ETV Bharat / state

ಕೊರೊನಾ ಭೀತಿ.. ಅಧಿವೇಶನ ವಾರದೊಳಗೆ ಮೊಟಕುಗೊಳಿಸಲು ಸರ್ಕಾರ ಚಿಂತನೆ!!

author img

By

Published : Sep 20, 2020, 5:33 PM IST

ನಾಳೆಯಿಂದ ವಿಧಾನಸಭಾ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಆದರೆ ಕೊರೊನಾ ಭೀತಿ ಹಿನ್ನೆಲೆ ಪ್ರಮುಖ ವಿಧೇಯಕಗಳು, ಸುಗ್ರೀವಾಜ್ಞೆಗಳಿಗೆ ಅಂಗೀಕಾರ ಪಡೆದು, ಬಳಿಕ ಅಧಿವೇಶನವನ್ನು ಅವಧಿಗೂ ಬೇಗ ಮುಕ್ತಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ..

planning to close session earlier due to corona
ಅಧಿವೇಶನ ಮೊಟಕುಗೊಳಿಸಲು ಸರ್ಕಾರ ಚಿಂತನೆ

ಬೆಂಗಳೂರು: ಕೊರೊನಾ ಮಧ್ಯೆ ಎಂಟು ದಿನಗಳ ಮಳೆಗಾಲದ ಅಧಿವೇಶನ‌ ನಾಳೆಯಿಂದ ಆರಂಭವಾಗಲಿದೆ. ನಿಯಮದಂತೆ ಆರು ತಿಂಗಳೊಳಗೆ ಅಧಿವೇಶನ ನಡೆಸುವ ಅನಿವಾರ್ಯತೆಯಲ್ಲಿರುವ ಸರ್ಕಾರ ಕಲಾಪವನ್ನು ವಾರದೊಳಗೆ ಮೊಟಕುಗೊಳಿಸುವ ಚಿಂತನೆಯಲ್ಲಿದೆ.

