ಬೆಂಗಳೂರು ಹೊರವಲಯದಲ್ಲಿ ತಗ್ಗಿದ ಮಳೆ, ಟ್ರಾಫಿಕ್ ಜಾಮ್.. ತೊಂದರೆಗೆ ಸಿಲುಕಿದ ಸಾವಿರಾರು ಕುಟುಂಬಗಳು

author img

By

Published : Sep 8, 2022, 1:30 PM IST

desreased-rain-traffic-jam-in-bangalore-outskirts

ವಿವಿಧ ಪ್ರದೇಶಗಳಲ್ಲಿ ಒಟ್ಟು 700ಕ್ಕೂ ಹೆಚ್ಚು ಮನೆಗಳು ಮತ್ತು ಸುಮಾರು 150 ಅಪಾರ್ಟ್‌ಮೆಂಟ್‌ಗಳು ಸದ್ಯ ಪ್ರವಾಹಕ್ಕೆ ಸಿಲುಕಿವೆ. ರಕ್ಷಣಾ ಕಾರ್ಯ ಕೈಗೊಂಡು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.

ಬೆಂಗಳೂರು: ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಸಿಲಿಕಾನ್ ಹೊರವಲಯದ ಹಲವು ಭಾಗಗಳು ಮುಳುಗಡೆ ಆಗಿದ್ದವು. ಮಳೆಯ ಪ್ರಮಾಣ ತಗ್ಗಿ ಟ್ರಾಫಿಕ್ ಸಮಸ್ಯೆ ಸ್ವಲ್ಪ ಬಹೆಗರಿದಿದ್ದರೂ ಈಗಲೂ ಸುಮಾರು 5000 ಕುಟುಂಬಗಳಿಗೆ ತೊಂದರೆ ಸಿಲುಕಿವೆ ಎಂದು ತಿಳಿದು ಬಂದಿದೆ.

ನಗರದ ಹೊರವಲಯದ ಮಹದೇವಪುರ, ಬೆಳ್ಳಂದೂರು, ವರ್ತೂರು, ಯಮಲೂರು, ಸರ್ಜಾಪುರ, ಜುನ್ನಸಂದ್ರ, ಹಾಲನಾಯಕನಹಳ್ಳಿ, ಮಾರತಹಳ್ಳಿ, ದೊಡ್ಡನೆಕ್ಕುಂದಿ ಸೇರಿ ವಿವಿಧ ಪ್ರದೇಶಗಳಲ್ಲಿ ಒಟ್ಟು 700ಕ್ಕೂ ಹೆಚ್ಚು ಮನೆಗಳು ಮತ್ತು ಸುಮಾರು 150 ಅಪಾರ್ಟ್‌ಮೆಂಟ್‌ಗಳು ಸದ್ಯ ಪ್ರವಾಹಕ್ಕೆ ಸಿಲುಕಿವೆ. ರಕ್ಷಣಾ ಕಾರ್ಯ ಕೈಗೊಂಡು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ ಎನ್ನಲಾಗಿದೆ.

