ETV Bharat / state

ಸರ್ಕಾರದ ಪ್ರಾಧಿಕಾರಗಳು ಸಿಎ ನಿವೇಶನಗಳ ಪಾಲಕರು ಮಾತ್ರ, ಮಾರಾಟ ಅಸಾಧ್ಯ: ಹೈಕೋರ್ಟ್

author img

By ETV Bharat Karnataka Team

Published : Sep 23, 2023, 5:20 PM IST

ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಟ್ಟಿರುವ ನಿವೇಶನಗಳಿಗೆ ಸ್ಥಳೀಯ ಪ್ರಾಧಿಕಾರದ ಅಧಿಕಾರಿಗಳು ಪಾಲಕರಾಗಿರಲಿದ್ದಾರೆಯೇ ವಿನಃ ಸಂಪೂರ್ಣ ಅವರ ವ್ಯಾಪ್ತಿಗೆ ಬರುವುದಿಲ್ಲ ಎಂದು ಧಾರವಾಡ ಹೈಕೋರ್ಟ್​ ಪೀಠ ತಿಳಿಸಿದೆ.

Highcourt Dharwad Bench
ಹೈಕೋರ್ಟ್​ ಧಾರವಾಡ ನ್ಯಾಯಪೀಠ

ಬೆಂಗಳೂರು: ಸರ್ಕಾರದ ಪ್ರಾಧಿಕಾರಗಳು ಬಡಾವಣೆಗಳಲ್ಲಿ ನಾಗರಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟ ನಿವೇಶನ (ಸಿಎ ಸೈಟ್)ಗಳ ಪಾಲಕರು ಮಾತ್ರ ಎಂದು ತಿಳಿಸಿರುವ ಹೈಕೋರ್ಟ್, ಈ ನಿವೇಶನಗಳನ್ನು ಮಾರಾಟ ಮಾಡುವ ಅಧಿಕಾರ ಪ್ರಾಧಿಕಾರಗಳಿಗಿರುವುದಿಲ್ಲ ಎಂದು ಆದೇಶ ನೀಡಿದೆ.

ಜಮೀನನ್ನು ಪರಿವರ್ತನೆಗೆ ಅನುಮತಿ ಪಡೆದು ಬಡಾವಣೆ ನಿರ್ಮಾಣ ಮಾಡಿದ ಬಳಿಕ ನಾಗರಿಕ ಸೌಲಭ್ಯಗಳಿಗೆ ಬಳಕೆಗೆ ಮೀಸಲಿಟ್ಟಿದ್ದ ನಿವೇಶನವನ್ನು ಮಾರಾಟಕ್ಕೆ ಮುಂದಾಗಿದ್ದ ಜಿಲ್ಲಾಧಿಕಾರಿಗಳ ಕ್ರಮ ಪ್ರಶ್ನಿಸಿ ಜಮೀನಿನ ಮೂಲ ಮಾಲೀಕ ಗೋಕಾಕ್ ನಿವಾಸಿ ಮೋಹನ್ ವಾಸುದೇವ ಚೌಹಾಣ್ ಎಂಬುವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚ್ಚಿನ್ ಶಂಕರ್ ಮಗದಂ ಅವರಿದ್ದ ಧಾರವಾಡ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಟ್ಟಿರುವ ನಿವೇಶನಗಳಿಗೆ ಸ್ಥಳೀಯ ಪ್ರಾಧಿಕಾರದ ಅಧಿಕಾರಿಗಳು ಪಾಲಕರಾಗಿರಲಿದ್ದಾರೆಯೇ ವಿನಃ ಸಂಪೂರ್ಣ ಅವರ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೀಠ ತಿಳಿಸಿದೆ.

ಕರ್ನಾಟಕ ನಗರಾಭಿವೃದ್ಧಿ ಕಾಯಿದೆ, ನಾಗರಿಕ ಸೌಲಭ್ಯಗಳ ಮಾರಾಟದ ನಿಷೇಧವು ಮೂಲಭೂತ ತತ್ವವಾಗಿದ್ದು, ಅವುಗಳ ಮಹತ್ವವನ್ನು ಗುರುತಿಸುತ್ತದೆ ಮತ್ತು ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಸಾರ್ವಜನಿಕರಿಗೆ ಈ ಸೌಕರ್ಯಗಳ ಲಭ್ಯತೆ, ಕರ್ನಾಟಕ ಸುಸ್ಥಿರ ನಗರ ಯೋಜನೆಯ ತತ್ವಗಳಿಂದ ಮಾರ್ಗದರ್ಶಿಸಲ್ಪಟ್ಟ ಈ ಕಾಯಿದೆಯು ಆ ನಾಗರಿಕ ಸೌಲಭ್ಯಗಳನ್ನು ಗುರುತಿಸುತ್ತದೆ ಎಂಬುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಜೊತೆಗೆ, ನಾಗರಿಕ ಸೌಕರ್ಯದ ನಿವೇಶನಗಳನ್ನು ಸಂರಕ್ಷಿಸುವಲ್ಲಿ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಸ್ಥಳೀಯ ಅಧಿಕಾರಿಗಳನ್ನು ಈ ಸ್ಥಳಗಳ ಪಾಲಕರು ಎಂದು ಗೊತ್ತುಪಡಿಸಿ, ಅಲ್ಲಿಯ ಸೇವೆಯನ್ನು ಮುಂದುವರಿಸುವ ಜವಾಬ್ದಾರಿ ಕಾಯಿದೆಯಲ್ಲಿ ಅಧಿಕಾರಿಗಳಿಗೆ ನೀಡಿರುತ್ತದೆ ಎಂದು ಪೀಠ ತಿಳಿಸಿದೆ.