ಅಧಿವೇಶನ ಮೊಟಕುಗೊಳಿಸಲು ಸರ್ಕಾರ ಚಿಂತನೆ
ನಾಳೆಯಿಂದ ತಿಂಗಳಾಂತ್ಯದವರೆಗೆ ಮಳೆಗಾಲದ ಅಧಿವೇಶನ ನಡೆಸಲಾಗುತ್ತಿದೆ. ಸಂವಿಧಾನಿಕ ಬಾಧ್ಯತೆಗೊಳಗಾಗಿರುವ ಸರ್ಕಾರಕ್ಕೆ ಆರು ತಿಂಗಳ ಅಂತರದಲ್ಲಿ ಅಧಿವೇಶನ ನಡೆಸಲೇ ಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ, ಎಂಟು ದಿನಗಳ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಆದರೆ, ಕೋವಿಡ್ ಭೀತಿ ಜೊತೆಗೆ ಕೆಲ ಸಚಿವರುಗಳಿಗೆ, ಶಾಸಕರುಗಳಿಗೆ ಕೋವಿಡ್ ಸೋಂಕು ತಗಲಿರುವುದರಿಂದ ಸರ್ಕಾರ ಅಧಿವೇಶನ ಮೊಟಕುಗೊಳಿಸುವ ಯೋಚನೆಯಲ್ಲಿದೆ.
ನಾಲ್ಕೈದು ದಿನಗಳಿಗೆ ಅಧಿವೇಶನ ಮೊಟಕು?ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಪ್ರಕಾರ ಪರಿಸ್ಥಿತಿ ಬಿಗಡಾಯಿಸಿದರೆ ಅಧಿವೇಶನವನ್ನು ಸೆ.25ರೊಳಗೆ ಮೊಟಕುಗೊಳಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಮೊನ್ನೆಯಷ್ಟೇ ಡಿಸಿಎಂ ಅಶ್ವತ್ಥ್ ನಾರಾಯಣ್‌ಗೆ ಕೊರೊನಾ ಪಾಸಿಟಿವ್ ಬಂದಿದೆ. ಸಚಿವರುಗಳಾದ ಬೊಮ್ಮಾಯಿ, ಕೆ ಗೋಪಾಲಯ್ಯ, ಬೈರತಿ ಬಸವರಾಜು ಕೊರೊನಾದಿಂದ ಹೋಂ ಐಸೋಲೇಷನ್‌ನಲ್ಲಿದ್ದಾರೆ.
ಪ್ರತಿಪಕ್ಷಗಳ ಶಾಸಕರಲ್ಲೂ ಹಲವರಿಗೆ ಕೊರೊನಾ ಸೋಂಕು ತಗುಲಿದೆ. ಅಧಿವೇಶನ ಮುಗಿಯುವವರೆಗೂ ಕೊರೊನಾ ಟೆಸ್ಟ್ ನಡೆಯಲಿದೆ. ಕೊರೊನಾ ಪ್ರಕರಣ ಪತ್ತೆಯಾದ್ರೆ ಅಧಿವೇಶನ ಮೊಟಕುಗೊಳಿಸುವ ನಿರ್ಧಾರಕ್ಕೆ ಬರುವುದು ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಸಕರು, ಅಧಿಕಾರಿಗಳು ಕೊರೊನಾ ಫಲಿತಾಂಶದ ಆಧಾರದ ಮೇಲೆ ಅಧಿವೇಶನ ಮೊಟಕುಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಸರ್ಕಾರ ಸಿದ್ಧವಾಗಿದೆ. ಶಾಸಕರು, ಅಧಿಕಾರಿಗಳ ಸುರಕ್ಷತೆಯ ಹಿನ್ನೆಲೆ ಮೊದಲ ವಾರದಲ್ಲೇ ಕಲಾಪ ಮೊಟಕುಗೊಳಿಸುವ ಚಿಂತನೆ ಇದೆ.
ಬಿಎಸಿ ಸಭೆಯಲ್ಲಿ ಚರ್ಚೆ : ನಾಳೆ ನಡೆಯಲಿರುವ ಕಲಾ‌ಪ ಸಲಹಾ ಸಮಿತಿ ಸಭೆಯಲ್ಲಿ ಅಧಿವೇಶನ ಅವಧಿ ಬಗ್ಗೆ ಸಮಾಲೋಚನೆ ನಡೆಯಲಿದೆ ಎನ್ನಲಾಗಿದೆ. ಈಗಾಗಲೇ ಹಲವು ಶಾಸಕರು ಕೊರೊನಾ ಭೀತಿ ಹಿನ್ನೆಲೆ ಅಧಿವೇಶನಕ್ಕೆ ಬರುವುದು ಅನುಮಾನವಾಗಿದೆ. ಅದರಲ್ಲೂ 70 ವಯಸ್ಸಿನ ಹಿರಿಯ ಶಾಸಕರು ಅಧಿವೇಶನಕ್ಕೆ ಬರಲು ಹೆಚ್ಚಿನ ಒಲವು ಹೊಂದಿಲ್ಲ. ಅನೇಕ ಸಚಿವರು, ಶಾಸಕರಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಹಲವರು ಗೈರಾಗಲಿದ್ದಾರೆ.
ಇತ್ತ ಕೋರಂ ಕೊರತೆಯ ಆತಂಕವೂ ಎದುರಾಗಿದೆ‌. ಅಧಿವೇಶನಕ್ಕೆ‌ ಬರಲು ಹಲವು ಶಾಸಕರು ಕೊರೊನಾ ಟೆಸ್ಟ್ ಮಾಡಿಸಿದ್ದು, ಅವರ ಫಲಿತಾಂಶ ಬಂದ ಬಳಿಕ ವಾಸ್ತವ ಚಿತ್ರಣ ಗೊತ್ತಾಗಲಿದೆ. ಅದರ ಆಧಾರದಲ್ಲಿ ನಾಳೆ ನಡೆಯುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಅಧಿವೇಶನ ಮೊಟಕುಗೊಳಿಸುವ ಸಂಬಂಧ ಚರ್ಚೆ ನಡೆಯಲಿದೆ. ಇತ್ತ ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ಶಾಸಕರಲ್ಲಿ ಕೊರೊನಾ ಪತ್ತೆಯಾದ ಕಾರಣ ಎರಡು ದಿನಗಳಿಗೆ ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ.
ಇತ್ತ ಲೋಕಸಭೆ ಅಧಿವೇಶನ ಮೊಟಕುಗೊಳಿಸುವ ಬಗ್ಗೆ ಅನೇಕ ಸಂಸದರು ಮನವಿ ಮಾಡಿದ್ದಾರೆ. ಹೀಗಾಗಿ, ಕಲಾಪ ಸಲಹಾ ಸಮಿತಿಯಲ್ಲಿ ಚರ್ಚಿಸಿ ಅಧಿವೇಶನ ಅವಧಿ ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಮುಖ ವಿಧೇಯಕಗಳು, ಸುಗ್ರೀವಾಜ್ಞೆಗಳಿಗೆ ಅಂಗೀಕಾರ ಪಡೆದು, ಬಳಿಕ ಅಧಿವೇಶನವನ್ನು ಮುಕ್ತಾಯಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.