ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಶಂಕಿತ ಆರೋಪಿಗಳಿಗಾಗಿ ಎಸ್ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ಮತ್ತೊಂದೆಡೆ ಶಂಕಿತರು ತಮ್ಮ ಇರುವಿಕೆಯ ಬಗ್ಗೆ ತಾಂತ್ರಿಕವಾಗಿ ಒಂದೇ ಒಂದು ಸುಳಿವು ಸಿಗದಂತೆ ಎಚ್ಚರ ವಹಿಸುತ್ತಿದ್ದಾರೆ.
ಟೆಕ್ನಿಕಲಿ ಬಲಿಷ್ಠವಾಗಿರುವ ಸಿಡಿ ಗ್ಯಾಂಗ್ :
ಸಿಡಿ ದೃಶ್ಯಾವಳಿವನ್ನು ರಾಜ್ಯದಲ್ಲಿ ಅಪ್ಲೋಡ್ ಮಾಡಿ ರಷ್ಯಾದಲ್ಲಿ ಅಪ್ಲೋಡ್ ಮಾಡಿರುವುದಾಗಿ ಬಿಂಬಿಸಿದ್ದ ಸಿಡಿ ಗ್ಯಾಂಗ್ ಅದೇ ಮಾದರಿಯಲ್ಲಿ ಟವರ್ ಲೊಕೇಶನ್ ಕೂಡ ಮಿಸ್ ಮ್ಯಾಪಿಂಗ್ ಮಾಡಿದ್ದಾರಾ ಎಂಬ ಗುಮಾನಿ ವ್ಯಕ್ತವಾಗಿದೆ. ಸಿಡಿ ಗ್ಯಾಂಗ್ ಎಥಿಕಲ್ ಹ್ಯಾಕರ್ ಹಾಗೂ ಸಂತ್ರಸ್ತೆ ಮೊಬೈಲ್ಗೆ ವಿವಿಧ ಸಾಫ್ಟ್ವೇರ್ ಇನ್ಸ್ಟಾಲ್ ಹಾಗೂ ಟವರ್ ಲೊಕೇಶನ್ ಮಿಸ್ ಮ್ಯಾಚ್ ಸೇರಿ ಹಲವು ಸಾಫ್ಟ್ವೇರ್ಗಳನ್ನು ಬಳಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೊನ್ನೆಯಷ್ಟೇ ಸಿಡಿ ಗ್ಯಾಂಗ್ ಟವರ್ ಲೊಕೇಶನ್ ದೆಹಲಿಯಲ್ಲಿ ಪತ್ತೆಯಾಗಿತ್ತು. ಆ ಸುಳಿವಿನ ಮೆರೆಗೆ ದೆಹಲಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಎಸ್ಐಟಿಗೆ ಕೆಲವೇ ಗಂಟೆಗಳಲ್ಲಿ ವಿವಿಧ ಟವರ್ ಲೊಕೇಶನ್ ತೋರಿಸಿದೆ. ಹೀಗಾಗಿ ಎಸ್ಐಟಿ ತಾಂತ್ರಿಕ ತಜ್ಞರ ಮೊರೆ ಹೋಗಿದೆ.
ಯುವತಿ ಬಗ್ಗೆ ಬಾಯ್ಫ್ರೆಂಡ್ ಮಾಹಿತಿ:
ಸಂತ್ರಸ್ತ ಯುವತಿ ನಗರದ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿ ಕೆಲಸ ಮಾಡುತ್ತಿದ್ದಳು. ತಿಂಗಳಿಗೆ 45 ಸಾವಿರ ವೇತನ ಪಡೆಯುತ್ತಿದ್ದಳಂತೆ. ಐಶಾರಾಮಿಯಾಗಿ ಜೀವನ ನಡೆಸಬೇಕೆಂಬ ಆಸೆ ಹೊಂದಿದ್ದ ಯುವತಿ ಅನ್ಯ ಕಾರಣಕ್ಕಾಗಿ ಕಂಪೆನಿ ತೊರೆದು ಸಿಡಿ ಗ್ಯಾಂಗ್ ಜೊತೆ ಗುರುತಿಸಿಕೊಂಡಿದ್ದಳು. ಈ ವೇಳೆ ಶಂಕಿತ ಆರೋಪಿ ಶ್ರವಣ್ಗೆ ಯುವತಿ ಪರಿಚಯವಾಗಿತ್ತು. ಹೀಗೆಂದು ಎಸ್ಐಟಿ ವಿಚಾರಣೆ ವೇಳೆ ಯುವತಿ ಬಾಯ್ಫ್ರೆಂಡ್ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಯುವತಿಯಿಂದ ದೂರವಾಗಿದ್ದ ಬಾಯ್ಫ್ರೆಂಡ್ :