ಪಾಲಿಕೆಯಿಂದ ಜನರಿಗೆ ಆಹಾರ ಸರಬರಾಜು: ಪ್ರವಾಹದಲ್ಲಿ ಸಿಲುಕಿಕೊಂಡ 12 ಸಾವಿರಕ್ಕೂ ಹೆಚ್ಚು ಜನರಿಗೆ ಕಳೆದ ಎರಡು ದಿನಗಳಿಂದ ವಿವಿಧ ಸಂಘ ಸಂಸ್ಥೆಗಳು, ಬಿಬಿಎಂಪಿ ಆಹಾರ ಸರಬರಾಜು ಮಾಡುತ್ತಿದೆ. ಪ್ರವಾಹದ ನೀರು ಹರಿದು ಹೋಗಲು ಅನುಕೂಲ ಆಗುವಂತೆ ತುರ್ತು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ರಾಜಕಾಲುವೆಯಲ್ಲಿ ತುಂಬಿಕೊಂಡಿರುವ ಹೂಳು ಹಾಗೂ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ನಿರಂತರವಾಗಿ ಮಾಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಅಪಾರ್ಟ್​ಮೆಂಟ್​ಗಳಿಗೆ ನೋಟಿಸ್ ಜಾರಿ: ಯಮಲೂರು ಬಳಿ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿಕೊಂಡಿದ್ದ ಅಪಾರ್ಟ್​ಮೆಂಟ್ ಭಾಗವನ್ನು ತೆರವುಗೊಳಿಸಲು ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಸುಮಾರು 400 ಮೀ ಒತ್ತುವರಿ ತೆರವು ಗೊಳಿಸಲಾಗಿದೆ. ಇದರಿಂದ ಸುತ್ತಲಿನ ಪ್ರದೇಶಗಳಲ್ಲಿ ನಿಂತಿದ್ದ 4 ಅಡಿಯಷ್ಟು ನೀರು ಹರಿದು ಹೋಗಿದೆ. ಒತ್ತುವರಿ ಸ್ಥಳದಲ್ಲಿ ಗಟ್ಟಿ ಗೋಡೆಗಳನ್ನು ನಿರ್ಮಿಸಿದ್ದರಿಂದ ತೆರವು ಸವಾಲಾಗಿತ್ತು. ವೆಚ್ಚವನ್ನು ಅಪಾರ್ಟ್​ಮೆಂಟ್​ ಮಾಲೀಕರಿಂದಲೇ ವಸೂಲಿ ಮಾಡಲಾಗುವುದು ಎಂದಿದ್ದಾರೆ.

ಮನೆಗಳ ತೆರವಿಗೆ ನೋಟಿಸ್: ಹಾಲನಾಯಕನಹಳ್ಳಿ ಕೆರೆಯ ನೀರು ಹರಿಯುವ ಪ್ರದೇಶ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ರೈನ್‌ಬೋ ಡ್ರೈವ್ ಬಡಾವಣೆಯ 32 ಮನೆಗಳನ್ನು ತೆರವುಗೊಳಿಸಲು ನೋಟಿಸ್‌ ಜಾರಿಗೊಳಿಸಲಾಗಿದೆ. ಮನೆಗಳ ತೆರವು ಮಾಡಿ ನೀರು ಸರಾಗವಾಗಿ ಹರಿಯಲು ದೊಡ್ಡ ಕೊಳವೆ ಮಾದರಿ ಕಾಲುವೆ ನಿರ್ಮಿಸಬೇಕಿದೆ. ಶೀಘ್ರ ಡಿಪಿಆರ್ ಸಿದ್ಧಪಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದಿದ್ದಾರೆ.

ಸೌಳುಕೆರೆಯಿಂದ ಹರಿಯುತ್ತಿದ್ದ ನೀರಿನ ಪ್ರಮಾಣದಲ್ಲಿ ಇಳಿಕೆ: ಸೌಳುಕೆರೆಯಿಂದ ಕೋಡಿಬಿದ್ದ ನೀರು ಹರಿಯುವುದು ತಗ್ಗಿದ ಕಾರಣ ಬೆಳ್ಳಂದೂರು ರಸ್ತೆಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಇಳಿಕೆಯಾಗಿದೆ.

ಮುಂದುವರೆದ ವಾಹನ ದಟ್ಟಣೆ: ಜಲಾವೃತಗೊಂಡಿದ್ದ ಸರ್ಜಾಪುರ ರಸ್ತೆಯಲ್ಲಿ ನೀರು ಖಾಲಿಯಾಗುತ್ತಿದ್ದು, ವಾಹನ ಸಂಚಾರ ಸಹಜ ಸ್ಥಿತಿಗೆ ಮರಳುತ್ತಿದೆ. ಬೆಳ್ಳಂದೂರು ಹೊರವರ್ತುಲ ರಸ್ತೆಯಲ್ಲಿ ಕೊಂಚ ನೀರು ಹರಿಯುತ್ತಿದ್ದು, ಸ್ವಲ್ಪ ಪ್ರಮಾಣದ ವಾಹನ ದಟ್ಟಣೆ ಮುಂದುವರಿದಿದೆ.