ಈ ನಿವೇಶನಗಳ ಮಾರಾಟವನ್ನು ನಿಷೇಧಿಸುವುದು ಅಲ್ಪಾವಧಿಯ ಆರ್ಥಿಕ ಲಾಭಗಳ ಮೇಲೆ ನಗರ ಪ್ರದೇಶಗಳ ಸಮಗ್ರ ಅಭಿವೃದ್ಧಿಯನ್ನು ಮೌಲ್ಯೀಕರಿಸುವ ಮುಂದಾಲೋಚನಾ ಕ್ರಮವಾಗಿದೆ. ಅಲ್ಲದೆ, ಯಾವುದೇ ಪ್ರದೇಶದಲ್ಲಿ ಒದಗಿಸಲಾದ ನಾಗರಿಕ ಸೌಕರ್ಯದ ನಿವೇಶನಗಳನ್ನು ಷರತ್ತುಗಳ ಮೇಲೆ ಗುತ್ತಿಗೆ ನೀಡಲು ಮಾತ್ರ ಪ್ರಾಧಿಕಾರಕ್ಕೆ ಅಧಿಕಾರವಿದೆ. ಸಂಪೂರ್ಣ ಮಾರಾಟ ಮಾಡುವಂತಿಲ್ಲ‌ ಎಂದು ಪೀಠ ಹೇಳಿದೆ.

ಅಲ್ಲದೆ, ಸ್ಥಳೀಯ ಸಂಸ್ಥೆಗಳು ಮತ್ತು ಕಂದಾಯ ಅಧಿಕಾರಿಗಳು ನಾಗರಿಕ ಸೌಲಭ್ಯಗಳ ನಿವೇಶನಗಳೊಂದಿಗೆ ಮಧ್ಯಪ್ರವೇಶಿಸಲು ಮುಕ್ತ ಅವಕಾಶ ನೀಡಿದರೆ, ಅದು ನಿರ್ದಿಷ್ಟ ಉದ್ದೇಶಕ್ಕಾಗಿ ಬಡಾವಣೆಯಲ್ಲಿ ನಿವೇಶನ ಕಾಯ್ದಿರಿಸುವ ಉದ್ದೇಶವನ್ನೇ ವಿಫಲಗೊಳಿಸುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳ ಆದೇಶ ರದ್ದು ಪಡಿಸುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ.

ಸಿಎ ನಿವೇಶನ ಬಡಾವಣೆಗಳ ಅವಿಭಾಜ್ಯ ಅಂಗ: ಸಿಎ ನಿವೇಶನಗಳು ಕೇವಲ ಭೂಮಿ ಮಾತ್ರವಲ್ಲ. ಆಯಾ ಬಡಾವಣೆಯ ಅವಿಭಾಜ್ಯ ಘಟಕಗಳಾಗಿವೆ. ನಗರ ಭೂದೃಶ್ಯವು ನಿವಾಸಿಗಳ ಜೀವನದ ಗುಣಮಟ್ಟವನ್ನು ನೇರವಾಗಿ ಪರಿಣಾಮ ಬೀರುತ್ತದೆ. ನಾಗರಿಕ ಸೌಲಭ್ಯಗಳಿಗಾಗಿ ನಿರ್ದಿಷ್ಟ ಪ್ರದೇಶಗಳನ್ನು ಗೊತ್ತುಪಡಿಸುವ ಮೂಲಕ, ಜನಸಂಖ್ಯೆಯ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ರೋಮಾಂಚಕ ಮತ್ತು ವಾಸಯೋಗ್ಯ ನಗರ ಪರಿಸರವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಪೀಠ ತಿಳಿಸಿದೆ.

