ಈ ದುಷ್ಟ ಭಸ್ಮಾಸುರನ ಕೈಗೆ ಈಗಲೇ ಬರೆ ಹಾಕದಿದ್ದರೆ ರೈತರು ಬೀದಿಪಾಲು: ಸಿದ್ದರಾಮಯ್ಯ

author img

By

Published : Dec 31, 2022, 11:09 PM IST

former-cm-siddaramaiah-slams-amit-sha

ಬ್ಯಾಂಕ್​ಗಳನ್ನು ಕಿತ್ತುಕೊಂಡ ಬಿಜೆಪಿಯವರು - ಗೃಹ ಮಂತ್ರಿ ಅಮಿತ್​ ಶಾ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ- ನಮ್ಮ ಹಾಲಿನ ವಹಿವಾಟಿನ ಮೇಲೆ ಗುಜರಾತಿ ಕಾರ್ಪೋರೇಟರ್​ಗಳ ಕಣ್ಣು ಬಿದ್ದಿದೆ

ಬೆಂಗಳೂರು: ನಮ್ಮ ಬ್ಯಾಂಕುಗಳನ್ನು ಕಿತ್ತುಕೊಂಡು ನಮ್ಮ ಆರ್ಥಿಕತೆಯನ್ನು ನಾಶಮಾಡಲೆತ್ನಿಸಿದ ಬಿಜೆಪಿಯವರು ಈಗ ನಮ್ಮ ಹಾಲಿನ ಮೂಲಕ್ಕೆ ಕೈ ಹಾಕುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಗುಜರಾತ್​ ಕಾರ್ಪೋರೇಟರ್​ಗಳ ಕಣ್ಣು ಬಿದ್ದಿದೆ : ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ದುಷ್ಟ ಭಸ್ಮಾಸುರನ ಕೈಗೆ ಈಗಲೇ ಬರೆ ಹಾಕದಿದ್ದರೆ ನಮ್ಮ 25 ಲಕ್ಷ ರೈತ ಕುಟುಂಬಗಳನ್ನು ಬೀದಿಪಾಲು ಮಾಡಿಬಿಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಹಾಲು ಮಹಾ ಮಂಡಲ ಗುಜರಾತ್ ಜೊತೆಗೂಡಬೇಕೆಂಬ ಬಯಕೆಯನ್ನು ಅಮಿತ್ ಶಾ ವ್ಯಕ್ತಪಡಿಸಿದ್ದಾರೆ. ನಮ್ಮ ರಾಜ್ಯದ ಹಾಲು ಉತ್ಪಾದಕ ರೈತರು ಸುಮಾರು 20,000 ಕೋಟಿ ರೂಪಾಯಿಗಳವರೆಗೆ ಹಾಲಿನ ವಹಿವಾಟು ಮಾಡುತ್ತಾರೆ. ಈ ಲಕ್ಷಾಂತರ ಕುಟುಂಬಗಳ ಮನೆಯಲ್ಲಿ ದೀಪ ಬೆಳಗುವುದೆ ಹಾಲಿನಿಂದ. ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ಖರ್ಚಿನಿಂದ ಹಿಡಿದು, ಅಕ್ಕಿ, ಬೇಳೆ, ಬಟ್ಟೆ- ಬರೆ ಮುಂತಾದವುಗಳೆಲ್ಲ ಹಾಲಿನಿಂದಲೆ ಬರಬೇಕು. ಇಂಥ ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಈಗ ಗುಜರಾತ್ ಕಾರ್ಪೊರೇಟ್ ಕುಳಗಳ ಕಣ್ಣು ಬಿದ್ದಿದೆ ಎಂದು ಆರೋಪಿಸಿದ್ದಾರೆ.