ತೆಪ್ಪ ಟ್ರ್ಯಾಕ್ಟರ್‌ ಪ್ರಯಾಣ ಮುಂದುವರಿಕೆ: ಮಹದೇವಪುರ ವಲಯದ ರೈನ್‌ಬೋ ಡ್ರೈವ್ ಬಡಾವಣೆ, ಸನ್ನಿ ಬ್ರೂಕ್ಸ್ ಲೇಔಟ್, ಕಂಟ್ರಿ ಸೈಡ್ ಬಡಾವಣೆ, ದಿವ್ಯಶ್ರೀ ಅಪಾರ್ಟ್‌ಮೆಂಟ್, ಯಮಲೂರಿನ ಐಷಾರಾಮಿ ವಿಲ್ಲಾಗಳು, ಕರಿಯಮ್ಮನ ಅಗ್ರಹಾರ, ಕಾಡುಬೀಸನಹಳ್ಳಿ ಸೇರಿ ವಿವಿಧ ಬಡಾವಣೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ರೈನ್‌ಬೋ ಡ್ರೈವ್ ಬಡಾವಣೆಗೆ ತೆಪ್ಪಗಳಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗುತ್ತಿದೆ. ಹಲವೆಡೆ ಜನರು ಪ್ರಯಾಣಕ್ಕಾಗಿ ಟ್ರ್ಯಾಕ್ಟರ್‌ನ್ನು ಅವಲಂಬಿಸಿದ್ದಾರೆ.

ಕಾರು ಪಾರ್ಕಿಂಗ್‌ ಸ್ಥಳಗಳಲ್ಲಿ ಆಶ್ರಯ: ಮುನ್ನೇಕೊಳಾಲ, ಕರಿಯಮ್ಮನ ಅಗ್ರಹಾರ, ಮಾರತಹಳ್ಳಿ ಸೇರಿ ವಿವಿಧೆಡೆ ತಗ್ಗುಪ್ರದೇಶಗಳು ಮತ್ತು ಕೆರೆಯ ಬಫರ್ ವಲಯದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸವಿದ್ದ ಜನರು ಹತ್ತಿರದ ಅಪಾರ್ಟ್‌ಮೆಂಟ್​ನ ಕಾರು ಪಾರ್ಕಿಂಗ್‌ ಸ್ಥಳಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಬಿಬಿಎಂಪಿ ಮತ್ತು ಸಂಘ ಸಂಸ್ಥೆಗಳು ವಿತರಿಸುತ್ತಿರುವ ಆಹಾರವನ್ನು ಆಶ್ರಯಿಸಿದ್ದಾರೆ.

ಇ-ಕಾಮರ್ಸ್‌ ಡೆಲಿವರಿ ತಾತ್ಕಾಲಿಕ ಸ್ಥಗಿತ: ಅನೇಕ ಇ-ಕಾಮರ್ಸ್‌ ಕಂಪನಿಗಳು ಈ ಭಾಗಗಳಲ್ಲಿ ಕಾರ್ಯಗಳನ್ನು ಸ್ಥಗಿತಗೊಳಿಸಿವೆ. ಪ್ರವಾಹದ ಪ್ರದೇಶಗಳಲ್ಲಿ ಡೆಲಿವರಿ ಬಾಯ್ಸ್ ಉತ್ಪನ್ನಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಈ ಪ್ರದೇಶಗಳಿಗೆ ಹೋಗಿ ಭಾರಿ ತೊಂದರೆ ಅನುಭವಿಸಿದ್ದಾರೆ ಎಂದು ಡೆಲಿವರಿ ಕಂಪನಿಗಳು ತಿಳಿಸಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮನೆಗಳಿಗೆ ಮಳೆ ನೀರು; ಹೋಟೆಲ್-ಲಾಡ್ಜ್​ಗಳತ್ತ ಜನರ ಹಜ್ಜೆ, ಬೆಲೆ ಗಗನಕ್ಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.