ಈ ಸ್ಥಳಗಳ ದುರುಪಯೋಗ ಅಥವಾ ವಾಣಿಜ್ಯೀಕರಣವನ್ನು ತಡೆಗಟ್ಟುವುದೇ ನಾಗರಿಕ ಸೌಲಭ್ಯಗಳಿಗೆ ಮೀಸಲಿಟ್ಟ ನಿವೇಶನಗಳ ಮಾರಾಟದ ಮೇಲಿನ ನಿಷೇಧಕ್ಕೆ ಪ್ರಮುಖ ಕಾರಣವಾಗಿದೆ. ಅಂತಹ ನಿವೇಶನ ಮಾರಾಟಕ್ಕೆ ಅನುಮತಿಸಿದಲ್ಲಿ ಅದರ ಸ್ವರೂಪವೇ ಬದಲಾಗಬಹುದಾಗಿದೆ. ಜತೆಗೆ, ಆ ನಿವೇಶನ ಖರೀದಿಸುವ ಖಾಸಗಿ ಮಾಲೀಕರು, ಅವುಗಳ ಮೂಲ ಉದ್ದೇಶವನ್ನು ದುರ್ಬಲಗೊಳಿಸುತ್ತಾರೆ.‌ ಈ ಬೆಳವಣಿಗೆ ನಾಗರಿಕರ ಪ್ರಮುಖವಾದ ಸೇವೆಗಳು ಮತ್ತು ಸೌಕರ್ಯಗಳ ಇಡೀ ಸಮುದಾಯವನ್ನು ವಂಚಿತಗೊಳಿಸುತ್ತದೆ. ಇದರಿಂದ ನಗರ ಪ್ರದೇಶದ ಒಟ್ಟಾರೆ ವಾಸಯೋಗ್ಯ ಗುಣಮಟ್ಟ ಕಡಿಮೆಯಾಗುತ್ತದೆ ಪೀಠ ತಿಳಿಸಿದೆ.

ನಗರ ಪ್ರದೇಶಗಳಲ್ಲಿ ಜನಜೀವನದ ಗುಣಮಟ್ಟ ರೂಪಿಸುವಲ್ಲಿ ನಾಗರಿಕ ಸೌಲಭ್ಯಗಳಿಗೆ ಮೀಸಲಿಟ್ಟ ನಿವೇಶನಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಇದರಲ್ಲಿ ಉದ್ಯಾನವನಗಳು, ಸಮುದಾಯ ಭವನಗಳು, ಶಾಲೆಗಳು, ಆರೋಗ್ಯ ಸೌಲಭ್ಯಗಳು ಮತ್ತು ಇತರ ಸೇವೆಗಳಂತಹ ಅಗತ್ಯ ಸಾರ್ವಜನಿಕ ಸೌಲಭ್ಯಗಳಿಗೆ ಬಳಕೆ ಮಾಡಿಕೊಳ್ಳಲು ಗುರುತಿಸಲಾಗಿರುತ್ತದೆ. ಈ ನಿವೇಶನಗಳಲ್ಲಿ ಸ್ಥಳೀಯ ನಿವಾಸಿಗಳು ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಬಳಕೆಯಾಗಿರುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಜತೆಗೆ, ಈ ನಿವೇಶನಗಳಲ್ಲಿನ ಹಸಿರು ಪ್ರದೇಶ, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು ಮತ್ತು ಮನರಂಜನೆ ಪ್ರದೇಶಗಳು ಜನ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಸಮುದಾಯದ ಪರಸ್ಪರ ಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ದೈಹಿಕ ಮತ್ತು ಮಾನಸಿಕವಾಗಿ ಉತ್ತಮ ಕೊಡುಗೆ ನೀಡುತ್ತದೆ.

ಪ್ರಕರಣದ ಹಿನ್ನಲೆ ಏನು?: ಅರ್ಜಿದಾರ ಗೋಕಾಕ್​ನ ಸರ್ವೇ ನಂಬರ್ 134/1 ಸ್ವಂತ ಜಮೀನನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡಲು ಪರಿವರ್ತನೆ ಮಾಡಿಕೊಂಡಿದ್ದರು. ಈ ಜಮೀನಿನಲ್ಲಿ 26 ನಿವೇಶನಗಳನ್ನಾಗಿ ವಿಂಗಡಿಸಿದ್ದು, ಅದರಲ್ಲಿ ಒಂದನೇ ನಿವೇಶನ 3 ಗುಂಟೆ 13 ಆಣೆ ಜಮೀನನ್ನು ನಾಗರಿಕರ ಸೌಲಭ್ಯಗಳಿಗಾಗಿ ಮೀಸಲಿಟ್ಟಿದ್ದರು. ಆ ನಿವೇಶನವನ್ನು ಮಾರಾಟ ಮಾಡುವ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಈ ಆದೇಶ ರದ್ದುಪಡಿಸುವಂತೆ ಅರ್ಜಿದಾರರು ಹೈಕೋರ್ಟ್ ಮೆಟ್ಡಿಲೇರಿದ್ದರು. ಇದೀಗ ಹೈಕೋರ್ಟ್ ಜಿಲ್ಲಾಧಿಕಾರಿಗಳ ಅದೇಶ ರದ್ದುಪಡಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಮಾಜಿ ಸೈನಿಕನ ಪತ್ನಿಗೆ ನಿವೇಶನ ಮಂಜೂರು ಮಾಡಲು ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.