ದೇಶದ ಜನರ ರಕ್ತವನ್ನು ಹೀರುತ್ತಿದ್ದಾರೆ : ಅವರ ಕಣ್ಣು ಬಿದ್ದ ಕಡೆ, ಅವರು ಕಾಲು ಇಟ್ಟ ಕಡೆ ಎಲ್ಲವೂ ಸರ್ವನಾಶವಾಗುತ್ತದೆ. ಇವರಿಗಾಗಿಯೆ ಹಗಲಿರುಳು ದುಡಿಯುತ್ತಿರುವ ಅಮಿತ್ ಶಾ, ಮೋದಿ ಮುಂತಾದವರೆಲ್ಲ ಥರ ಥರದ ಸುಳ್ಳುಗಳ, ಮುಳ್ಳಿನ ಟೋಪಿಯನ್ನು ಸಿದ್ಧಪಡಿಸಿಕೊಂಡು ಕನ್ನಡಿಗರ ತಲೆಗೆ ತೊಡಿಸಲು ತರುತ್ತಿದ್ದಾರೆ. ನಮಗೆ ಆಕ್ಸಿಜನ್ನು ಕೊಡದೆ ಕೊರೊನಾ ಸಮಯದಲ್ಲಿ ಜನರನ್ನು ಕೊಂದ ಪಾಪವನ್ನು ಮೋದಿ ಸರ್ಕಾರವೆ ಹೊರಬೇಕು. ಕೊರೋನಾ ನೆಪದಲ್ಲಿ ವ್ಯಾಪಕ ಭ್ರಷ್ಟಾಚಾರ ಮಾಡಿ ಹೆಣದ ಮೇಲೂ ಕಮಿಷನ್ ಲೂಟಿ ಮಾಡಿದ ಪಾಪವನ್ನು ಬಿಜೆಪಿ ಹೊರಲೇಬೇಕು. ನಮ್ಮನ್ನು ದೋಚಲು ಬಿಜೆಪಿಯವರು ಸಿದ್ಧಪಡಿಸಿಕೊಂಡಿರುವ ವಿಷದ ಟೋಪಿಯಲ್ಲಿ ಹಿಂದೂ-ಮುಸ್ಲಿಂ ದ್ವೇಷ, ಭ್ರಷ್ಟಾಚಾರ, ಕುಟುಂಬ ರಾಜಕಾರಣ ಎಂಬ ಕಡ್ಡಾಯವಾದ ಮೂರು ಮುಳ್ಳುಗಳು ಇರುತ್ತವೆ. ಜನರು ಎಚ್ಚರ ವಹಿಸಬೇಕು. ಈ ಮಾತುಗಳನ್ನೆ ಮಂತ್ರದಂತೆ ಹೇಳಿ ಅಧಿಕಾರಕ್ಕೆ ಬಂದು ದೇಶದ ಜನರ ರಕ್ತವನ್ನು ಪ್ರತಿ ಹನಿಯನ್ನೂ ಹೀರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯ ಸುಳ್ಳರನ್ನು ಕರ್ನಾಟಕದಿಂದ ತೊಲಗಿಸಿ : ಬಿಜೆಪಿಯವರ ರಾಷ್ಟ್ರ ಪ್ರೇಮವೆಂದರೆ ಅದು ಅಂಬಾನಿ, ಅದಾನಿಗಳಂಥ ಬಂಡವಾಳಿಗರಿಗೆ ಇಡೀ ದೇಶವನ್ನು ಲೂಟಿ ಹೊಡೆಯಲು ಲೈಸೆನ್ಸ್ ಕೊಡುವುದು ಎಂದರ್ಥ ಹಾಗೂ ರಾಷ್ಟ್ರಪ್ರೇಮವೆಂದರೆ ಮನುವಾದಿ ಸಿದ್ಧಾಂತವನ್ನು ಜಾರಿಗೆ ತಂದು ಬುದ್ಧ, ಬಸವಣ್ಣ, ನಾರಾಯಣಗುರು, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಕುವೆಂಪು ಮುಂತಾದ ಮಹನೀಯರ ವಿಚಾರಗಳನ್ನು ಮೂಟೆ ಕಟ್ಟಿ ಮೂಲೆಗೆ ಎಸೆದು ಭಾರತವನ್ನು ಮತ್ತೆ ಕೆಲವರೆ ನಿಯಂತ್ರಿಸಬೇಕು ಎಂಬುದಾಗಿದೆ. ನಾವೀಗ ಕೂಡಲೆ ಬಿಜೆಪಿಯ ವಿದೂಷಕ ಸುಳ್ಳರನ್ನು ಕರ್ನಾಟಕದಿಂದ ತೊಲಗಿಸಿ ನಾಡನ್ನು ಉಳಿಸಿಕೊಳ್ಳಬೇಕಾಗಿದೆ. ನಿಮ್ಮ ಸುಳ್ಳಿಗೆ ನಾವು ಬಲಿಯಾಗುವುದಿಲ್ಲ ಎಂದು ಕೂಗಿ ಹೇಳಬೇಕಾಗಿದೆ. ನಮ್ಮ ರೈತರ ಏಳಿಗೆಯಾಗಬೇಕಾಗಿದೆ. ಅದಕ್ಕಾಗಿ ಅವರ ಹಾಲಿಗೆ ಬೆಲೆ ಬೇಕು. ಬೆಳೆದ ತರಕಾರಿ, ಹಣ್ಣು, ಹತ್ತಿ, ಕಬ್ಬು, ಭತ್ತ, ರಾಗಿ ಸೇರಿದಂತೆ ಎಲ್ಲ ಬೆಳೆಗಳಿಗೆ, ಉತ್ಪನ್ನಗಳಿಗೆ ಉತ್ತಮ ಬೆಲೆ ಬೇಕು ಎಂದಿದ್ದಾರೆ.

