ಉಮೇಶ್​​ ಕತ್ತಿ ಕ್ಷೇತ್ರಕ್ಕೆ ನಡೆಯಲಿದೆಯೇ ಬೈ ಎಲೆಕ್ಷನ್?: ರಾಜಕೀಯ ಪಕ್ಷಗಳಲ್ಲಿ ಹೆಚ್ಚಿದ ಕುತೂಹಲ

author img

By

Published : Sep 9, 2022, 11:09 AM IST

Umesh katti

ಹುಕ್ಕೇರಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸುವ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಯಾವ ನಿರ್ಧಾರ ತಗೆದುಕೊಳ್ಳಲಿದೆ ಎನ್ನುವ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ಕುತೂಹಲ ಮೂಡಿದೆ.

ಬೆಂಗಳೂರು: ಅರಣ್ಯ ಸಚಿವ ಉಮೇಶ್​​ ಕತ್ತಿ ನಿಧನದಿಂದ ತೆರವಾಗಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆಯಾ? ಅಥವಾ ಇಲ್ಲವಾ? ಎಂಬ ಪ್ರಶ್ನೆ ಉದ್ಭವವಾಗಿದೆ.

ಸಾಮಾನ್ಯವಾಗಿ ಹಾಲಿ ಶಾಸಕರ ರಾಜೀನಾಮೆಯಿಂದ ತೆರವಾದ ಅಥವಾ ಶಾಸಕರ ನಿಧನದಿಂದ ಖಾಲಿಯಾಗುವ ವಿಧಾನಸಭೆ ಕ್ಷೇತ್ರಕ್ಕೆ 6 ತಿಂಗಳೊಳಗೆ ಉಪ ಚುನಾವಣೆ ನಡೆಸುವುದು ಕೇಂದ್ರ ಚುನಾವಣಾ ಆಯೋಗದ ನಿಯಮದ ಪ್ರಕಾರ ಕಡ್ಡಾಯವಾಗಿದೆ. ಆದರೆ ರಾಜ್ಯದಲ್ಲಿ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುವುದು ಕೇವಲ 8 ತಿಂಗಳು ಬಾಕಿಯಿರುವಾಗ ಉಪ ಚುನಾವಣೆ ನಡೆಸಲಾಗುತ್ತದೆಯಾ ಎನ್ನುವ ಪ್ರಶ್ನೆಗಳು ರಾಜಕೀಯ ಪಕ್ಷಗಳನ್ನು ಕಾಡುತ್ತಿದೆ.

ಹುಕ್ಕೇರಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸುವುದು ಅಂತಿಮವಾಗಿ ಕೇಂದ್ರ ಚುನಾವಣಾ ಆಯೋಗದ ವಿವೇಚನೆಗೆ ಬಿಟ್ಟ ಸಂಗತಿ. ಆದರೆ ನಿಯಮಾವಳಿಗಳ ಪ್ರಕಾರ, 6 ತಿಂಗಳಿಗೂ ಹೆಚ್ಚು ಅವಧಿ ಬಾಕಿ ಉಳಿಯುವುದರಿಂದ ಕೇಂದ್ರ ಚುನಾವಣೆ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುವುದಾದರೆ ಉಪ ಚುನಾವಣೆ ನಡೆಸಲೇಬೇಕು.

ದೇಶದ ಯಾವುದಾದರೂ ರಾಜ್ಯದ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುವ ಸಂದರ್ಭದಲ್ಲಿ ಇತರೆ ರಾಜ್ಯಗಳಲ್ಲಿ ಖಾಲಿಯಿರುವ ವಿಧಾನಸಭೆ ಕ್ಷೇತ್ರಕ್ಕೆ ಆ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗವು ಉಪ ಚುನಾವಣೆ ನಡೆಸುವುದು ರೂಢಿಯಲ್ಲಿದೆ. ಈ ವರ್ಷದ ಅಂತ್ಯದಲ್ಲಿ ಅಥವಾ ಹೊಸ ವರ್ಷದ ಆರಂಭದ ತಿಂಗಳುಗಳಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆ ನಡೆಯುವುದರಿಂದ ಈ ರಾಜ್ಯಗಳ ಚುನಾವಣೆ ವೇಳಾಪಟ್ಟಿ ಪ್ರಕಟಿಸುವಾಗ ಹುಕ್ಕೇರಿ ಕ್ಷೇತ್ರಕ್ಕೂ ಚುನಾವಣೆ ಘೋಷಣೆ ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಕೇಂದ್ರ ಚುನಾವಣಾ ಆಯೋಗ ರಾಜ್ಯದ ವಿಧಾನಸಭೆಗೆ ನಿಗದಿಯಂತೆ ಮೇ ತಿಂಗಳಲ್ಲಿಯೇ ಸಾರ್ವತ್ರಿಕ ಚುನಾವಣೆ ನಡೆಸುವುದಾದರೆ ಎರಡ್ಮೂರು ತಿಂಗಳಲ್ಲಿ ಅಂದರೆ ಈ ವರ್ಷದ ಅಂತ್ಯದೊಳಗೆ ಹುಕ್ಕೇರಿ ಕ್ಷೆತ್ರಕ್ಕೂ ಚುನಾವಣೆ ನಡೆಸುವ ಸಾಧ್ಯತೆಯಿದೆ. ಹುಕ್ಕೇರಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸುವ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಯಾವ ನಿರ್ಧಾರ ತಗೆದುಕೊಳ್ಳಲಿದೆ ಎನ್ನುವ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ಕುತೂಹಲ ಮೂಡಿದೆ.

ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಪಕ್ಷ ಚುನಾವಣೆ ಆಯೋಗದ ತೀರ್ಮಾನವನ್ನು ಎದುರು ನೋಡತೊಡಗಿದೆ. ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಹತ್ತಿರವೇ ಇರುವುದರಿಂದ ಚುನಾವಣಾ ಆಯೋಗವು ಹುಕ್ಕೇರಿ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಮಾಡುವ ಸಾಧ್ಯತೆ ಕಡಿಮೆ ಎನ್ನುವ ಅಭಿಪ್ರಾಯವನ್ನು ರಾಜಕೀಯ ಪಕ್ಷಗಳು ಹೊಂದಿವೆ.

ಚುನಾವಣಾ ಆಯೋಗಕ್ಕೆ ವರದಿ: ಶಾಸಕರು ರಾಜೀನಾಮೆ ನೀಡಿದ ಅಥವಾ ಅಕಾಲಿಕ ಮರಣ ಹೊಂದಿದಾಗ ವಿಧಾನಸಭೆ ಸಚಿವಾಲಯವು ತಕ್ಷಣ ವಿಧಾಬಸಭೆ ಸದಸ್ಯರ ಸ್ಥಾನ ಖಾಲಿ ಇರುವ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸುತ್ತದೆ. ಈ ವರದಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸಿಕೊಡಲಾಗುತ್ತದೆ. ನಂತರ ಚುನಾವಣೆ ಆಯೋಗವು ಉಪ ಚುನಾವಣೆ ನಡೆಸುವ ಬಗ್ಗೆ ತನ್ನ ನಿರ್ಧಾರ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ವಿಧಿವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.