ETV Bharat / state

ಎ.ಮಂಜು ಸಹ ತಪ್ಪು ಪ್ರಮಾಣ ಪತ್ರ ಸಲ್ಲಿಕೆ: ಪ್ರಜ್ವಲ್ ಆರೋಪ

author img

By ETV Bharat Karnataka Team

Published : Sep 1, 2023, 9:42 PM IST

Updated : Sep 2, 2023, 6:48 AM IST

2019ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಪ್ರಜ್ವಲ್​ ರೇವಣ್ಣ ವಿರುದ್ಧ ಸ್ಪರ್ಧಿಸಿದ್ದ ಎ.ಮಂಜು ಅವರ ಮೇಲೆಯೂ ತಪ್ಪು ಅಫಿಡವಿಟ್​ ಸಲ್ಲಿಕೆ ಆರೋಪಗಳಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಆದೇಶಿಸಿದೆ.

false-affidavit-submission-high-court-says-a-manju-is-not-eligible-for-mp-post
ಎ.ಮಂಜುರಿಂದಲೂ ಸುಳ್ಳು ಅಫಿಡವಿಟ್​ ಸಲ್ಲಿಕೆ: ಸಂಸದರೆಂದು ಆಯ್ಕೆ ಮಾಡಲು ಅರ್ಹರಲ್ಲ ಎಂದ ಹೈಕೋರ್ಟ್

ಬೆಂಗಳೂರು : ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎ.ಮಂಜು ಅವರು ಚುನಾವಣಾ ಅಕ್ರಮಗಳನ್ನು ನಡೆಸಿದ್ದು, ಕ್ರಮಕ್ಕೆ ಮುಂದಾಗಬೇಕು ಎಂದು ಹೈಕೋರ್ಟ್ ತಿಳಿಸಿದೆ. ಸಂಸದ ಪ್ರಜ್ವಲ್​ ರೇವಣ್ಣ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಣೆ ಮಾಡುವಂತೆ ಕೋರಿ ಎ.ಮಂಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಟರಾಜನ್​ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಜ್ವಲ್​ ರೇವಣ್ಣ ಅರ್ಜಿಯಲ್ಲಿರುವ ಅಂಶಗಳು: 2019ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎ.ಮಂಜು ಅವರ ಪ್ರಮಾಣ ಪತ್ರದಲ್ಲಿಯೂ ಸಹ ಹಲವು ದೋಷಗಳಿದ್ದು, ಸಂಸದರೆಂದು ಆಯ್ಕೆ ಮಾಡಲು ಸಾಧ್ಯವಿಲ್ಲ. ಎ. ಮಂಜು 2ನೇ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಅವರು ತಮ್ಮನ್ನು ಸಂಸದ ಎಂದು ಘೋಷಣೆ ಮಾಡಬೇಕು ಎಂದು ಕೋರಿದ್ದಾರೆ. ಆದರೆ, ಅವರನ್ನು ಸಂಸದ ಎಂದು ಘೋಷಣೆ ಮಾಡುವುದಕ್ಕೆ ಅವಕಾಶವಿಲ್ಲ. ಏಕೆಂದರೆ ಅವರೂ ಕೂಡ ಅಕ್ರಮದಲ್ಲಿ ತೊಡಗಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅಷ್ಟೇ ಅಲ್ಲದೆ, ಅರ್ಜಿದಾರರಾದ ಎ. ಮಂಜು ತಮ್ಮ ಹೆಂಡತಿಯ ಆಸ್ತಿ ವಿವರ ಮತ್ತು ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಚುನಾವಣಾ ಪ್ರಮಾಣ ಪತ್ರದಲ್ಲಿ ಮುಚ್ಚಿಟ್ಟಿದ್ದಾರೆ. 2018ರ ವಿಧಾನಸಭಾ ಚುನಾವಣೆಗೆ ಅರಕಲಗೂಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂದರ್ಭದಲ್ಲಿ ತಮ್ಮ ಆದಾಯವನ್ನು 11,85,18,249 ರೂ. ಮತ್ತು ಪತ್ನಿಯ ಆದಾಯ 10,49,88,112 ರೂ. ಎಂದು ಪ್ರಮಾಣಪತ್ರದಲ್ಲಿ ಘೋಷಣೆ ಮಾಡಿದ್ದಾರೆ. ಆದರೆ, ಲೋಕಸಭಾ ಚುನಾವಣೆಯಲ್ಲಿ 2018-19ರ ಅವಧಿಯಲ್ಲಿ ವರ್ಷಕ್ಕೆ 12,04,322 ರೂ. ಮತ್ತು 22,06,488 ರೂ. ಎಂದು ನಮೂದಿಸಿದ್ದಾರೆ ಎಂದು ಅರ್ಜಿಯಲ್ಲಿ ಪ್ರಜ್ವಲ್​ ರೇವಣ್ಣ ಆರೋಪಿಸಿದ್ದಾರೆ.