ಕಾಮಗಾರಿಗಳಲ್ಲಿ ಕನಿಷ್ಠ 40 ಪರ್ಸೆಂಟ್ ಲಂಚ : ಅವರು ಬೆಳೆದಿದ್ದನ್ನು ಕೊಂಡುಕೊಳ್ಳುವ ವ್ಯವಸ್ಥೆ ಬೇಕು. ಕೊಳ್ಳುವ ಗ್ರಾಹಕರ ಜೇಬಿನಲ್ಲಿ ಹಣ ಇರುವಂತೆ ನೋಡಿಕೊಳ್ಳಬೇಕು. ನಗರಗಳ ಜನರಿಗೂ ವಸ್ತುಗಳು ದುಬಾರಿಯಾಗದ ರೀತಿಯಲ್ಲಿ ವಸ್ತುಗಳು ಸಿಗಬೇಕು. ಬಿಜೆಪಿ ಸರ್ಕಾರವು ಲಂಚವಿಲ್ಲದೆ ಯಾವ ಅಧಿಕಾರಿಗೂ ಹುದ್ದೆ ಕೊಡುತ್ತಿಲ್ಲ. ತಾಲ್ಲೂಕು ಆಫೀಸು, ಪೊಲೀಸ್ ಸ್ಟೇಷನ್ನು ಸೇರಿದಂತೆ ಯಾವ ಕಛೇರಿಗೆ ಹೋದರೂ ಬಡ ಬಗ್ಗರ, ರೈತರ ಕೆಲಸಗಳು ಆಗುತ್ತಿಲ್ಲ. ರೈತರು ಇದರಿಂದ ಬೇಸತ್ತು ಹೋಗಿದ್ದಾರೆ. ಸರ್ಕಾರದ ಯಾವುದೇ ಕಾಮಗಾರಿಗಳಲ್ಲಿ ಕನಿಷ್ಠ 40 ಪರ್ಸೆಂಟ್ ಲಂಚ ನಡೆಯುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಹೇಮಾವತಿ ನಾಲೆಗೆ ಸಂಬಂಧಿಸಿದ ನೂರಾರು ಕೋಟಿ ಕಾಮಗಾರಿಯ ಅನೇಕ ಬಾಬತ್ತುಗಳಲ್ಲಿ ಒಂದು ರೂಪಾಯಿಯ ಕೆಲಸವೂ ನಡೆದಿಲ್ಲ. ಆದರೆ ಬಿಲ್ಲು ಮಾಡಿ ನುಂಗಿ ಹಾಕಲಾಗಿದೆ. ಇದರಲ್ಲಿ ಶೇ.80-100 ಪರ್ಸೆಂಟ್ ಕಮಿಷನ್ ನಡೆದಿದೆ. ನಿನ್ನೆ ಕೂಡ ತುಮಕೂರಿನ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ತ ಕೃಷ್ಣಾ ಮೇಲ್ದಂಡೆ ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ. ರಸ್ತೆ, ಸೇತುವೆ, ಶಿಕ್ಷಣ ಎಲ್ಲದರಲ್ಲೂ ನುಂಗಿ ನೀರು ಕುಡಿಯಲಾಗುತ್ತಿದೆ. ಇಷ್ಟಿದ್ದರೂ ಯಾವ ಲಜ್ಜೆ ನಾಚಿಕೆ, ಮರ್ಯಾದೆ ಇಲ್ಲದೆ ಬಿಜೆಪಿಯವರು ಭ್ರಷ್ಟಾಚಾರದ ವಿರುದ್ಧ ಮಾತಾನಾಡುತ್ತಾರೆ. ಇದಕ್ಕಿಂತ ವಿದೂಷಕತನ ಬೇರೆ ಯಾವುದಿದೆ?