ಸಿಡಿ ರಿಲೀಸ್ ಅಗಿದ್ದ ದಿನವೇ ಎಕ್ಸ್ ಬಾಯ್ಫ್ರೆಂಡ್ಗೆ ಮೂವರು ಗೆಳೆಯರು ವಿಡಿಯೋ ಕಳಿಸಿದ್ದರಂತೆ. ಈ ವೇಳೆ ವಿಡಿಯೋ ನೋಡಿ ಅದು ತನ್ನ ಹುಡುಗಿಯೇ ಎಂದಿದ್ದನು. ಆದರೆ ಈ ವೇಳೆ ಶ್ರವಣ್ ಮತ್ತು ನರೇಶ್ ಇದೆಲ್ಲ ಸುಳ್ಳು, ಬೇರೆ ಯಾರೋ ಮಾರ್ಫ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಯುವತಿ ಒಪ್ಪದಿದ್ದಾಗ ಬೇರೆ ಬೇರೆ ವಿಡಿಯೋ ತೋರಿಸಿ ಶ್ರವಣ್ ಸಮಾಧಾನ ಮಾಡಿದ್ದಾನೆ. ಯುವತಿಯ ಜೀವಕ್ಕೆ ತೊಂದರೆ ಇದೆ, ಹೀಗಾಗಿ ಗೋವಾಗೆ ಹೋಗಿ ಇರಿ ಎಂದು ಕಳಿಸಿದ್ದರು. ನಂತರ ಯುವತಿ ಮತ್ತು ಆಕೆಯ ಬಾಯ್ ಫ್ರೆಂಡ್ ಗೋವಾಕ್ಕೆ ಹೋಗಿದ್ದರು. ಗೋವಾದಲ್ಲಿ ಸತ್ಯ ಅರಿತಿದ್ದ ಆಕೆಯ ಬಾಯ್ ಫ್ರೆಂಡ್ ಆಕೆಯಿಂದ ದೂರವಾಗಿದ್ದನು.
ಆಗಸ್ಟ್ನಿಂದ ಅಕ್ಟೋಬರ್ನಲ್ಲಿ ಆಕ್ಟಿವ್ ಆಗಿದ್ದ ಸಿಡಿ ಟೀಮ್:
ಜುಲೈನಲ್ಲಿ ನರೇಶ್ ಮತ್ತು ಆತನ ತಂಡಕ್ಕೆ ಯುವತಿ ಸೇರ್ಪಡೆಯಾಗಿದ್ದಳು. ನಂತರ ಯುವತಿಗೆ ಹಣ ಕೊಟ್ಟು ಏನು ಮಾಡಬೇಕು ಎಂದು ಗ್ಯಾಂಗ್ ತರಬೇತಿ ನೀಡಿತ್ತು. ಯಾವುದೇ ಕಾರಣಕ್ಕೂ ವಿಡಿಯೋದಲ್ಲಿ ಮುಖ ಕಾಣುವುದಿಲ್ಲ. ಫೇಸ್ ಬ್ಲರ್ ಮಾಡುತ್ತೀವಿ ಎಂದು ಹೇಳಿದ್ದರಂತೆ. ಯುವತಿ ತನ್ನ ಗುರುತು ಪತ್ತೆ ಆಗುವುದಿಲ್ಲ ಎಂದು ಭಾವಿಸಿದ್ದಳು. ನಂತರದ ದಿನಗಳಲ್ಲಿ ಮುಖದ ಸಹಿತ ವಿಡಿಯೋ ರಿಲೀಸ್ ಆಗಿತ್ತು.
ಓದಿ: 'ಬಾಂಬೆ ತಂಡ'ದ ಸದಸ್ಯರ ಕ್ಷೇತ್ರಗಳು ಅಭಿವೃದ್ಧಿಯಾದವೇ?; ಎಚ್ಡಿಕೆ ವಾಗ್ದಾಳಿ
ಮೂರನೇ ಬಾರಿ ನೋಟಿಸ್:
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಶಂಕಿತ ಆರೋಪಿಗಳಿಗೆ ಇಂದು ಹಾಜರಾಗುವಂತೆ ನೋಟಿಸ್ ನೀಡಿದೆ. ಎಸ್ಐಟಿಯಿಂದ ಶಂಕಿತರಿಗೆ ಮೂರನೇ ರೌಂಡ್ ವಿಚಾರಣೆ ನಡೆಯಲಿದೆ. ಭವಿತ್, ಲಕ್ಷ್ಮೀಪತಿ, ಆಕಾಶ್ ಮತ್ತು ಟೈಂ ಕ್ರಿಯೆಷನ್ ಹರೀಶ್ ಎಂಬುವರಿಗೆ ನೋಟಿಸ್ ನೀಡಿದೆ.