ಜೊತೆಗೆ, ಒಂದೇ ಹಣಕಾಸು ವರ್ಷದಲ್ಲಿ ಎರಡು ವಿಭಿನ್ನ ವಾರ್ಷಿಕ ಆದಾಯವನ್ನು ತೋರಿಸುವ ಮೂಲಕ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಈ ಅಂಶವು ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್​ 33ಎಗೆ ವಿರುದ್ಧವಾಗಿದೆ. ಸೆಕ್ಷನ್​ 100ರ ಪ್ರಕಾರ ಅನರ್ಹ ಎಂದು ಘೋಷಣೆ ಮಾಡುವುದಕ್ಕೆ ಅರ್ಹವಾಗಿದೆ ಎಂದು ಪ್ರಜ್ವಲ್​ ರೇವಣ್ಣ ಆರೋಪಿಸಿದ್ದರು.

ಅಲ್ಲದೆ, ಅರ್ಜಿದಾರರ ಮೇಲೆ ಹಾಸನ ನ್ಯಾಯಾಲಯದಲ್ಲಿ ಕ್ರಿಮಿನಲ್​ ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ಸಂಬಂಧ ಹೈಕೋರ್ಟ್​ನಲ್ಲಿ ಮೇಲ್ಮನವಿ ಅರ್ಜಿ ದಾಖಲಿಸಲಾಗಿದೆ. ಈ ಅಂಶವನ್ನೂ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ. ಚುನಾವಣಾ ಪ್ರಮಾಣಪತ್ರದಲ್ಲಿ ಸರಿಯಾದ ಮಾಹಿತಿ ನೀಡದಿದ್ದಲ್ಲಿ ಅವರು ಚುನಾವಣಾ ನಿಯಮಗಳ ಪ್ರಕಾರ ಅಪರಾಧಿಯಾಗಲಿದ್ದಾರೆ ಎಂದು ಪ್ರತಿವಾದಿ ಪ್ರಜ್ವಲ್​ ರೇವಣ್ಣ ದೋಷಾರೋಪ ಅರ್ಜಿಯಲ್ಲಿ ಆರೋಪಿಸಿದ್ದರು.

