'ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ'

author img

By

Published : Oct 11, 2021, 4:36 PM IST

Updated : Oct 11, 2021, 5:41 PM IST

felicitation-to-the-athletes-who-participated-in-the-tokyo-olympic-games

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜಭವನದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಟೋಕಿಯೋ ಒಲಿಂಪಿಕ್ಸ್​ ಮತ್ತು ಪ್ಯಾರಾ ಒಲಿಂಪಿಕ್ಸ್​​ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಲಾ ಒಂದು ಲಕ್ಷ ರೂ. ನೀಡಿ ಸನ್ಮಾನಿಸಿದರು.

ಬೆಂಗಳೂರು: ಭಾರತವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕ್ರೀಡಾಪಟುವೂ ಚಾಂಪಿಯನ್. ದಿವ್ಯಾಂಗರು ಸೇರಿದಂತೆ ಇಂದಿನ ಯುವ ಪೀಳಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು, ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ತರಬೇತಿ ನೀಡುವುದು, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

felicitation-to-the-athletes-who-participated-in-the-tokyo-olympic-games
ಟೋಕಿಯೋ ಒಲಿಂಪಿಕ್​ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಸನ್ಮಾನ

ಇಂದು ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಟೋಕಿಯೋ ಒಲಿಂಪಿಕ್ಸ್ ಮತ್ತು ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಹಾಗೂ ತರಬೇತುದಾರರಿಗೆ ಸನ್ಮಾನ ಸಮಾರಂಭದಲ್ಲಿ ಕ್ರೀಡಾಪಟುಗಳಿಗೆ ತಲಾ ಒಂದು ಲಕ್ಷ ರೂ ನಗದು ನೀಡಿ ಪುರಸ್ಕರಿಸಿದರು.

ಕ್ರೀಡಾಪಟುಗಳು ಒಲಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲುವ ಮೂಲಕ ವಿಶ್ವದಲ್ಲೇ ಕರ್ನಾಟಕ ರಾಜ್ಯ ಮತ್ತು ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕ್ರೀಡೆ ಭವಿಷ್ಯ ಉಜ್ವಲವಾಗಲಿದೆ. ಕರ್ನಾಟಕ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ವಿವಿಧ ಹಂತಗಳಲ್ಲಿ ಸಾಧನೆ ಮಾಡಿದ ಆಟಗಾರರಿಗೆ ಬಹುಮಾನ ನೀಡುವುದರೊಂದಿಗೆ, ಆಧುನಿಕ ಕ್ರೀಡಾ ಸೌಲಭ್ಯಗಳನ್ನು ಸಹ ಆಟಗಾರರಿಗೆ ಒದಗಿಸಲಾಗುತ್ತಿದೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಕ್ರೀಡಾ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಯೋಜನೆಗಳನ್ನು ಕ್ರೀಡಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ವಿಶೇಷವಾಗಿ ದಿವ್ಯಾಂಗರ ಸಾಮರ್ಥ್ಯ, ಚೈತನ್ಯವನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಪ್ಯಾರಾ ಒಲಿಂಪಿಕ್ ಕ್ರೀಡಾಕೂಟವನ್ನು 1960 ರಲ್ಲಿ ಆರಂಭಿಸಲಾಯಿತು. 1968 ರಲ್ಲಿ ಭಾರತವು ಮೊದಲ ಬಾರಿಗೆ ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿತು. 1972ರಲ್ಲಿ 50 ಮೀಟರ್ ಫ್ರೀಸ್ಟೈಲ್ ಸ್ವಿಮ್ಮಿಂಗ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಜೋಗಿಂದರ್ ಸಿಂಗ್ ಬೇಡಿ 1984ರ ಪ್ಯಾರಾ ಒಲಿಂಪಿಕ್​ನಲ್ಲಿ ಒಂದು ಬೆಳ್ಳಿ ಮತ್ತು 2 ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಅತಿ ಹೆಚ್ಚು ಪದಕ ಗೆದ್ದಿರುವ ಭಾರತೀಯ ಪ್ಯಾರಾ ಕ್ರೀಡಾಪಟು ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಭಾರತವು 1984 ರ ಪ್ಯಾರಾ ಒಲಿಂಪಿಕ್ ನಂತರ ನಿರಂತರವಾಗಿ ಈ ಆಟಗಳಲ್ಲಿ ಭಾಗವಹಿಸುತ್ತಿದೆ ಎಂದು ತಿಳಿಸಿದರು.