ಭಯೋತ್ಪಾದನೆಯ ಪಿತೃಗಳೇ ಬಿಜೆಪಿಯವರು : ಇದರ ಜೊತೆಗೆ ಬಿಜೆಪಿಯವರು ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಾರೆ. ಭಯೋತ್ಪಾದನೆಯ ಪಿತೃಗಳೇ ಬಿಜೆಪಿಯವರು. ನಾವು ಗಾಂಧೀಜಿಯನ್ನು ಕಳೆದುಕೊಂಡೆವು. ಬಸವಣ್ಣನವರನ್ನು ಕಳೆದುಕೊಂಡೆವು. ಕಲ್ಬುರ್ಗಿಯವರನ್ನು, ಗೌರಿ ಲಂಕೇಶರನ್ನು ಕಳೆದುಕೊಂಡೆವು. ನಮ್ಮದೇ ಪಕ್ಷದ ಇಂದಿರಾಗಾಂಧಿ, ರಾಜೀವ್ ಗಾಂಧಿಯವರನ್ನು ಕಳೆದುಕೊಂಡೆವು. ಆದರೆ ಬಿಜೆಪಿಯವರು ಭಯೋತ್ಪಾದಕರನ್ನು ವಿಮಾನದಲ್ಲಿ ಕೂರಿಸಿಕೊಂಡು ಕಂದಹಾರ್‍ಗೆ ಬಿಟ್ಟು ಬಂದರು. ತಾಲಿಬಾನ್ ಗೆ ಗೋಧಿ, ಔಷಧ, ಧಾನ್ಯಗಳು, ಹಣಕಾಸಿನ ನೆರವು ಇವನ್ನೆಲ್ಲ ಮಾಡುತ್ತಿದ್ದಾರೆ. ತಾಲಿಬಾನಿಗಳು ಹೆಣ್ಣು ಮಕ್ಕಳು ಶಾಲೆ, ಕಾಲೇಜುಗಳಿಗೆ ಹೋಗಬಾರದೆಂದು ಕಾನೂನು ತಂದಿದ್ದಾರೆ. ಆರೆಸ್ಸಿಸ್ಸಿನ ಮೋಹನ ಭಾಗವತರು ಸಹ ಹೆಣ್ಣು ಮಕ್ಕಳು ಮನೆ ಕೆಲಸ ಮಾತ್ರ ಮಾಡಬೇಕು, ಹೊರಗಡೆ ಹೋಗಬಾರದು ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಇದ್ದಾಗ ಪಿಎಫ್‍ಐ ಮೇಲಿನ ಕೇಸುಗಳನ್ನು ವಾಪಸ್ಸು ತೆಗೆದುಕೊಂಡರು ಎಂದು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.

