರುವ ಬಗ್ಗೆ ಪರಿಶೀಲನೆ.
  • ಪರಿಶೀಲನೆಯ ಸಂದರ್ಭದಲ್ಲಿ ಸಮಿತಿಗಳ ಗಮನಕ್ಕೆ ಬರುವ ಇನ್ನಾವುದೇ ಗಂಭೀರ ವಿಷಯಗಳನ್ನು ಆಯಾ ತನಿಖಾ ಸಮಿತಿಯ ಅಧ್ಯಕ್ಷರು ಪರಾಮರ್ಶಿಸಬಹುದು.

ಘನತ್ಯಾಜ್ಯ ನಿರ್ವಹಣೆ ಕಾಮಗಾರಿ ತನಿಖಾ ಸಮಿತಿ :

ಉಜ್ವಲ್ ಕುಮಾರ್ ಘೋಷ್, ಅಧ್ಯಕ್ಷ

ಸದಸ್ಯರು :

ದೊಡ್ಡಿಹಾಳ್, PWD ಚೀಫ್ ಇಂಜಿನಿಯರ್
ಬಸವರಾಜ ಕೋಟೆ - PWD ಚೀಫ್ ಇಂಜಿನಿಯರ್
ಟಿ.ಪ್ರಭಾಕರ್ - ಕೆಪಿಟಿಸಿಎಲ್ AEE

ರಸ್ತೆ ಅಭಿವೃದ್ಧಿ, ಓಏಫ್‌ಸಿ ಕೇಬಲ್ ಕಾಮಗಾರಿ ತನಿಖಾ ಸಮಿತಿ:

ಆಮ್ಲಾನ್ ಆದಿತ್ಯ ಬಿಸ್ವಾಸ್ - ಅಧ್ಯಕ್ಷ

ಸದಸ್ಯರು :
ಪ್ರಭಾಕರ್ ಡಿ.ಹೆಮ್ಮಿಗೆ - PWD ಚೀಫ್ ಇಂಜಿನಿಯರ್
ಜ್ವಾಲೇಂದ್ರ ಕುಮಾರ್,‌ GM, NHIA
ಕೆ. ಮೋಹನ್ - PWD ಚೀಫ್ ಇಂಜಿನಿಯರ್
ಬಸವರಾಜ್ ಶಂಶಿಮಠ್ - PWD EE
ಎನ್.ಎಸ್.ಮೋಹನ್ - PWD EE

ನೀರುಗಾಲುವೆ, ನಗರ ಯೋಜನೆ, ಸ್ವಾಧೀನಭೂಪತ್ರ ತನಿಖಾ ಸಮಿತಿ:

ಪಿಸಿ ಜಾಫರ್ - ಅಧ್ಯಕ್ಷ

ಸದಸ್ಯರು :
ಎಸ್.ಬಿ.ಸಿದ್ಧಗಂಗಪ್ಪ - ಕಾರ್ಯದರ್ಶಿ, EICR
ಹೆಚ್.ಆರ್.ರಾಮಕೃಷ್ಣ PWD ಚೀಫ್ ಇಂಜಿನಿಯರ್
ಮಲ್ಲೇಶ್ - PWD EE

ಕೆರೆ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಕಾಮಗಾರಿ ತನಿಖಾ ಸಮಿತಿ:

ಡಾ. ವಿಶಾಲ್ ಆರ್ - ಅಧ್ಯಕ್ಷ

ಸದಸ್ಯರು :
ಬೀಸೇಗೌಡ, PWD ಚೀಫ್ ಇಂಜಿನಿಯರ್
ಹೆಚ್.ಪಿ.ಪ್ರಕಾಶ್ - EE PWD
ಶ್ರೀಕಾಂತ್, PWD EE
ಹೆಚ್.ಕುಮಾರ್, PWD EE
ಜಿ.ಎಸ್.ಗೋಪಿನಾಥ್ - ಇಂಜಿನಿಯರ್, PWD

ಇದನ್ನೂ ಓದಿ : Mysuru Palace: ಮೈಸೂರು ಅಂಬಾವಿಲಾಸ ಅರಮನೆ ಹೊರಾಂಗಣದಲ್ಲಿ ಡ್ರೋನ್ ಹಾರಾಟ ನಿಷೇಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.