ಟೋಕಿಯೊ ಒಲಿಂಪಿಕ್ -2020ರ ಕ್ರೀಡಾಕೂಟದಲ್ಲಿ ಭಾರತವು 7 ಪದಕಗಳನ್ನು ಗೆದ್ದಿದೆ. ಟೋಕಿಯೊ ಪ್ಯಾರಾ ಒಲಿಂಪಿಕ್ಸ್‌ಗೆ ಮುನ್ನ ಭಾರತವು ಒಟ್ಟು 12 ಪದಕಗಳನ್ನು ಗೆದ್ದಿತ್ತು. ಕ್ರೀಡಾಲೋಕದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತೀಯ ಪ್ಯಾರಾ ಅಥ್ಲೀಟ್ ಗಳು ಈ ಬಾರಿ ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದಲ್ಲಿ 19 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತೀಯ ಆಟಗಾರರು ಏನೆಲ್ಲಾ ಪದಕಗಳನ್ನು ಗೆದ್ದಿದ್ದಾರೆ ಮತ್ತು ಅದ್ಭುತ ಪ್ರದರ್ಶನ ನೀಡುವ ಮೂಲಕ ಹೊಸ ದಾಖಲೆಗಳನ್ನು ಸೃಷ್ಟಿಸಿರುವುದಕ್ಕೆ ದೇಶ ಹೆಮ್ಮೆ ಪಡುತ್ತದೆ. ನೀವು ಸಾಧಿಸಿದ ಸಾಧನೆ ಯುವ ಆಟಗಾರರಿಗೆ ಅದ್ಭುತ ಮತ್ತು ಸ್ಫೂರ್ತಿದಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ಯಾರಾ ಒಲಿಂಪಿಕ್ಸ್​ ಕೋಚ್​ಗಳನ್ನು ರಾಜಭವನದ ಔತಣಕೂಟಕ್ಕೆ ಆಮಂತ್ರಿಸದೇ ಅವಮಾನ

ಇಂದು ಒಲಿಂಪಿಕ್ಸ್ ಹಾಗೂ ಪ್ಯಾರಾ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಮತ್ತು ಅವರ ಕೋಚ್​ಗಳಿಗೆ ರಾಜಭವನದಲ್ಲಿ ಔತಣಕೂಟ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ದಿವ್ಯಾಂಗ ಕ್ರೀಡಾಪಟು ಕೋಚ್ ಸತ್ಯನಾರಾಯಣ ಅವರನ್ನ ಔತಣಕೂಟಕ್ಕೆ ಕರೆಯದಿರುವುದು ಅವಮಾನದ ಸಂಗತಿ ಎಂದು ಕರ್ನಾಟಕ ಕ್ರೀಡಾ ಒಕ್ಕೂಟ (ದಿವ್ಯಾಂಗ) ಬೇಸರ ವ್ಯಕ್ತಪಡಿಸಿತ್ತು.

ಕೋಚ್ ಸತ್ಯನಾರಾಯಣ ಅವರಿಗೆ ಆಮಂತ್ರಣ ನೀಡದೆ ಇರುವ ಬಗ್ಗೆ ರಾಜ್ಯಪಾಲರಿಗೆ ಇ-ಮೇಲ್ ಮೂಲಕ ಪತ್ರ ಕಳಿಸಲಾಗಿದೆ. ಇತ್ತೀಚಿನ ಪ್ಯಾರಾ ಒಲಿಂಪಿಕ್ ಗೇಮ್ಸ್​ನಲ್ಲಿ ಸತ್ಯನಾರಾಯಣ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಕ್ರೀಡಾ ತರಬೇತುದಾರ, ಪ್ಯಾರಾ ಒಲಿಂಪಿಯನ್ ನಿಶಾದ್ ಕುಮಾರ್ ಇವರ ಕೋಚಿಂಗ್ ನಲ್ಲಿ ಟೋಕಿಯೊದಲ್ಲಿ ಬೆಳ್ಳಿ ಪ್ಯಾರಾ ಒಲಿಂಪಿಕ್ ಪದಕ ಗೆದ್ದಿದ್ದಾರೆ. ಅವರ ಸೇವೆಯನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅನೇಕ ಬಾರಿ ಮತ್ತು ಭಾರತ ಸರ್ಕಾರವು ಪ್ಯಾರಾ ಕ್ರೀಡೆಗಳಲ್ಲಿ ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಪ್ರಶಂಸಿಸಿದೆ.

ಯುವಜನತೆ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೊರಗಿನವರ ಜತೆ ಕೈ ಜೋಡಿಸಿದೆ. ಈ ಕಾರಣದಿಂದ ಕರ್ನಾಟಕ ಕ್ರೀಡೆಯಲ್ಲಿ ಇನ್ನೂ ಹಿಂದೆ ಉಳಿದಿದೆ. ಯುವಜನತೆ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರನ್ನ ಅವಮಾನಿಸಲಾಗಿದೆ ಮತ್ತು ದಿವ್ಯಾಂಗ ಪ್ಯಾರಾ ಕ್ರೀಡಾ ವ್ಯಕ್ತಿಗಳಲ್ಲಿ ತಾರತಮ್ಯವನ್ನು ತೋರಿಸಲಾಗಿದೆ.

ಆದ್ದರಿಂದ, ಇಲಾಖೆಯು ಆಯೋಜಿಸಿರುವ ಒಲಿಂಪಿಕ್ಸ್ ಮತ್ತು ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಪ್ಯಾರಾ ಅಥ್ಲೀಟ್‌ಗಳು, ತರಬೇತುದಾರರು ಅಭಿನಂದನಾ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಾರೆ ಮತ್ತು ಪ್ರತಿಭಟಿಸುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಓದಿ: ಸ್ಮಶಾನಗಳಿಗೆ ಜಾಗ ನೀಡದ ಕಂದಾಯ ಇಲಾಖೆ ವಿರುದ್ಧ ಹೈಕೋರ್ಟ್ ಗರಂ

Last Updated :Oct 11, 2021, 5:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.