ವಿಚಾರಣಾ ಹಂತದಲ್ಲಿ ಕ್ರಿಮಿನಲ್​ ಪ್ರಕರಣ: ಅರಕಲಗೂಡು ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಒಂದು ಕ್ರಿಮಿನಲ್​ ಪ್ರಕರಣ ವಿಚಾರಣಾ ಹಂತದಲ್ಲಿದೆ. ಎ. ಮಂಜು ಪರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಶಾಸಕ ಹೆಚ್​.ಎಂ.ವಿಶ್ವನಾಥ್​ ಅವರು ಜಾತಿ ಮತ್ತು ಧರ್ಮದ ಹೆಸರಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ. ಇದು ಪ್ರಜಾಪ್ರತಿನಿಧಿ ಕಾಯಿದೆ 123(3)ರ ಸ್ಪಷ್ಟ ಉಲ್ಲಂಘನೆಯಾಗಲಿದೆ. ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಇದು ಅರಕಲಗೂಡು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಈ ಮೂಲಕ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿ ಚುನಾವಣಾ ಏಜೆಂಟ್​ ಅವರು ಒಂದು ಪ್ರಕರಣ ದಾಖಲಿಸಿದ್ದಾರೆ ಎಂದು ಮಂಜು ವಿರುದ್ಧ ಪ್ರಜ್ವಲ್​ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಬಿಜೆಪಿ ಪಕ್ಷದ ಬ್ಯಾಡ್ಜ್​ ಮತ್ತು ಕರ ಪತ್ರಗಳ ಸಮೇತ 2 ಲಕ್ಷ ರೂ.ಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಬಿಜೆಪಿ ಚಿಹ್ನೆಯುಳ್ಳ ಟೀ-ಶರ್ಟ್​ ಮತ್ತು ಟೋಪಿ ಸಾಗಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಉದ್ದೇಶಪೂರ್ವಕವಾಗಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಮತ್ತು ಜೆಡಿಎಸ್​ ನಾಯಕರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಇದಲ್ಲದೆ, ಚುನಾವಣಾ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಗೆದ್ದ ಅಭ್ಯರ್ಥಿ ಎಂಬುದಾಗಿ ಘೋಷಣೆ ಮಾಡುವುದಕ್ಕೆ ಎ.ಮಂಜು ಅರ್ಹರಲ್ಲ ಎಂದು ಪ್ರಜ್ವಲ್ ರೇವಣ್ಣ ಅವರು ಅರ್ಜಿಯಲ್ಲಿ ಕೋರಿದ್ದರು.

ಎ.ಮಂಜು ಆಕ್ಷೇಪಣೆ?: ತಮ್ಮ ವಿರುದ್ಧದ ಕ್ರಿಮಿನಲ್​ ಪ್ರಕರಣವನ್ನು ಹೊರತುಪಡಿಸಿದರೆ, ಇನ್ನೆಲ್ಲವೂ ಆಧಾರ ರಹಿತ ಆರೋಪವಾಗಿವೆ. ಈ ಪ್ರಕರಣಕ್ಕೂ ಹೈಕೋರ್ಟ್ ತಡೆ ನೀಡಿದೆ. ಆದರೆ, ಪ್ರಮಾಣ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ಪ್ರಕರಣ ದಾಖಲಿಸಿಲ್ಲ. ಇನ್ನಿತರ ಪ್ರಕರಣಗಳು ಚುನಾವಣಾ ಪ್ರಮಾಣ ಪತ್ರ ಸಲ್ಲಿಸಿದ ಬಳಿಕ ದಾಖಲಾದ ಪ್ರಕರಣಗಳಾಗಿವೆ. ಹೀಗಾಗಿ ಈ ಎಲ್ಲ ಪ್ರಕರಣಗಳನ್ನು ಉಲ್ಲೇಖಿಸಲಾಗಿಲ್ಲ ಎಂದು ಆಕ್ಷೇಪಣೆಯಲ್ಲಿ ವಿವರಿಸಿದ್ದರು. ಅಲ್ಲದೆ, 2017-18ರ ಮೌಲ್ಯಮಾಪನ ವರ್ಷದ ಆದಾಯ ಘೋಷಣೆಯಲ್ಲಿ ವ್ಯತ್ಯಾಸಗಳ ಪ್ರಕಾರ ಆದಾಯದಲ್ಲಿ ಹೆಚ್ಚಳ ಮಾಡಲಾಗಿದೆ. ಈ ಅಂಶಗಳು ಸರಿಯಾದ ರೀತಿಯಲ್ಲಿವೆ. ಹೀಗಾಗಿ ಅರ್ಜಿದಾರರನ್ನು ಸಿಂಧು ಎಂದು ಘೋಷಣೆ ಮಾಡಬೇಕು ಎಂದು ಕೋರಿದ್ದರು.

ಇದನ್ನೂ ಓದಿ: ಸಂಸದ ಸ್ಥಾನದಿಂದ ಪ್ರಜ್ವಲ್​ ರೇವಣ್ಣ ಅನರ್ಹ: ಹೈಕೋರ್ಟ್​​ ಆದೇಶ

Last Updated : Sep 2, 2023, 6:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.