ಬಿಜೆಪಿ ಸುಳ್ಳು ಹೇಳಿಕೊಂಡು ಓಡಾಡುತ್ತಿದೆ : ನಾನು ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ತರಿಸಿಕೊಂಡಿದ್ದೇನೆ. ಸರ್ಕಾರವೆ ನೀಡಿರುವ ಉತ್ತರದಲ್ಲಿ ಪಿಎಫ್‍ಐ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ಸು ತೆಗೆದುಕೊಂಡ ಒಂದೆ ಒಂದು ದಾಖಲೆಯನ್ನೂ ನೀಡಿಲ್ಲ. ಇದಾದ ಮೇಲೆ ಮತ್ತೊಮ್ಮೆ ಪತ್ರ ಬರೆದು ಪಿಎಫ್‍ಐ ಕಾರ್ಯಕರ್ತರ ಹೆಸರು, ಅವರ ಮೇಲಿದ್ದ ಪ್ರಕರಣ ಇವುಗಳ ಸಮಗ್ರ ದಾಖಲೆ ಕೊಡಿ ಎಂದು ವಿರೋಧ ಪಕ್ಷದ ನಾಯಕನಾಗಿ ಕೇಳಿದ್ದೇನೆ.

ಕಳೆದ 6 ತಿಂಗಳಿಂದ ಮಾಹಿತಿಯನ್ನೆ ಕೊಡದೆ ಕಡತವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಇಟ್ಟುಕೊಂಡು ಕೂತಿದ್ದಾರೆ. ಆದರೂ ನಾಚಿಕೆಯೇ ಇಲ್ಲದ ನಿರ್ಲಜ್ಜ ಬಿಜೆಪಿ ಸುಳ್ಳು ಹೇಳಿಕೊಂಡು ಓಡಾಡುತ್ತಿದೆ. ಇದೇ ಬಿಜೆಪಿಯೆ ಎಸ್‍ಡಿಪಿಐ ಜೊತೆ ಹಲವಾರು ಕಡೆ ಒಳ ಒಪ್ಪಂದ ಮಾಡಿಕೊಂಡ ಮಾಹಿತಿ ನಮ್ಮ ಬಳಿ ಇದೆ. ಇಷ್ಟಿದ್ದರೂ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಚುನಾವಣೆ ಹತ್ತಿರ ಬರುತ್ತಿದೆ. ಅಂಬಾನಿ, ಅದಾನಿಗಳ ರಾಯಭಾರಿಗಳು ಇನ್ನು ಮುಂದೆ ಕರ್ನಾಟಕಕ್ಕೆ ಬರುತ್ತಾರೆ. ಜನರಿಗೆ ಮುಳ್ಳಿನ ಟೋಪಿ ತೊಡಿಸಿ ಚಿನ್ನದ ಕಿರೀಟವೆನ್ನುತ್ತಾರೆ. ಜನರು ಜಾಗ್ರತೆ ವಹಿಸದಿದ್ದರೆ ನಾಡು ಶಾಶ್ವತವಾಗಿ ಕುಸಿದು ಹೋಗಲಿದೆ‌ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕದ ಯುವಕರು, ಬುದ್ಧಿವಂತರು ಎಲ್ಲರೂ ಇದನ್ನು ಅರ್ಥ ಮಾಡಿಕೊಂಡು ಕರ್ನಾಟಕವನ್ನು ಈ ಪೀಡೆಗಳಿಂದ ಮುಕ್ತಗೊಳಿಸಬೇಕು. ನವ ಕರ್ನಾಟಕ ನಿರ್ಮಾಣಕ್ಕೆ ಪ್ರತಿಜ್ಞೆ ಮಾಡಬೇಕು. ಮತ್ತೊಮ್ಮೆ ಹೇಳುತ್ತೇನೆ. ಸ್ವಾಭಿಮಾನ, ಸ್ವಾತಂತ್ರ್ಯ ಅಭಿವೃದ್ಧಿ ನಮ್ಮ ಗುರಿಯಾಗಬೇಕೊ ಅಥವಾ ಮನುವಾದಕ್ಕೆ, ಗುಜರಾತಿನ ಕಾರ್ಪೊರೇಟ್ ಬಂಡವಾಳಿರಿಗೆ ಗುಲಾಮರಾಗುವುದು ನಮ್ಮ ಆಯ್ಕೆಯೊ ಎಂದು ತೀರ್ಮಾನಿಸಬೇಕಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್​ ಎಚ್​ ಕೆ ಪಾಟೀಲರ ಪೊಲಿಟಿಕಲ್ ಡೇಟ್ ಎಕ್ಸ್​ಪೈರ್ ಆಗಿದೆ :​ ಪ್ರಹ್ಲಾದ್​ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.